Homeಸಾಮಾಜಿಕಭಾರತೀಯ ಪುರಾತನ ವೈದ್ಯಶಾಸ್ತ್ರದಲ್ಲಿ ಮಾಂಸದ ಔಷಧಿಗಳು

ಭಾರತೀಯ ಪುರಾತನ ವೈದ್ಯಶಾಸ್ತ್ರದಲ್ಲಿ ಮಾಂಸದ ಔಷಧಿಗಳು

- Advertisement -
- Advertisement -

ಪರಿಮಳಾ ವಾರಿಯರ್ |

ಬಹುಸಂಖ್ಯಾತ ಮಾಂಸಾಹಾರಿಗಳ ದೇಶವಾಗಿರುವ ಭಾರತದಲ್ಲಿ ಮಾಂಸಾಹಾರವನ್ನು ಎರಡನೇ ದರ್ಜೆಯ ಆಹಾರಕ್ರಮವಾಗಿ ನೋಡುವ ರೋಗಪೀಡಿತ ಮನಸ್ಥಿತಿಯನ್ನು ನಿರ್ಮಿಸಲಾಗಿದೆ. ಭಾರತದ ಧಾರ್ಮಿಕತೆ, ನಂಬಿಕೆ, ಸಂಪ್ರದಾಯಗಳನ್ನು ಸಸ್ಯಾಹಾರದ ಮೂಲಕವೇ ಪ್ರಸ್ತುತಪಡಿಸುವ ಕಾಯಿಲೆ ಇವತ್ತು ನಿನ್ನೆಯದಲ್ಲ. ಸಸ್ಯಾಹಾರವೇ ಶ್ರೇಷ್ಠ, ಮಾಂಸಾಹಾರ ಕನಿಷ್ಠ ಎಂಬ ಸುಳ್ಳುಸಿದ್ಧಾಂತವನ್ನು ಜನಗಳ ಮೇಲೆ ಹೇರಿದ ಪರಿಣಾಮವಾಗಿ ಧಾರ್ಮಿಕ ಆಚರಣೆಗಳಲ್ಲಿ ಸಸ್ಯಾಹಾರದ ಶಿಫಾರಸು ಮತ್ತು ಕೆಲವೊಂದು ರಾಷ್ಟ್ರೀಯ ದಿನಾಚರಣೆಗಳು ಮತ್ತು ಹಬ್ಬಗಳಲ್ಲಿ ಮಾಂಸಾಹಾರವನ್ನು ಕಾನೂನಾತ್ಮಕ ವಾಗಿಯೇ ನಿಷೇಧಿಸುವ ಮಟ್ಟಕ್ಕೂ ಸಸ್ಯಾಹಾರದ ವಕಾಲತ್ತುದಾರರು ತಲುಪಿರುವುದು ಈ ದೇಶದ ದುರಂತ.

ದೇಶದ ಮುಕ್ಕಾಲುಪಾಲು ಜನಸಂಖ್ಯೆ ಹೊಂದಿರುವ ದಲಿತ, ಶೂದ್ರ ಮತ್ತು ಬುಡಕಟ್ಟು ವಾಸಿಗಳ ಸಂಪ್ರದಾಯಗಳು ಮಾಂಸಾಹಾರವನ್ನೇ ಅನುಸರಿಸುತ್ತ ಬಂದಿರುವುದು ಮೂಲನಿವಾಸಿ ಭಾರತೀಯರ ಸಂಸ್ಕೃತಿ. ಇದನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಭಾರತದ ಮೂಲಭೂತವಾದಿ ಸನಾತನಿಗಳು ಮೂಲತಃ ಮಾಂಸಾಹಾರಿಗಳ ದೇಶವಾಗಿದ್ದ ಭಾರತದಲ್ಲಿ ಸಸ್ಯಾಹಾರವೇ ಶ್ರೇಷ್ಠ ಎಂದು ಬಡಬಡಿಸುವ ಆತುರದಲ್ಲಿ ಈ ಸನಾತನ ಪರಂಪರೆಯವರು ತಮ್ಮ ಮೂಲ ಇತಿಹಾಸದಲ್ಲೇ ಮಾಂಸಾಹಾರ ಶ್ರೇಷ್ಠವಾಗಿದ್ದುದನ್ನು ಮುಚ್ಚಿಡುತ್ತಾರೆ. ಅವುಗಳನ್ನು ಒಂದೊಂದಾಗಿ ನಾವು ನೋಡಿದರೆ ಈ ಸಸ್ಯಾಹಾರಿ ವಕಾಲತ್ತುದಾರರ ಬಣ್ಣ ಬಯಲಾಗುತ್ತದೆ.

