Homeಅಂಕಣಗಳುಅವ್ವ - ನನ್ನ ದೊಡ್ಡಮ್ಮ

ಅವ್ವ – ನನ್ನ ದೊಡ್ಡಮ್ಮ

- Advertisement -
- Advertisement -

ಇಶಾ ಲಂಕೇಶ್
ಅನುವಾದ-ಮಲ್ಲಿಗೆ |

ಯಾವುದಾದರೊಂದು ಭಾವನೆಯ ಬಗ್ಗೆ ನಾನು ಬಹಳ ಹೆಚ್ಚು ಚಿಂತಿಸಿದ್ದರೆ-ಅದು ನೋವಿನ ಬಗ್ಗೆ. ಅದು ನಮಗೆ ದೈಹಿಕವಾಗಿ ಏಟಾದಾಗ ಉಂಟಾಗುವ ನೋವಿನಂಥದ್ದಲ್ಲ; ನಾವು ಯಾರನ್ನಾದರೂ ಕಳೆದುಕೊಂಡಾಗ ಉಂಟಾಗುವ ನೋವು! ನಾನು ಚಿಕ್ಕವಳಾಗಿದ್ದಾಗ ಇದರ ಬಗ್ಗೆ ತುಂಬಾ ಯೋಚನೆ ಮಾಡುತ್ತಿದ್ದೆ, ಯಾವಾಗಲಾದರೂ ಒಮ್ಮೆ ಆ ಒಂದು ದಿನ ಬರಬಹುದೇನೋ, ನಾನು ನನಗೆ ತುಂಬ ಪ್ರೀತಿಪಾತ್ರರಾದವರನ್ನು ಕಳೆದುಕೊಳ್ಳುವ ದಿನ ಎಂದು ಹೆದರುತ್ತಿದ್ದೆ. ಆದರೆ ನಿಜಕ್ಕೂ ಅಂತಹ ಘಟನೆ ಸಂಭವಿಸುವವರೆಗೂ ಅದು ಸತ್ಯವೆಂದು ಅನಿಸಿರಲಿಲ್ಲ!
ಒಂದು ಸಂಜೆ, ನನ್ನ ಅಜ್ಜಿ ಮತ್ತು ನಾನು ದೊಡ್ಡಮ್ಮ ಕುಸಿದುಬಿದ್ದರೆಂಬ ಸುದ್ದಿ ಕೇಳಿದೆವು. ಮನೆಯಲ್ಲಿ ನಾವು ಇಬ್ಬರೇ ಇದ್ದದ್ದು. ನನ್ ಅಜ್ಜಿ ನನ್ನನ್ನು ದೊಡ್ಡಮ್ಮನ ಮನೆಗೆ ಡ್ರೈವ್ ಮಾಡಿಕೊಂಡು ಕರೆದುಕೊಂಡು ಹೋದರು…ದಾರಿಯುದ್ದಕ್ಕೂ ಹೆದರುತ್ತಾ ಅಳುತ್ತಾ……ಏನಾಗಿರಬಹುದೆಂದು ಅವರಿಗೆ ಭಯವಾಗಿತ್ತು. ನಾವು ದೊಡ್ಡಮ್ಮನ ಮನೆ ತಲುಪಿದಾಗ ಅವರನ್ನು ಗುಂಡಿಟ್ಟು ಕೊಲೆಮಾಡಲಾಗಿತ್ತೆಂಬ ವಿಚಾರ ತಿಳಿಸು ಆಘಾತಗೊಂಡೆವು. ನನ್ನಮ್ಮ ಆಗಲೇ ಅಲ್ಲಿದ್ದರು…..ಎದೆಯೊಡೆದು, ಅಳುತ್ತಾ. ನಾನೂ ಅಳತೊಡಗಿದೆ. ಹಿಂದೆಂದೂ ಇಲ್ಲದಂತೆ ಅತ್ತೆ; ಯಾಕೆಂದರೆ ಹಿಂದೆಂದೂ ಇಂತಹ ನೋವನ್ನು ನಾನು ಅನುಭವಿಸಿರಲಿಲ್ಲ….ಎಂದೂ ಕಲ್ಪಿಸಿಕೊಂಡಿರಲೇ ಇಲ್ಲ. ನಡೆದದ್ದು ಎಷ್ಟು ಆಘಾತಕರವಾಗಿತ್ತೆಂದರೆ, ಹೆಚ್ಚೂ ಕಡಿಮೆ ನಂಬಲಸಾಧ್ಯವಾದುದಾಗಿತ್ತು. ಇಂದಿನತನಕವೂ ನನಗೆ ಆಕೆ ಇಲ್ಲೇ ಇರುವಂತೆ ಭಾಸವಾಗುತ್ತದೆ, ಶಾಶ್ವತವಾಗಿ ನಿಜವಾಗಿ ಹೊರಟು ಹೋಗಿಲ್ಲವೇನೋ ಎನಿಸುತ್ತದೆ. ಸಮಯ ಗಾಯಗಳನ್ನು ಮಾಯಿಸುತ್ತದೆ ಎನ್ನುತ್ತಾರೆ. ಒಂದು ವರ್ಷ ಕಳೆದಿದೆ, ಆದರೆ ಆ ಘಟನೆ ನಿನ್ನೆ ನಡೆಯಿತೇನೋ ಎಂಬಂತೆ ಆ ನೋವನ್ನು ನಾನು ಅನುಭವಿಸುತ್ತಿದ್ದೇನೆ. ಬಹುಶಃ ನಾನು ಅಂದು ಅತ್ತಂತೆ ಈಗ ಅಳುತ್ತಿಲ್ಲ…ಆದರೆ ನನ್ನೊಳಗಿನ ಖಾಲಿತನ ಅಂದಿನಷ್ಟೇ ಇಂದೂ ಆಳವಾಗಿದೆ, ಗಾಢವಾಗಿದೆ!
ಮೊದಮೊದಲಿಗೆ ನನಗೆ ಆ ಕೊಲೆಗಾರರ ಮೇಲೆ ತುಂಬ ಸಿಟ್ಟು ಬಂತು. ಅವರು ಆಕೆಯನ್ನು ನೋಯಿಸಿದಂತೆಯೇ ನಾನು ಅವರುಗಳನ್ನು ನೋಯಿಸಬೇಕು ಎಂದುಕೊಂಡೆ. ನಾವು ಇಂದು ಅನುಭವಿಸುತ್ತಿರುವ ನೋವನ್ನು ಅವರೂ ಅನುಭವಿಸುವಂತೆ ಮಾಡಬೇಕೆನಿಸಿತ್ತು. ಈಗಲೂ ಹಾಗೆಯೇ ಅನಿಸುತ್ತದೆ. ಆದರೆ ಕೊಲೆಗಾರರು ನೋವನುಭವಿಸಿದರೂ ನನ್ನ ದೊಡ್ಡಮ್ಮ ಹಿಂತಿರುಗಿ ಬರುವುದಿಲ್ಲ ಎಂಬುದೇ ಕಹಿ ಸತ್ಯ. ‘ಒಂದು ಕಣ್ಣಿಗೆ ಇನ್ನೊಂದು ಕಣ್ಣು ಎಂಬುದು ಇಡೀ ಜಗತ್ತನ್ನು ಕುರುಡಾಗಿಸುತ್ತದೆ’ ಎಂಬುದು ನನಗೆ ಗೊತ್ತಾಗಿದೆ. ನಾವು ಮಾಡಬಹುದಾದ್ದೇನೆಂದರೆ, ನೋವು ಕಡಿಮೆಯಾಗುವವರೆಗೆ ಕಾಯುವುದು, ಕಾನೂನು ಪ್ರಕಾರವಾಗಿ ಕೊಲೆಗಾರರಿಗೆ ಶಿಕ್ಷೆಯಾಗುವಂತೆ ಮಾಡುವುದು ಮತ್ತು ನಮಗೆ ನ್ಯಾಯ ದೊರಕಿಸಿಕೊಳ್ಳುವುದು.

ನಾನು ಆಕೆಯ ಬಗ್ಗೆ ಯೋಚಿಸದೇ ಸರಿದುಹೋದಂತಹ ಒಂದು ದಿನವೂ ಇಲ್ಲ. ನನ್ನ ಬಗ್ಗೆ ಆಕೆಗಿದ್ದ ಪ್ರೀತಿಯ ಬಗ್ಗೆ ಯೋಚಿಸಿದಾಗ ನಾನು ಭಯಂಕರವಾಗಿ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ದೊಡ್ಡಮ್ಮನಿಗೆ ಅವರದ್ದೇ ಆದ ಮಕ್ಕಳಿರಲಿಲ್ಲ. ಆದರೆ ನಾನು ಆಕೆಯನ್ನು ‘ಅವ್ವ’ ಎಂದು ಕರೆಯುತ್ತಿದ್ದ ಹಾಗೆ ಅವರೂ ನನ್ನನ್ನು ಮಗಳು ಎಂದೇ ಕರೆಯುತ್ತಿದ್ದರು. ಆಕೆ ನನಗೆ ಎರಡನೇ ತಾಯಿಯಿದ್ದಂತೆ. ಕೆಲವೊಮ್ಮೆ ಯಾರನ್ನಾದರೂ ಕಳೆದುಕೊಳ್ಳುವವರೆಗೂ ನಮಗೆ ಅವರ ನಿಜವಾದ ಬೆಲೆ ಅರ್ಥವಾಗಿರುವುದಿಲ್ಲ ಎಂದು ಹೇಳುತ್ತಾರೆ. ನಾನು ಅವ್ವನನ್ನು ಎಷ್ಟು ಇಷ್ಟಪಡುತ್ತಿದ್ದೆನೆಂಬುದು ಆಕೆಯನ್ನು ಕಳೆದುಕೊಳ್ಳುವವರೆಗೆ ನನ್ನ ಅರಿವಿಗೆ ಬಂದಿರಲೇ ಇಲ್ಲ. ಅವರಿಲ್ಲದ ಒಂದು ಜಗತ್ತನ್ನು ನಾನು ಕಲ್ಪಿಸಿಕೊಂಡಿರಲೇ ಇಲ್ಲ.

