ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ, ಅವುಗಳನ್ನು ರದ್ದುಗೊಳಿಸಬೇಕೆಂದು ಹೋರಾಟ ನಡೆಸುತ್ತಿರುವ ರೈತರು ಮಂಗಳವಾರ (ಡಿ.22) ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಕಪ್ಪು ಬಾವುಟಗಳನ್ನು ತೋರಿಸಿದ್ದಕ್ಕಾಗಿ 13 ರೈತರ ಮೇಲೆ ಗಲಭೆ, ಕೊಲೆಯತ್ನದ ಪ್ರಕರಣ ದಾಖಲಾಗಿದೆ.
ಅಂಬಾಲಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಘೇರಾವ್ ಹಾಕಿದ ನೂರಾರು ರೈತರು ಕಪ್ಪು ಧ್ವಜಗಳನ್ನು ತೋರಿಸಿ, ಕೃಷಿ ಕಾನೂನುಗಳ ವಿರುದ್ಧ ಘೋಷಣೆ ಕೂಗಿದ್ದರು. ಬಿಜೆಪಿ ನೇತೃತ್ವ ಹರಿಯಾಣ ಸರ್ಕಾರವು ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.
307 (ಕೊಲೆ ಯತ್ನ), ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆ, 1984 ಸೇರಿದಂತೆ ಐಪಿಸಿಯ ಒಂಬತ್ತು ವಿಭಾಗಗಳ ಅಡಿಯಲ್ಲಿ ಮಂಗಳವಾರ ರಾತ್ರಿ 13 ರೈತರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಗುರ್ಜಂತ್ ಸಿಂಗ್ ಎಂಬ ಪೊಲೀಸ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದ್ದು, ಪ್ರತಿಭಟನಾಕಾರರು ತಮ್ಮ ಕರ್ತವ್ಯಕ್ಕೆ ಅಡಚಣೆ, ತಳ್ಳುವುದು ಮತ್ತು ನೂಕುವುದು ಮತ್ತು ಕೊಲೆ ಯತ್ನ ಹಾಗೂ ಬೆಂಗಾವಲು ವಾಹನವನ್ನು ನಿರ್ಬಂಧಿಸಿದ್ದಾರೆ ಎಂಬ ಆರೋಪಿಸಲಾಗಿದೆ.
ದೇಶಾದ್ಯಂತ ಹಬ್ಬುತ್ತಿರುವ ರೈತ ಚಳವಳಿಯನ್ನು ಹತ್ತಿಕ್ಕುವುದಕ್ಕಾಗಿ ನಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ರೈತರು ದೂರಿದ್ದಾರೆ.
ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರಾದ ಯೋಗೇಂದ್ರ ಯಾದವ್ರವರು “ಒಂದು ಕಡೆ ಬಿಜೆಪಿ ನಮಗೆ ರೈತರ ಬಗ್ಗೆ ಕಾಳಜಿಯಿದೆ ಅವರೊಂದಿಗೆ ಮಾತನಾಡುತ್ತೇವೆ ಎನ್ನುತ್ತಿದೆ. ಇನ್ನೊಂದು ಕಡೆ ಅದೇ ಬಿಜೆಪಿ ನಮಗೆ ಕಪ್ಪು ಬಾವುಟ ತೋರಿಸಿದರೆ ಆ ರೈತರ ಮೇಲೆ ಗಲಭೆ, ಕೊಲೆಯತ್ನದ ಪ್ರಕರಣ ದಾಖಲಿಸುತ್ತೇವೆ” ಎನ್ನುತ್ತಿದೆ. ಇದು ಬಿಜೆಪಿಯ ಇಬ್ಬಂದಿತನ, ರೈತರ ಬಗೆಗಿನ ಧೋರಣೆ” ಎಂದು ಕಿಡಿಕಾರಿದ್ದಾರೆ.
BJP: We want to talk to the farmers & address their concerns
Also BJP: We will book farmers for attempt to murder & rioting if they wave black flags at ushttps://t.co/rJdZiMgkMV
— Yogendra Yadav (@_YogendraYadav) December 24, 2020
ಡಿ.22ರಂದು ಹರಿಯಾಣ ಮುಖ್ಯಮಂತ್ರಿ ಖಟ್ಟರ್, ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಅಂಬಾಲಾಕ್ಕೆ ಹೋಗುತ್ತಿದ್ದರು. ಆಗ ನೂರಾರು ರೈತರು ಕಪ್ಪು ಬಾವುಟ ತೋರಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ರೈತರನ್ನು ಕಂಡ ಮುಖ್ಯಮಂತ್ರಿಗಳ ಬೆಂಗಾವಲು ಪಡೆ ಕೂಡ ತಮ್ಮ ವಾಹನದ ವೇಗವನ್ನು ಕಡಿಮೆ ಮಾಡಿಕೊಂಡಿತ್ತು. ಆಗ ರೈತರು ಅದನ್ನು ಮುಂದಕ್ಕೆ ಹೋಗಲು ಬಿಡದೆ ಕೆಲ ಕಾಲ ತಡೆದಿದ್ದರು.
ಕಳೆದ ಡಿಸೆಂಬರ್ 1 ರಂದು ಅಂಬಾಲಾದ ಹಳ್ಳಿಯೊಂದರಲ್ಲಿ ರೈತರ ಗುಂಪು ಕೇಂದ್ರ ಸಚಿವ ಮತ್ತು ಅಂಬಾಲದ ಸಂಸದ ರತ್ತನ್ ಲಾಲ್ ಕಟಾರಿಯಾ ಘೇರಾವ್ ಹಾಕಿ ಕಪ್ಪು ಬಾವುಟಗಳನ್ನು ಪ್ರದರ್ಶಿಸಿತ್ತು.
ಕಳೆದ 27 ದಿನಗಳಿಂದ ದೆಹಲಿಯ ಗಡಿಗಳಲ್ಲಿನ ಹೋರಾಟನಿರತ ರೈತ ಮುಖಂಡರು, ಭಾರತದಲ್ಲಿನ ರೈತರ ಸಮಸ್ಯೆ ಬಗೆಹರಿಯುವವರೆಗೂ ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ ಎಂದು ಬ್ರಿಟನ್ ಸಂಸದರಿಗೆ ಪತ್ರ ಬರೆಯುವದಾಗಿ ತಿಳಿಸಿದ್ದಾರೆ.
ಜನವರಿ 26ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಬರಲಿದ್ದಾರೆ ಎಂದು ವರದಿಯಾಗಿದೆ. ಭಾರತ ಸರ್ಕಾರವು ರೈತರ ಹಕ್ಕೊತ್ತಾಯಗಳನ್ನು ಈಡೇರಿಸುವವರೆಗೂ ಇಂಗ್ಲೆಂಡ್ನ ಪ್ರಧಾನಿ ಭಾರತಕ್ಕೆ ಬರದಂತೆ ತಡೆಯಬೇಕೆಂದು ಅಲ್ಲಿನ ಸಂಸದರಿಗೆ ಪತ್ರ ಬರೆದು ಕೋರುತ್ತೇವೆ ಎಂದು ಪಂಜಾಬ್ನ ರೈತ ಮುಖಂಡ ಕುಲವಂತ್ ಸಿಂಗ್ ಸಂಧು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೇಮ ಪತ್ರ ಬರೆಯುವುದು ನಿಲ್ಲಿಸಿ: ಕೇಂದ್ರಕ್ಕೆ ಹೋರಾಟ ನಿರತ ರೈತರು