ಪ್ರಾಚೀನ ಭಾರತದ ಔಷಧಶಾಸ್ತ್ರದ ಪಿತಾಮಹನೆಂದು ಕರೆಯಲಾಗುವ ‘ಆಚಾರ್ಯ ಚರಕ’ನು ಬರೆದಿರುವ ಚರಕಸಂಹಿತೆ ವೈದ್ಯಗ್ರಂಥವು ಮನುಷ್ಯನನ್ನು ಕಾಡುವ ನಾನಾ ಬಗೆಯ ರೋಗರುಜಿನಗಳಿಗೆ ಮಾಂಸಾಧಾರಿತ ಔಷಧಿಗಳನ್ನು ಶಿಫಾರಸ್ಸು ಮಾಡುತ್ತದೆ. ಯಾವುದೇ ಬಗೆಯ ಪ್ರಾಣಿಯ ಮಾಂಸವನ್ನು ನೀರಿನಲ್ಲಿ ಕುದಿಸಿ ತಯಾರಿಸುವ ಮಾಂಸರಸ (ಸೂಪ್) ಅನ್ನು ಚರಕನು ಸರ್ವರೋಗ ಪ್ರಸ್ಥಾನಂ (ಎಲ್ಲ ಬಗೆಯ ರೋಗಗಳಿಗೂ ಉತ್ತಮ ಔಷಧಿ) ಎಂದು ಬಣ್ಣಿಸಿದ್ದ್ತಾನೆ. ಮುಂದುವರೆದು ಹೇಳುವ ಚರಕನು ಸೂತ್ರಸ್ಥಾನ ಅಧ್ಯಾಯದಲ್ಲಿ ಹಲವು ಬಗೆಯ ಪ್ರಾಣಿಪಕ್ಷಿಗಳ ಮಾಂಸವು ಹಲವು ಬಗೆಯ ಕಾಯಿಲೆಗಳನ್ನು ತಡೆಯುತ್ತದೆಂದು ಹೇಳುತ್ತಾನೆ. ಅದರಂತೆ ಕಣ್ಣಿನ ಆರೋಗ್ಯ, ಕಿವಿಯ ಆರೋಗ್ಯಕ್ಕಾಗಿ ನವಿಲಿನ ಮಾಂಸವನ್ನೂ, ಧ್ವನಿ ಉತ್ತಮತೆ ಮತ್ತು ದೇಹದ ಶಕ್ತಿವರ್ಧನೆಗಾಗಿ ಬಾತುಕೋಳಿಯ ಮಾಂಸವನ್ನೂ, ಪಿತ್ಥ, ಕಫ ನಿವಾರಣೆಗಾಗಿ ಮತ್ತು ರಕ್ತಶುದ್ಧಿಗಾಗಿ ಗೌಜುಗನಹಕ್ಕಿಯ ಮಾಂಸವನ್ನೂ, ಕೆಮ್ಮಿನ ಉಪಶಮನಕ್ಕಾಗಿ ಗಿಣಿಮಾಂಸವನ್ನೂ, ಪುರುಷರ ವೀರ್ಯವೃದ್ಧಿಗಾಗಿ ಗುಬ್ಬಿಯ ಮಾಂಸವನ್ನೂ ತಿನ್ನಬೇಕೆಂದು ಚರಕ ತನ್ನ ಚರಕಸಂಹಿತೆ ವೈದ್ಯಕೃತಿಯಲ್ಲಿ ಹೇಳುತ್ತಾನೆ.

