Homeಮುಖಪುಟವಕೀಲರ ಸಂಘದ ‘ಜಾತ್ಯಾತೀತತೆ’ – ಅಂಬೇಡ್ಕರ್ ಜಯಂತಿಗೆ ನಿರಾಕರಣೆ

ವಕೀಲರ ಸಂಘದ ‘ಜಾತ್ಯಾತೀತತೆ’ – ಅಂಬೇಡ್ಕರ್ ಜಯಂತಿಗೆ ನಿರಾಕರಣೆ

- Advertisement -
- Advertisement -

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‍ರವರು ಪ್ರತಿನಿಧಿಸುವ ರಾಮನಗರ ಜಿಲ್ಲಾ ವಕೀಲರ ಸಂಘದಲ್ಲಿ ‘ಅಂಬೇಡ್ಕರ್ ಜಯಂತಿ’ ಆಚರಿಸುವ ಹಾಗಿಲ್ಲ. ವಿಚಿತ್ರ ಎನಿಸಿದರೂ ಇದು ನಿಜ.

ರಾಮನಗರದ ಜಿಲ್ಲಾ ವಕೀಲರ ಸಂಘದ ಕೆಲ ಜನಪರ ವಕೀಲರು ಅಂಬೇಡ್ಕರ್ ಜಯಂತಿ ಹಾಗೂ ಪರಿನಿರ್ವಾಣ ದಿನವನ್ನು ಆಚರಣೆ ಮಾಡಲು ಕಳೆದ ಒಂದು ವರ್ಷದಿಂದ ಪ್ರಯತ್ನ ಪಡುತ್ತಿದ್ದರೂ ಸಂಘದ ಚುನಾಯಿತ ಪ್ರತಿನಿಧಿಗಳ ಕಾರ್ಯಕಾರಿ ಸಮಿತಿಯು ಅನುಮತಿ ನಿರಾಕರಿಸುತ್ತಿದ್ದರು. ಈ ವರ್ಷದ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ನಡೆಸಲು ಅನುಮತಿ ಕೋರಿ ಏಪ್ರಿಲ್ 11ರಂದು ಸಮಾನ ಮನಸ್ಕ ಸದಸ್ಯರು ಮನವಿ ಸಲ್ಲಿಸಿದ್ದು ಏಪ್ರಿಲ್ 12ರಂದು ಅನುಮತಿಯನ್ನು ಲಿಖಿತವಾಗಿ ನಿರಾಕರಿಸಲಾಗಿದೆ! ಅನುಮತಿಯನ್ನು ವಜಾಗೊಳಿಸಿರುವ ಪತ್ರದಲ್ಲಿ “ರಾಮನಗರ ವಕೀಲ ಸಂಘವು 1927ರಲ್ಲಿ ಸ್ಥಾಪನೆಗೊಂಡಿದ್ದು, ಅಂದಿನಿಂದ ಇಂದಿನವರೆಗು ಎಲ್ಲಾ ಜನಾಂಗದ ಸದಸ್ಯರು ಸೋದರ ಭಾವನೆಯಿಂದ ಯಾವುದೇ ಜಾತಿಬೇಧವಿಲ್ಲದೇ ವಕೀಲ ವೃತ್ತಿಯನ್ನು ನಡೆಸುತ್ತಾ ಬಂದಿರುತ್ತಾರೆ. ಸದರಿ ಸಂಘದಲ್ಲಿ ಹಿಂದಿನ ದಿನದಿಂದಲೂ ಈ ರೀತಿಯ ಯಾವ ಆಚರಣೆಯನ್ನು ನಮ್ಮ ಸಂಘದಲ್ಲಿ ಆಚರಿಸುತ್ತಾ ಬಂದಿರುವುದಿಲ್ಲ… ಸದರಿ ತಮ್ಮ ಮನವಿಯನ್ನು ವಜಾಗೊಳಿಸಿರುವುದಾಗಿ ತಿಳಿಯಪಡಿಸಲಾಗಿದೆ. ಸಂಘದ ಆವರಣದಲ್ಲಿ ಈ ರೀತಿ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಾರದಾಗಿ ಈ ಮೂಲಕ ತಿಳಿಯಪಡಿಸಲಾಗಿದೆ.” ಎಂದು ಬರೆಯಲಾಗಿದೆ.

ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುವುದು ಎಂದರೆ ಜಾತಿಬೇಧ ಮಾಡಿದಂತಾಗುತ್ತದೆ ಎನ್ನುವುದು ಕಾರ್ಯಕಾರಿ ಸಮಿತಿಯ ಅಭಿಪ್ರಾಯವಾಗಿದೆ! ಅಂಬೇಡ್ಕರ್ ಜಯಂತಿ ಅಧಿಕೃತವಾಗಿ ದೇಶದಾದ್ಯಂತ ರಜೆಯನ್ನು ನೀಡಿ ಸರ್ಕಾರದ ಭಾಗವಾಗಿ ನಡೆಯುವ ಕಾರ್ಯಕ್ರಮವಾಗಿದೆ. ಹೀಗಿದ್ದು ರಾಮನಗರದ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಆಚರಣೆಯ ಅನುಮತಿಯನ್ನು ವಜಾ ಮಾಡಿದೆ.

ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಸದಸ್ಯರ ಪ್ರತಿನಿಧಿ ಚಾಂದ್‍ಪಾಷ ಅವರನ್ನು ಮಾತನಾಡಿಸಿದಾಗ “ನಾವು ಕಳೆದ ವರ್ಷದಿಂದ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ, ಅಂಬೇಡ್ಕರ್ ಜಯಂತಿಯಾಗಲಿ ಪರಿನಿರ್ವಾಣ ದಿನಕ್ಕಾಗಲಿ ನಮಗೆ ಅನುಮತಿ ನೀಡುತ್ತಲೇ ಇಲ್ಲ. ಅಂಬೇಡ್ಕರ್ ಜಯಂತಿಯಿಂದ ಜಾತಿಭೇದ ಉಂಟಾಗುತ್ತದೆ ಹಾಗಾಗಿ ಮನವಿಯನ್ನು ವಜಾ ಮಾಡಲಾಗಿದೆ ಎಂದು ಲಿಖಿತ ಪತ್ರವನ್ನು ಉನ್ನತ ಸಮಿತಿ ನೀಡಿದೆ. ಇದನ್ನು ವಿರೋಧಿಸಿ ನಾವು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ದೂರನ್ನು ನೀಡಿದ್ದೇವೆ. ಅನುಮತಿ ನೀಡದೇ ಇದ್ದರೆ ಸಮಾನ ಮನಸ್ಕರ ಸಂಘಟನೆಗಳು ಎಲ್ಲರು ಒಂದಾಗಿ ಸೋಮವಾರದಂದು ಪ್ರತಿಭಟನೆ ನಡೆಸುತ್ತೇವೆ” ಎಂದರು.