ನಾನು ಚಿಕ್ಕವಳಾಗಿದ್ದಾಗ ವಾರಾಂತ್ಯಗಳಲ್ಲಿ ಅವರ ಮನೆಗೆ ಹೋಗುತ್ತಿದ್ದೆ. ಆಕೆ ನನಗೆ ಮಲಗುವಾಗ ತಾನೇ ಸೃಷ್ಟಿಸಿದ ಬೇರೆ ಬೇರೆ ಆವೃತ್ತಿಗಳ ಸಿಂಡ್ರೆಲಾ ಕಥೆಯನ್ನು ಹೇಳುತ್ತಿದ್ದರು. ನನ್ನ ದೊಡ್ಡಮ್ಮನ ಆವೃತ್ತಿಯಲ್ಲಿ ಸಿಂಡ್ರೆಲಾ ಒಬ್ಬ ಶಕ್ತಿಶಾಲಿ ಸ್ವತಂತ್ರ ಹುಡುಗಿಯಾಗಿದ್ದಳು. ಸಿಂಡ್ರೆಲಾ ಒಬ್ಬ ದುಡಿಯುವ ಮಹಿಳೆಯಾಗಿರುತ್ತಿದ್ದಳು ಮತ್ತು ಪ್ರತಿ ಸಾರಿ ಕಥೆ ಹೇಳುವಾಗಲೂ ದೊಡ್ಡಮ್ಮ ಆಕೆಯ ವೃತ್ತಿಯನ್ನು ಬದಲಿಸುತ್ತಿದ್ದರು. ಕೆಲವೊಮ್ಮೆ ಸಿಂಡ್ರೆಲಾ ಚೆಫ್ ಆಗಿದ್ದರೆ ಇನ್ನೊಮ್ಮೆ ಆಕೆ ಬರಹಗಾರ್ತಿಯಾಗಿರುತ್ತಿದ್ದಳು! ಒಟ್ಟಿನಲ್ಲಿ ಸಿಂಡ್ರೆಲಾ ತನ್ನ ರಾಜಕುಮಾರನಿಗಾಗಿ ಕಾಯುವ ದುರ್ಬಲ ಹುಡುಗಿಯಂತೂ ಆಗಿರುತ್ತಿರಲಿಲ್ಲ. ಪ್ರತಿಬಾರಿಯೂ ಕಥೆಯಲ್ಲಿ ಸಿಂಡ್ರೆಲಾಳ ಸನ್ನಿವೇಶ ಅಥವಾ ಅವಳೆದುರಿಸುವ ಸವಾಲುಗಳು ಸ್ವಲ್ಪ ಬದಲಾಗಿರುತ್ತಿದ್ದವು. ಈ ಕಥೆಗಳನ್ನು ಕೇಳುವುದೆಂದರೆ ನನಗೆ ತುಂಬ ಇಷ್ಟವಾಗುತಿತ್ತು. ನಾನು ಸವಲ್ಪ ದೊಡ್ಡವಳಾದಂತೆ ಆಕೆ ನನಗೆ ಜಿಮ್ ಕಾರ್ಬೆಟ್, ಕೆನೆತ್ ಆಂಡರ್‍ಸನ್ ಕಥೆಗಳನ್ನು ಹೇಳುತ್ತಿದ್ದರು ಮತ್ತು ಪೂರ್ಣಚಂದ್ರ ತೇಜಸ್ವಿ ಮೊದಲಾದವರ ಪುಸ್ತಕಗಳನ್ನು ಕೂಡಾ ಓದಲು ಕೊಡುತ್ತಿದ್ದರು. ಆಕೆ ಭಯಾನಕ ಓದುಗಾರ್ತಿಯಾಗಿದ್ದರು. ಆಕೆ ಚಿಕ್ಕವರಾಗಿದ್ದಾಗಲೂ, ಒಡಹುಟ್ಟಿದವರು ಹೊರಹೋಗಿ ಆಟಾಡುವುದರಲ್ಲಿ ತೊಡಗಿದ್ದರೆ ನನ್ನ ದೊಡ್ಡಮ್ಮ ಮಾತ್ರ ಆನಂದವಾಗಿ ತನ್ನ ಪುಸ್ತಕಗಳ ಲೋಕದಲ್ಲಿ ಮುಳುಗಿರುತ್ತಿದ್ದರಂತೆ!

