Homeಅಂತರಾಷ್ಟ್ರೀಯನಿಲ್ಲದ ಯುದ್ಧ; ಅಲ್ಲಲ್ಲಿ ಕದನ ವಿರಾಮ; ಮುಂದೇನು?

ನಿಲ್ಲದ ಯುದ್ಧ; ಅಲ್ಲಲ್ಲಿ ಕದನ ವಿರಾಮ; ಮುಂದೇನು?

- Advertisement -
- Advertisement -

ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಿಸಿದಾಗಿನಿಂದ ರಷ್ಯಾ ಮತ್ತು ಉಕ್ರೇನ್ ದೇಶಗಳ ಪ್ರತಿನಿಧಿಗಳು ಬೆಲಾರಸ್‌ನಲ್ಲಿ ಮೂರು ಸುತ್ತಿನ ಮಾತುಕತೆಗಳನ್ನು ನಡೆಸಿದ್ದಾರೆ. ಎರಡು ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಮೂರನೇ ಸುತ್ತಿನ ಮಾತುಕತೆಯಲ್ಲಿ ಕೆಲ ನಗರಗಳಲ್ಲಿ ಯುದ್ಧ ವಿರಾಮ ಘೋಷಿಸಿ, ಯುದ್ಧದಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಿಸುವ ಕಾರ್ಯಾಚರಣೆಗೆ ಅನುವು ಮಾಡಿಕೊಡಲು ಮಾನವೀಯ ಕಾರಿಡಾರ್‌ಗಳನ್ನು ರಷ್ಯಾ ಘೋಷಿಸಿದೆ. ಅದರ ಭಾಗವಾಗಿ ಉಕ್ರೇನ್‌ನ ಸುಮಿ ನಗರದಲ್ಲಿ ಸಿಕ್ಕಿಕೊಂಡಿದ್ದ ಸುಮಾರು 600 ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿ ಕರೆತರಲಾಗುತ್ತಿದೆ.

ಉಕ್ರೇನ್‌ನಿಂದ ಗುಳೆ ಹೊರಟ 50 ಲಕ್ಷ ಜನರು

ರಷ್ಯಾ ಉಕ್ರೇನ್ ಗಡಿಯಲ್ಲಿ ತನ್ನ ಸೈನ್ಯ ಜಮಾವಣೆ ಮಾಡಿದಾಗಿನಿಂದ ಇದುವರೆಗೂ ಸುಮಾರು 20 ಲಕ್ಷಕ್ಕೂ ಹೆಚ್ಚು ಜನ ಉಕ್ರೇನ್ ತೊರೆದಿದ್ದಾರೆ ಎಂದು ವರದಿಯಾಗಿದೆ. ಇನ್ನು ಮುಂದೆ 50 ಲಕ್ಷ ಜನರು ದೇಶ ತೊರೆಯಲಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ತಿಳಿಸಿದ್ದಾರೆ. ಈ ರೀತಿ ನಿರಾಶ್ರಿತರಾಗಿ ಬರುವ ಜನರಿಗೆ ಆಶ್ರಯ ನೀಡಬೇಕಾದ ಹೊಣೆ ಯೂರೋಪ್ ರಾಷ್ಟ್ರಗಳ ಮೇಲಿದೆ.

