Homeಕರ್ನಾಟಕಉ.ಕನ್ನಡ ಜಿ.ಪಂ ಅಧ್ಯಕ್ಷೆ ಜಯಶ್ರೀ ಜಾತಿ ಸರ್ಟಿಫಿಕೇಟ್ ರಾದ್ಧಾಂತ ಮೊಗೇರರ `ಎಸ್‍ಸಿ' ಸವಲತ್ತಿಗೆ ಬಿತ್ತು ಕತ್ತರಿ

ಉ.ಕನ್ನಡ ಜಿ.ಪಂ ಅಧ್ಯಕ್ಷೆ ಜಯಶ್ರೀ ಜಾತಿ ಸರ್ಟಿಫಿಕೇಟ್ ರಾದ್ಧಾಂತ ಮೊಗೇರರ `ಎಸ್‍ಸಿ’ ಸವಲತ್ತಿಗೆ ಬಿತ್ತು ಕತ್ತರಿ

- Advertisement -
- Advertisement -

| ಶುದ್ಧೋಧನ |

ಮೀನು ಬೇಟೆಯಾಡುವ ಮೊಗೇರ ಮತ್ತು ಮೊಲ ಬೇಟೆಯಾಡುವ ಮುಗೇರಾ ಒಂದೇ ಸಮುದಾಯವಾ? ಅಸಲಿ ಪರಿಶಿಷ್ಟರಾದ ದಕ್ಷಿಣ ಕನ್ನಡದ ಸುಳ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಮುಗೇರ ಜಾತಿಯ ಹಕ್ಕು-ಸವಲತ್ತಿಗೆ ಉತ್ತರ ಕನ್ನಡದ ಮೀನುಗಾರ ಸಂಕುಲದ ಮೊಗೇರರು ಅರ್ಹರಾ? ಇಂಗ್ಲಿಷ್ ಕಾಗುಣಿತದ ಸಣ್ಣದೊಂದು ಸಾಮ್ಯತೆ ಎರಡೂ ಸಮುದಾಯದ ಹೆಸರಲ್ಲಿರುವುದರಿಂದ ಮೊಗೇರರು ಪರಿಶಿಷ್ಟರಾಗಲು ಸಾಧ್ಯವಾ? ಪ್ರವರ್ಗ-1ರಲ್ಲಿರುವ ಮೊಗೇರರು ಕಳೆದೆರಡು ದಶಕದಿಂದ ಪರಿಶಿಷ್ಟ ಜಾತಿ ಸೌಲಭ್ಯ ದಕ್ಕಿಸಿಕೊಳ್ಳುತ್ತಿರುವುದರ ಹಿಂದಿನ ರಾಜಕೀಯ ಹಿಕಮತ್ತೇನಿರಬಹುದು? ಎಂಬಿತ್ಯಾದಿ ಕಾನೂನು ಮತ್ತು ಸಾಮಾಜಿಕ ಜಿಜ್ಞಾಸೆ ಶುರುವಾಗಿ ಒಂದು ದಶಕವೇ ಕಳೆದು ಹೋಗಿದೆ. ಆದರೆ ಕಳೆದ ವಾರ ಇದ್ದಕ್ಕಿದ್ದಂತೆಯೇ ಈ ವ್ಯಾಜ್ಯ ತಾರ್ಕಿಕ ಅಂತ್ಯಕ್ಕೆ ಬಂದುನಿಂತಿದೆ!!

