ಮೂಲಸೌಕರ್ಯಕ್ಕೆ 100 ಲಕ್ಷ ಕೋಟಿ ರೂಪಾಯಿ ಮೀಸಲಿಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಹಾಗಾದರೆ ಬಜೆಟ್ ಗಾತ್ರ ಎಷ್ಟು? ಅಷ್ಟೊಂದು ಹಣವನ್ನು ಎಲ್ಲಿಂದ ಹೊಂದಾಣಿಕೆ ಮಾಡಲಾಗುತ್ತದೆ ಎಂಬುದಕ್ಕೆ ಪರಿಹಾರ ಕ್ರಮಗಳನ್ನು ಸೂಚಿಸಿಲ್ಲ ಎಂದು ರಾಜ್ಯ ಕಾರ್ಮಿಕ ಮುಖಂಡರು ಹೇಳಿದ್ದಾರೆ.
ಆರ್ಥಿಕ ಅಭಿವೃದ್ಧಿ ದರ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಅದನ್ನು ಸರಿದಾರಿಗೆ ತರುವ ಯೋಜನೆ ಇಲ್ಲ. ಸರ್ಕಾರದ ಆದಾಯ 2020-21ನೇ ಸಾಲಿಗೆ ಅಂದಾಜು 22.46 ಲಕ್ಷ ಕೋಟಿ ರೂ ಆದಾಯ ನಿರೀಕ್ಷಿಸಲಾಗಿದೆ. ವೆಚ್ಚ 30.42 ಲಕ್ಷ ಕೋಟಿ ರೂ ಅಂದಾಜಿಸಲಾಗಿದೆ. 8 ಲಕ್ಷ ಕೋಟಿ ರೂಪಾಯಿ ಕೊರತೆ ಬಜೆಟ್ ಆಗಿದೆ.. ಇಂತಹ ಸ್ಥಿತಿಯಲ್ಲಿ 100 ಲಕ್ಷ ಕೋಟಿ ರೂಪಾಯಿಗಳನ್ನು ಎಲ್ಲಿಂದ ತರುತ್ತೀರಿ ಎಂಬ ಮಾಹಿತಿ ಇಲ್ಲ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್ ಪ್ರಶ್ನೆಸಿದ್ದಾರೆ.
ಕೇಂದ್ರ ಸರ್ಕಾರ ಆರ್ಥಿಕ ಹಿಂಜರಿತದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಆರ್ಥಿಕತೆ ಮತ್ತು ಜನರ ಭವಿಷ್ಯದೊಂದಿಗೆ ಸರ್ಕಾರ ಚಲ್ಲಾಟವಾಡುತ್ತಿದೆ. ಕಾರ್ಮಿಕರ ಭವಿಷ್ಯನಿಧಿ ಮತ್ತು ಸಾಮಾಜಿಕ ಭದ್ರತೆಗೆ ಮೀಸಲಿರಿಸಿರುವ ಹಣವನ್ನು ಮೂಲಸೌಕರ್ಯಕ್ಕೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಯತ್ನಿಸುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಮೂಲಸೌಕರ್ಯಕ್ಕೆ ಕೇಂದ್ರ ಸರ್ಕಾರ ಶೇ.35ರಷ್ಟು ಹಣ, ರಾಜ್ಯ ಸರ್ಕಾರಗಳು ಶೇ.35ರಷ್ಟು ಹಾಗೂ ಬ್ಯಾಂಕುಗಳಿಂದ ಶೇ. 30ರಷ್ಟು ಹಣ ನೀಡಲಿವೆ. ಅಂದಹಾಗೆ ಕೇಂದ್ರ ಸರ್ಕಾರ ಮೂಲಸೌಕರ್ಯಕ್ಕೆ ಸಂಫೂರ್ಣ ಹಣ ನೀಡಿದ್ದಾದರೂ ಎಲ್ಲಿ? ಸರ್ಕಾರದ ಇಂತಹ ಕ್ರಮಗಳಿಂದ ದೇಶದ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕ ಉದ್ದಿಮೆಗಳನ್ನು ಬಹುರಾಷ್ಟ್ರೀಯ ಕಂಪನಿಗಳು ಮತ್ತು ಅಂತಾರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಲು ಕೇಂದ್ರ ಮುಂದಾಗಿದೆ. ಈ ಮೂಲಕ ದೇಶದ ಸಂಪತ್ತನ್ನು ಲೂಟಿ ಮಾಡಲು ಅವಕಾಶ ನೀಡಲಾಗುತ್ತಿದೆ. ಎಲ್ಐಸಿ, ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಹೊರಟಿದೆ. ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಮಾಡುವುದರಿಂದ ಶುಲ್ಕ ಇಳಿಕೆಗೆ ಅನುಕೂಲವಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.