Homeಅಂಕಣಗಳುನಿಮ್ಮ ಖಾತೆಗಳನ್ನ ಬುಟ್ಟುಕೊಟ್ರೆ ಸರಕಾರ ಉಳಿತದಂತೆ ಸಾ...

ನಿಮ್ಮ ಖಾತೆಗಳನ್ನ ಬುಟ್ಟುಕೊಟ್ರೆ ಸರಕಾರ ಉಳಿತದಂತೆ ಸಾ…

- Advertisement -
- Advertisement -

| ಯಾಹೂ |

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವುಂಟಾದರೂ ಕೊಲ್ಲೂರು ಪ್ರಾಂತ್ಯದ ಮೂಕಾಂಬಿಕೆ ಸನ್ನಿಧಿಯಲ್ಲಿ ವಿಹರಿಸುತ್ತಿರುವ ರೇವಣ್ಣನವರನ್ನು ಮಾತನಾಡಿಸಿ, ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನಿಸಿತಲ್ಲಾ, ಆ ಕೂಡಲೇ ಪೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: “ಕೊಲ್ಲೂರು ಸಿರಿದೇವಿ ಮೂಕಾಂಬಿಕೇ, ನಿನ್ನ ದರುಶನಕೆ ಬಂದಿಹೆನು ಕಾಪಾಡಮ್ಮ.”
“ಹಲೋ ಯಾರ್ರಿ.”
“ನಾನು ಸರ್ ಯಾಹೂ.”
“ಏನ್ರಿ”
“ಎಲ್ಲಿದ್ದಿರಿ ಸಾರ್.”
“ನಾನೆಲ್ಲಿದ್ರೆ ನಿಮಗೇನ್ರಿ.”
“ಅಲ್ಲ ಸಾರ್. ರೇವಣ್ಣ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡ್ತಾ ಅವುರೆ ಅಂದ್ರು, ಅದಕೆ ಫೋನ್ ಮಾಡಿದೆ ಸಾರ್.”
“ಕೊಲ್ಲೂರು ಮೂಕಾಂಬಿಕೆ, ಆನೆಗುಡ್ಡದ ಆಂಜನೇಯ, ಕಟೀಲು, ಧರ್ಮಸ್ಥಳ, ಇಲ್ಯಲ್ಲ ಹೋಗಿ ಬಂದೆ ಕಂಡ್ರಿ.”
“ದೇವರು ಸರಕಾರ ಉಳುಸ್ತವ ಸಾರ್.”
“ಉಳುಸ್ತವೆ ಕಂಡ್ರಿ.”
“ಹ್ಯಂಗೆ ಸಾರ್.”
“ಯಾರ್ಯಾರಿಗೆ ಮನಿಯಾಳು ಬುದ್ದಿ ಇರತದೊ ಅವುರಿಗ್ಯಲ್ಲ ವಳ್ಳೆ ಬುದ್ದಿ ಕೊಡು ಅಂತ ನಾವು ದೇವರ ಕೇಳಿಕೊಂಡು ಪೂಜೆ ಮಾಡುಸ್ತಿವಿ, ಹೋಮ ಮಾಡುಸ್ತಿವಿ.”
“ಆಗ ದೇವುರು ಅವುರಿಗ್ಯಲ್ಲ ವಳ್ಳೆ ಬುದ್ದಿ ಕೊಡ್ತದ ಸಾರ್.”
“ಕೊಡ್ತದೊ ಬುಡ್ತದೊ ನಾವು ಮಾಡೊ ಕ್ಯಲಸ ಮಾಡಬೇಕಲ್ವೇನ್ರಿ”
“ನಿಜ ಸಾರ್.”
“ಅದ್ಕೆ ನಾನು ಮದ್ಲು ಹೋಗಿ ಕೇಳಿಕಂಡಿದ್ದು ಮೈಸೂರು ಚಾಮುಂಡೇಶ್ವರಿಯ. ಅವುಳು ಮೈಸೂರು ಮಾರಾಜನ್ನ ಕಾಪಾಡಿದಂಗೆ ನಮ್ಮ ಕುಮಾರನ ಸರಕಾರನೂ ಉಳುಸ್ತಾಳೆ.”