ಚರಕ ಸಂಹಿತೆಯ ಚಿಕಿತ್ಸಾಸ್ಥಾನದ 11ನೇ ಅಧ್ಯಾಯದಲ್ಲಿ ಮನುಷ್ಯರ ಎದೆನೋವಿಗೆ ಮೇಕೆಯ ಚರ್ಬಿಯ ತೈಲವನ್ನು ಮದ್ಯದೊಡನೆ ಬೆರೆಸಿ ಸೇವಿಸಬೇಕೆಂದು ಹೇಳಲಾಗಿದೆ. ತನ್ನ ಸೂತ್ರಸ್ಥಾನ ಕೃತಿಯಲ್ಲಿ ಮೇಕೆಮಾಂಸದ ಆರೋಗ್ಯಕಾರಿ ಉಪಯೋಗಗಳನ್ನು ವಿವರಿಸುವ ಚರಕನು.. ಮೇಕೆ ಮಾಂಸವು ಸರ್ವಋತುಗಳಲ್ಲೂ ಸೇವಿಸಬಹುದಾದ ಶಕ್ತಿಪುಷ್ಟ ಆಹಾರವಾಗಿದೆ, ಮೇಕೆ ಮಾಂಸವು ಶೀತವೂ ಅಲ್ಲದ ಉಷ್ಣವೂ ಅಲ್ಲದ ಆಹಾರವಾಗಿರುವುದರಿಂದ ಮನುಷ್ಯರ ಆರೋಗ್ಯಕ್ಕೆ ಮೇಕೆಮಾಂಸ ಉಪಯೋಗಕಾರಿಯೆಂದು ಚರಕನು ಬಣ್ಣಿಸಿದ್ದಾನೆ.

ಆಯುರ್ವೇದ ಶಾಸ್ತ್ರವನ್ನು ಎಲ್ಲರೂ ಸಸ್ಯಕೇಂದ್ರಿತ ವೈದ್ಯವಿಜ್ಞಾನವೆಂದು ಇವತ್ತಿಗೂ ತಿಳಿದಿದ್ದಾರೆ. ಅದಕ್ಕೆ ವಿರುದ್ಧವಾಗಿ ಆಯುರ್ವೇದವು ಸಸ್ಯ-ಮಾಂಸ ಆಧರಿತ ಔಷಧಜ್ಞಾನವಾಗಿರುವುದಕ್ಕೆ ಪ್ರಾಚೀನ ಆಯುರ್ವೇದ ಕೃತಿಯಲ್ಲೇ ಸಾಕ್ಷಿಗಳಿವೆ. ಆಯುರ್ವೇದ ವೈದ್ಯಪದ್ಧತಿಯಲ್ಲಿ ಮೇಕೆಮಾಂಸದ ಚರ್ಬಿಯ ತೈಲವನ್ನು ‘ಮಹಾಮಾಂಸ ತೈಲ’ವೆಂದು ಗುರುತಿಸಲಾಗಿದೆ. ಈ ತೈಲವನ್ನು ಹಚ್ಚುವುದರಿಂದ ಲಕ್ವ, ಸ್ನಾಯು ಸೆಳೆತ, ತಲೆನೋವು ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಬಹುದೆಂದು ಆಯುರ್ವೇದ ವೈದ್ಯ ವಿಜ್ಞಾನವು ಪ್ರತಿಪಾದಿಸುತ್ತದೆ. ‘ಅಜಸ್ವಾಗಂಧ ಲೇಹ್ಯಂ’ ಎಂಬ ಮೇಕೆಮಾಂಸದಿಂದ ತಯಾರಿಸಿದ ತೈಲವನ್ನು ದೇಹದಾರ್ಢ್ಯತೆಯನ್ನು ಬೆಳೆಸಿಕೊಳ್ಳಲು ಅತ್ಯವಶ್ಯಕವಾಗಿ ಆಯುರ್ವೇದವು ಶಿಫಾರಸ್ಸು ಮಾಡುತ್ತದೆ. ಆಯುರ್ವೇದದ ‘ಭಾವಪ್ರಕಾಶ’ ಎಂಬ ಅಧ್ಯಾಯದಲ್ಲಿ ಪ್ರಾಣಿಗಳ ಮಾಂಸದ ರಸದ ಉಪಯೋಗಗಳನ್ನು ‘ಪುನರ್ವಾಧ್ಯಾರಿಷ್ಟ’ ಎಂಬ ಹೆಸರಿನಲ್ಲಿ ವಿವರಿಸಲಾಗಿದೆ. ಇದಲ್ಲದೇ ಆಯುರ್ವೇದದ ಬಹಳಷ್ಟು ಔಷಧಿಗಳಲ್ಲಿ ಪ್ರಾಣಿಗಳ ಮಾಂಸವನ್ನು ಬಳಸಿ ತಯಾರಿಸಬೇಕೆಂದು ಆಯುರ್ವೇದವು ಹೇಳುತ್ತದೆ.