ಯುದ್ಧಕ್ಕೆ ಧುಮುಕಲು ಒಪ್ಪದ NATO

ಉಕ್ರೇನ್ ಹಲವು ಪ್ರದೇಶಗಳಲ್ಲಿ ನೋ-ಫ್ಲೈ ಝೋನ್ ಹೇರಬೇಕೆಂಬ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಮನವಿಯನ್ನು ನ್ಯಾಟೋ ನಿರಾಕರಿಸಿತು. ಅಂದರೆ ರಷ್ಯಾ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲು ನ್ಯಾಟೋ ಮುಂದಾಗಬೇಕೆಂದು ಝೆಲೆನ್ಸ್ಕಿ ವಾದಿಸಿದ್ದರು. ಆದರೆ ಅದನ್ನು ತಳ್ಳಿ ಹಾಕಿದ ನ್ಯಾಟೋ, “ರಷ್ಯಾದ ಒಂದು ಯುದ್ಧವಿಮಾನ ಹೊಡೆದುರುಳಿಸಿದರೂ, ಯುರೋಪ್ ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ಯುದ್ದ ಇನ್ನೂ ಅನೇಕ ದೇಶಗಳನ್ನು ಒಳಗೊಂಡಿರುತ್ತದೆ ಮತ್ತು ಹೆಚ್ಚು ಜೀವಹಾನಿಯನ್ನು ಉಂಟುಮಾಡುತ್ತದೆ” ಎಂದು ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದರು. ಈ ಕಾರಣಕ್ಕೆ ನ್ಯಾಟೋ ವಿರುದ್ಧ ಕಿಡಿಕಾರಿದ್ದ ಝೆಲೆನ್ಸ್ಕಿ “ನಿಮ್ಮ ಈ ನಿರ್ಧಾರವು ಉಕ್ರೇನಿಯನ್ ನಗರಗಳು ಮತ್ತು ಹಳ್ಳಿಗಳ ಮೇಲೆ ಮತ್ತಷ್ಟು ಬಾಂಬ್ ದಾಳಿಗೆ ಹಸಿರು ನಿಶಾನೆ ನೀಡುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

NATO

“ಇಂದು ನ್ಯಾಟೋ ಶೃಂಗಸಭೆ ನಡೆಯುತ್ತಿದೆ. ಅದು ದುರ್ಬಲ ಮತ್ತು ಗೊಂದಲಮಯ ಶೃಂಗಸಭೆಯಾಗಿದೆ. ಯುರೋಪಿನ ಸ್ವಾತಂತ್ರ್ಯಕ್ಕಾಗಿ ಯುದ್ಧವನ್ನು ನಂಬರ್ ಒನ್ ಗುರಿ ಎಂದು ಶೃಂಗಸಭೆಯ ಎಲ್ಲರೂ ಪರಿಗಣಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ದಿನದಿಂದ ಉಕ್ರೇನ್‌ನಲ್ಲಿ ಸಾಯುವ ಎಲ್ಲಾ ಜನರು ನಿಮ್ಮ (NATO) ಕಾರಣದಿಂದಾಗಿ ಸಾಯುತ್ತಾರೆ, ನಿಮ್ಮ ದೌರ್ಬಲ್ಯದಿಂದಾಗಿ, ನಿಮ್ಮ ಒಗ್ಗಟ್ಟಿನ ಕೊರತೆಯಿಂದಾಗಿ ಸಾಯುತ್ತಾರೆ” ಎಂದು ಝೆಲೆನ್ಸ್ಕಿ ಕಿಡಿಕಾರಿದ್ದರು.

ಉಕ್ರೇನ್ ಯುದ್ಧದ ವಾಸ್ತವ ಸ್ಥಿತಿಯೇನು?

ಸದ್ಯ ರಷ್ಯಾ, ಉಕ್ರೇನ್‌ನ ಪೂರ್ವಭಾಗದ ಹಲವು ಪ್ರದೇಶಗಳಲ್ಲಿ ಗುಂಡಿನ ಮಳೆಗರೆದಿದೆ. ಹಲವು ಸಾವು-ನೋವುಗಳನ್ನು ಉಂಟು ಮಾಡಿದೆ. ಉಕ್ರೇನ್‌ನ ದಕ್ಷಿಣ ಭಾಗದಲ್ಲಿರುವ ಖೆರ್ಸನ್ ಎಂಬ ಪ್ರದೇಶವನ್ನು ಸಂಪೂರ್ಣ ವಶಕ್ಕೆ ಪಡೆದಿದೆ. ಇನ್ನು ಉಕ್ರೇನ್‌ನ ಎರಡನೇ ಅತಿ ದೊಡ್ಡ ನಗರ ಹಾರ್ಕೈವ್ ರಷ್ಯಾ ದಾಳಿಗೆ ತತ್ತರಿಸಿದೆ. ಆದರೂ ಅದಿನ್ನೂ ಸಂಪೂರ್ಣವಾಗಿ ರಷ್ಯಾದ ವಶವಾಗಿಲ್ಲ. ಇನ್ನ ರಾಜಧಾನಿ ಕೀವ್ ಬಳಿಯ ಹಾಸ್ಟೊಮೆಲ್ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡು ಅಲ್ಲಿ ತನ್ನ ಯುದ್ಧ ವಿಮಾನಗಳನ್ನು ಇಳಿಸಲು ರಷ್ಯಾ ಯೋಜಿಸಿತ್ತು. ಆದರೆ ಅದಕ್ಕೆ ಉಕ್ರೇನ್ ಪಡೆಗಳು ತಡೆಯೊಡ್ಡಿವೆ. ರಷ್ಯಾದ ಶೆಲ್ ದಾಳಿಯಿಂದ ಉಕ್ರೇನ್‌ನಲ್ಲಿನ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ರಿಯಾಕ್ಟರ್‌ಗಳು ಅಪಾಯದಲ್ಲಿಲ್ಲ. ವಿಕಿರಣ ಸೋರಿಕೆಯಾಗಿಲ್ಲ ಎಂದು ವರದಿಯಾಗಿದೆ. ಇದು ರಷ್ಯಾ ಸೇರಿ ಇತರ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

