Homeರಂಜನೆಕ್ರೀಡೆಶೇನ್ ವಾರ್ನ್: ಮೂರು ಹೆಜ್ಜೆ ಗುರುತುಗಳು ನೂರಾರು ಕವಲು ದಾರಿಗಳು ಸಾವಿರದೊಂದು ರಹದಾರಿಗಳು!

ಶೇನ್ ವಾರ್ನ್: ಮೂರು ಹೆಜ್ಜೆ ಗುರುತುಗಳು ನೂರಾರು ಕವಲು ದಾರಿಗಳು ಸಾವಿರದೊಂದು ರಹದಾರಿಗಳು!

- Advertisement -
- Advertisement -

ಅದು ಸೀದಾಸಾದಾ ಮೂರೇಮೂರು ಹೆಜ್ಜೆ.. ತೋಳ್ಬಲದ ಜೊತೆಗೆ ಮಣಿಕಟ್ಟು ಮೂಲಕ ಕೈಬೆರಳಿನಲ್ಲಿ ಚೆಂಡನ್ನು ತಿರುಗಿಸುವ ಜಾದುಗಾರ! ಬುಗರಿಯಂತೆ ಗಾಳಿಯಲ್ಲಿ ತೇಲಿ ಬರುವ ಎಸೆತ. ಬ್ಯಾಟ್ಸ್‌ಮೆನ್‌ನನ್ನು ಒಂದುಕ್ಷಣ ತಬ್ಬಿಬ್ಬುಗೊಳಿಸುವ ಮಾಂತ್ರಿಕ!

ಕ್ರಿಕೆಟ್ ಜಗತ್ತಿನಲ್ಲಿ ಹತ್ತಾರು ಸ್ಪಿನ್ ಮಾಂತ್ರಿಕರು ಬಂದು ಹೋಗಿದ್ದಾರೆ. ಆದರೆ, ಶೇನ್ ವಾರ್ನ್ ಎಂಬ ಆ ಒಂದು ಹೆಸರು ಮಾತ್ರ ಎಂದೂ ಅಚ್ಚಳಿಯದ ಅಚ್ಚರಿಯೇ ಸರಿ. ಪುಟ್ಟಪುಟ್ಟ ಮೂರು ಹೆಜ್ಜೆಗಳನ್ನಿಟ್ಟು ಬಲಗೈನ ಮೂರು ಬೆರಳನ್ನು ಉಪಯೋಗಿಸಿ ಲೆಗ್‌ಸ್ಪಿನ್ ಮಾಡುವ ಮೂಲಕ ವಿಕೆಟ್‌ಅನ್ನು ಯ:ಕಶ್ಚಿತ್ ಮ್ಯಾಜಿಕ್ ರೀತಿಯಲ್ಲಿ ಉಡಾಯಿಸುತ್ತಿದ್ದ ಪರಿಗೆ ಇಡೀ ಜಗತ್ತೇ ತಲೆದೂಗಿತ್ತು.

ತನ್ನ ಪ್ರತಿಭೆ, ಸಾಮರ್ಥ್ಯದ ಮೇಲೆ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರುವ ಹುಂಬ ಮನುಷ್ಯ ಎಷ್ಟೆಲ್ಲಾ ಸಾಧನೆಗಳನ್ನು ಮಾಡಬಹುದು, ದಾಖಲೆಗಳ ಶಿಖರದ ಮೂಲಕ ಮುಂದಿನ ಪೀಳಿಗೆಗೂ ತಾನು ಹೇಗೆ ಸವಾಲು ಎಸೆಯಬಹುದು ಎಂಬುದಕ್ಕೆ ಉದಾಹರಣೆಯಂತೆ ಬದುಕಿದ್ದ ಸಾಧಕ ವಾರ್ನ್. ಮುಂದುವರಿದು ಹೇಳಬೇಕೆಂದರೆ ಆತ ಬ್ಯಾಟ್ಸ್‌ಮೆನ್‌ನ ಮನಸ್ಥಿತಿಯನ್ನು ಅರಿತುಕೊಳ್ಳುವ ಸಾಮರ್ಥ್ಯ ಹೊಂದಿದ್ದ ಮನಃಶಾಸ್ತ್ರಜ್ಞ. ಶಸ್ತ್ರಚಿಕಿತ್ಸೆ ಮಾಡುವ ಡಾಕ್ಟರ್‌ನಂತೆ ಏಕಾಗ್ರತೆಯಿಂದ ತನ್ನ ಬೌಲಿಂಗ್ ಲಯ ಮತ್ತು ನಿಖರತೆಯನ್ನು ಕಾಯ್ಡುಕೊಳ್ಳುವ ಸ್ಪಿನ್ ಡಾಕ್ಟರ್ ಆತ!