ನಾಲ್ಕು ಬಾರಿ ಎಸ್‍ಸಿ ಮೀಸಲು ಕ್ಷೇತ್ರದಲ್ಲಿ ಗೆದ್ದು ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದ ಭಟ್ಕಳದ ಜಯಶ್ರೀ ಗುರುವಾಸ ಮೊಗೇರ ಎಪ್ರಿಲ್ 2016ರಲ್ಲಿ ಜಿಪಂ ಅಧ್ಯಕ್ಷ ಪಟ್ಟವೇರಿದ ಮರುಗಳಿಗೆಯೇ ಆಕೆ ಅಸಲಿ ಪರಿಶಿಷ್ಟಳಲ್ಲವೆಂಬ ಕೂಗೆದ್ದಿತ್ತು. ದಲಿತರು ಆಕೆಯ ಎಸ್‍ಸಿ ಸರ್ಟಿಫಿಕೇಟ್‍ಗೆ ಆಕ್ಷೇಪವೆತ್ತಿ ಹೈಕೋರ್ಟ್ ಕಟ್ಟೆಯೇರಿದ್ದರು. ಹೈಕೋರ್ಟ್ ಪೀಠ ಈ ಪ್ರಕರಣದ ತನಿಖೆ ನಡೆಸುವಂತೆ ಭಟ್ಕಳದ ಉಪವಿಭಾಗಾಧಿಕಾರಿಗೆ ಸೂಚಿಸಿತ್ತು. ಹಿಂದಿನ ಭಟ್ಕಳದ ಶಾಸಕ ಮಂಕಾಳು ವೈದ್ಯನ ಜಾತಿ ಪ್ರೀತಿಯಿಂದ ಜಯಶ್ರೀ ಕೇಸು ಎಸಿ ಕೋರ್ಟ್‍ನ ಶೈತ್ಯಾಗಾರ ಸೇರಿತ್ತು. ಇದೇ ಸಂದರ್ಭದಲ್ಲಿ ಮೊಗೇರ ಸಮುದಾಯದ ಹಲವರು ಪಡೆದಿದ್ದ ಎಸ್‍ಸಿ ಸರ್ಟಿಫಿಕೇಟ್‍ನ್ನು ಅಂದಿನ ಡಿಸಿ ನಕುಲ್ ರದ್ದು ಮಾಡಿದ್ದರು. ಆದರೆ ಜಯಶ್ರೀ ಪರಿಶಿಷ್ಟತೆಯ ಅಸಲಿಯತ್ತು ಮಾತ್ರ ಹೊರಗೆ ಬಂದಿರಲಿಲ್ಲ. ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಮೊಗೇರ ಸಮುದಾಯವನ್ನು ಎದುರು ಹಾಕಿಕೊಳ್ಳುವ ಧೈರ್ಯವಿಲ್ಲದ ಹಾಲಿ ಶಾಸಕ “ಮೆಟ್ರಿಕ್” ಸುನಿಲ್ ನಾಯ್ಕ್ ಡಬ್ಬಲ್ ಗೇಮ್ ಆಡುತ್ತ ಚಂದ ನೋಡುತ್ತಲೇ ಇದ್ದ.