‘ಅಮೃತಪ್ರಾತ ಘೃತ’ ಎಂಬ ತುಪ್ಪದ ತಯಾರಿಕೆಯಲ್ಲಿ ಮೇಕೆ ಮಾಂಸವನ್ನು, ರಸಾಯನ ತಯಾರಿಕೆಯಲ್ಲಿ ಹಸುವಿನ ಜಠರದ ಮಾಂಸವನ್ನು, ‘ಅಶ್ವಗಂಧಿ ಲೇಹ್ಯ’ ತಯಾರಿಕೆಯಲ್ಲಿ ಮೇಕೆಮಾಂಸವನ್ನೂ, ‘ಕಸ್ತೂರ್ಯಾದಿ ಗುಳಿಗೆ’, ಕಸ್ತೂರಿ ಭೈರವ ರಸ ಮತ್ತು ಗೋಪಾಲತೈಲ ತಯಾರಿಕೆಯಲ್ಲಿ ಕಸ್ತೂರಿ ಮೃಗದ ಮಾಂಸವನ್ನೂ, ‘ಕಾಮದೂಧ ರಸ’ ತಯಾರಿಕೆಯಲ್ಲಿ ಶಂಖು ಹುಳುವಿನ ಮಾಂಸವನ್ನೂ, ಶೃಂಗಭಸ್ಮ ತಯಾರಿಕೆಯಲ್ಲಿ ಜಿಂಕೆಯ ಕೊಂಬನ್ನೂ ಚುಕ್ಕುಂತಿಪಲ್ಯಾಡಿ ಗುಳಿಗೆ ತಯಾರಿಯಲ್ಲಿ ಕಾಡುಬೆಕ್ಕಿನ ವೀರ್ಯವನ್ನೂ ಬಳಸಬೇಕೆಂದು ಆಯುರ್ವೇದ ಹೇಳುತ್ತದೆ. ಜೊತೆಗೆ ಮಾಂಸಾಹಾರವನ್ನು ಬೆಳಗಿನ 11ರಿಂದ ಮಧ್ಯಾಹ್ನ 2 ಗಂಟೆಯ ಒಳಗೆ ಸೇವಿಸಿದರೆ ಒಳ್ಳೆಯದೆಂದು ಮಾಂಸಾಹಾರವನ್ನು ಪ್ರೋತ್ಸಾಹಿಸುವ ಆಯುರ್ವೇದವು ಈ ಸಮಯದಲ್ಲಿ ಅಗ್ನಿದೇವನ ಶಕ್ತಿ ಹೆಚ್ಚಿರುವುದರಿಂದ ಜೀರ್ಣಶಕ್ತಿಗೆ ಅನುಕೂಲಕರವೆಂದು ಹೇಳುತ್ತದೆ. ಪ್ರಾಚೀನ ಆಯುರ್ವೇದವೇ ಹೇಳುವಂತೆ ಕೋಳಿ ಮತ್ತು ಮೀನಿನ ಸೇವನೆಯಿಂದ ವಾತದೋಷ ನಿವಾರಣೆಯಾಗುತ್ತದೆ, ಹಂದಿಮಾಂಸದ ಸೇವನೆಯಿಂದ ದೇಹದ ತೂಕ ಹೆಚ್ಚಿಸಿಕೊಳ್ಳಬಹುದು, ಸ್ನಾಯು ಮತ್ತು ನರ ಸಂಬಂಧಿತ ಕಾಯಿಲೆಗಳಿಗೆ ಗೋಮಾಂಸ ಸೇವನೆ ಉಪಕಾರಿಯೆಂಬ ಆರೋಗ್ಯ ಸಲಹೆಗಳನ್ನು ಆಯುರ್ವೇದ ನೀಡುತ್ತದೆ.

