ಬೆಳಗಾವಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪದೇ ಪದೇ ಅವ್ಯವಹಾರಗಳಿಂದಲೇ ಸುದ್ದಿಯಾಗುತ್ತಿದೆ. ಈ ಹಿಂದೆ ರೈತರಿಗೆ ಕೋಟಿಗಟ್ಟಲೇ ಕಬ್ಬಿನ ಬಿಲ್ ಪಾವತಿಸದೆ ಸುದ್ದಿಯಾಗಿದ್ದ ಈ ಕಾರ್ಖಾನೆಯ ಆಡಳಿತ ಮಂಡಳಿ, ಇದೀಗ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಪಡೆದಿರುವ ಬಹು ದೊಡ್ಡ ಹಗರಣವೊಂದು ಬೆಳಕಿಗೆ ಬಂದಿದೆ.
ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಎಂ.ಕೆ ಹುಬ್ಬಳ್ಳಿಯ ದಲಿತ ಕಾಲೋನಿಯ ಜನರಿಗೆ ಆರ್ಥಿಕ ನೆರವು ನೀಡುವುದಾಗಿ ನಂಬಿಸಿ ಅವರ ವೈಯಕ್ತಿಕ ದಾಖಲೆಗಳನ್ನು ಸಂಗ್ರಹಿಸಿದ್ದ ಮಲಪ್ರಭಾ ಕಾರ್ಖಾನೆಯ ಸಿಬ್ಬಂದಿ, 40 ಪುಟಗಳ ಕಾಗದ ಪತ್ರಗಳಿಗೆ 169 ಜನರಿಂದ ಸಹಿಯನ್ನೂ ಪಡೆದಿದ್ದಾರೆ. ಬಳಿಕ ಅದೇ ದಾಖಲೆಗಳನ್ನು ಬಳಸಿಕೊಂಡು ಇವರೆಲ್ಲರೂ ಕಬ್ಬು ಕಾಟಾವ್ ಕಾರ್ಮಿಕರು ಇವರಿಗೆ ಕಾರ್ಖಾನೆಯ ಗ್ಯಾರಂಟಿಯ ಮೇಲೆ ಸಾಲ ಮಂಜೂರು ಮಾಡುವಂತೆ ಕೋರಿ ಎಂ.ಕೆ ಹುಬ್ಬಳ್ಳಿಯ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ 16 ಕೋಟಿಗೂ ಹೆಚ್ಚು ಸಾಲ ಪಡೆಯಲಾಗಿದೆ.
ಇದನ್ನೂ ಓದಿ:ಕಳೆದುಹೋದ ಸಹಕಾರಿ ಹೆಗ್ಗಳಿಕೆ: ನಿರಾಣಿ ಶುಗರ್ಸ್ ಪಾಲಾದ PSSK ಸಕ್ಕರೆ ಕಾರ್ಖಾನೆ
2021ರ ಮೇ ತಿಂಗಳಲ್ಲೇ ಕಾರ್ಖಾನೆ ಸಿಬ್ಬಂದಿ ರೈತರ ಹೆಸರಿನಲ್ಲಿ ಸಾಲ ಪಡೆದಿದ್ದಾರೆ. ಆದರೆ, ಈ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಇಲ್ಲ. ಇತ್ತೀಚೆಗೆ ಎಂ.ಕೆ ಹುಬ್ಬಳ್ಳಿ ನಿವಾಸಿ ಕಲ್ಲಪ್ಪ ಯಲ್ಲಪ್ಪ ಚಲವಾದಿ, ಅಂಬೇಡ್ಕರ್ ಅಭಿವೃದ್ಧಿ ನಿಮಗದಲ್ಲಿ 20 ಸಾವಿರ ಸಾಲಕ್ಕಾಗಿ ಅರ್ಜಿ ಹಾಕಿದ್ದಾರೆ. ಆಗ ಯುವಕನಿಗೆ ಸಾಲ ಕೊಡಲು ನಿರಾಕರಿಸಿದ ಬ್ಯಾಂಕ್ ಸಿಬ್ಬಂದಿ, ಈಗಾಗಲೇ ನಿಮ್ಮ ಹೆಸರಲ್ಲಿ ಸಾಲದ ಬಾಕಿ ಇದೆ. ಹೀಗಾಗಿ ಹೊಸ ಸಾಲ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ, ಈ ಹಿಂದೆ ಎಲ್ಲಿಯೂ ಸಾಲ ಪಡೆಯದ ಯಲ್ಲಪ್ಪ ಬ್ಯಾಂಕ್ನವರ ಈ ಮಾತು ಕೇಳಿ ಶಾಕ್ಗೆ ಒಳಗಾಗಿದ್ದಾರೆ.