ಮಂಕಾಳು ಎದುರಾಳಿ ಆಗಿರುವ ತನಕ ಆತನ ಜಾತಿ ಬಂಧುಗಳಾದ ಮೊಗೇರರು ತನಗೆ ಮಗ್ಗಲು ಮುಳ್ಳೆಂಬ ಲೆಕ್ಕಾಚಾರ ಸುನೀಲ್ ನಾಯ್ಕನದು. ಹಾಗಾಗಿ ಆತ ರಾತ್ರಿ ಸಣ್ಣ ಸಮುದಾಯದ ದಲಿತರೊಂದಿಗೆ ಕಾಣಿಸಿಕೊಂಡರೆ ಹಗಲು ಮೊಗೇರರ ಸಂಗಡ ಚಕ್ಕಂದ ನಡೆಸುತ್ತಿದ್ದ. ಯಾವಾಗ ಸುನೀಲ್‍ನ ಬಿಜೆಪಿಯ ಯಡ್ಡಿ ಅಕ್ರಮವಾಗಿ ಸಿಎಂ ಆದರೋ ಆಗ ಹಠಾತ್ ಜೀವ ಬಂದುಬಿಟ್ಟಿತು. ಎಸಿ ಕೋರ್ಟ್‍ನಲ್ಲಿದ್ದ ಜಯಶ್ರೀ ಜಾತಿ ಪ್ರಮಾಣ ಪತ್ರ ಪ್ರಕರಣಕ್ಕೆ ಕಳೆದ ವಾರ ಭಟ್ಕಳದ ಎಸಿ ಸಾಜಿದ್ ಮುಲ್ಲಾ ಬರೋಬ್ಬರಿ ಏಳು ಪುಟದ ತೀರ್ಪು ಬರೆದು ಜಯಶ್ರೀ ಪರಿಶಿಷ್ಟಳಾಗಲು ಸಾಧ್ಯವಿಲ್ಲ. ಹಾಗಾಗಿ ಆಕೆಗೆ ಕೊಟ್ಟ ಎಸ್‍ಸಿ ಸರ್ಟಿಫಿಕೇಟ್ ರದ್ದು ಮಾಡೆಂದು ತಹಶೀಲ್ದಾರ್‍ಗೆ ಆದೇಶ ಮಾಡಿದ್ದಾರೆ. ಅಲ್ಲಿಗೆ ಉತ್ತರ ಕನ್ನಡದ ಮೊಗೇರರು ಪರಿಶಿಷ್ಟ ಜಾತಿಯವರಲ್ಲ ಎಂಬುದು ನಿಸ್ಸಂಶಯವಾಗಿ ಸಾಬೀತಾದಂತಾಗಿದೆ! ದಲಿತರ ನಿರಂತರ ಹೋರಾಟಕ್ಕೆ ಒಂದು ಹಂತದ ನ್ಯಾಯವೂ ಸಿಕ್ಕಂತಾಗಿದೆ.

ಪ್ರವರ್ಗ-1ರಲ್ಲಿದ್ದ ಉತ್ತರ ಕನ್ನಡದ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡುವ ಅವಾಂತರ-ಅಕ್ರಮ-ಅನ್ಯಾಯ ಆರಂಭವಾಗಿದ್ದು ಎಸ್.ಎಂ.ಯಾಹ್ಯಾ ಭಟ್ಕಳದ ಶಾಸಕನಾಗಿದ್ದ ಕಾಲದಲ್ಲಿ. ದೇವರಾಜ್ ಅರಸುಗೆ ನಿಕಟವಾಗಿದ್ದ ಯಾಹ್ಯಾ ಸಾಹೇಬರು ಶಿಥಿಲವಾಗುತ್ತಿದ್ದ ತಮ್ಮ ರಾಜಕೀಯ ಅಸ್ತಿತ್ವ ಭಟ್ಕಳದಲ್ಲಿ ಗಟ್ಟಿಮಾಡಿಕೊಳ್ಳಲು ಬಹುಸಂಖ್ಯಾತ ಮೊಗೇರರಿಗೆ ಎಸ್‍ಸಿ ದೀಕ್ಷೆ ಕೊಡುವ ಕರಾಮತ್ತು ಮಾಡಿದ್ದರು. ಮಜಾ ಎಂದರೆ 1983ರ ಇಲೆಕ್ಷನ್ ಹೊತ್ತಿಗೆ ಮೊಗೇರರು ಧರ್ಮಕಾರಣಕ್ಕೆ ಯಾಹ್ಯಾರಿಗೆ ಕೈಕೊಟ್ಟು ಸೋಲಿಸಿದ್ದರು. ಯಾಹ್ಯಾರ ಕಿತಾಪತಿಯಿಂದ ಎಸ್‍ಸಿ ಸೌಲಭ್ಯ ಸಲೀಸಾಗಿ ಸ್ಪøಶ್ಯ ಮೊಗೇರರು ಪಡೆದುಕೊಳ್ಳತೊಡಗಿದಾಗ ಆ ಸಮುದಾಯದ ಭಾಗ್ಯದ ಬಾಗಿಲೇ ತೆರೆದಂತಾಗಿತ್ತು; ಅಸಲಿ ದಲಿತರಿಗೆ ದೊಡ್ಡ ದೋಖಾ ಕೂಡ ಆಗಲಾರಂಭಿಸಿತ್ತು. ಆದರೆ 1990ರ ದಶಕಾರಂಭದವರೆಗೂ ಮೊಗೇರರಿಗೆ ಎಸ್‍ಸಿ ಸರ್ಟಿಫಿಕೇಟ್ ಕೊಡುತ್ತಿರುವುದನ್ನು ಯಾರೂ ಗಂಭೀರವಾಗಿ ಪ್ರಶ್ನಿಸಿರಲೇ ಇಲ್ಲ.

