ಪ್ರವಾಹದಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು ನಾಲ್ಕು ಬಾರಿ ಹೋಗಿ ಪ್ರಧಾನಿಯನ್ನು ಬೇಟಿ ಮಾಡಿದರೂ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಗ್ರಾಮಗಳೇ ಮುಳುಗಡೆಯಾಗಿವೆ. ಮನೆಗಳು ಬಿದ್ದುಹೋಗಿವೆ ಎಂದು ಮನವಿ ಮಾಡಿದರೂ ಹಣ ಬಂದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ಎದುರೇ ಅಸಮಾಧಾನ ಹೊರಹಾಕಿದರು.
ತುಮಕೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರೈತ ಸಮಾವೇಶದಲ್ಲಿ ಮೊದಲಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ 3 ಲಕ್ಷ ಮನೆಗಳು ಬಿದ್ದುಹೋಗಿವೆ. ರಸ್ತೆಗಳು, ಸೇತುವೆಗಳು ನಾಶವಾಗಿವೆ. ನೆರೆ ಹಾವಳಿಯಿಂದ 30 ಸಾವಿರ ಕೋಟಿ ನಷ್ಟವಾಗಿದೆ. ಮೊದಲ ಕಂತಿನ 1200 ಕೋಟಿ ಹಣವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಅಳಲು ತೋಡಿಕೊಂಡರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಬಂದು ಲಕ್ಷಾಂತರ ಹೆಕ್ಟೇರ್ ನಲ್ಲಿ ಬೆಳೆದಿದ್ದ ಬೆಳೆ ನೀರಿನಲ್ಲಿ ಕೊಚ್ಚಿ ಹೋಯಿತು. ಮನೆಗಳು ಕಳೆದುಕೊಂಡಿದ್ದರು. ರೈತರು ತೊಂದರೆಗೊಳಗಾಗಿದ್ದರು. ಇದನ್ನು ಪ್ರಧಾನಿಗಳ ಗಮನಕ್ಕೆ ತರಲು ನಾಲ್ಕು ಬಾರಿ ದೆಹಲಿಗೆ ಹೋದೆವು. ಪ್ರಧಾನಿಗಳಿಗೆ ಮನವಿ ಮಾಡಿದೆವು. ಆದರೂ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಎಂದು ನಯವಾಗಿಯೇ ಅಸಮಾಧಾನ ಹೊರಹಾಕಿದರು.
ನೀರಾವರಿ ಯೋಜನೆಗಳ ಕಾಮಗಾರಿ ಸ್ಥಗಿತಗೊಂಡಿದೆ. ಸುಮಾರು 6 ಸಾವಿರ ನೀರಾವರಿ ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ. ಇದಕ್ಕೆ ಸಾಕಷ್ಟು ಹಣ ಬೇಕು. ಹಾಗಾಗಿ ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಪೂರ್ವಕ ಮನವಿ ಮಾಡಿದರು.
ಬೆಂಗಳೂರಿನ ರಾಜಭವನದಲ್ಲಿ ಮತ್ತೊಮ್ಮೆ ಲಿಖಿತ ಮನವಿ ನೀಡಿ ಪ್ರಧಾನಿಗಳನ್ನು ಮನವಿ ಮಾಡುತ್ತೇವೆ. ಹಣದ ಅಗತ್ಯವಿದೆ ಎಂಬುದನ್ನು ಪ್ರಧಾನಿಗಳಿಗೆ ಮನವರಿಕೆ ಮಾಡುತ್ತೇವೆ. ಎಂದು ಹೇಳಿದರು.
ಪ್ರಧಾನಿ ಮೋದಿ ಮಠದಲ್ಲಿ ಧ್ಯಾನ ಮಾಡುತ್ತಾರೆ ಎಂದಿದ್ದರು. ಆದರೆ ಪ್ರಧಾನಿ ಧ್ಯಾನವನ್ನೇ ಮಾಡಲಿಲ್ಲ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ ಎಂದಿದ್ದರು. ಬೆಂಗಳೂರಿನಿಂದ ಪ್ರಧಾನಿಗಳನ್ನು ಪ್ರಶ್ನೆ ಕೇಳಲೆಂದು ವಿದ್ಯಾರ್ಥಿನಿಯರು ಬಂದಿದ್ದರು. ಆದರೆ ಪ್ರಧಾನಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಗೋಜಿಗೆ ಹೋಗಲಿಲ್ಲ. ರಾಜಕೀಯ ಭಾಷಣ ಮಾಡಿದರು.
ಪ್ರಧಾನಿಗಳು ರೈತ ಸಮಾವೇಶದಲ್ಲಿ ಕನಿಷ್ಟ ಬೆಂಬಲ ಬೆಲೆಯ ಜೊತೆಗೆ ಒಂದೂವರೆ ಪಟ್ಟು ಆದಾಯವನ್ನು ರೈತರಿಗೆ ಸಿಗಬೇಕೆಂಬ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದರು.
ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಶಕ್ತಿಯನ್ನು ಹೊಂದಿದೆ. ಕಾಫಿ, ಚಹ, ರಬ್ಬರ್, ಅರಿಶಿಣ ಬೆಳೆಗೆ ಪ್ರಸಿದ್ದಿಯಾಗಿದೆ. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿದೆ. ಇದನ್ನು ರಫ್ತು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮೋದಿ ಹೇಳಿದರು.
ಪರವಾಗಿಲ್ಲ, ಯಡಿಯೂರಪ್ಪನವರಿಗೆ ಎಷ್ಟೊಂದು ಧೈರ್ಯ ಬಂದಿದೆ.
ಯಡಿಯೂರಪ್ಪ ನವರೆ ರಾಜ್ಯದ ಅಭಿವೃದ್ಧಿ ಪರ ಕೆಲಸ ಮಾಡಿದರೆ ರಾಜ್ಯದ ಜನ ನಿಮ್ಮನ್ನು ಬೆಂಬಲಿಸುತ್ತಾರೆ .ಇಲ್ಲವಾದರೆ ದಿಕ್ಕರಿಸುತ್ತಾರೆ ಇದು ನಿಮಗೆ ಕೊನೆಯ ಅವಕಾಶ