ತೈಲ ಆಮದು ನಿಲ್ಲಿಸಿದ ಯೂರೋಪ್ ರಾಷ್ಟ್ರಗಳು; ಎಚ್ಚರಿಕೆ ನೀಡಿದ ರಷ್ಯಾ

ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಿಸುವ ವೇಳೆಗೆ ಅಮೆರಿಕ ಸೇರಿದಂತೆ ಯೂರೋಪ್‌ನ ಹಲವು ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧ ಹೇರಿದವು. ಆದರೆ ಮಾರ್ಚ್ ಮೊದಲ ವಾರದವರೆಗೂ ರಷ್ಯಾದಿಂದ ಯೂರೋಪ್ ರಾಷ್ಟ್ರಗಳು ತೈಲ ಆಮದು ಮಾಡಿಕೊಳ್ಳುತ್ತಿದ್ದವು. ಅದಕ್ಕೂ ಈಗ ನಿರ್ಬಂಧ ವಿಧಿಸಿವೆ. ಹಾಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೇಡಿಕೆ ಹೆಚ್ಚಾದಂತೆ ಕಚ್ಚಾ ತೈಲದ ದರ ಸಹ ಹೆಚ್ಚಾಗಲಿದೆ. ಈಗಾಗಲೆ ಬ್ಯಾರೆಲ್ ಕಚ್ಚಾ ತೈಲದ ಬೆಲೆ 130 ಡಾಲರ್ ಹತ್ತಿರಕ್ಕೆ ಬಂದಿದೆ. ಇದು ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ತೀವ್ರ ಆರ್ಥಿಕ ಹೊಡೆತ ನೀಡಲಿದೆ. ಅಮೆರಿಕ ಮತ್ತು ಕೆನಡಾ ರಾಷ್ಟ್ರಗಳು ಯೂರೋಪ್ ದೇಶಗಳಿಗೆ ಕಚ್ಚಾ ತೈಲ ಸರಬರಾಜು ಮಾಡುವುದಾಗಿ ಘೋಷಿಸಿವೆ. ಆದರೆ ಕಡಿಮೆ ದರಕ್ಕೆ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಯೂರೋಪ್ ರಾಷ್ಟ್ರಗಳು ದುಬಾರಿ ದರಕ್ಕೆ ಅಮೆರಿಕದಿಂದ ಎಷ್ಟು ದಿನ ಕಚ್ಚಾ ತೈಲ ಖರೀದಿಸಬಲ್ಲವು ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಪುಟಿನ್