ಹೊನ್ನಾವರದ ಕಾಸರಗೋಡು ಎಂಬಲ್ಲಿ ಐಓಸಿ ಎಸ್‍ಸಿ ಕೋಟಾದಲ್ಲಿ ಪೆಟ್ರೋಲ್ ಬಂಕ್ ತೆರೆಯಲು ಅರ್ಜಿ ಆಹ್ವಾನಿಸಿದಾಗ ಈ ಅಸಲಿ-ನಕಲಿ ಸಮರ ಶುರುವಾಯ್ತು. ಪಕ್ಕಾ ಪರಿಶಿಷ್ಟ ಜಾತಿಯ ಪಾವಸ್ಕರ್ ಎಂಬ ತರುಣ ತನಗೆ ಪೆಟ್ರೋಲ್ ಪಂಪ್ ಮಂಜೂರಿ ಮಾಡದೆ ನಕಲಿ ದಲಿತ ಕೆ.ಎಂ.ಕರ್ಕಿ ಎಂಬ ಮಾಜಿ ಜಿಪಂ ಸದಸ್ಯನಿಗೆ ಕೊಟ್ಟಿದ್ದಕ್ಕೆ ಉರಿದುಬಿದ್ದಿದ್ದ. ಆತ ದಲಿತ ನಾಯಕರನ್ನೆಲ್ಲ ಸಂಧಿಸಿ ಮೊಗೇರರು ಅಡ್ಡದಾರಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಲಾಭ ಹೊಡೆಯುತ್ತಿದ್ದಾರೆಂದು ಸಾಕ್ಷಾಧಾರ ಸಮೇತ ಬೊಬ್ಬೆ ಹೊಡೆದನಷ್ಟೇ ಅಲ್ಲ, ಕಾನೂನು ಹೋರಾಟಕ್ಕೆ ಇಳಿದುಬಿಟ್ಟ. ಈ ಖೋಟಾ ಸರ್ಟಿಫಿಕೇಟ್ ಪ್ರಕರಣ ಸುಪ್ರೀಂ ಕೋರ್ಟ್‍ವರೆಗೆ ಹೋಗುವ ಬದ್ಧತೆ, ಪ್ರಾಮಾಣಿಕತೆಯ ಪ್ರಯತ್ನ ನಡೆಸಿದ್ದು ಭಟ್ಕಳದ ದಲಿತ ಮುಖಂಡ ನಾರಾಯಣ ಶಿರೂರು. ಈಗ ಮೊಗೇರರಿಗೆ ಎಸ್‍ಸಿ ಸರ್ಟಿಫಿಕೇಟ್ ಕೊಡುವುದನ್ನು ಸರ್ಕಾರ ನಿಲ್ಲಿಸಿದೆ. ಈ ಕೀರ್ತಿ ಏನಿದ್ದರೂ ನಾರಾಯಣ ಶಿರೂರುಗೆ ಸಲ್ಲಬೇಕು.