ತನಗೆ ಗೊತ್ತಿಲ್ಲದೆ ತನ್ನ ಹೆಸರಲ್ಲಿ ಸಾಲ ಪಡೆದಿದ್ದು ಯಾರು ಎಂಬುದನ್ನು ಪರಿಶೀಲನೆ ನಡೆಸಿದಾಗ. ಆರ್ಥಿಕ ನೆರವು ನೀಡುವುದಾಗಿ ನಂಬಿಸಿ ದಾಖಲೆಗಳನ್ನು ಪಡೆದು, ಸಹಿ ಮಾಡಿಸಿಕೊಂಡಿದ್ದ ಸಕ್ಕರೆ ಕಾರ್ಖಾನೆ ಸಿಬ್ಬಂದಿಯೇ ತನ್ನ ಹೆಸರಿನ ಮೇಲೆ ಸಾಲ ತೆಗೆಸಿಕೊಂಡು ಪಂಗನಾಮ ಹಾಕಿರುವುದು ಬೆಳಕಿಗೆ ಬಂದಿದೆ.
ಯಲ್ಲಪ್ಪ ಅವರಿಗಾದ ವಂಚನೆಯ ಎಳೆಯನ್ನು ಹಿಡಿದು ಹೋದಾಗ ಅವರಂತೆ ಇನ್ನೂ 168 ಮಂದಿ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರ ಹೆಸರಲ್ಲಿ ತಲಾ 8 ಲಕ್ಷದಂತೆ ಬರೋಬ್ಬರಿ 16 ಕೋಟಿ ಸಾಲ ಪಡೆದಿರುವ ಬೃಹತ್ ಹಗರಣ ಬೆಳಕಿಗೆ ಬಂದಿದೆ. ಸದ್ಯ ಪ್ರತಿಯೊಬ್ಬರ ಮೇಲಿರುವ 8 ಲಕ್ಷ ಸಾಲಕ್ಕೆ 25 ಸಾವಿರ ಬಡ್ಡಿ ಬೆಳೆದಿರುವುದಾಗಿಯೂ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ:ಹಳಿಯಾಳ: ಕಬ್ಬು ಬೆಳೆಗಾರರನ್ನು ಜಲ್ಲೆ ಮಾಡುತ್ತಿರುವ ’ಪ್ಯಾರಿ ಸಕ್ಕರೆ’ ದೊರೆಗಳು!
ಕಾರ್ಖಾನೆ ಆಡಳಿತ ಮಂಡಳಿಯ ದುರಾಸೆ ಅದೆಷ್ಟರ ಮಟ್ಟಿಗೆ ಇದೆಯೆಂದರೆ ಆರ್ಬಿಐ ನಿಮಯಗಳನ್ನು ಉಲ್ಲಂಘಿಸಿ 60 ವರ್ಷ ಮೇಲ್ಪಟ್ಟವರ ದಾಖಲೆಗಳನ್ನೂ ನೀಡಿ ಸಾಲ ಪಡೆಯಲಾಗಿದೆ. ಸ್ವಂತದ ಕೃಷಿ ಭೂಮಿ ಇಲ್ಲದವರಿಗೂ ಕಬ್ಬು ಕಟಾವ್ ಮತ್ತು ಸಾಗಣೆಯ ಹೆಸರಲ್ಲಿ ಸಾಲ ಹೊರಿಸಲಾಗಿದೆ. ಜೊತೆಗೆ ಕಬ್ಬು ಬೆಳೆಗಾರರಲ್ಲದವರ ಹೆಸರಲ್ಲೂ ಆಡಳಿತ ಮಂಡಳಿ ಸಾಲ ಪಡೆದಿದೆ. ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿಗಳೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಕಾರ್ಖಾನೆ ಆಡಳಿತ ಮಂಡಳಿಯ ಬಹುಕೋಟಿ ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ವಂಚನೆಗೊಳಗಾದ ರೈತರು ಬ್ಯಾಂಕ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ರೈತರ ಪ್ರತಿಭಟನೆಯ ಬಳಿಕ ಎಚ್ಚೆತ್ತುಕೊಂಡ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್, ತಪ್ಪಿದ್ದಸ್ಥರ ವಿರುದ್ಧ 8 ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಲಿಖಿತ ಭರವಸೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಸಕ್ಕರೆ ಸಚಿವರಿಗೆ ಮನವಿ ಮಾಡಿರುವ ರೈತರು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಸಚಿವ ಕಾರಜೋಳ ಕಚೇರಿ ಮುಂದೆ ಪ್ರತಿಭಟಿಸಲು ಹೊರಟ ರೈತ-ಕಾರ್ಮಿಕರನ್ನು ತಡೆದ ಪೊಲೀಸರು