Homeಅಂಕಣಗಳುಸ್ವಾಮೀಜಿಗಳ ಅವಾಂತರಗಳು ಇನ್ನೂ ಮುಂದಿವೆಯಂತಲ್ಲಾ!

ಸ್ವಾಮೀಜಿಗಳ ಅವಾಂತರಗಳು ಇನ್ನೂ ಮುಂದಿವೆಯಂತಲ್ಲಾ!

- Advertisement -
- Advertisement -

| ಯಾಹೂ |

ಹಿಂದೂ ಧರ್ಮಕ್ಕಂಟಿದ ಜಾತಿ ಎಂಬ ಶಾಪದ ಕಾಯಿಲೆ ಉಲ್ಬಣಿಸಿದೆಯಂತಲ್ಲಾ. ಒಂದು ಕಲಸಿದ ಪದಾರ್ಥ ಶೇಖರಗೊಂಡ ತುದಿ, ಕುತುರೆ ಎನ್ನಿಸಿಕೊಳ್ಳುತ್ತದೆ. ಜಾತಿಗಳ ಮೇಲೆ ಕುಳಿತ ಸ್ವಾಮಿಗಳೂ ಈ ಕುತುರೆಯೇ, ಅದಕ್ಕೆ ಯಾವಾಗಲೂ ಊಧ್ರ್ವ ಮುಖವಿರಬೇಕು. ಒಳ್ಳೆ ಭಾಷೆ, ನಡವಳಿಕೆ ಬಹಳ ಮುಖ್ಯ. ಅದರಲ್ಲೂ ಭಾಷೆ ಬಸವಣ್ಣ ಹೇಳಿದಂತೆ ಸ್ಪಟಿಕದ ಸಲಾಕೆಯಂತಿರಬೇಕು. ಕಬ್ಬಿಣದ ರಾಡು ಅಥವಾ ಚೂರಿಯಂತಿರಬಾರದು. ಆದರೆ, ಈ ಆಧುನಿಕ ಯುಗದ ಸ್ವಾಮಿಗಳನ್ನು ನೋಡಿದರೆ, ಬಗಲಲ್ಲಿ ಚೂರಿ ಇಟ್ಟುಕೊಂಡವರಂತೆ ಕಾಣುತ್ತಾರಲ್ಲಾ. ಈಚೆಗೆ ವಾಲ್ಮೀಕಿ ಜನಾಂಗ ಮೀಸಲಾತಿ ಬೇಡಿಕೆಗಾಗಿ ಸಂಘಟಿತಗೊಂಡು, ನೂರಾರು ಮೈಲಿ ಕಾಲ್ನಡಿಗೆ ಮಾಡಿ ಬೆಂಗಳೂರು ತಲುಪಿತು. ಸಾವಿರಾರು ಜನರ ತಲೆ ನೋಡಿದ ಪ್ರಸನ್ನಾನಂದ ಪುರಿಯವರ ತಲೆ ತಿರುಗಿತು. ನಾಲಿಗೆ ಹೊರಳಿತು, “ನಮ್ಮ ಜನಾಂಗದ 17 ಶಾಸಕರು ಕೈಕೊಟ್ಟರೆ ಕುಮಾರಸ್ವಾಮಿ ಗೊಟಕ್ ಅಂತಾರೆ, ಇಲ್ಲಿಗೆ ಕುಮಾರಸ್ವಾಮಿನೂ ಬರಬೇಕು, ಅವರಪ್ಪನೂ ಬರಬೇಕು ಎಂದರು”. ಅಲ್ಲಿಗೆ ಪಾದಯಾತ್ರೆಯ ಸಾಧನೆ ಗೊಟಕ್ ಅಂತು. ಕುಂಬಾರನಿಗೆ ನೂರು ದಿವಸ, ದೊಣ್ಣೆ ನಾಯಕನಿಗೆ ಮೂರು ನಿಮಿಷ ಎಂಬಂತೆ ಮಾಡಿದ ಪ್ರಸನ್ನಾನಂದ ಪುರಿ ಸ್ವಾಮಿಗೆ ಯಾರಾದರೂ `ಪ್ರಸನ್ನ’ ಅಂದರೇನೆಂದು ಹೇಳಿಕೊಡಬೇಕಾಗಿದೆಯಲ್ಲಾ, ಥೂತ್ತೇರಿ!