ಬಾಂಬೆ ಪ್ರಾಂತ್ಯಕ್ಕೆ ಸೇರಿದ ಉತ್ತರ ಕನ್ನಡದ “ಮೊಗೇರ” ಮತ್ತು ಮದ್ರಾಸ್ ಪ್ರಾಂತ್ಯದಲ್ಲಿದ್ದ ದಕ್ಷಿಣ ಕನ್ನಡ ಹಾಗೂ ಕೊಳ್ಳೆಗಾಲದ “ಮುಗೇರ” ಸಮುದಾಯದ ಜೀವನ ಶೈಲಿ, ಸಂಪ್ರದಾಯ, ಸಂಸ್ಕøತಿ, ಉಡುಗೆ, ತೊಡುಗೆ ಗಮನಿಸಿದರೆ ಈ ಎರಡೂ ಜನಜಾತಿ ವಿಭಿನ್ನ ಎಂಬುದು ಎಂಥ ಗಾಂಪನಿಗೂ ಗೊತ್ತಾಗುತ್ತದೆ. ಮದ್ರಾಸ್ ಪ್ರಾಂತ್ಯದ ಮೊಗೇರರು ನಿಜಕ್ಕೂ ಎಸ್‍ಸಿ ಸೌಲಭ್ಯಕ್ಕೆ ಅರ್ಹರಾದ ಅಸ್ಪøಶ್ಯರು. ಉತ್ತರ ಕನ್ನಡದ ಮೊಗೇರರು ಸ್ಪøಶ್ಯರು. ಕೇಂದ್ರ ಸರ್ಕಾರವು 1950ರಲ್ಲಿ ಪ್ರಕಟಿಸಿದ್ದ ವಿಶೇಷ ರಾಜ್ಯಪತ್ರದ ಭಾಗ-2, ಉಪಭಾಗ-3ರಲ್ಲಿ ಸಂವಿಧಾನದ ಕಲಂ 341 ಮತ್ತು 342ರ ಪ್ರಕಾರ ತಯಾರಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪಟ್ಟಿ ಉತ್ತರ ಕನ್ನಡದ ಮೊಗೇರರು ಪರಿಶಿಷ್ಟ ಜಾತಿಯವರಲ್ಲ ಎಂಬುದನ್ನು ಖಾತ್ರಿಪಡಿಸುತ್ತದೆ. ಈ ಯಾದಿಯಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ವಾಸಿಸುವ ಮೊಲ ಬೇಟೆಯಾಡುವ ಉಪಕಸುಬಿನ ಅಸ್ಪøಶ್ಯ ಮೊಗೇರರು ಸೇರಿಸಲ್ಪಟ್ಟಿದ್ದಾರೆ.

1956ರಲ್ಲಿ ಭಾಷಾವಾರು ರಾಜ್ಯ ವಿಂಗಡಣೆಯಾದಾಗ ಉತ್ತರ ಕನ್ನಡ ಬಾಂಬೇ ಪ್ರಾಂತ್ಯಕ್ಕೆ ಸೇರಿತ್ತು; ದಕ್ಷಿಣ ಕನ್ನಡ ಮದ್ರಾಸ್ ಪ್ರಾಂತ್ಯದ ಮೈಸೂರು ರಾಜ್ಯಕ್ಕೆ ಹೋಯಿತು. ಆಗ ಸಹಜವಾಗೇ ಮೈಸೂರು ರಾಜ್ಯದ ಮೊಗೇರ ಸಮುದಾಯ ಪರಿಶಿಷ್ಟ ಜಾತಿಯಾಯಿತು. ಆದರೆ ಇಲ್ಲೊಂದು ತೊಡಕಿತ್ತು. ನೈಜ ಪರಿಶಿಷ್ಟರ ಸವಲತ್ತು ಅನರ್ಹರ ಪಾಲಾಗುವ ಸಾಧ್ಯತೆಯಿತ್ತು. ಹಾಗಾಗಿ ಮೊಗೇರ ಜಾತಿಗೆ ಪ್ರಾದೇಶಿಕ ನಿರ್ಬಂಧದಿಂದಾಗಿ ಅವಕಾಶ ಆಗುತ್ತಿರಲಿಲ್ಲ. 1977ರಲ್ಲಿ ಕರ್ನಾಟಕ ಸರ್ಕಾರ “ಮೊಗೇರ” ಎಂಬ ಸಮಾನ ಜಾತಿ ಹೆಸರಿರುವ ಪರಿಶಿಷ್ಟರಲ್ಲದವರು ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುವ ಅವಕಾಶ ಆಗಬಾರದೆಂಬ ಎಚ್ಚರಿಕೆಯಿಂದ ಕಟ್ಟುನಿಟ್ಟಿನ ಆದೇಶ(ಎಸ್‍ಡಬ್ಲ್ಯೂಎಲ್ 86 ಎಸ್‍ಎಡಿ 77 ಬೆಂಗಳೂರು ತಾ: 02-7-1977) ಹೊರಡಿಸಿದೆ. ಈ ಆದೇಶದ ಪ್ರಕಾರ “ಮೊಗೇರರು” ಹಿಂದುಳಿದ ವರ್ಗದವರು.