ಇನ್ನೊಂದೆಡೆ ತೈಲ ಆಮದು ನಿಲ್ಲಿಸಿದ ಯೂರೋಪ್ ರಾಷ್ಟ್ರಗಳ ಕ್ರಮವನ್ನು ರಷ್ಯಾ ಟೀಕಿಸಿದೆ. ಈ ಎಲ್ಲಾ ನಿರ್ಬಂಧಗಳು ಸಹ ಯುದ್ಧದಂತೆಯೇ ಇವೆ ಎಂದು ರಷ್ಯಾ ವಾದಿಸಿದೆ. ಅಲ್ಲದೆ ಇಂಧನ ರಫ್ತಿಗಾಗಿ ರಷ್ಯಾದಿಂದ ಜರ್ಮನಿಯವರೆಗೆ ನಿರ್ಮಿಸಲಾಗಿರುವ ಪೈಪ್‌ಲೈನ್‌ಅನ್ನು ಮುಚ್ಚುವುದಾಗಿ ಅದು ಎಚ್ಚರಿಸಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಛಾ ತೈಲದ ಬೆಲೆ 300 ಡಾಲರ್ ಮುಟ್ಟಲಿದೆ ಎಂದು ರಷ್ಯಾದ ಹಿರಿಯ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿ ಕ್ರಮವಾಗಿ ರಷ್ಯಾದ ರಾಜಕೀಯ ನಾಯಕರು/ಉದ್ದಿಮೆದಾರರು ಯೂರೋಪ್‌ನಲ್ಲಿ ಹೂಡಿರುವ ಹೂಡಿಕೆ ಮೇಲೆ ನಿರ್ಬಂಧ ವಿಧಿಸಲಾಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಸೇರಿದಂತೆ ಅವರ ಅಧಿಕಾರ ವ್ಯಾಪ್ತಿಯಲ್ಲಿರುವ ರಷ್ಯಾದ ಉನ್ನತ ನಾಯಕರ ಆಸ್ತಿಗಳನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಎಚ್ಚರಿಸಿವೆ. ಈ ನಿರ್ಬಂಧಗಳಿಂದಾಗಿ ರಷ್ಯಾ ತನ್ನ ವಿದೇಶಿ ಮೀಸಲು ಮತ್ತು ಉಳಿದ ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಪ್ರವೇಶಿಸಲು ಕಷ್ಟವಾಗುತ್ತದೆ ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಯುದ್ಧಕ್ಕಿಂತ ಮಾತುಕತೆಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ.

ಯುದ್ಧ ನಿಲ್ಲಿಸಲು ರಷ್ಯಾದ ಷರತ್ತುಗಳೇನಿರಬಹುದು?

ಕೋವಿಡ್‌ನಿಂದ ಬಳಲಿರುವ ವಿಶ್ವದ ಹಲವು ರಾಷ್ಟ್ರಗಳು ಯುದ್ಧದ ಪರಿಣಾಮಗಳನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಈ ಯುದ್ಧ ಸ್ವತಃ ರಷ್ಯಾ ಸೇರಿ ಯೂರೋಪ್ ಮತ್ತು ನ್ಯಾಟೋಗೂ ದುಬಾರಿಯಾಗುತ್ತಿದೆ. ಹಾಗಾಗಿಯೇ ಎಲ್ಲಾ ರಾಷ್ಟ್ರಗಳು ಯುದ್ಧ ನಿಲ್ಲಿಸುವತ್ತ ಗಮನಹರಿಸುತ್ತಿವೆ. ಮುಂದಿನ ಹಂತದ ಮಾತುಕತೆಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ನಿಲ್ಲಿಸಲು ಯಾವ ಷರತ್ತುಗಳನ್ನು ಹೇರಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಆ ಕುರಿತ ಅಂದಾಜುಗಳು ಕೆಳಗಿನಂತಿವೆ.

ಉಕ್ರೇನ್ ನ್ಯಾಟೋಗೆ ಸೇರಬಾರದು, ತಟಸ್ಥವಾಗಿರಬೇಕು

ಉಕ್ರೇನ್ ನ್ಯಾಟೋ ಸದಸ್ಯ ರಾಷ್ಟ್ರವಾಗಬಾರದು ಎಂಬುದನ್ನು ರಷ್ಯಾ ಮೊದಲಿನಿಂದಲೂ ಪ್ರಬಲವಾಗಿ ಒತ್ತಾಯಿಸುತ್ತಿದೆ. ಅದೇ ಷರತ್ತು ಈಗಲೂ ಮುಂದುವರಿಯಲಿದೆ. ಅಲ್ಲದೆ ನ್ಯಾಟೋ ಉಕ್ರೇನ್‌ಗೆ ನೀಡಿರುವ ಸಶಸ್ತ್ರ ಬಲವನ್ನು ಹಿಂಪಡೆಯಬೇಕು. ಇನ್ನು ಮುಂದೆ ಉಕ್ರೇನ್‌ಗೆ ನ್ಯಾಟೋ ಶಸ್ತ್ರಾಸ್ತ್ರ ಸರಬರಾಜು ಮಾಡಬಾರದು. ನ್ಯಾಟೋ ಪಡೆಗಳು ಉಕ್ರೇನ್ ತೊರೆಯಬೇಕು ಎಂಬುವು ರಷ್ಯಾದ ಷರತ್ತಾಗಿರುತ್ತವೆ.