ಈ ಸ್ವಾಮಿಗಳ ಅವಾಂತರಗಳು ಇನ್ನ ಭವಿಷ್ಯದಲ್ಲಿ ಭೀಕರವಾಗಿವೆಯಂತಲ್ಲಾ. ಹವ್ಯಕ ಜನಾಂಗದ ವಿದ್ವಾಂಸರನ್ನ ಕೇಳಿದರೆ, ನಮ್ಮ ಜನಾಂಗದ ಗುರುಗಳ ಸಾಧನೆ ಯಾರಿಂದಲೂ ಸಾಧ್ಯವಿಲ್ಲ ಬಿಡಿ. ಅವರು ಮಾಡಿದ್ದು ರೇಪಲ್ಲ ಒಪ್ಪಿತ ಸಂಭೋಗ ಎಂಬ ಕೋರ್ಟ್ ತೀರ್ಪನ್ನೇ ಮಠೋಪಜೀವಿಗಳು “ಹುರ್ರೇ ನಮ್ಮ ಸ್ವಾಮಿಗಳು ರೇಪು ಮಾಡಿಲ್ಲವಂತೆ ಬರೀ ಸಂಭೋಗವಂತೆ” ಎಂದು ಪಟಾಕಿ ಸಿಡಿಸಿ ಮಲೆನಾಡೇ ಮಾರ್ದನಿಗೊಳ್ಳುವಂತೆ ಮಾಡಿದರು. ಅದಷ್ಟೇ ಅಲ್ಲ, ಸ್ವಾಮಿಗಳಾದವರಿಗೆ ಸಂಭೋಗ ಕಡ್ಡಾಯ; ಅದರಲ್ಲಿ ಯಾವ ಅಪಮಾನವೂ ಇಲ್ಲ, ಅಂಜಿಕೆಯೂ ಇಲ್ಲ ಎಂಬಂತೆ ಕುಣಿದು ಕುಪ್ಪಳಿಸಿವೆ. ಸ್ವಾಮಿಗಳ ಹಿಂಬಾಲಕರ ಎದುರು ನೈತಿಕತೆ ಉಳಿಸಿಕೊಂಡ ಜನ ನೆಮ್ಮದಿಯಿಂದ ಬದುಕುವುದೇ ದುಸ್ತರವಾಗಿದೆ. ಅಂತೂ ನಮ್ಮ ರಘುಪತಿ ರಾಘವನ ಸಾಧನೆ ಸರಿಗಟ್ಟುವ ಸ್ವಾಮಿ ಇನ್ನು ಬರಲಾರ ಎಂದರಲ್ಲಾ. “ಸ್ವಲ್ಪ ಇರಿ ಉಡುಪಿಯ ಮಠೋಪಜೀವಿಗಳ ಬಗ್ಗೆ ಏನು ಹೇಳತ್ತೀರಿ” ಎಂದಾಗ, ಉಡುಪಿ ಬಿಡಿ ಅಲ್ಲಿ ವ್ಯಭಿಚಾರ ಕಡ್ಡಾಯ, ಮಕ್ಕಳಾದರೆ ಅಲ್ಲಿ ಇಲ್ಲಿ ಬಿಟ್ಟು ಓದಿಸಬಹುದು. ಇಂತದೊಂದು ಆಪಾದನೆಗೆ ಬಲರಾಮನ ಗೋವಿನಂತಹ ಪೇಜಾವರರೇ ಗುರಿಯಾಗಿರುವಾಗ ಉಳಿದವರ ಬಗ್ಗೆ ಮಾತನಾಡುವುದೇ ಮಹಾಪರಾಧ ಎಂದರಲ್ಲಾ, ಥೂತ್ತೇರಿ!!

ಇನ್ನ ಸಿದ್ದರಾಮಯ್ಯನ ಅಭಿಮಾನಿ ಸ್ವಾಮಿಯೊಬ್ಬರು ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತಾರೆ. ಅದಕ್ಕೂ ಮೊದಲು `ಆ ಸಿದ್ದರಾಮಯ್ಯ ನನಗೆ ಬರೀ ನಮಸ್ಕಾರ ಮಾಡುತ್ತಾನೆಯೇ ಹೊರತು, ಕಾಲಿಗೆ ಬೀಳುವುದಿಲ್ಲ’ ಎಂದು ಗುಟುರು ಹಾಕಿದ್ದ ಆ ಗುರುಗಳು, `ಸಿದ್ದು ಮತ್ತೆ ಮುಖ್ಯಮಂತ್ರಿಯಾಗಬೇಕು. ನನ್ನ ಆಶೀರ್ವಾದ ಸದಾ ಅವರ ಜೊತೆಯಲ್ಲಿರುತ್ತದೆ’ ಎಂದಿದ್ದರು. ಈ ಆಶೀರ್ವಾದ ಅಂದರೇನು, ಅದು ಸದಾ ಜೊತೆಯಲ್ಲಿರಬೇಕಾದರೆ ಅದರ ಆಕಾರ ಏನು ಎಂಬುದನ್ನು ಗುರುಗಳು ವಿವರಿಸಿಲ್ಲ. ಏಕೆಂದರೆ ಅವರಾಡಿದ ಮಾತನ್ನೇ ಭಕ್ತಾದಿಗಳು ತಮಗೆ ತಿಳಿದಂತೆ ಅರ್ಥೈಸಿಕೊಳ್ಳಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಸದರಿ ಗುರುಗಳು ಕುರಿ ರಾಷ್ಟ್ರೀಯ ಪ್ರಾಣಿ. ಅದರ ಹತ್ಯೆ ನಿಲ್ಲಿಸಿ ಗೌರವ ಸಲ್ಲಿಸಬೇಕೆಂದು ಕರೆಕೊಟ್ಟಿದ್ದರು. ಈ ವಿಷಯವಾಗಿ ಕುರಿಗಳ ಕಡೆಯಿಂದ ಯಾವ ಬೆಂಬಲ ಬರದಿದ್ದರೂ, ಕುರಿ ಕೂದು ಧರ್ಮ ಸುಲಿದು ದುಗ್ಗಾಣಿಗೆ ತೆಗೆದುಕೊಂಡು ಹೋಗುವ ಸಾಬರು, ಬೋಟಿಪ್ರಿಯರು, ಚಾಪೀಸ್ ಭಕ್ಷುಗಳು, ಕೈಮಾಕಾಂಕ್ಷಿಗಳು ಮತ್ತೆ ತಲೆಕಾಲು ಸೂಪಿನ ವ್ಯಸನಿಗಳು ಒಕ್ಕೊರಲಿನಿಂದ ಪ್ರತಿಭಟಿಸಿದಾಗ ಕುರಿಗಳೇ ತಲೆಯಲ್ಲಾಡಿಸಿ ಬೆಂಬಲ ಸೂಚಿಸಿದವಲ್ಲಾ, ಥೂತ್ತೇರಿ!!!