ಕಾರ್ಯಕಾರಿ ಸಮಿತಿಯ ಅಧ್ಯಕ್ಷ ದೇವರಾಜ್ ಅವರನ್ನು ಮಾತನಾಡಿಸಿದಾಗ “ಇದೆಲ್ಲಾ ಏನು ಇಲ್ಲ, ಕೋಮುದ್ವೇಷ ಬಿತ್ತಲು ಸಂಚು ಹೂಡುತ್ತಿರುವವರು ಇದನ್ನು ದೊಡ್ಡದು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರ ಎಂಬ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ನಾವು ಎಲ್ಲಿಯೂ ಬಹಿಷ್ಕಾರ ಎಂಬ ಪದವನ್ನು ಬಳಸಿಯೇ ಇಲ್ಲ. 1927ರಿಂದ ನಮ್ಮ ಸಂಘ ಅಸ್ತಿತ್ವದಲ್ಲಿದೆ. ಅಂದಿನಿಂದ ಇಂತಹ ಕಾರ್ಯಕ್ರಮಗಳು ನಡೆದುಕೊಂಡು ಬಂದಿಲ್ಲ. ಅಂಬೇಡ್ಕರ್ ಅವರ ಮೇಲೆ ನಮಗೆ ಗೌರವ ಇದೆ, ಭಾರತದಲ್ಲಿ ಯಾರೂ ಸಹ ಅಂಬೇಡ್ಕರ್ ಅವರನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ. ಜಯಂತಿ ಆಚರಣೆ ಮಾಡಬಾರದು ಎಂದು ನನ್ನ ಅಭಿಪ್ರಾಯವಲ್ಲ ಆದರೆ ನಾನೂ ಸಂಘದ ಇತರ ಸದಸ್ಯರ ಅಭಿಪ್ರಾಯಕ್ಕೆ ಬದ್ಧನಾಗಿರಬೇಕಾಗುತ್ತದೆ. ಆಚರಣೆಗೆ ಅನುಮತಿ ನೀಡಿದರೆ ನಾಳೆ ಟಿಪ್ಪು, ವಾಲ್ಮೀಕಿ, ಕನಕದಾಸ ಹೀಗೆ ಎಲ್ಲರೂ ಅನುಮತಿ ಕೇಳುತ್ತಾರೆ ಇದರಿಂದ ಕೋಮುದ್ವೇಷ ಹೆಚ್ಚಾಗಬಹುದು. ರಾಮನಗರ ಸೂಕ್ಷ್ಮ ಪ್ರದೇಶವಾಗಿದೆ. ಹಾಗಾಗಿ ಅಪಾಯ ತಪ್ಪಿಸಲು ನಮ್ಮ ಸಮಿತಿ ಈ ತೀರ್ಮಾನಕ್ಕೆ ಬರಬೇಕಾಯಿತು” ಎಂದರು.

ಆದರೆ ವಕೀಲರ ಪರಿಷತ್ತಿಗೆ ದೂರು ನೀಡಿರುವ ಪತ್ರದ ಪ್ರಕಾರ ಜಿಲ್ಲಾ ಸಂಘದ ಆವರಣದಲ್ಲಿ ಹಿಂದಿನಿಂದಲೂ ಶ್ರೀ ರಾಮನವಮಿ, ಹನುಮ ಜಯಂತಿ, ವಿವೇಕಾನಂದ ಜಯಂತಿ, ಅಂಬರೀಶ್ ಹಾಗೂ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ, ವಕೀಲರು ಮೃತರಾದಾಗ ಶ್ರದ್ಧಾಂಜಲಿ ಕಾರ್ಯಕ್ರಮಗಳು, ವರ್ಷದಲ್ಲಿ 2 ಬಾರಿ ಪೌರಾಣಿಕ ನಾಟಕಗಳು, ಗಣೇಶ ಚತುರ್ಥಿ ಅಂತಹ ಧಾರ್ಮಿಕ ಆಚರಣೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಆದರೆ ಜಾತಿ ವಿನಾಶಕ್ಕೆ ತಮ್ಮಿಡೀ ಜೀವನವನ್ನು ಬೆಸೆದ ಇಡೀ ದೇಶಕ್ಕೆ ಸಲ್ಲಬೇಕಾದ ಮಾನವತಾವಾದಿ ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸೀಮಿತವಾಗಿ ನೋಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉಳಿಯುತ್ತದೆ.

ಇದರ ಕುರಿತು ನಾವು ರಾಮನಗರದ ಸಾಮಾಜಿಕ ಕಾರ್ಯಕರ್ತೆ ರಾಣಿಯವರನ್ನು ವಕೀಲರನ್ನು ಮಾತಾಡಿಸಿದಾಗ, ‘ಸರ್, ಇದು ಮಿದುಳಿನಲ್ಲೇ ಅಸ್ಪೃಶ್ಯ ಆಚರಣೆಯ ಮನೋಭಾವ ಇಟ್ಟುಕೊಂಡಿರುವುದರ ಪರವಾಗಿದೆ. ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ ಅಷ್ಟೇ. ದೇಶದಲ್ಲಿ ಅದೇಷ್ಟೋ ಮೂಲೆಗಳಲ್ಲಿ ಈ ರೀತಿ ಅಂಬೇಡ್ಕರ್ ಜಯಂತಿ ಮಾಡಲಾಗದ ಸ್ಥಿತಿ ಇರಲು ಸಾಧ್ಯ. ಇನ್ನು ದಲಿತರ ಸ್ಥಿತಿ?! ಅಂಬೇಡ್ಕರ್ ಅವರ ಆಶಯವನ್ನು ಪಸರಿಸುವ ಜಯಂತಿಯನ್ನು ಮಾಡುತ್ತಾ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದ ವಕೀಲರೇ ಇಂದು ಜಾತಿಗೆ ಸೀಮಿತವಾಗಿ ನೋಡುವುದು ನಿಜಕ್ಕು ಮನುಷ್ಯತ್ವಕ್ಕೆ ಮಾಡಿದ ಅವಮಾನವಾಗಿದೆ. ಇಂತಹ ವೈರಸ್‍ಗಳು ಹರಡದಂತೆ ತಡೆಯಬೇಕಿದೆ. “ಮೊದಲನೆಯದಾಗಿ ಮತ್ತು ಕೊನೆಯದಾಗಿ, ನಾವು ಭಾರತೀಯರು” ಎನ್ನುವ ಅಂಬೇಡ್ಕರ್ ಅವರ ಮಾತುಗಳನ್ನು ವಕೀಲರಿಗೆ ಪಾಠ ಮಾಡುವ ಅವಶ್ಯಕತೆ ಬಂದಿರುವುದು ದುರಂತ’ ಎಂದರು.