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪೊಲೀಸ್ ಇಲಾಖೆಯ ನಾಗರಿಕ ಹಕ್ಕು ನಿರ್ದೇಶನಾಲಯದ ಅಡಿಶನಲ್ ಡೈರೆಕ್ಟರ್ ಕೂಡ ಉತ್ತರ ಕನ್ನಡದ ಮೀನುಗಾರ ಮೊಗೇರರು ಖೋಟಾ ಎಸ್‍ಸಿ ಸರ್ಟಿಫಿಕೇಟ್ ಪಡೆಯುತ್ತಿರುವ ಅಕ್ರಮದ ಬಗ್ಗೆ ವಿಸ್ತøತ ವಿಚಾರಣೆ ನಡೆಸಿದ್ದರು. ದಕ್ಷಿಣ ಕನ್ನಡ ಮತ್ತು ಕೊಳ್ಳೆಗಾಲದ ಮೊಗೇರರು ಮಾತ್ರ ಪರಿಶಿಷ್ಟರೇ ಹೊರತು ಉತ್ತರ ಕನ್ನಡದ ಮೊಗೇರರಲ್ಲ ಎಂದು ಹಲವು ಅಧ್ಯಯನ ವರದಿ ಪ್ರಕಾರ ಎರಡೂ ಸಮುದಾಯದ ನಡುವಿನ ವ್ಯತ್ಯಾಸದ ಕೋಷ್ಟಕ ತಯಾರಿಸಿ ದೃಢಪಡಿಸಿದ್ದರು. 1977ರಲ್ಲಿ ಭಾರತ ಸರ್ಕಾರ ಪರಿಶಿಷ್ಟ ಜಾತಿ ಮೊಗೇರರ ಪ್ರಾದೇಶಿಕ ನಿರ್ಬಂಧ ತೆಗೆದುಹಾಕಿತ್ತು. ಆ ಪರಿಶಿಷ್ಟ ಮೊಗೇರರಿಗೆ ದೇಶದ ಎಲ್ಲ ಕಡೆಯಲ್ಲೂ ಶಿಕ್ಷಣ, ಉದ್ಯೋಗ, ಇನ್ನಿತರ ಪರಿಶಿಷ್ಟ ವಲಯಗಳಲ್ಲಿ ಮೀಸಲಾತಿ ಪಡೆಯಲು ತೊಂದರೆ ಆಗಬಾರದೆಂಬ ಕಾರಣಕ್ಕೆ ನಿರ್ಬಂಧ ತೆರವು ಮಾಡಲಾಗಿತ್ತು. ಈ ರಿಯಾಯತಿಯೇ ಯಾಹ್ಯಾ ಸಾಹೇಬರ ಪಂಡಿತ ಪಟಾಲಮ್‍ಗೆ ಉತ್ತರ ಕನ್ನಡದ ಪರಿಶಿಷ್ಟರಲ್ಲದ ಬೆಸ್ತ ಕುಲದ ಮೊಗೇರರಿಗೆ ಎಸ್‍ಸಿ ಸವಲತ್ತು ಅಡ್ಡದಾರಿಯಲ್ಲಿ ದಯಪಾಲಿಸಲು ನೆಪವಾಯಿತು!!