ಸುಳಿದಾಡುತ್ತಾಳ ನೆನಪಿನೊಳಗ

ನನ್ನ ದೊಡ್ಡಮ್ಮನಿಗೆ ನನ್ನ ಮೇಲೆ ಎಷ್ಟು ಒಂದು ರೀತಿಯ ಆರಾಧನೆಯಂತಹ ಪ್ರೀತಿಯಿತ್ತೆಂದರೆ ತನ್ನ ಸ್ನೇಹಿತರಿಗೆ ನನ್ನನ್ನು ಮಗಳು ಎಂದೇ ಪರಿಚಯಿಸುತ್ತಿದ್ದರೇ ಹೋರತು, ಯಾವತ್ತೂ ನನ್ನನ್ನು ತಂಗಿಯ ಮಗಳು ಎಂದು ಪರಿಚಯಿಸುತ್ತಿರಲಿಲ್ಲ. ತಾನು ಅತ್ಯಂತ ಬಿಜಿಯಾಗಿದ್ದಾಗಲೂ ನನ್ನ ಕುರಿತಾದ ಚಿಕ್ಕ ಪುಟ್ಟ ಕಥೆಗಳನ್ನು ಹೇಳಿ ತನ್ನ ಸ್ನೇಹಿತರ ಮನರಂಜಿಸುತ್ತಿದ್ದರು. ನಾನು ನನ್ನ ಅಭಿಪ್ರಾಯವನ್ನು ದಿಟ್ಟವಾಗಿ ವ್ಯಕ್ತಪಡಿಸುವಂತಹ ಗಟ್ಟಿ ಹೆಣ್ಣುಮಗಳಾಗಬೇಕೆಂದು ನನಗೆ ಯಾವಾಗಲೂ ಹೇಳುತ್ತಿದ್ದರು. ಸಮಕಾಲೀನವಾದ ಎಲ್ಲ ಬೆಳವಣಿಗೆಗಳ ಬಗ್ಗೆ ನನಗೆ ಪೂರ್ಣ ಮಾಹಿತಿ ಇರುವಂತೆ ನೋಡಿಕೊಳ್ಳುತ್ತಿದ್ದರು. ಭಾಷಣಗಳನ್ನು ಕೇಳಲು ಕರೆದೊಯ್ಯುತ್ತಿದ್ದರು ಹಾಗೂ ಯುವ ನಾಯಕರಾದ ಕನ್ಹಯ್ಯ ಕುಮಾರ್, ಶೆಹ್ಲಾ ರಶೀದ್ ಮೊದಲಾದವರ ಭಾಷಣಗಳ ವಿಡಿಯೋ ತೋರಿಸುತ್ತಿದ್ದರು. ಯುವಜನರೇ ಪರಿವರ್ತನೆಯನ್ನು ತರುವವರಾದ್ದರಿಂದ ಅವರು ಅರಿವುಳ್ಳವರಾಗಿರಬೇಕೆಂದು ಯಾವಾಗಲೂ ಹೇಳುತ್ತಿದ್ದರು.

