ಕೇಂದ್ರದ ಹೊಸ ಕೃಷಿ ನೀತಿಗಳನ್ನು ವಿರೋಧಿಸಿ ಕಳೆದ 28 ದಿನಗಳಿಂದ ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರು ತಮ್ಮ ನಿಲುವನ್ನು ಇನ್ನೂ ಗಟ್ಟಿಗೊಳಿಸಿದ್ದು, ಕೇಂದ್ರ ಸರ್ಕಾರ ಒಂದು ಹೆಜ್ಜೆ ಇಟ್ಟರೆ ನಾವು ಎರಡು ಹೆಜ್ಜೆ ಇಡುತ್ತೇವೆ, ಆದರೆ ’ಪ್ರೇಮ ಪತ್ರ’ ಬರೆಯುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.
ಕೇಂದ್ರ ಸರ್ಕಾರದೊಂದಿಗೆ ಮುಕ್ತ ಮಾತುಕತೆಗೆ ನಾವು ತಯಾರಿದ್ದೇವೆ ಆದರೆ ಸರ್ಕಾರ ನಾವು ಈಗಾಗಲೇ ತಿರಸ್ಕರಿಸಿದ ’ಅರ್ಥಹೀನ’ ಪ್ರಸ್ತಾಪಗಳನ್ನು ಪುನರಾವರ್ತಿಸಬಾರದು, ಮಾತುಕತೆಗೆ ಪುನರಾರಂಭಕ್ಕಾಗಿ ದೃಡವಾವಾದ ಪ್ರಸ್ತಾಪವನ್ನು ತರಬೇಕು, ಆದರೆ ಕೃಷಿ ಕಾನೂನನ್ನು ರದ್ದು ಪಡಿಸುವುದಕ್ಕಿಂತ ಕಡಿಮೆಯಾಗಿ ನಾವು ಏನನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಫಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 25 ವಾಜಪೇಯಿ ಜನ್ಮದಿನ: ‘ಆಯ್ದ’ ರೈತರೊಂದಿಗೆ ಪ್ರಧಾನಿ ಮೋದಿ ಸಂವಹನ!
ಪ್ರತಿಭಟನೆ ಕೊನೆಗೊಳ್ಳುವ ಸಲುವಾಗಿ ರೈತರನ್ನು ದಣಿಸಲು ಸರ್ಕಾರ ಬಯಸಿದೆ, ಸರ್ಕಾರವು ರೈತರನ್ನು ತನ್ನ “ರಾಜಕೀಯ ವಿರೋಧಿಗಳು” ಎಂದು ಪರಿಗಣಿಸುತ್ತಿದೆ. ಯಾವುದೇ ಕಾರಣಕ್ಕೆ ಪ್ರತಿಭಟನಾ ನಿರತ ರೈತರು ತಿದ್ದುಪಡಿಗಳನ್ನು ಸ್ವೀಕರಿಸುವುದಿಲ್ಲ ಎಂದು ನಾವು ಈಗಾಗಲೇ ಗೃಹ ಸಚಿವ ಅಮಿತ್ ಷಾಗೆ ತಿಳಿಸಿದ್ದೇವೆ ಎಂದು ರೈತರು ತಿಳಿಸಿದ್ದಾರೆ.
“ನಮ್ಮ ಮೂಲಭೂತ ಆಕ್ಷೇಪಣೆಗಳನ್ನು ಅರ್ಥಮಾಡಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ನಮಗೆ ಆಶ್ಚರ್ಯವಾಗಿದೆ. ರೈತರ ಪ್ರತಿನಿಧಿಗಳು ಈ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಸರ್ಕಾರ ರೈತರು ಮಾತುಕತೆ ನಡೆಸಲು ಸಿದ್ಧರಿಲ್ಲ ಎಂಬುದನ್ನು ಯೋಜಿಸಲು ಬಯಸಿದೆ, ರೈತರು ಇದೆಲ್ಲಕ್ಕೂ ಸಿದ್ಧರಾಗಿರುವುದರಿಂದಲೆ ಚೆಂಡು ಸರ್ಕಾರದ ಅಂಗಳದಲ್ಲಿದೆ” ಎಂದು ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಕೇಂದ್ರ ಮತ್ತು ರೈತರ ನಡುವಿನ ಬಿಕ್ಕಟ್ಟಿನ ಬಗ್ಗೆ ಅರ್ಜಿಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಈ ಕುರಿತು ಶೋಧನೆ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿತ್ತು. ಜೊತೆಗೆ ರೈತರು ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳಬೇಕಾಗಿಲ್ಲ. ಹೋರಾಟ ಮಾಡುವುದು ಅವರ ಹಕ್ಕು ಎಂದು ಸುಪ್ರೀಂ ಹೇಳಿತ್ತು. ಆದರೆ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ, ಶಾಂತಿಯುತವಾಗಿ ಪ್ರತಿಭಟಿಸುವಂತೆ ಹೇಳಿತ್ತು.
ಇದನ್ನೂ ಓದಿ: ಕೃಷಿ ಕಾನೂನಿನ ಪ್ರಚಾರಕ್ಕೆ ತನ್ನ ಫೋಟೋ ಬಳಸಿದ ಬಿಜೆಪಿಗೆ ಲೀಗಲ್ ನೋಟಿಸ್ ನೀಡಿದ ರೈತ!