“ಹೆಣ್ಣು ದೇವರಿಗೆ ಇಷ್ಟು ಗೌರವ ಕೊಡೋ ನೀವು ಆ ಸುಮಲತನ್ನ ಬೈದರಲ್ಲ ಸಾರ್.”
“ನಾನೆಲ್ಲಿ ಬೋದೆ. ವಟ್ಟಿಗೇನು ತಿಂತೀರಿ ನೀವು ನಿಮ್ಮಂಥೊರಿಂದ್ಲೆ ಹಿಂಗಾಗಿರದು.”
“ಸಾರಿ ಸರ್ ಬೈಲಿಲ್ಲ ಟೀಕೆ ಮಾಡಿದ್ರಿ.”
“ಟೀಕೆ ಎಲ್ಲಿ ಮಾಡಿದೇರೀ? ಪಾಪ ಗಂಡ ಸತ್ತು ತಿಂಗಳಾಗಿಲ್ಲ ಯಲಕ್ಷನ್ನಿಗೆ ಬಂದವುಳೆ ಅಂದೆ ಇದು ತೆಪ್ಪ.”
“ತೆಪ್ಪಲ್ಲ ಸಾರ್, ಅಕಸ್ಮಾತ್ ನೀವು ಅಂಬರೀಶನಂಗಾಗಿ…..”
“ಥೂ ಬುಡ್ತು ಅನ್ರಿ.”
“ಸಾರಿ ಸ, ನಿಮ್ಮ ನಂತ್ರ ಭವಾನಕ್ಕನಿಗೆ ಟಿಕೆಟ್ ಕೊಟ್ರೆ ನೀವು ಅಂಗನ್ನಕ್ಕಾಯ್ತದ.”
“ಭವಾನಿ ನಾನಿಲ್ದಾಗ ರಾಜಕಾರಣ ಮಾಡದಕ್ಕಿಂತ ಈಗ್ಲೆ ಅವುಳು ರಾಜಕಾರಣಿ ಕಂಡ್ರಿ, ಅವುಳ ಕ್ಯಲಸ ನಿಮಗೇನು ಗೊತ್ತು.”
“ಗೊತ್ತಾಗಲಿಲ್ಲ ಸಾರ್.”
“ಹಾಸನ ಜಿಲ್ಲೆ ಇಸಗೂಲುಡುಗ್ರ್ಯಲ್ಲ ಪಾಸಾಗ್ಯವೆ ಅಂಗೆ ಮಾಡಿದ್ಲು.”
“ರಿಯಲ್ಲಿ ಗ್ರೇಟ್ ಸಾ, ಅಂಗಿದ್ರೆ ಅವುರ ಎಮ್ಮೆಲ್ಸಿ ಮಾಡಿ ಶಿಕ್ಷಣ ಸಚಿವರನ್ನಾಗಿ ಮಾಡಿದ್ರೆ, ಇಡೀ ಕರ್ನಾಟಕದ ಸ್ಕೂಲು ಮಕ್ಕಳ್ಯಲ್ಲ ಪಾಸಾಯ್ತವಲ್ಲವ ಸಾ.”
“ಆಯ್ತವೆ ಸರಿ, ಆದ್ರೆ ಅವುಳ ಎಮ್ಮೆಲ್ಸಿ ಮಾಡಕ್ಕೆ ಬುಡ್ತಾರೇನ್ರಿ. ಈಗ್ಲೆ, ದ್ಯಾವೇಗೌಡ್ರು ಮಕ್ಕಳದೆ ಸರಕಾರ ಅಂತ ವಟ್ಟೆಕಿಚ್ಚು ಮಾಡೋರು ಆಗ ಬುಡ್ತಾರಾ.”
“ವಟ್ಟೆಕಿಚ್ಚು, ರಾಜಕಾರಣಿಗಳ ಹುಟ್ಟುಗುಣ ಸಾ. ವಟ್ಟೆಕಿಚ್ಚು, ಕರುಬುತನ, ಕಿಜ್ಜರತನ, ಸಣ್ಣತನ ಇವ್ಯಲ್ಲ ನಿಮ್ಮಂತವರ ಹುಟ್ಟುಗುಣ.”
