ಹಿಂದೂ-ಮುಸ್ಲಿಂ ಕೋಮುಧ್ರುವೀಕರಣದ ಪ್ರಯತ್ನದಲ್ಲಿರುವ ಯಾವ ಅವಕಾಶವನ್ನೂ ಕಳೆದುಕೊಳ್ಳದ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಅಲಿ, ಭಜರಂಗಬಲಿಯ ಮಾತನ್ನು 3 ದಿನಗಳ ಹಿಂದೆ ಪುನರುಚ್ಚರಿಸಿದ್ದರು. ಇದು ಮಾಯಾವತಿಯವರ ಬಹುಜನ ಧ್ರುವೀಕರಣದ ಪ್ರಯತ್ನದ ಕರೆಗೆ ಪ್ರತಿಯಾಗಿ ಯೋಗಿ ಆದಿತ್ಯನಾಥ್ ಆಡಿದ ಮಾತಾಗಿತ್ತು. ಮಾಯಾವತಿಯವರು ಉತ್ತರ ಪ್ರದೇಶದ ಮುಸ್ಲಿಮರಿಗೆ ಕರೆ ನೀಡಿ, ‘ನೀವು ಕಾಂಗ್ರೆಸ್ಗೆ ಮತ ನೀಡಿ ನಿಮ್ಮ ಮತವನ್ನು ವ್ಯರ್ಥ ಮಾಡಿಕೊಳ್ಳಬೇಡಿ’ ಎಂದು ಹೇಳಿದ್ದರು. ಈಗಾಗಲೇ ಸಮಾಜವಾದಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಬಿಎಸ್ಪಿಯು, ದಲಿತರು ಮತ್ತು ಹಿಂದುಳಿದ ವರ್ಗಗಳ ಬೆಂಬಲ ಪಡೆದಿರುವ ಪಕ್ಷಗಳ ಧ್ರುವೀಕರಣಕ್ಕೆ ನಾಂದಿ ಹಾಡಿತ್ತು. ಆದರೆ, ಕಾಂಗ್ರೆಸ್ನ ಕಡೆಗೆ ಮುಸ್ಲಿಮರ ಮತಗಳು ಹೋಗಬಹುದೆನ್ನುವ ಕಾರಣಕ್ಕೆ ಮೇಲಿನ ಕರೆ ನೀಡಿದ್ದರು.
ಈ ಹೇಳಿಕೆ ಬಂದ ತಕ್ಷಣವೇ ಯೋಗಿ ಆದಿತ್ಯನಾಥ್, ‘ನೋಡಿ ನೋಡಿ, ಅವರು ಅಲಿಯ ಕಡಯವರು. ನಾವು ಭಜರಂಗಬಲಿಯ ಕಡೆಯವರು’ ಎಂದಿದ್ದರು. ಅದಕ್ಕೆ ಇಂದು ಬದಾಯೂನಲ್ಲಿ ನಡೆದ ಎರಡನೇ ಜಂಟಿ ರ್ಯಾಲಿಯಲ್ಲಿ, ಅಖಿಲೇಶ್ ಯಾದವ್ಗಿಂತ ಮುಂಚೆ ಮಾತಾಡಿದ ಮಾಯಾವತಿ ತಿರುಗೇಟು ನೀಡಿದ್ದಾರೆ. ‘ನಮಗೆ ಅಲಿ ಮತ್ತು ಭಜರಂಗಬಲಿ ಎರಡೂ ಬೇಕು. ಏಕೆಂದರೆ ಅಲಿಯನ್ನು ಪ್ರವಾದಿ ಮಹಮ್ಮದರ ಉತ್ತರಾಧಿಕಾರಿಯಾಗಿ ಮಹಮ್ಮದೀಯರು ಆರಾಧಿಸುತ್ತಾರೆ, ಇನ್ನು ಭಜರಂಗಬಲಿ ನಮ್ಮ ಜಾತಿಯವನೇ. ಹಾಗಾಗಿ ಇಬ್ಬರೂ ನಮ್ಮವರೇ’.ಮತ್ತು ಇಬ್ಬರಲ್ಲಿ ಯಾರನ್ನೂ ಅನ್ಯರನ್ನಾಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.
‘ಭಜರಂಗಬಲಿ ದಲಿತರು ಎಂದು ಯೋಗಿ ಆದಿತ್ಯನಾಥರೇ ಹೇಳಿದ್ದಾರೆ. ಹಾಗಾಗಿ ಇಬ್ಬರೂ ನಮ್ಮವರೇ’ ಎಂದು ಮಾಯಾವತಿ ಯೋಗಿಯನ್ನು ಕುಟುಕಿದರು.
ಮುಸ್ಲಿಮರ ಮತ ಕೇಳಿದ ಮಾಯಾವತಿಯವರಿಗೆ ಚುನಾವಣಾ ಆಯೋಗ ನೋಟೀಸ್ ನೀಡಿದೆ. ಆದರೆ, ಅಲಿ, ಭಜರಂಗಬಲಿಯ ಮಾತಾಡಿದ ಯೋಗಿ ಆದಿತ್ಯನಾಥ್ರಿಗೆ ನೋಟೀಸ್ ನೀಡಿಲ್ಲ.
ಹನುಮಂತ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂದು ಈ ಹಿಂದೆ ಯೋಗಿಯವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.