ಕೆಲವು ವರ್ಷಗಳ ಹಿಂದೆ ತನ್ನ ಹುಟ್ಟುಹಬ್ಬದ ದಿನ ನನ್ನ ದೊಡ್ಡಮ್ಮ ತನಗೆ ತಾನೇ ಒಂದು ಉಡುಗೊರೆ ಕೊಟ್ಟುಕೊಂಡರು, ತನ್ನ ತೋಳಿನ ಮೇಲೆ ನಮ್ಮ ತಾತನ ಪತ್ರಿಕೆಯ ಲೋಗೋ ಆಗಿದ್ದ ನವಿಲು ಗರಿಯ ಚಿಹ್ನೆ ಮತ್ತು ಅದರ ಕೆಳಗೆ ನನ್ನ ಹೆಸರಿನ ಹಚ್ಚೆ (ಟ್ಯಾಟೂ) ಹಾಕಿಸಿಕೊಂಡರು. ಪ್ರತಿ ವಾರಾಂತ್ಯಗಳಲ್ಲಿ ನಮ್ಮ ಮನೆಗೆ ಬಂದು ನನ್ನೊಂದಿಗೆ ಹಾಗೂ ನಮ್ಮ ತಾಯಿಯೊಂದಿಗೆ ಸಮಯ ಕಳೆಯುತ್ತಿದ್ದರು. ನನ್ನ ದೊಡ್ಡಮ್ಮನಿಗೆ ಮಾಂಸದೂಟ ಅಂದರೆ ತುಂಬ ಇಷ್ಟ ಆದರೆ ಅವರು ಸಾಮಾನ್ಯವಾಗಿ ಅಡಿಗೆ ಮಾಡುತ್ತಿರಲಿಲ್ಲ. ಆದ್ದರಿಂದ ಅವರು ಮನೆಗೆ ಬಂದಾಗೆಲ್ಲ ನಮ್ಮಮ್ಮ ನಮ್ಮಿಬ್ಬರಿಗಾಗಿ ಚಿಕನ್ ಅಡಿಗೆ ಮಾಡುತ್ತಿದ್ದರು. ಅವರಿಬ್ಬರೂ ಬಿಡುವಾಗಿದ್ದರೆ, ತಮ್ಮ ಹಳೆಯ ದಿನಗಳ ತಮಾಷೆಯ ಘಟನೆಗಳನ್ನು, ನೆನಪುಗಳನ್ನು, ಅನುಭವಗಳನ್ನು ಮೆಲುಕು ಹಾಕುತ್ತಿದ್ದರು. ನಾವು ಇಡೀ ಮಧ್ಯಾಹ್ನ ನಗುತ್ತಾ ಸಂತೋಷವಾಗಿ ಕಳೆಯುತ್ತಿದ್ದೆವು.

ಜಾತ್ಯತೀತವಾಗಿರುವುದು ಮತ್ತು ಸಮಾನವಾಗಿರುವುದು ನನ್ನ ದೊಡ್ಡಮ್ಮನ ಮಟ್ಟಿಗೆ ತುಂಬ ಮಹತ್ವದ್ದಾಗಿತ್ತು ಮತ್ತು ಅದು ನಮ್ಮಲ್ಲೂ ನೆಲೆಯೂರಿದೆ. ನಮ್ಮ ಇಡೀ ಕುಟುಂಬ, ಗಣೇಶ ಹಬ್ಬವನ್ನು ನಮ್ಮ ಮಾವನ ಮನೆಯಲ್ಲಿ, ಕ್ರಿಸ್ಮಸ್ ಹಬ್ಬವನ್ನು ನಮ್ಮ ಮನೆಯಲ್ಲಿ ಮತ್ತು ರಂಜಾನ್ ಹಬ್ಬವನ್ನು ದೊಡ್ಡಮ್ಮನ ಮನೆಯಲ್ಲಿ ಕೂಡಿ ಆಚರಿಸುತ್ತಿತ್ತು. ಆಕೆ, ನನಗೆ ಮತ್ತು ನನ್ನ ಕಸಿನ್‍ಗಳಿಗೆ ಕಥೆಗಳನ್ನೂ, ಹಬ್ಬಗಳ ಮಹತ್ವದ ಕುರಿತ ವಿಚಾರಗಳನ್ನೂ ಹೇಳಿಕೊಡುತ್ತಿದ್ದರು. ದೊಡ್ಡಮ್ಮನ ಮಟ್ಟಿಗೆ, ಎಲ್ಲ ಸಮುದಾಯಗಳು ಮತ್ತು ಧರ್ಮಗಳ ಕೂಡಿಬಾಳುವ ವಿಚಾರ ಬಹಳ ಮುಖ್ಯವಾದುದಾಗಿತ್ತು. ಆಕೆ, ಮಹಿಳೆಯರ ಹಕ್ಕುಗಳಿಗಾಗಿ, ಮಹಿಳೆಯರ ಸಬಲೀಕರಣಕ್ಕಾಗಿ, ದಲಿತರು, ಮುಸ್ಲಿಮರು, ಲೈಂಗಿಕ ಅಲ್ಪಸಂಖ್ಯಾತರು ಮತ್ತಿತರ ಎಲ್ಲರಿಗಾಗಿ ಹೋರಾಡುತ್ತಿದ್ದರೆಂಬುದನ್ನೇನೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆಕೆ ಒಬ್ಬ ನಿರ್ಭೀತ, ವೃತ್ತಿನಿಷ್ಟ ಪತ್ರಕರ್ತೆಯಾಗಿದ್ದರು. ತುಳಿತಕ್ಕೊಳಗಾದವರಿಗಾಗಿ, ಅವರ ಸಮಸ್ಯೆಗಳಿಗೆ ವಿರುದ್ಧವಾಗಿ ಹೋರಾಡುವ ಕಡು ಹೋರಾಟಗಾರ್ತಿಯಾಗಿದ್ದರು. ಆಕೆ, ನಕ್ಸಲೈಟರನ್ನು ತಮ್ಮ ಆಯುಧಗಳನ್ನು ತ್ಯಜಿಸಿ ಜನರ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಶಾಂತಿಯುತ ಮಾತುಕತೆ ನಡೆಸುವಂತೆ ಮನವೊಲಿಸಿದ್ದರು.