“ನಮ್ಮಂತವುರು ಅಂತ ಯಾಕಂತೀರಿ ಹಲ್ಲಿಡುದು ಮಾತಾಡಿ.”
“ನೀವು ದೇವೇಗೌಡ್ರ ಮಕ್ಕಳಲ್ಲವ ಸಾರ್.”
“ಅದ್ಕೆ ಅಂಗಂದುಬುಡದಾ. ನಮ್ಮ ತಂದೆ ಈ ವಯಸ್ಸಿನಲ್ಲಿ ಎಷ್ಟು ಕಷ್ಟಪಡ್ತರೆ ಅಂತ ನಿಮಗೇನ್ರಿ ಗೊತ್ತು”
“ನಿಜ ಸಾ, ಗೌಡ್ರು ಅನ್ನ ನಿದ್ದೆ ಬುಟ್ಟು ಬರೀ ಮುದ್ದೆ ತಿನ್ನಕಂಡು ನೋವಿನ ಕಣ್ಣಲ್ಲಿ ಕುಂತಿರದ ನೋಡಿದ್ರೆ ವಟ್ಟೆ ಉರಿತದೆ. ಈ ಹಾಳು ಎಮ್ಮೆಲ್ಲೆಗಳು ಅದ ತಿಳಕಳ್ಳಿಲ್ಲ.”
“ತಿಳಕಳಕ್ಕೆ ಯಂಗಾಯ್ತದ್ರಿ, ಆ ಬಿಜೆಪಿಗಳು ಕೋಟಿ ಕೋಟಿ ಕೊಡ್ತೀವಿ ಅಂತ ಆಸೆ ತೋರಿಸಿಬುಟ್ಟವುರೆ, ಅದ್ಕೆ ಅಂಗಾಡದು.”
“ನೀವು ತೋರಬೇಕಾಗಿತ್ತು.”
“ಎಲ್ಲಿಂದ ತರದ್ರಿ ಅಷ್ಟೊಂದು ದುಡ್ಡ.”
“ಸರಕಾರದ ಖಜಾನೇನೆ ನಿಮ್ಮದಲವಾ ಸಾ.”
“ಸರಕಾರದ ಖಜಾನೆ ನಮ್ಮದು ಅಂತ ಈ ಮುಂಡೆ ಮಕ್ಕಳಿಗ್ಯಲ್ಲ ಕೇಳಿ ಕೇಳಿದಂಗೆ ಕೊಡಕ್ಕಾಯ್ತದೇನ್ರಿ.”
“ಅದ್ಕೆ ಅಲವ ಸಾ, ಬಂಡಾಯ.”
“ಬಂಡಾಯ ಏಳ್ಳಿಬುಡಿ, ಕುಮಾರನ ಸರಕಾರವ ಏನು ಮಾಡಕ್ಕಾಗದಿಲ್ಲ. ನಾನೀಗಾಗ್ಲೆ ಯಲ್ಲಾ ದೇವರನೂ ನೋಡಿ ಪೂಜೆ ಮಾಡಿ ಬಂದಿದ್ದಿನಿ. ನಮ್ಮ ಕಡೆ ದೇವುರಿದಾನೆ.”
“ಒಂದು ಡವುಟು ಸಾರ್.”
“ಏನ್ರಿ ಅದು.”
“ನೀವು ಈಗಾಗ್ಲೆ ಒಂದು ಡಜನ್ ದೇವುರಿಗೆ ನಿಮ್ಮ ಕಷ್ಟ ಹೇಳಕಂಡಿದ್ದಿರಿ, ಇದರಲ್ಲಿ ಯಾವ ದೇವರು ನಿಮ್ಮ ಕೈ ಹಿಡಿತವೆ.”
“ಯಲ್ಲಾ ದೇವರೂ ಹಿಡಿತವೆ.”
“ಹಿಡಿಲಿಲ್ಲ ಅಂದ್ರೆ.”
