Homeಅಂಕಣಗಳುಚರಿತ್ರೆಯ ಮಾರುವೇಷ

ಚರಿತ್ರೆಯ ಮಾರುವೇಷ

- Advertisement -
- Advertisement -

ರಹಮತ್ ತರೀಕೆರೆ |

ಕನ್ನಡದ ಮೊದಲಘಟ್ಟದ ಕಾದಂಬರಿಗಳಲ್ಲಿ ಒಂದಾದ ಪುಟ್ಟಣ್ಣನವರ `ಮಾಡಿದ್ದುಣ್ಣೋ ಮಹಾರಾಯ’ದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್, ಆಸ್ಥಾನ ಪಂಡಿತರೊಬ್ಬರ ಮಗಳ ಮದುವೆಯಲ್ಲಿ ಭಾಗವಹಿಸುವ ಸನ್ನಿವೇಶವಿದೆ. ದೊರೆ, ದೊರೆತನದ ಹಮ್ಮಿಲ್ಲದೆ ಜನರೊಂದಿಗೆ ಬೆರೆಯುವುದನ್ನು ಚಿತ್ರಿಸುವ ಕಾದಂಬರಿ, ಭಾರತ ಮತ್ತು ಯೂರೋಪಿನ ದೊರೆಗಳ ಚರಿತ್ರೆಗೆ ಹೊರಳಿಕೊಳ್ಳುತ್ತದೆ. ಆ ಲೋಕಚರಿತ್ರೆಯ ಭಿತ್ತಿಯಲ್ಲಿ ಮೈಸೂರು ದೊರೆಯ ಚಿತ್ರವನ್ನಿಟ್ಟು ಬೆಲೆಕಟ್ಟುತ್ತದೆ:
“ಯುಗಾಂತರದಲ್ಲಿ ಪುರಾಣ ಪ್ರಸಿದ್ಧರಾದ ನಳ ಮಾಂಧಾತ ಶ್ರೀರಾಮ ಮೊದಲಾದ ಚಕ್ರವರ್ತಿಗಳೂ ಮತ್ತು ಈಚೆಗೆ ಇದ್ದ ಅನೇಕ ರಾಜರೂ ಪ್ರಜೆಗಳೇ ತಮ್ಮ ದೈವವೆಂದು ತಿಳಿದು ರಾಜಸದ ಅಟ್ಟಹಾಸವನ್ನು ಬಿಟ್ಟು ಎಲ್ಲರಲ್ಲಿಯೂ ಲಲಿತವಾಗಿ ಇರುತ್ತಾ ಅವರ ಕಷ್ಟಸುಖಗಳನ್ನು ಅರಿತು ಲೋಕೋಪಕಾರವನ್ನು ಮಾಡುತಿದ್ದರು.. ಪ್ರತಿಷ್ಠೆಯೂ ಡಂಭವೂ ನಮ್ಮ ಸೀಮೆಯ ರಾಜರುಗಳಲ್ಲಿ ಹೆಚ್ಚಿದ್ದರೂ, ಸಮಯ ಬಂದಾಗ ತಮ್ಮ ಪದವಿ ಎಂಬ ಪ್ರತಾಪದ ಗಂಟನ್ನು ಅತ್ತ ಇರಿಸಿ, ಬಡವರಾಗಿಯೂ ಪ್ರಜೆಗಳಲ್ಲಿ ಪ್ರಜೆಯಾಗಿಯೂ ವಿಶೇಷವಾದ ಸೌಲಭ್ಯದಿಂದ ನಡೆದುಕೊಂಡು, ಪ್ರಜೆಗಳನ್ನು ಕೇವಲ ಆದರದಿಂದ ಕಾಣುವ ಸಹಜವಾದ ಗುಣವು ನಮ್ಮ ಹಲವು ರಾಜರಲ್ಲಿರುವುದರಿಂದ, ಎಂಥಾ ತುಂಟನಾದರೂ ರಾಜನ ಒಳ್ಳೇತನದಿಂದ ಜಿತನಾಗುವನು. ಈ ಗುಣವು ನಮ್ಮ ಅರಸರಲ್ಲಿರುವುದರಿದಲೇ ಪಾಶ್ಚಾತ್ಯ ರಾಜರಿಗೆ ಉಂಟಾದ ಅನೇಕ ಬಾಧಕಗಳು ನಮ್ಮ ದೇಶಗಳಲ್ಲಿ ಹುಟ್ಟಿಲ್ಲ. ಈಚೆಗೆ ಯೂರೋಪಿನ ರಾಜರ ಹಾಗೆ ನಮ್ಮ ದೊರೆಗಳೂ ಪ್ರಜೆಗಳ ವಿಷಯದಲ್ಲಿ ಬಿರ್ರನೆ ಬೀರಿಕೊಂಡು ಅಸಹ್ಯವಾದ ಮುರುಕನ್ನು ತೋರಿಸುತಾ ಇರುವುದು, ತನ್ನ ಸರಣಿಯಲ್ಲಿ ಅದರ ಫಲವನ್ನು ತೋರಿಸದೇ ಇರದು. ಇಂಥಾ ದುರ್ಗುಣಗಳು ಸಮೀಪ ವೃತ್ತಿಯಲ್ಲಿರತಕ್ಕವರ ದುರ್ಗುಣದ ಪ್ರತಿಬಿಂಬವಾಗಿದೆ. ಈ ಅಂಶವನ್ನು ಬಿಟ್ಟು ಯೋಚಿಸಿದರೆ, ಮುಮ್ಮಡಿ ಕೃಷ್ಣರಾಜ ಒಡೆಯರ ಸೌಲಭ್ಯವೂ ಧಾರಾಳವೂ ಎಂಥಾ ಶತ್ರುಗಳನ್ನಾದರೂ ಮಿತ್ರಸ್ಥಾನಕ್ಕೆ ತರುತ್ತಾ ಇದ್ದವು. ಪ್ರಜೆಗಳು ಎಂದರೆ ತನ್ನ ಮಕ್ಕಳು ಎಂದು ಭಾವಿಸಿಕೊಂಡಿದ್ದ ಈ ಮಹಾರಾಯನ ವಿವೇಕದಿಂದಲೇ ಮೈಸೂರ ರಾಜ್ಯವು ಇದುವರೆಗೆ ಇಷ್ಟರಮಟ್ಟಿಗೆ ಉಳಿದಿದೆ.’’
ಇಲ್ಲಿ ಆದರ್ಶ ಮತ್ತು ಕೆಟ್ಟ ದೊರೆತನದ ವ್ಯಾಖ್ಯಾನವಿದೆ. ಆದರ್ಶ ದೊರೆಯ ಗುಣಗಳೆಂದರೆ-ಪ್ರಜೆಗಳಿಗೆ ಸುಲಭವಾಗಿ ಲಭ್ಯವಾಗುವುದು; ಆಡಂಬರವಿಲ್ಲದೆ ಸಾಮಾನ್ಯನಂತೆ ಬದುಕುವುದು. ಪ್ರಜೆಗಳ ಪ್ರೀತಿವಿಶ್ವಾಸ ಗಳಿಸುವುದು; ಕೆಟ್ಟದೊರೆಯ ಚಹರೆಯೆಂದರೆ- ಪ್ರಜಾನುರಾಗ ಕಳೆದುಕೊಳ್ಳುವುದು, ಪ್ರಜಾಪೀಡಕ ಅಧಿಕಾರಿಗಳಿಗೆ ಆಡಳಿತ ಬಿಟ್ಟುಕೊಟ್ಟು ಅನಾಯಕತ್ವ ಸೃಷ್ಟಿಸುವುದು. ದೊರೆಗಳ ಗುಣಾವಗುಣಗಳ ಜಿಜ್ಞಾಸೆಗೆ ಪ್ರಜೆಗಳ ಪ್ರತಿರೋಧ ಎದುರಿಸಬೇಕಾದ ಪಾಶ್ಚಾತ್ಯ ದೊರೆಗಳ ಚರಿತ್ರೆ ಇಲ್ಲಿ ನೆಪವಾಗಿದೆ. ರಾಜನ ದಕ್ಷತೆಯನ್ನು ಪ್ರಜೆಗಳ ಅಭಿಪ್ರಾಯದ ಮೂಲಕ ನಿರ್ಧರಿಸಬೇಕು ಎಂಬ ನಿಲುವು ಇಲ್ಲಿ ವ್ಯಕ್ತವಾಗುತ್ತಿದೆ. ಕೆಟ್ಟದೊರೆತನವನ್ನು ಜನ ಮೂಕವಾಗಿ ಸಹಿಸದೆ ಪರ್ಯಾಯ ರಾಜಕೀಯ ವ್ಯವಸ್ಥೆ ಹುಟ್ಟಿಸಿಕೊಳ್ಳಬಲ್ಲರು ಎಂಬ ರಾಜಕೀಯ ಸತ್ಯವನ್ನು ಕಾಣಿಸಲಾಗುತ್ತಿದೆ. ದೊರೆಯ ಕೆಡುವಿಕೆಯಲ್ಲಿ ವೈಯಕ್ತಿಕ ಸಹವಾಸ ದೋಷವನ್ನು ಪ್ರಧಾನ ಸಂಗತಿಯಾಗಿ ಗುರುತಿಸಲಾಗುತ್ತಿದೆ. ದೊರೆ ಎಷ್ಟೇ ಸಜ್ಜನನಾಗಿದ್ದರೂ ಆಳ್ವಿಕೆಯಲ್ಲಿ ಬಿಗಿ ಕಳೆದುಕೊಂಡರೆ, ಪರಿವಾರ ಹದ್ದಿನನೆರವಿಯಾಗುತ್ತದೆ; ರಾಜ್ಯ ಪತನಗೊಳ್ಳುತ್ತದೆ ಎಂದು ಸೂಚಿಸಸಲು ಕಾದಂಬರಿ ಈ ಸುದೀರ್ಘ ಪೀಠಿಕೆಯನ್ನು ಹಾಕುತ್ತಿದೆ. ಚಾರಿತ್ರಿಕವಾಗಿ ರಾಜಕೀಯ ಜಿಜ್ಞಾಸೆ ಮಾಡುತ್ತ ರಾಜಧರ್ಮದ ಪರಿಕಲ್ಪನೆಯನ್ನು ಮುಂದಿಡುತ್ತಿದೆ.
ಇಲ್ಲಿ ಕಾದಂಬರಿ ರಾಜಕೀಯ ಪಠ್ಯವಾಗಿ ರೂಪಾಂತರಗೊಳ್ಳುತ್ತಿದೆ; ಇದಕ್ಕೆ ಪ್ರತಿಯಾಗಿ ಕೆಲವು ಚರಿತ್ರೆಯ ಕೃತಿಗಳು ಕಾದಂಬರಿಗಳಂತೆ ಕಥನ ಮಾಡುತ್ತವೆ. ಮೈಸೂರು ಆಸ್ಥಾನದ ಚರಿತ್ರಕಾರ ಶಿಂಗ್ರಯ್ಯನವರು ರಚಿಸಿದ `ಚಾಮರಾಜೇಂದ್ರ ಒಡೆಯರವರ ಚರಿತ್ರೆ’ ಇದಕ್ಕೆ ನಿದರ್ಶನ. ಗಂಡುಸಂತಾನವಿಲ್ಲದ ಮುಮ್ಮಡಿಯವರು, ದತ್ತುಸ್ವೀಕಾರ ಮಾಡಲು ಬ್ರಿಟಿಶ್ ಸರ್ಕಾರವು ಒಪ್ಪದಿದ್ದಾಗ, ಕೃತಿ ಆಕ್ರೋಶ ಪ್ರಕಟಿಸುವ ಪರಿಯನ್ನು ಗಮನಿಸಬೇಕು: “ವಾಚಕ ಮಹಾಶಯರೇ! ಕಾಲವು ವಿಪರ್ಯಾಸವನ್ನು ಪಡೆದು ಎಷ್ಟು ವಿಚಿತ್ರಗತಿಗೊಳಗಾಯ್ತು ನೋಡಿದಿರಾ? ಮೈಸೂರು ಸಂಸ್ಥಾನಾಧಿಪತಿಯು ಔರಸಪುತ್ರಾಭಾವದಿಂದ ಕೊರಗುತ್ತಾ ಸ್ವವಂಶಾಭಿವೃದ್ಧ್ಯರ್ಥವಾಗಿ ಒಬ್ಬ ಪುತ್ರನನ್ನು ಸ್ವೀಕಾರ ಮಾಡಿಕೊಳ್ಳಬೇಕಾದರೂ ಅನ್ಯದೇಶಿಯರ ಅಪ್ಪಣೆಯನ್ನು ಪಡೆಯಬೇಕಾಯಿತು. ಯಾವಯಾವ ಕಾಲದಲ್ಲಿ ಏನೇನು ಸಂಭವಿಸುವುದೋ ಅರಿತವರಾರು? ಇದನ್ನು ನೋಡಿದರೆ `ಭವಿತವ್ಯಂ ಭವತ್ಯೇವ ಕರ್ಮಣಾಮೀದೃಶೀಗತಿಃ ಎಂಬ ವಿಚಾರಿಗಳ ವಾಕ್ಯವು ನೆನಪಿಗೆ ಬರುವುದಲ್ಲವೇ?’.
ಕೃತಿಯ ನಿರೂಪಣೆ ವಾಚಕರನ್ನು ಸಂಬೋಧಿಸುತ್ತ, ಅವರನ್ನು ತನ್ನ ಭಾವಾವೇಶದಲ್ಲಿ ಒಳಗು ಮಾಡುತ್ತಿದೆ. ಕಾದಂಬರಿ ಮತ್ತು ಚರಿತ್ರೆಗಳ ಈ ಪಾತ್ರ ಬದಲಾವಣೆಯು, ಚರಿತ್ರಲೇಖನ ಮತ್ತು ಕಥನಗಳು ಮಾಡಿದ ಕೂಡು ಪ್ರಯೋಗಶೀಲತೆಯ ಫಲವಾಗಿವೆ. ಇಂತಹುದೇ ಪ್ರಯೋಗಶೀಲತೆ ವಸಾಹತುಶಾಹಿ ಕಾಲಘಟ್ಟದ ಮುಖ್ಯ ರಾಜಕೀಯ ಚಿಂತಕರಾದ ಡಿವಿಜಿಯವರಲ್ಲೂ ಕಾಣಬಹುದು. ತಮ್ಮ `ದಿವಾನ್ ರಂಗಾಚಾರ್ಲು’ನಲ್ಲಿ ಪ್ರಪಂಚದ ದೇಶಗಳಲ್ಲಿ ರಾಜಪ್ರಭುತ್ವದ ವಿರುದ್ಧ ನಡೆದ ದಂಗೆಗಳನ್ನು ಉಲ್ಲೇಖಿಸುತ್ತ ಅವರು ಹೀಗೆನ್ನುತ್ತಾರೆ: “ಯುದ್ಧದಿಂದ ಅಪಾಯ ಹೊಂದದೆ ಮತ್ತಷ್ಟು ಮಹೋನ್ನತವಾಗಿರುವ ಸಿಂಹಾಸನವು ಯೂರೋಪು ಖಂಡದಲ್ಲೆಲ್ಲಾ ಇಂಗ್ಲೆಂಡ್ ಒಂದರದೇ. ಅದಕ್ಕೆ ಅಲ್ಲಿಯ ರಾಜರು, ಇತರ ರಾಜರಂತೆ ಉಚ್ಚøಂಖಲರಾಗಿರದೆ ಪ್ರಜಾಭಿಪ್ರಾಯಕ್ಕೆ ಅನುಸಾರವಾಗಿ ನಡೆಯುತ್ತಿರುವುದೇ ಕಾರಣವೆಂದು ರಾಜಧರ್ಮವಿದರೆಲ್ಲರೂ ಘೋಷಿಸುತ್ತಿರುವರು… ಈ ರೀತಿಯಾಗಿ ಈಗ ನಾಗರಿಕತೆಗೆ ಬಂದಿರುವ ಭೂಭಾಗಗಳಲ್ಲೆಲ್ಲಾ ಪ್ರಜಾರಾಜ್ಯವೇ ಸ್ಥಿರವಾಗುತ್ತಿದೆ. ಇದೆಲ್ಲವನ್ನೂ ವಿಚಾರಿಸಿ ನೋಡಿದರೆ ತೋರಿಬರುವ ನೀತಿಯು ನಮ್ಮ ವ್ಯಾಸ ಕಾಳಿದಾಸಾದಿಗಳು ಹೇಳಿದ “ರಾಜಾ ಪ್ರಕೃತಿ ರಂಜನಾತ್’’ ಎಂಬ ವಾಕ್ಯದ ಅನುವಾದದಂತೆ ಕಾಣುತ್ತದೆ.’’ ಸ್ಥಳೀಯ ದಿವಾನರ ಚರಿತ್ರೆಯನ್ನು ಹೇಳಲು ಹೊರಟಿರುವ ಕೃತಿಯು, ಪಾಶ್ಚಾತ್ಯ ಜಗತ್ತಿನ ರಾಜಕೀಯ ಬೆಳವಣಿಗೆ ಮತ್ತು ಚಿಂತನೆಗಳನ್ನು, ಭಾರತದ ಸಾಂಪ್ರದಾಯಿಕ ಪ್ರಭುತ್ವದ ಪರಿಕಲ್ಪನೆಯ ಜತೆಗಿಟ್ಟು ನೋಡುತ್ತಿದೆ. ಇಲ್ಲಿ ಎಂ.ಎಸ್. ಪುಟ್ಟಣ್ಣ, ಶಿಂಗ್ರಯ್ಯ, ಡಿವಿಜಿಯವರು ಪ್ರಭು ಮತ್ತು ಪ್ರಭುತ್ವಗಳಿಗೆ ಹೊಸವ್ಯಾಖ್ಯೆಯನ್ನು ಕೊಡುತ್ತ ಪರೋಕ್ಷವಾಗಿ ತಮ್ಮ ಕಾಲಕ್ಕೆ ಬೇಕಾದ ರಾಜಧರ್ಮದ ಪರಿಕಲಕ್ಪನೆಯನ್ನು ರೂಪಿಸುತ್ತಿರುವುದು ಸ್ಪಷ್ಟವಾಗಿದೆ.