ಆಕೆ ತುಂಬ ಕಷ್ಟಪಟ್ಟು ದುಡಿಯುತ್ತಿದ್ದರು, ಸಣ್ಣ ಬಿಡುವನ್ನೂ ತೆಗೆದುಕೊಳ್ಳದೆ ಹಗಲೂ ರಾತ್ರಿ! ಆಕೆಯ ಸಾವಿನ ನಂತರವೇ ನನಗೆ ಅವರು ನಿಜವಾಗಿ ಏನಾಗಿದ್ದರು ಮತ್ತು ಸಮಾಜದ ಬೇರೆ ಬೇರೆ ಸ್ತರಗಳ ಜನರಿಗಾಗಿ ಎಷ್ಟೆಲ್ಲ ಶ್ರಮಿಸಿದ್ದರು ಎಂಬುದು ಅರಿವಾಯಿತು. ನನ್ನ ಮಟ್ಟಿಗೆ ಆಕೆ ನನ್ನ ಕಣಕಣವನ್ನೂ ಪ್ರೀತಿಸುವ ‘ಅವ್ವ’ ಅಷ್ಟೇ ಆಗಿದ್ದರು; ಆದರೆ, ಸಾವಿರಾರು ಜನರಿಗೆ, ಆಕೆ ‘ಅವ್ವ’, ‘ಅಮ್ಮ’, ಒಡನಾಡಿ, ಸ್ನೇಹಿತೆ ಆಗಿದ್ದರು ಮತ್ತು ಎಳೆಯರಿಗೆ ಪ್ರೀತಿಯ ಮಾರ್ಗದರ್ಶಿಯಾಗಿದ್ದರು ಎಂಬುದು ಅರಿವಾಯಿತು. ಆಕೆ ಏನು ಮಾಡುತ್ತಿದ್ದರು, ಆಕೆಗೆ ಯಾವುದನ್ನೆಲ್ಲ ಕಂಡರೆ ಇಷ್ಟ ಮತ್ತು ಅದಕ್ಕೂ ಹೆಚ್ಚಾಗಿ ಆಕೆಗೆ ಯಾವುದನ್ನು ಕಂಡರೆ ಆಕ್ರೋಶ ಎಂಬುದು ನನಗೆ ಗೊತ್ತಿತ್ತು. ಆದರೆ, ಎಳೆಯ, ಹಿರಿಯ, ದುರ್ಬಲ, ಏನನ್ನೂ ಹೊಂದಿಲ್ಲದ………. ಅದೆಷ್ಟು ಸಾವಿರ ಬದುಕುಗಳನ್ನು ಆಕೆ ಪ್ರಭಾವಿಸಿದ್ದರು ಎಂಬುದು ನನಗೆ ಗೊತ್ತಿರಲಿಲ್ಲ. ಆಕೆಯ ಅಂತ್ಯ ಸಂಸ್ಕಾರದ ದಿನ ನಾವು ಒಂದಷ್ಟು ಜನರನ್ನು ನಿರೀಕ್ಷಿಸಿದ್ದೆವು. ಆದರೆ, ಸಮಾಜದ ವಿವಿಧ ವಿಭಾಗಗಳ ಸಾವಿರಾರು ಜನರು ತಾವಾಗಿಯೇ ಬಂದು ನೆರೆದದ್ದಕ್ಕೆ ಸಾಕ್ಷಿಯಾಗಿ ಆಶ್ಚರ್ಯಗೊಂಡೆವು. ಅಲ್ಲಿ ಮಹಿಳೆಯರಿದ್ದರು, ಯುವಜನರಿದ್ದರು, ಲೈಂಗಿಕ ಅಲ್ಪಸಂಖ್ಯಾತರಿದ್ದರು, ಮುಸ್ಲಿಮರಿದ್ದರು, ರಂಗಕರ್ಮಿಗಳು-ಸಿನೆಮಾಗಳ ಜನರಿದ್ದರು, ರಾಜಕಾರಣಿಗಳಿದ್ದರು….ಇನ್ನೂ ಹಲವರಿದ್ದರು. ನನ್ನ ದೊಡ್ಡಮ್ಮನ ಕೊಲೆಯ ವಿರುದ್ಧ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆಗಳಾದವು; ದೇಶದಾದ್ಯಂತ ಅಷ್ಟೇಕೆ ಜಗತ್ತಿನಾದ್ಯಂತ ಪ್ರತಿಭಟನೆಗಳಾದವು. ಇಂಡಿಯಾ ಗೇಟ್ ಬಳಿ ಜನರು ಕ್ಯಾಂಡಲ್‍ಗಳನ್ನು ಬೆಳಗಿಸಿ ಆಕೆಯನ್ನು ನೆನೆದರು. ಪತ್ರಕರ್ತರು ಪ್ರತಿಯೊಂದು ಪಟ್ಟಣದಲ್ಲೂ ಪ್ರತಿಭಟಿಸಿದರು. ಈಗ ಒಂದು ವರ್ಷದ ನಂತರವೂ ಪ್ರಭುತ್ವಾಧಿಕಾರಕ್ಕೆ ಎದುರಾಗಿ ಸತ್ಯ ನುಡಿಯುವ ಪತ್ರಕರ್ತರ ಭದ್ರತೆ ಮತ್ತು ನ್ಯಾಯದ ಪ್ರಶ್ನೆಗಳನ್ನೆತ್ತುತ್ತಾ ಈಗಲೂ ಫ್ರಾನ್ಸ್, ನ್ಯೂಯಾರ್ಕ್, ಜರ್ಮನಿ, ಮಾಲ್ಟಾದಂತಹ ಸ್ಥಳಗಳಲ್ಲಿ ಪ್ರತಿಭಟನೆಗಳಾಗುತ್ತಿವೆ. ಪ್ರಾನ್ಸ್‍ನ ಬೇಯಕ್ಸ್ ಎಂಬ ಪಟ್ಟಣದಲ್ಲಿ ದೊಡ್ಡಮ್ಮನ ಗೌರವಾರ್ಥ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಸ್ಥೆಯು ಒಂದು ಕಂಬವನ್ನೇ ಉದ್ಘಾಟಿಸಿದೆ.

ಆಕೆಯನ್ನು ಕಳೆದುಕೊಂಡ ನೋವನ್ನು ಕಡಿಮೆ ಮಾಡುವ ಒಂದೇ ಅಂಶವೆಂದರೆ ನಾನು ಆಕೆಯ ಬಗ್ಗೆ ಎಷ್ಟು ಹೆಮ್ಮೆ ಹೊಂದಿದ್ದೇನೆ ಎಂಬುದು! ಆಕೆಯ ಕೊಲೆಗಾರರು ಆಕೆಯ ದನಿಯನ್ನು ಅಡಗಿಸಲಾಗಲಿಲ್ಲ; ಬದಲಿಗೆ ಜಗತ್ತಿನ ಎಲ್ಲಾ ಭಾಗದಲ್ಲೂ ಯಾವ ಆಶಯಗಳಿಗಾಗಿ ಆಕೆ ದನಿಯೆತ್ತಿದ್ದರೋ ಅವು ಇನ್ನಷ್ಟು ಗಟ್ಟಿಯಾಗಿ ಕೇಳಿಸುವಂತಾಯಿತು ಎಂಬುದು!

ಆಕೆಯನ್ನು ಕಳೆದುಕೊಳ್ಳುವವರೆಗೆ ಯಾರನ್ನಾದರೂ ಕಳೆದುಕೊಂಡರೆ ಹೇಗನ್ನಿಸುತ್ತದೆ ಎಂದು ನನಗೆ ಗೊತ್ತೇ ಇರಲಿಲ್ಲ. ಯಾವಾಗಲೂ ನನಗೆ ನಾನು ತುಂಬ ಇಷ್ಟಪಡುವ ಯಾರನ್ನಾದರೂ ಕಳೆದುಕೊಳ್ಳುತ್ತೇನೆ ಎಂಬ ಭಯ ಇದ್ದಾಗಲೂ ಅದು ಎಲ್ಲದರ ಅಂತ್ಯವಾಗಿರುತ್ತದೆ ಎಂದು ಅನಿಸಿರಲೇ ಇಲ್ಲ; ಎಲ್ಲವೂ ಮತ್ತೆ ಸಹಜ ಸ್ತಿತಿಗೆ ಮರಳುತ್ತದೆ ಎಂದುಕೊಂಡಿದ್ದೆ. ಆದರೆ ದುರದೃಷ್ಟವಶಾತ್ ಅದು ಎರಡೂ ಹೌದು. ಕೆಲವು ಸಂಗತಿಗಳು ಧಿಡೀರನೆ ಕೊನೆಗೊಂಡವು, ಬದುಕಿನ ಕೆಲವು ಸಂಗತಿಗಳು ಏನೂ ಜರುಗಿರಲೇ ಇಲ್ಲ ಎಂಬಂತೆ ಎಂದಿನಂತೆ ಮುಂದುವರೆದವು.