ಜಗದ್ಗುರುಗಳೇ ದಿಕ್ಕು ತಪ್ಪಿದ ಭಾಷೆ ಬಳಸಿ, ಅಸಂಬದ್ದ ಮಾತನಾಡುತ್ತಿರುವಾಗ, ಇನ್ನ ಅವರ ಕಾಲಿಗೆ ಬೀಳುತ್ತಿರುವ ರಾಜಕಾರಣಿಗಳ ಮಾತು ಕೇಳಬೇಕೆ, ಅದರಲ್ಲೂ ನಮ್ಮ ಈಶ್ವರಪ್ಪನ ನಾಲಿಗೆಯಂತೂ ಬಳ್ಳಾರಿ ಜಾಲಿ ಮುಳ್ಳಿನಂತೆ. ಎಷ್ಟೇ ಆಗಲಿ ಅಲ್ಲಿಂದಲೇ ಶಿವಮೊಗ್ಗದ ಕಡೆ ಹೋದವರಲ್ಲವೇ. ಆದರೂ ಕಲೆ, ಸಾಹಿತ್ಯ, ಸಂಗೀತ, ಸಂಸ್ಕøತಿಗಳನ್ನ ಪೋಷಿಸಿಕೊಂಡು ಬರುತ್ತಿರುವ ಆ ಶಿವಮೊಗ್ಗದ ಸಂಸ್ಕøತಿಯ ಕಿಂಚಿತ್ ಸ್ಪರ್ಶವೂ ತಮ್ಮ ಮೇಲಾಗದಂತೆ ಎಚ್ಚರಿಕೆ ವಹಿಸಿ ಮೇಲೇರಿದ ಈಶ್ವರಪ್ಪನ ಒರಿಜಿನಾಲಿಟಿಯನ್ನ ಮೆಚ್ಚಲೇಬೇಕಂತಲ್ಲಾ. ಯಾರೇ ಆಗಲಿ ತಮ್ಮ ಮೂಲ ಸಂಸ್ಕøತಿ ಬಿಟ್ಟುಕೊಟ್ಟರೆ ವ್ಯಕ್ತಿತ್ವವೇ ನಾಶವಾಗಿ ಹೋದಂತೆ, ಇದನ್ನ ಇಟ್ಟುಕೊಂಡರೆ “ಪಾಪ ಅವನೆಡ್ತಿ ಸರಿಯಿಲ್ಲ ಇನ್ನೇನು ಮಾಡ್ತನೆ” ಎನ್ನುತ್ತಾರೆ. ಯಾರಾದರೂ ಹೆಣ್ಣು ಮಗಳು ರೇಪಿಗೆ ಒಳಗಾದರೆ “ಕೇಳಿದ ಕೂಡ್ಳೆ ಕೊಟ್ಟಿದ್ರೆ ರೇಪ್ಯಾಕಾಗದು” ಎನ್ನುತ್ತಾರೆ. ಹಾಗೆಯೇ “ಮಂತ್ರಿಯಾಗಿ ಇಷ್ಟು ಆಸ್ತಿ ಮಾಡಿಕೊಂಡಿರಲ್ಲಾ” ಎಂದರೆ, ಮಿನಿಸ್ಟರಾಗಿ ಪಾರ್ಟಿ ಜನಗಳನ್ನ ಸಾಕಬೇಕಲ್ಲ ಏಣು ಮಾಡ್ಳಿ ಎಂದು ಇನ್ನ ಅಂದಿಲ್ಲವಂತಲ್ಲಾ, ಥೂತ್ತೇರಿ!!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಶಿವಸೇನೆಯನ್ನು ವಿಭಜಿಸಿ, ಇಲ್ಲವೇ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರ್ಕಾರ ಬೆದರಿಕೆ...

0
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ (ಯುಬಿಟಿ) ನಾಯಕ...