ವಸಾಹತುಶಾಹಿ ಕಾಲಘಟ್ಟದ ರಾಜಕೀಯ ಪಠ್ಯಗಳಿಗೆ ಗತಕಾಲದ ರಾಜಕೀಯ ಚರಿತ್ರೆಯನ್ನು ಕಟ್ಟುವುದಕ್ಕಿಂತ, ಸಮಕಾಲೀನ ರಾಜಕಾರಣದ ಬಗ್ಗೆ ಟೀಕೆಟಿಪ್ಪಣಿ ಮಾಡುವ ತುಡಿತವೇ ಮುಖ್ಯವಾಗಿದೆ. `ಮಹಾರಾಯ’ವು ಸಹವಾಸ ದೋಷದಿಂದ ದೊರೆ ಕೆಡುವ ವಿಷಯದಲ್ಲಿ `ನಮ್ಮ ದೊರೆಗಳು’ ಎನ್ನುವಾಗ, ಆಗ ಅಧಿಕಾರದಲ್ಲಿದ್ದ ನಾಲ್ವಡಿಯವರತ್ತ ಬೆರಳು ಮಾಡುತ್ತಿರುವಂತೆ ಕಾಣುತ್ತಿದೆ. ತಾನು ಆದರ್ಶವೆಂದು ಹೊಗಳುತ್ತಿರುವ ಮುಮ್ಮಡಿಯವರೂ ಒಂದು ಕಾಲಕ್ಕೆ ಈ `ದೋಷ’ಕ್ಕೆ ಪಕ್ಕಾಗಿದ್ದರು ಎಂಬುದನ್ನು `ಈ ಅಂಶವನ್ನು ಬಿಟ್ಟು ಯೋಚಿಸಿದರೆ’ ಎಂಬ ಒಕ್ಕಣೆಯಲ್ಲಿ ಸ್ಪಷ್ಟವಾಗಿದೆ. `ಮಹಾರಾಯ’ ಶಬ್ದಕ್ಕಿರುವ ಪ್ರಭು ಎಂಬರ್ಥವನ್ನು ಗಮನಿಸಿದರೆ, ಮಾಡಿದ್ದನ್ನು ಉಣ್ಣಬೇಕಾದುದು ತಪ್ಪಿತಸ್ಥ ಅಧಿಕಾರಿಗಳು ಮಾತ್ರವಲ್ಲ, ಆಳುವದೊರೆ ಕೂಡ. ಕಾದಂಬರಿ-ಜೀವನಚರಿತ್ರೆಗಳು ನಡುವೆ ಅವಕಾಶ ಸೃಷ್ಟಿಸಿಕೊಂಡು ಸಾಮಾಜಿಕ ರಾಜಕೀಯ ಚರಿತ್ರೆಯನ್ನು ಹೇಳುತ್ತವೆ. ವಿಜಯನಗರ ಚರಿತ್ರೆ ಕುರಿತ ಗಳಗನಾಥರ `ಕರುಣಾವಿಲಾಸ’ವಂತೂ ಚರಿತ್ರೆಯನ್ನು ಹೇಳುವ ನೆಪದಲ್ಲಿ ಸುದೀರ್ಘ ಧಾರ್ಮಿಕ ಉಪದೇಶ ಮಾಡÀುತ್ತದೆ. ಗಳಗನಾಥ ಪುಟ್ಟಣ್ಣ ಇಬ್ಬರಿಗೂ ಕಾದಂಬರಿ-ಚರಿತ್ರೆ ಪ್ರಕಾರಗಳಲ್ಲಿ ವ್ಯತ್ಯಾಸವಿಲ್ಲ. ಇಬ್ಬರೂ ಕಾದಂಬರಿಗಳ ಜತೆ ಬೇರೆಬೇರೆ ದೊರೆ ಮತ್ತು ಸಂತರ ಮೇಲೆ ಚರಿತ್ರೆಯನ್ನೂ ರಚಿಸಿದವರು. ತಮ್ಮ ಕೃತಿಗಳಲ್ಲಿ ರಾಜಕಾರಣ ಮತ್ತು ಧರ್ಮದ ತಾತ್ವಿಕತೆಗಳನ್ನು ಏಕೀಭವಿಸಿದವರು. `ಮಹಾರಾಯ’ವು ಕುಟುಂಬದ ಕಥೆಯನ್ನು ಹೇಳಹೊರಟು ನಾಡಿನ ಕಥೆಯನ್ನು ನಿರೂಪಿಸುತ್ತದೆ. ಈ ವಿಷಯದಲ್ಲಿ ಅದು ಟಾಲ್‍ಸ್ಟಾಯನ `ವಾರ್ ಅಂಡ್ ಪೀಸ’ನ್ನು ನೆನಪಿಸುತ್ತದೆ. ಪುಟ್ಟಣ್ಣನವರ `ಕುಣಿಗಲ್ ರಾಮಶಾಸ್ತ್ರಿಯ ಚರಿತ್ರೆ’ಯಾದರೂ, ವ್ಯಕ್ತಿಕಥೆಯನ್ನು ಹೇಳುತ್ತಲೇ ಅದನ್ನು ದೊರೆಯ ಚರಿತ್ರೆಯ ಜತೆಗೆ ಅಭೇದಗೊಳಿಸುತ್ತದೆ. `ಕವಿರಾಜಮಾರ್ಗ’ದಲ್ಲಿ ದೊರೆ-ಕವಿಯ ಸಂಗಮವಿದ್ದರೆ, ಇಲ್ಲಿ ದೊರೆ-ಪಂಡಿತನದು. “ಕುಣಿಗಲ ರಾಮಶಾಸ್ತ್ರಿಗಳು ಮೈಸೂರ ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್ ಪ್ರಭುಗಳ ಆಸ್ಥಾನದಲ್ಲಿ ಮುಖ್ಯ ವಿದ್ವಾಂಸÀರಾಗಿದ್ದ ಕಾರಣ, ಈ ಚರಿತ್ರೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದ ದರಬಾರಿನ ರೀತಿ, ರಾಜಸಭೆಯ ಸ್ಥಿತಿ, ಆಗಿದ್ದ ಮುಖಂಡರಾದ ವೈದಿಕ ಲೌಖಿಕರ ಯೋಗ್ಯತೆ ಮತ್ತು ಸದ್ಗುಣಗಳು, ಆಗಿನ ಗ್ರಂಥವ್ಯಾಸಂಗ ಕ್ರಮ, ಸಮಕಾಲಿಕರಾದ ಪ್ರಂಡಿತರ ಯೋಗ್ಯತೆ, ಇವೆಲ್ಲಕ್ಕೂ ಮುಖ್ಯ ಆಧಾರಭೂತರಾಗಿದ್ದ ಕೃಷ್ಣರಾಜಪ್ರಭುಗಳ ಅಮೋಘವಾದ ಗುಣಾತಿಶಯಗಳು, ಇವೇ ಮೊದಲಾದ ವಿಷಯಗಳನ್ನು ಸಂಗತವಾದ ಕಡೆ ವರ್ಣಿಸಿದೆ’’ ಎಂಬ ಕೃತಿಯ ಸಮಜಾಯಿಶಿ ಗಮನಾರ್ಹ.
ಕನ್ನಡದಲ್ಲಿ ಬಹುತೇಕ ಚಾರಿತ್ರಿಕ ಕಾದಂಬರಿಗಳು ರಾಜಕೀಯ ಕಾದಂಬರಿಗಳಾಗಿ, ತಮ್ಮದೇ ಆದ ರಾಜಕೀಯ ಮೀಮಾಂಸೆ ಮಂಡಿಸುತ್ತವೆ. ಕನ್ನಡದ ಮಟ್ಟಿಗೆ ರಾಜಕೀಯ ಚರ್ಚೆಗೆ ಬಳಕೆಯಾದ ಜ್ಞಾನಶಿಸ್ತುಗಳಲ್ಲಿ ಮುಖ್ಯವಾದುದು ಚರಿತ್ರೆಶಾಸ್ತ್ರ. ಚರಿತ್ರೆಯನ್ನು ಮರುಕಟ್ಟುವ ನೆಪದಲ್ಲಿ ರಾಜಕೀಯ ತತ್ವಶಾಸ್ತ್ರವನ್ನು ಅಭಿವ್ಯಕ್ತಿಸುವ ಕಾದಂಬರಿಗಳಿಗೆ ವರ್ತಮಾನದ ಓದುಗರಲ್ಲಿ ಹೊಸ ರಾಜಕೀಯ ತಿಳುವಳಿಕೆಯನ್ನು ಮೂಡಿಸುವ ಆಶಯವೂ ಇದೆ. ಈ ದೃಷ್ಟಿಯಿಂದ 19ನೇ ಶತಮಾನದ `ಮಂಜೂಷ’ಕ್ಕಿಂತ 20ನೇ ಶತಮಾನದ `ಮಹಾರಾಯ’ `ಕರುಣಾವಿಲಾಸ’ಗಳು, ತೀವ್ರವಾದ ರಾಜಕೀಯ-ಚಾರಿತ್ರಿಕ ಪಠ್ಯಗಳು. ಇಲ್ಲೇ ಇಂಥ ರಾಜಕೀಯ-ಚಾರಿತ್ರಿಕ ಕಾದಂಬರಿಗಳನ್ನು ಉದ್ಘಾಟಿಸಿದ `ಮುದ್ರಾಮಂಜೂಷ’ವನ್ನು ಸ್ಮರಿಸಬೇಕು. ಕುರ್ತಕೋಟಿಯವರು “ಕೆಂಪುನಾರಾಯಣನದು ಕಾದಂಬರಿ ರೂಪವಿನ್ಯಾಸವನ್ನು ಸಂಸ್ಕøತದ ಕಥಾರೂಪದೊಂದಿಗೆ ಜೋಡಿಸುವ ಪ್ರಯತ್ನವಾಗಿದೆ. ಇತಿಹಾಸವನ್ನು ವಸ್ತುವಾಗಿಟ್ಟುಕೊಂಡು ಬರೆಯುವುದು ಕೂಡ ಆಗಿನ ಕಾಲಕ್ಕೆ ಹೊಸ ಮಾತಾಗಿತ್ತು… ಮೊಟ್ಟಮೊದಲಿಗೆ ಅವನು ಆಧುನಿಕ ಜನತೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಬರೆದಿದ್ದಾನೆ’’ ಎಂದು ವ್ಯಾಖ್ಯಾನಿಸುವರು. ಮಂಜೂಷಕಾರನ ಲಕ್ಷ್ಯದಲ್ಲಿ ಜನರಿದ್ದರೊ ಇಲ್ಲವೊ, ಪ್ರಭುತ್ವವಂತೂ ಇತ್ತು. ಏಕಕಾಲಕ್ಕೆ ಪ್ರಭುತ್ವಕ್ಕೂ ಪ್ರಜೆಗಳಿಗೂ ಉದ್ದೇಶಿಸಿ ಹುಟ್ಟಿದ ಚಾರಿತ್ರಿಕ ಸಾಮಾಜಿಕ ರಾಜಕೀಯ ಕಾದಂಬರಿಯಿದು. ವಸಾಹತುಶಾಹಿ ಕಾಲದಲ್ಲಿ ಇಂಥ ರಾಜಕೀಯ ಪಠ್ಯಗಳನ್ನು ರಚಿಸಿದ ಬಹುತೇಕರು ಸ್ವತಃ ದೊರೆಗಳು, ರಾಜಾಶ್ರಿತ ಅಧಿಕಾರಿಗಳು, ಆಸ್ಥಾನಕವಿಗಳು ಹಾಗೂ ಸ್ವತಂತ್ರ ರಾಜಕೀಯ ಚಿಂತಕರು ಆಗಿದ್ದರು. ಕುಟುಂಬದ ದೊರೆಯ ಹಾಗೂ ನಾಡಿನ ಕಥೆಗಳು ಒಂದರೊಳಗೊಂದು ಹೊಕ್ಕಾಡುವ ವಿನ್ಯಾಸವುಳ್ಳ ಇವರ ಕೃತಿಗಳು ಅಂತಿಮವಾಗಿ ನಿರ್ವಚಿಸುವುದು ತಮ್ಮ ಕಾಲಕ್ಕೆ ಬೇಕಾದ ರಾಜನೀತಿಯನ್ನು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...