ಇದರ ಬಗ್ಗೆ ಕಾನೂನು ವಿದ್ಯಾರ್ಥಿ ಪುಷ್ಟಾ ಅವರೊಡನೆ ನಾನುಗೌರಿ.ಕಾಂ ಮಾತಾಡಿದಾಗ ಅವರು ಸುದೀರ್ಘವಾಗಿ ತಮ್ಮ ಅನಿಸಿಕೆಗಳನ್ನು ಹೇಳಿದರು “ ‘ಪ್ರಗತಿಯ ಹಾದಿಯಲ್ಲಿ ಯಾವುದೇ ದಿಕ್ಕಿಗೆ ನೀವು ಸಾಗಿದರು ಜಾತಿ ಎಂಬ ಭೂತ ನಿಮ್ಮನ್ನು ಎದುರುಗೊಳ್ಳುತ್ತದೆ. ಈ ಭೂತವನ್ನು ನೀವು ನಾಶ ಮಾಡದೇ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ನಾನು ಹೇಳುವ ಮಾರ್ಗದಲ್ಲಿ ಅಲ್ಲದಿದ್ದರೂ ಸರಿ ನಿಮ್ಮದೇ ಆದ ಯಾವುದಾದರೂ ಮಾರ್ಗದಲ್ಲಿ ಜಾತಿ ವಿನಾಶಕ್ಕೆ ಹೋರಾಡಿ’ ಹೀಗೆಂದು ಹೇಳಿದವರು ಮಹಾ ಮಾನವತಾವಾದಿ ಬಾಬಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು. ಭೂಮಿ ಮೇಲೆ ಎಲ್ಲೂ ಇಲ್ಲದ ಕ್ರೂರವಾದ ಭಾರತದಲ್ಲಿನ ಜಾತಿಪದ್ಧತಿಯ ವಿರುದ್ಧ ಆಳವಾದ ಅಧ್ಯಯನ ಮಾಡಿ ಜಾತಿ ವಿನಾಶಕ್ಕೆ ಹೋರಾಟಗಳನ್ನು ರೂಪಿಸಿದವರು ಅಂಬೇಡ್ಕರ್. ಶೋಷಣೆಯ ವಿರುದ್ಧದ ವಿಮೋಚನೆಯ ಹೋರಾಟಗಳಲ್ಲಿಯೂ ಸಹ ಅಂಬೇಡ್ಕರ್ ಅವರು ಕೆಲವೇ ಸಮುದಾಯಗಳಿಗೆ ಸೀಮಿತವಾಗಿರದೆ ಮೇಲ್ಜಾತಿ ಎಂದು ಕರೆಯಲ್ಪಡುವ ಬ್ರಾಹ್ಮಣ ಜಾತಿಯಲ್ಲಿನ ಮಹಿಳೆಯರ ಶಿಕ್ಷಣ, ಸ್ವಾತಂತ್ರದ ಬಗ್ಗೆ ದನಿ ಎತ್ತಿ ಹಿಂದೂ ಕೋಡ್ ಬಿಲ್ ನಂತಹ ನೀತಿಗಳನ್ನು ರೂಪಿಸಲು ಮುಂದಾಗಿದ್ದರು. ಗಣಿ ಕಾರ್ಮಿಕರ ಹಕ್ಕುಗಳು, ಭಾರತದ ರೂಪಾಯಿ ಸಮಸ್ಯೆ, ಶಿಕ್ಷಣ, ನೀರಾವರಿ ಅಣೆಕಟ್ಟು… ಹೀಗೆ ಪುಟಗಳನ್ನು ತುಂಬಿಸಬಹುದಾದಷ್ಟು ಜನಪರ ವಿಚಾರಗಳಲ್ಲಿ ಅಂಬೇಡ್ಕರ್ ಅವರು ಕೆಲಸಗಳನ್ನು ಮಾಡಿದ್ದಾರೆ.

1950ರ ದಶಕದಲ್ಲಿ ಎಲ್ಲಾ ಜಾತಿಯಲ್ಲಿನ ಶೋಷಿತ ಹೆಣ್ಣುಮಕ್ಕಳ ಹಕ್ಕಿಗಾಗಿ ಅಂಬೇಡ್ಕರ್ ಅವರು ರಚಿಸಿದ್ದ ಹಿಂದೂ ಕೋಡ್ ಬಿಲ್‍ನ ವಿರುದ್ಧ, ಅದರ ಫಲಾನುಭವಿಗಳಾಗಬೇಕಿದ್ದ ಮೇಲ್ಜಾತಿಯ ಹೆಣ್ಣು ಮಕ್ಕಳೇ ಪ್ರತಿಭಟನೆ ನಡೆಸಿದ್ದರು. ಅಂದಿನ ಮನಸ್ಥಿತಿಯ ಜನರು ಇಂದಿಗೂ ಜೀವಂತವಾಗಿರುವುದು ದುರಂತ’. ದೇಶದ ಸಮಸ್ತ ಜನರಿಗೂ ಸಿಗಬೇಕಾದ ಹಕ್ಕುಗಳಿಗಾಗಿ ಹೋರಾಡಿದವರು, ಶೋಷಿತ ಸಮುದಾಯಗಳ ವಿಮೋಚನೆಯ ಮೂಲಕ ಎಲ್ಲರ ಮನಸ್ಸಿನಲ್ಲಿರುವ ಕೊಳೆಯನ್ನೂ ಕಳೆಯಲು ಹೊರಟವರನ್ನು ಜಾತಿಗೆ ಸೀಮಿತಗೊಳಿಸುತ್ತಿರುವುದು ದುರಂತ’ ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...