ಯಾವಾಗ ನೈಜ ದಲಿತರು ತಮಗಾಗುತ್ತಿರುವ ಅನ್ಯಾಯ, ವಂಚನೆ ವಿರುದ್ಧ ಧ್ವನಿ ಎತ್ತಿದರೋ ಆಗ ನ್ಯಾಯಾಲಯ, ಸರ್ಕಾರದ ಹಂತದಲ್ಲಿ ವಿಚಾರಣೆ, ತನಿಖೆ, ಅಧ್ಯಯನಗಳು ನಡೆದವು. ಅಂತಿಮವಾಗಿ ಸರ್ಕಾರ ಮೀನುಗಾರ ಮೊಗೇರರಿಗೆ ಎಸ್‍ಸಿ ಪ್ರಮಾಣ ಪತ್ರ ನಿಡುವುದು ನಿಲ್ಲಿಸಬೇಕಾಗಿಬಂತು. ಈ ಸರ್ಕಾರಿ ಆದೇಶದ ವಿರುದ್ಧ ಮೊಗೇರ ಮುಖಂಡರು ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿದರು. ಈ ನಡುವೆ ಮಾಧುರಿ ವರ್ಸಸ್ ಸ್ಟೇಟ್ ಆಫ್ ಮಹಾರಾಷ್ಟ್ರ ಕೇಸ್‍ನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಜಿಲ್ಲಾ ಜಾತಿ ಪ್ರಮಾಣ ಪತ್ರ ಪರಿಶೀಲನಾ ಸಮಿತಿಯೇ ಪರಮೋಚ್ಛ; ಅದು ತಹಶೀಲ್ದಾರ್ ನೀಡಿದ ಜಾತಿ ಪ್ರಮಾಣ ಪತ್ರ ಪರಿಶೀಲಿಸುವ ಅಧಿಕಾರ ಹೊಂದಿದೆ ಎಂಬ ತೀರ್ಪು ಬಂದಿತ್ತು. ಈ ಆಧಾರದಲ್ಲಿ ಜಿಲ್ಲಾಧಿಕಾರಿ ಭಟ್ಕಳದ ಮೊಗೇರ ವ್ಯಕ್ತಿಯೊಬ್ಬ ಪಡೆದುಕೊಂಡಿದ್ದ ಎಸ್‍ಸಿ ಸರ್ಟಿಫಿಕೇಟ್ ರದ್ದು ಮಾಡುವಂತೆ ತಹಶೀಲ್ದಾರ್‍ಗೆ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಉಚ್ಛನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಜಾ ಮಾಡಿದ್ದ ಉಚ್ಛನ್ಯಾಯಲಯ ಉತ್ತರ ಕನ್ನಡದ ಮೊಗೇರರು ಎಸ್‍ಸಿ ಸರ್ಟಿಫಿಕೇಟ್‍ಗೆ ಅರ್ಹರಲ್ಲ ಎಂದಿತ್ತು!!

ಆನಂತರ ಹಲವು ಮೊಗೇರ ಜಾತಿಯ ಮೀನುಗಾರರ ಎಸ್‍ಸಿ ಪ್ರಮಾಣ ಪತ್ರ ಜಿಲ್ಲಾ ಜಾತಿ ಪ್ರಮಾಣ ಪತ್ರ ಪರಿಶೀಲನಾ ಸಮಿತಿ ರದ್ದುಪಡಿಸಿದೆ. ತಡವಾಗಿ ಜಿಪಂ ಅಧ್ಯಕ್ಷೆಯ ಸರದಿ ಬಂದಿದೆ. ಅಸಲಿ ಪರಿಶಿಷ್ಟರ ನ್ಯಾಯದ ಹೋರಾಟ ಸಾರ್ಥಕವಾಗಿದೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...