“ಹಿಡಿದೇ ಹಿಡಿತವೆ ಕಂಡ್ರಿ. ನಮ್ಮ ತಂದೆ ಕನಕಪುರ, ಹೊಳೆನರಸೀಪುರದಲ್ಲಿ ಸೋತು, ಮನಿಗೆ ಬಂದಾಗ ಸುಮ್ಮನೆ ಕೂತಗಳಿಲ್ಲ. ದೇವರ ಪೂಜೆ ಮಾಡಿದ್ರು. ಜಗದ್ಗುರುಗಳ ಕಾಲಿಗೆ ಬಿದ್ರು. ಮುಂದೇನಾಯ್ತು? ಪ್ರಧಾನಿಯಾದ್ರು! ಇದ ನಂಬಕ್ಕಾಯ್ತದೇನ್ರಿ, ಅದ್ಕೆ ನಾವು ಯಾವತ್ತೂ ದೇವರ ಪೂಜೆ, ಪುನಸ್ಕಾರ ಬುಡದಿಲ್ಲ. ಕುಮಾರನ್ನ ಚಾಮುಂಡೇಶ್ವರಿ ಕೈ ಹಿಡಿದೇ ಹಿಡಿತಳೆ.”
“ನಮಗಿರೋ ಮಾಹಿತಿ ಪ್ರಕಾರ ಈ ಒಂದು ವರ್ಷ ನಿಮ್ಮ ಕುಟುಂಬ ಇಡೀ ಸರಕಾರನ ತಿಂದು ಕುಂತದಂತೆ? ಯಾವ ಯಮ್ಮೆಲ್ಲೆಗೂ ಅನುದಾನ ಇಲವಂತೆ.”
“ಅದ್ಯಾವನ್ರಿ ಅಂಗಂದೋನು? ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡ್ಳಿ, ಕರಕೊಂಡು ಬನ್ರಿ ಅವುರ.”
“ಸರಕಾರ ಉಳಿಬೇಕಾದ್ರೆ ಒಂದು ಸಿಂಪಲ್ ತೀರ್ಮಾನ ಇದ್ದತ್ತಂತೆ ಸಾರ್.”
“ಅದ್ಯಾವುದ್ರಿ ಸಿಂಪಲ್ಲು ತೀರ್ಮಾನ? ಅಂತದು ಇದ್ದತೆ?.”
“ನಿಮ್ಮ ಕೈಲಿ ಅದೆ ಸಾರ್.”
“ನನ್ನ ಕೈಲಿ ನಿಂಬೆಹಣ್ಣವೆ ಕಂಡ್ರಿ.”
“ಆ ಐದು ನಿಂಬೆ ಹಣ್ಣ ನಿಮ್ಮ ಸರಕಾರಕ್ಕೆ ಸಪೋಲ್ಟು ಮಾಡಿರೋ ಸಮರ್ಥರಾದ ಐದು ಜನ ಎಂಎಲ್‍ಎಗಳ ಕೈಗೆ ಕೊಟ್ಟು, ನಿಮ್ಮ ಖಾತೆ, ಕುಮಾರಣ್ಣನತ್ರ ಇರೋ ಖಾತೆ ಹಂಚಿದ್ರೆ, ಸರಕಾರ ಇನ್ನ ನಾಕೊರ್ಸ ಇರತದೆ ಸಾ.”
“ಇದು ಸಿಂಪಲ್ಲು ತೀರ್ಮಾನ ಏನ್ರಿ. ಯಾವನ್ರಿ ನಿಮಗೆ ಇಂಥಾ ಮನಿಯಾಳ ಬುದ್ದಿ ಹೇಳಿಕೊಟ್ಟೋನು. ಸರಕಾರ ಬಿದ್ದೋಗಿ ನಾವು ವಿರೋಧ ಪಕ್ಷದಲ್ಲಿ ಕುತಗಂಡ್ರೂ ಇಂತ ಕ್ಯಲಸ ಮಾಡಕ್ಕಾಯ್ತದೇನ್ರಿ.”
“ಅಂಗಾದ್ರೆ ಸರಕಾರನ ನಿಮ್ಮ ಯಾವ ದೇವರೂ ಉಳಿಸಕ್ಕಾಗಿದಲ್ಲ ಸಾ.”
“ಹೋಗ್ಲಿ ಬುಡ್ರಿ.”
“ಮುಂದಿನ ಚುನಾವಣೆಗೆ ದುಡ್ಡಾಯ್ತಲ್ಲ ಬುಡ್ರಿ.”
“ಏನಂದ್ರಿ.”

“ಥೂತ್ತೇರಿ.”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...