ಮಹಾರಾಷ್ಟ್ರದ ಪುಣೆಯ ರಾಸಾಯನಿಕ ಕಾರ್ಖಾನೆಯ ಸ್ಯಾನಿಟೈಸರ್-ಉತ್ಪಾದನಾ ಘಟಕದಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಹದಿನೆಂಟು (18) ಕಾರ್ಮಿಕರು ಸಾವನ್ನಪ್ಪಿದ್ದಾರೆ. ಜೊತೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಮಂದಿ ಕಾಣೆಯಾಗಿದ್ದಾರೆ.
ಪುಣೆಯ ಕೈಗಾರಿಕಾ ಪ್ರದೇಶ ಘೋಟಾವಡೆ ಫಾಟ್ನಲ್ಲಿರುವ ಎಸ್ವಿಎಸ್ ಆಕ್ವಾ ಟೆಕ್ನಾಲಜೀಸ್ ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ 37 ನೌಕರರು ಘಟಕದೊಳಗೆ ಕೆಲಸ ಮಾಡುತ್ತಿದ್ದರು. ಅದರಲ್ಲಿ 15 ಮಂದಿ ಮಹಿಳೆಯರು ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ. 20 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು 7 ಮಂದಿ ಸಾವನ್ನಪ್ಪಿದ್ದಾರೆ. 10 ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಕಾರ್ಖಾನೆಯನ್ನು ದಟ್ಟ ಹೊಗೆ ಆವರಿಸಿತ್ತು. 6 ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಕಾರ್ಯನಿರ್ವಹಿಸಿದ್ದು, 20 ಮಂದಿಯನ್ನು ರಕ್ಷಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ: ಪರಿಸರ ಪೂರ್ವಾನುಮತಿ ಇಲ್ಲದೆ ಕೈಗಾರಿಕೆ ನಡೆಸುವಂತಿಲ್ಲ: ಹಸಿರು ನ್ಯಾಯಪೀಠ
ಕಾರ್ಮಿಕರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ಮಹಾರಾಷ್ಟ್ರದ ಪುಣೆಯ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿಯಿಂದ ಪ್ರಾಣಹಾನಿ ಉಂಟಾಗಿದ್ದು, ಸಂತ್ರಸ್ತ ಕುಟುಂಬಗಳಿಗೆ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.
PMNRF ನಿಧಿಯಿಂದ ಅಗ್ನಿ ಅವಘಡದಲ್ಲಿ ಪ್ರಾಣ ಕಳೆದುಕೊಂಡವರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಕಾರ್ಖಾನೆ ಆವರಣದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಪ್ಯಾಕ್ ಮಾಡುವಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. “ಪ್ಯಾಕೇಜಿಂಗ್ ವಿಭಾಗದಲ್ಲಿ ಕೆಲವು ಬೆಂಕಿಯ ಕಿಡಿಗಳು ಕಾಣಿಸಿಕೊಂಡಿವೆ. ಸುತ್ತಲೂ ಪ್ಲಾಸ್ಟಿಕ್ ಇದ್ದುದರಿಂದ ಅದು ವೇಗವಾಗಿ ಹಬ್ಬಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಈಗ ಬೆಂಕಿ ನಿಯಂತ್ರಣದಲ್ಲಿದೆ ಮತ್ತು ನಾಪತ್ತೆಯಾಗಿರುವ ಕಾರ್ಮಿಕರ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರ ಮೃತದೇಹಗಳನ್ನು ಪುಣೆಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ಧಾಣ ಸಮೀಪ ಸ್ಪೋಟ: 6 ಜನ ಕೆಲಸಗಾರರಿಗೆ ಗಂಭೀರ ಗಾಯ