ಝೆಲೆನ್ಸ್ಕಿ ರಾಜೀನಾಮೆ- ರಷ್ಯಾ ಪರವಿರುವವರನ್ನು ಆಡಳಿತಕ್ಕೆ ತರುವುದು

ರಷ್ಯಾ ವಿರುದ್ಧ ಸೆಡ್ಡು ಹೊಡೆದಿರುವ, ಪುಟಿನ್ ಪ್ರಕಾರ ಉಕ್ರೇನ್‌ನಲ್ಲಿನ ರಷ್ಯನ್ನರಿಗೆ ಕಿರುಕುಳ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಾಜೀನಾಮೆ ನೀಡಬೇಕು ಮತ್ತು ಹೊಸ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ರಷ್ಯಾ ಒತ್ತಾಯಿಸಲಿದೆ.

ಡಾನ್‌ಬಾಸ್ ಪ್ರಾಂತ್ಯ ರಷ್ಯಾಗೆ ಹಸ್ತಾಂತರ

ಉಕ್ರೇನ್‌ನಲ್ಲಿನ ಡಾನ್‌ಬಾಸ್ ಪ್ರಾಂತ್ಯದ ಡಾನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳನ್ನು ರಷ್ಯಾಗೆ ಹಸ್ತಾಂತರಿಸಬೇಕು. ಅಲ್ಲಿನ ರಷ್ಯನ್ ಜನತೆಯ ಸ್ವಾತಂತ್ರ್ಯವನ್ನು ಕಾಪಾಡಬೇಕು, ಅವರ ಭಿನ್ನ ಆಚಾರ-ವಿಚಾರಗಳನ್ನು ಸಂರಕ್ಷಿಸಬೇಕು ಎಂದು ರಷ್ಯಾ ವಾದಿಸಲಿದೆ.

ಝೆಲೆನ್ಸ್ಕಿ

ಅಲ್ಲದೆ ಉಕ್ರೇನ್‌ನಲ್ಲಿನ ಸಶಸ್ತ್ರ ನೆಲೆಗಳನ್ನು ರಷ್ಯಾ ಮೇಲ್ವಿಚಾರಣೆ ಮಾಡಬೇಕು ಎಂದೂ ಸಹ ಒತ್ತಾಯಿಸಲಿದೆ. ಮುಂದಿನ ದಿನಗಳಲ್ಲಿ ರಷ್ಯಾ ಕೀವ್‌ಅನ್ನು ವಶಪಡಿಸಿಕೊಳ್ಳಲಿದೆಯೇ ಎಂಬುದರ ಮೇಲೆ ಅದು ಮತ್ತಷ್ಟು ಷರತ್ತುಗಳನ್ನು ವಿಧಿಸಬಹುದು. ಅಲ್ಲದೆ ತನ್ನ ನಡೆಗಳಿಗೆ ಪಶ್ವಿಮ ರಾಷ್ಟ್ರಗಳು ಹೇಗೆ ವರ್ತಿಸುತ್ತವೆ ಎಂಬುದರ ಮೇಲೆ ರಷ್ಯಾದ ಷರತ್ತುಗಳು ನಿರ್ಧಾರವಾಗಲಿವೆ.

ಉಕ್ರೇನ್ ಮತ್ತು ಪಶ್ಚಿಮ ರಾಷ್ಟ್ರಗಳ ಪ್ರತಿಕ್ರಿಯೆ ಏನಿರಲಿದೆ?

ರಷ್ಯಾದ ದಾಳಿ ಮತ್ತು ಮಾತುಕತೆಯಲ್ಲಿ ಮುಂದಿಡುತ್ತಿರುವ ಷರತ್ತುಗಳಿಗೆ ಉಕ್ರೇನ್ ಮತ್ತು ಪಶ್ಚಿಮ ರಾಷ್ಟ್ರಗಳು ಸಹ ಪ್ರತಿತಂತ್ರ ಹೆಣೆಯುತ್ತಿವೆ. ರಷ್ಯಾದ ಪಡೆಗಳು ಪೂರ್ಣ ಪ್ರಮಾಣದಲ್ಲಿ ಉಕ್ರೇನ್‌ನಿಂದ ಹೊರಹೋಗಬೇಕು. ಉಕ್ರೇನ್ ದೇಶದ ಸ್ವಾಯತ್ತತೆ ಮತ್ತು ಸಾರ್ವಭೌಮತ್ವವನ್ನು ರಷ್ಯಾ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸುವ ಸಾಧ್ಯತೆ ಇರುತ್ತದೆ.