ಪ್ರಾಚೀನ ಸಮಾಜದ ಕಾನೂನುಮಾಪನವಾಗಿ ಗುರುತಿಸಲ್ಪಟ್ಟಿದ್ದ ಮನುಧರ್ಮಶಾಸ್ತ್ರವು ಮಾಂಸಾಹಾರಕ್ಕೆ ವಿರೋಧಿಯಾಗಿಲ್ಲ. ಇದಕ್ಕೆ ಮನುಶಾಸ್ತ್ರದ ಕೆಲವೊಂದು ಶ್ಲೋಕಗಳೇ ಉದಾಹರಣೆಯಾಗಿವೆ. ಮನುಸ್ಮೃತಿಯ 5ನೇ ಅಧ್ಯಾಯದ 28ನೇ ಶ್ಲೋಕವು ‘ಜಗತ್ತಿನ ಸೃಷ್ಟಿಕರ್ತನಾದ ಪ್ರಜಾಪತಿಯು ಜೀವ ಇರುವ ಜೀವಗಳು ಆಹಾರವಾಗಿ ಬಳಸಲೆಂದು ಎಲ್ಲವನ್ನೂ ಸೃಷ್ಟಿಸಿದ್ದಾನೆ’ ಎನ್ನುತ್ತದೆ. ಇದೇ ಅಧ್ಯಾಯದ 32ನೇ ಶ್ಲೋಕವು ‘ದೇವರಿಗೆ ಪ್ರಸಾದವಾಗಿ ಅರ್ಪಿಸಿದ ಪ್ರಾಣಿಗಳ ಮಾಂಸವನ್ನು ಮನುಷ್ಯರು ತಿನ್ನುವುದು ತಪ್ಪಾಗುವುದಿಲ್ಲ’ ಎನ್ನುತ್ತದೆ. ಆ ಕಾಲಘಟ್ಟದಲ್ಲಿ ಸರ್ವೇ ಸಾಧಾರಣವಾಗಿದ್ದ ಮಾಂಸಾಹಾರವು ಆಹಾರಕ್ರಮದಲ್ಲಿ, ದೇವರಪೂಜೆಯಲ್ಲಿ, ಔಷಧಿಯ ರೂಪದಲ್ಲಿಯೂ ಬಳಕೆಯಾಗುತ್ತಿದ್ದವು ಎನ್ನುವುದಕ್ಕೆ ಮನುಸ್ಮೃತಿಯ ಈ ಉಲ್ಲೇಖಗಳೇ ಸಾಕ್ಷಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡು: 1 ಗಂಟೆಗಳ ಕಾಲ ಕಾರ್ಯನಿರ್ವಹಿಸದ ಮತಯಂತ್ರ ಸಂಗ್ರಹಿಸಿಟ್ಟಿದ್ದ ‘ಸ್ಟ್ರಾಂಗ್ ರೂಂ’ ಹೊರಗಿನ ಸಿಸಿಟಿವಿ

0
ತಮಿಳುನಾಡಿನ ಈರೋಡ್ ಸಂಸದೀಯ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳು (ಇವಿಎಂ) ಮತ್ತು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳನ್ನು ಸಂಗ್ರಹಿಸಿಟ್ಟಿದ್ದ 'ಸ್ಟ್ರಾಂಗ್ ರೂಂ' ಹೊರಗೆ ಇರಿಸಲಾದ ಸಿಸಿಟಿವಿ ಕ್ಯಾಮೆರಾ ಸೋಮವಾರ...