ಹಿಂತಿರುಗಿ ನೋಡಿದಾಗ, ನಾನು ‘ಅವ್ವ’ನೊಂದಿಗೆ ಇನ್ನಷ್ಟು ಹೆಚ್ಚು ಸಮಯ ಕಳೆದಿದ್ದರೆ ಎಂದು ಆಸೆಯಾಗುತ್ತದೆ; ಇನ್ನೂ ಹೆಚ್ಚು ಸಲ ನಾನು ಅವರನ್ನು ಎಷ್ಟು ಆಳವಾಗಿ ಪ್ರೀತಿಸುತ್ತಿದ್ದೆ ಎಂದು ಹೇಳಿಕೊಳ್ಳಬೇಕಿತ್ತು ಎಂದು ಆಸೆಯಾಗುತ್ತದೆ; ಆಕೆಯ ಬಗ್ಗೆ ಮತ್ತು ಆಕೆಯ ಕೆಲಸದ ಬಗ್ಗೆ ನನಗೆ ಎಷ್ಟು ಹೆಮ್ಮೆಯಿದೆ ಎಂಬುದನ್ನು ನಾನು ಹೇಳೀರಬೇಕಿತ್ತು ಎನಿಸುತ್ತದೆ; ನಾನು ಆಕೆ ಯಾವುದರ ಪರವಾಗಿ ನಿಂತಿದ್ದಾರೆಂಬುದನ್ನು ಇನ್ನೊಂದಷ್ಟು ಹೆಚ್ಚು ಅರ್ಥಮಾಡಿಕೊಂಡಿರಬೇಕಿತ್ತು; ಆಕೆ ಕೇವಲ ನನ್ನ ದೊಡ್ಡಮ್ಮನಷ್ಟೇ ಅಲ್ಲ, ಅದಕ್ಕಿಂತ ತುಂಬ ಹೆಚ್ಚು, ನಾನು ಆಕೆಯನ್ನು ಅಗಾಧವಾಗಿ ಗೌರವಿಸುತ್ತೇನೆ ಎಂದು ಹೇಳಿರಬೇಕಿತ್ತು ಎಂದು ಆಸೆಯಾಗುತ್ತದೆ! ನಾನು ಇದನ್ನೆಲ್ಲ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರೂ, ಇಲ್ಲದಿದ್ದರೂ, ನಾನು ಆಕೆಯನ್ನು ತುಂಬ ಇಷ್ಟಪಡುತ್ತೇನೆಂಬುದು ಅವರಿಗೆ ಗೊತ್ತಿತ್ತೆಂದು ನನಗೆ ಗೊತ್ತು. ಹಾಗೆಯೇ ನನ್ನನ್ನು ಅವರು ಎಷ್ಟು ಇಷ್ಟಪಡುತ್ತಿದ್ದರೆಂಬುದು ನನಗೂ ಗೊತ್ತು. ಮತ್ತು ಈಗ ನಾನು ಆಕೆಗೇನಾದರೂ ಹೇಳುವುದಾದರೆ, ನನ್ನ ಜೊತೆ 13 ವರ್ಷಗಳನ್ನು ಕಳೆದಿದ್ದಕ್ಕೆ ಮತ್ತು ನನ್ನ ಬದುಕಿಗೆ ಮಾದರಿಯಾಗಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ನಾನು ಹಂಚಿಕೊಳ್ಳಬೇಕಾದ ಎಷ್ಟೆಲ್ಲ ವಿಚಾರಗಳನ್ನು ಕೇಳಲು ಅವರು ನನ್ನೊಂದಿಗಿಲ್ಲ ಎಂದು ನಾನು ನಂಬುವುದಿಲ್ಲ; ಆಕೆಯ ಚೇತನ ಯಾವಾಗಲೂ ನನ್ನೊಂದಿಗಿದೆ ಎಂಬುದು ನನಗೆ ಗೊತ್ತು. ಇಷ್ಟು ಚಿಕ್ಕ ತನ್ನ ಜೀವಿತಾವಧಿಯಲ್ಲಿ ಆಕೆ ಎಷ್ಟೆಲ್ಲವನ್ನೂ ಮಾಡಿದ್ದರೆಂದರೆ, ನನ್ನ ಹೃದಯದಲ್ಲಿ ಮತ್ತು ಇನ್ನೂ ಅನೇಕರ ಹೃದಯದಲ್ಲಿ ತುಂಬ ಕಾಲ ಬದುಕಿರುತ್ತಾರೆ. ತುಂಬ ದೀರ್ಘ ಕಾಲ……………….!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...