ನಾಲ್ಕು ರಾಜ್ಯಗಳಲ್ಲಿನ ಬಿಜೆಪಿ ಪ್ರಚಂಡ ಜಯದಿಂದ ಉಲ್ಲಾಸಿತರಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಯುಪಿ ಫಲಿತಾಂಶ 2024ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, “ರಾಜ್ಯಗಳ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ ರೀತಿಯದ್ದು. ಹಾಗಾಗಿ ಮೋದಿಯವರ ಸುಳ್ಳು ನಿರೂಪಣೆಗಳಿಗೆ ಬಲಿಯಾಗದಿರಿ” ಎಂದು ಕಿಡಿಕಾರಿದ್ದಾರೆ.
ಫಲಿತಾಂಶ ಪ್ರಕಟಗೊಂಡ ನಂತರ ನವದೆಹಲಿಯ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, “2017 ರ ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟವಾದಾಗ ಇದು 2019 ರ ಸಾರ್ವತ್ರಿಕ ಚುನಾವಣೆಯ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಅನೇಕರು ಹೇಳಿದ್ದರು. ಅದೇ ಆಲೋಚನೆ ಈಗ ಕೂಡ ಅನ್ವಯಿಸುತ್ತದೆ ಎಂದು ನಾನು ಹೇಳಬಲ್ಲೆ… 2024 ರ ಸಾರ್ವತ್ರಿಕ ಚುನಾವಣಾ ಫಲಿತಾಂಶವನ್ನು 2022 ಯುಪಿ ಚುನಾವಣೆಯ ಫಲಿತಾಂಶದಲ್ಲಿ ನೋಡಬಹುದು” ಎಂದಿದ್ದರು.
ಮೋದಿಯವರ ಈ ಹೇಳಿಕೆಯನ್ನು ಪ್ರಶಾಂತ್ ಕಿಶೋರ್ ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ಭಾರತಕ್ಕಾಗಿನ ಹೋರಾಟ 2024 ರಲ್ಲಿ ನಡೆಯಲಿದೆ ಮತ್ತು ಆಗ ನಿರ್ಧರಿಸಲಾಗುತ್ತದೆಯೆ ಹೊರತು ಯಾವುದೇ ರಾಜ್ಯದ ಚುನಾವಣೆಗಳಲ್ಲಿ ಅಲ್ಲ. ಇದು ಸಾಹೇಬರಿಗೆ (ಮೋದಿ) ಚೆನ್ನಾಗಿ ಗೊತ್ತು. ಆದರೂ ವಿರೋಧ ಪಕ್ಷಗಳ ಮೇಲೆ ನಿರ್ಣಾಯಕ ಮಾನಸಿಕ ಪ್ರಯೋಜನವನ್ನು ಸ್ಥಾಪಿಸಲು ರಾಜ್ಯದ ಫಲಿತಾಂಶಗಳ ಸುತ್ತ ಉನ್ಮಾದವನ್ನು ಸೃಷ್ಟಿಸುವ ಬುದ್ಧಿವಂತ ಪ್ರಯತ್ನವೇ ಆ ಹೇಳಿಕೆಯಾಗಿದೆ. ಇಂತಹ ಸುಳ್ಳು ನಿರೂಪಣೆಗಳಿಗೆ ಬಲಿಯಾಗದಿರಿ” ಎಂದು ಎಚ್ಚರಿಸಿದ್ದಾರೆ.
Battle for India will be fought and decided in 2024 & not in any state #elections
Saheb knows this! Hence this clever attempt to create frenzy around state results to establish a decisive psychological advantage over opposition.
Don’t fall or be part of this false narrative.
— Prashant Kishor (@PrashantKishor) March 11, 2022
ಈ ಹೇಳಿಕೆಯ ಮೂಲಕ ಪ್ರಶಾಂತ್ ಕಿಶೋರ್ 2024ರ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುವುದು ಇನ್ನೂ ನಿರ್ಧಾರವಾಗಿಲ್ಲ ಮತ್ತು ಮೋದಿ ಮತ್ತೊಮ್ಮೆ ಗೆಲ್ಲಲು ನಾವು ಬಿಡುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ. ಸದ್ಯಕ್ಕೆ ಟಿಎಂಸಿ ಮತ್ತು ಎನ್ಸಿಪಿ ಪಕ್ಷದ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ಪ್ರಶಾಂತ್ ಕಿಶೋರ್ 2024ರಲ್ಲಿ ಮೋದಿ ಮಣಿಸಲು ರಣತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶವು 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಅತಿ ದೊಡ್ಡ ರಾಜ್ಯವಾಗಿದೆ. 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಅಲ್ಲಿನ ಬಹುತೇಕ ಸ್ಥಾನಗಳಲ್ಲಿ ಜಯಗಳಿಸಿದೆ. ಮೋದಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಆ ರಾಜ್ಯದ ಮೇಲೆ ಕಣ್ಣಿಟ್ಟಿವೆ.
2014ರ ಚುನಾವಣೆಯಲ್ಲಿ ಚಾಯ್ ಪೆ ಚರ್ಚಾ ಕಾರ್ಯಕ್ರಮ, ಅಬ್ಕಿ ಬಾರ್ ಮೋದಿ ಸರ್ಕಾರ್ ಘೋಷಣೆ ಸೇರಿದಂತೆ ಪ್ರಶಾಂತ್ ಕಿಶೋರ್ ನರೇಂದ್ರ ಮೋದಿ ಪರವಾಗಿ ಚುನಾವಣಾ ತಂತ್ರಜ್ಞನಾಗಿ ಕೆಲಸ ಮಾಡಿದ್ದರು. ಆ ನಂತರದ ದಿನಗಳಲ್ಲಿ ಮೋದಿ ವಿರುದ್ಧ ಸಿಡಿದೆದ್ದಿರುವ ಅವರು, ಟಿಎಂಸಿ, ಆಪ್, ಡಿಎಂಕೆ ಪರವಾಗಿ ಕೆಲಸ ಮಾಡುತ್ತಾ ವಿರೋಧ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೀಟುಗಳನ್ನು ಕಡಿತಗೊಳಿಸಬಹುದು ಎಂಬುದನ್ನು ತೋರಿಸಿದ್ದೇವೆ: ಅಖಿಲೇಶ್ ಯಾದವ್