ರಷ್ಯಾ ಮೇಲೆ ವಾರ್ ಕ್ರೈಮ್ ಆರೋಪ

ಈಗಾಗಲೇ ಝೆಲೆನ್ಸ್ಕಿ ರಷ್ಯಾ ಪಡೆಗಳು ಉಕ್ರೇನ್ ಜನತೆ ಮೇಲೆ ವಾರ್ ಕ್ರೈಮ್ (ಯುದ್ಧ ಅಪರಾಧ) ಎಸಗಿವೆ ಎಂದು ಆರೋಪಿಸಿದ್ದಾರೆ. ಅಂದರೆ ಉದ್ದೇಶಪೂರ್ವಕವಾಗಿ ರಷ್ಯನ್ ಪಡೆಗಳು ಉಕ್ರೇನ್ ಜನತೆಯನ್ನು ಕೊಂದಿವೆ ಮತ್ತು ಇದು ಅಂತಾರಾಷ್ಟ್ರೀಯ ಒಪ್ಪಂದಗಳ ಪ್ರಕಾರ ಅಪರಾಧ ಎಂದು ವಾದಿಸಲಿವೆ. ಅದಕ್ಕಾಗಿ ಸ್ವತಂತ್ರ ತನಿಖೆ ಮತ್ತು ವಿಚಾರಣೆಗಾಗಿ ಒತ್ತಾಯಿಸುವ ಸಾಧ್ಯತೆ ಇರುತ್ತದೆ. ಈಗಾಗಲೇ ಜರ್ಮನಿ ಈ ಕುರಿತು ದನಿಯೆತ್ತಿದೆ.

ಒಟ್ಟಿನಲ್ಲಿ ಯಾರಿಗೂ ಬೇಡವಾದ ಯುದ್ಧ ಪುಟಿನ್‌ರಿಂದಾಗಿ ಆರಂಭವಾಗಿಬಿಟ್ಟಿದೆ. ಅಪಾರ ಜೀವಹಾನಿಗೆ ಕಾರಣವಾಗಿದೆ. ಈಗ ಎಲ್ಲ ರಾಷ್ಟ್ರಗಳ ಚಿತ್ತ ಯುದ್ಧ ನಿಲ್ಲಿಸುವತ್ತ ತಿರುಗಿದೆ. ಅದಕ್ಕಿರುವ ಒಂದೇ ಮಾರ್ಗ ಮಾತುಕತೆಯಲ್ಲಿ ಷರತ್ತುಗಳಿಗೆ ಪರಸ್ಪರ ಒಪ್ಪಿಕೊಳ್ಳುವುದು ಮತ್ತು ತಮ್ಮತಮ್ಮ ಷರತ್ತುಗಳನ್ನು ಸಡಿಲಗೊಳಿಸಿಕೊಳ್ಳುವುದು. ಇಷ್ಟು ದಿನ ಸಂಭವಿಸಿದ ನಷ್ಟಗಳಿಂದ ಕಲಿತುಕೊಳ್ಳುವುದಾದರೆ ಯುದ್ಧ ತಕ್ಷಣವೇ ನಿಲ್ಲಬೇಕಿದೆ ಮತ್ತು ಮುಂದೆ ಯುದ್ಧ ಸಂಭವಿಸದಂತಹ ವಾತಾವರಣ ನಿರ್ಮಿಸಲು ಜನತೆ ಎಚ್ಚೆತ್ತುಕೊಂಡು ಸರ್ಕಾರಗಳನ್ನು ಒತ್ತಾಯಿಸಬೇಕಿದೆ.


ಇದನ್ನೂ ಓದಿ: ರಷ್ಯಾ ಮಾನವೀಯ ಕಾರಿಡಾರ್‌ ಘೋಷಿಸಿದರೂ ಕೈಗೆ ಸಿಕ್ಕ ವಾಹನಗಳಲ್ಲಿ ಸ್ಥಳಾಂತರಗೊಳ್ಳಿ ಎಂದ ಮೋದಿ ನೇತೃತ್ವದ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...