ಶೋಕಿ, ದುಶ್ಚಟಗಳ ದಾಸ, ವಿವಾದಗಳು, ವಾಕ್ಸಮರಗಳು ಆತನ ಯಶಸ್ಸಿನ ಸುತ್ತ
ಅಂಟಿಕೊಂಡಿರುವ ಕಪ್ಪುಚುಕ್ಕೆಗಳೇನೋ ಹೌದು. ಆದರೂ, ಆತನ ಸಾಧನೆಯ ಮುಂದೆ ಆ ತಪ್ಪುಗಳೆಲ್ಲವೂ ಮರೆಯಾಗುತ್ತಿದ್ದವು. ಇಡೀ ಕ್ರಿಕೆಟ್ ಜಗತ್ತು ಆತನ ಯಶಸ್ಸನ್ನು ಪಕ್ಕಕ್ಕಿಟ್ಟು ಕರೆಯುತ್ತಿದ್ದದ್ದು ಕ್ರಿಕೆಟ್‌ನ ಬ್ಯಾಡ್ ಬಾಯ್ ಎಂದು.

ಆತನ ಬೌಲಿಂಗ್ ಬತ್ತಳಿಕೆಯಲ್ಲಿದ್ದ ಅಸ್ತ್ರಗಳೇ ವಿಭಿನ್ನ. ಅದನ್ನು ಅರ್ಥಮಾಡಿಕೊಳ್ಳುವುದು ಸಹ ಅಷ್ಟೇ ಕಷ್ಟ. ಎದುರಾಳಿ ಬ್ಯಾಟ್ಸ್‌ಮೆನ್‌ಗಳ ಆತ್ಮವಿಶ್ವಾಸವನ್ನು ಕುಗ್ಗಿಸುವಂತಹ ಸಾಮರ್ಥ್ಯ
ಆತನ ಬೌಲಿಂಗ್‌ನಲ್ಲಿತ್ತು. ಅದಕ್ಕಾಗಿ ಏನು ಬೇಕಾದ್ರೂ ಮಾಡುವ ಕಲೆಯೂ ಚೆನ್ನಾಗಿಯೇ ಗೊತ್ತಿತ್ತು. ಹಾಗಾಗಿಯೇ ಶೇನ್ ವಾರ್ನ್ ಜಂಟಲ್‌ಮ್ಯಾನ್ ಆಟದ ಜಂಟಲ್‌ಮ್ಯಾನ್ ಆಟಗಾರನಲ್ಲದಿದ್ದರೂ, ಆತನನ್ನು ವಿಶ್ವದ ಸರ್ವಶ್ರೇಷ್ಠ ಸ್ಪಿನ್ನರ್ ಅಂತ ಕರೆಯಲಾಗುತ್ತದೆ. ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮೆನ್‌ಗಳನ್ನು ದಿಗ್ಭ್ರಮೆಗೊಳಿಸಿದ್ದ ಮಾಂತ್ರಿಕ ಬೌಲರ್ ಆತ.

ಆತನ ಸ್ವಭಾವ, ವ್ಯಕ್ತಿತ್ವಗಳನ್ನು ಬದಿಗಿಟ್ಟು ಕ್ರಿಕೆಟ್ ಮೈದಾನದಲ್ಲಿ ಆತ ಮಾಡಿರುವ ಕರಾಮತ್ತಿನಿಂದ ಯುವಪೀಳಿಗೆಗೆ ಸ್ಫೂರ್ತಿಯ ಚಿಲುಮೆ ಎಂಬುದರಲ್ಲಿ ಎರಡು ಮಾತಿಲ್ಲ. ಆತನ ಬೌಲಿಂಗ್ ಶೈಲಿಯನ್ನು ಅನುಕರಣೆ ಮಾಡಿಕೊಂಡವರು ಅನೇಕರಿದ್ದಾರೆ. ಈ ಸಾಲಿನಲ್ಲಿ ಶೇನ್ ವಾರ್ನ್‌ನನ್ನು ಬಹುವಾಗಿ ಕಾಡಿದ್ದ ಭಾರತದ ಸಚಿನ್ ತೆಂಡೂಲ್ಕರ್ ಸಹ ಇದ್ದಾರೆ. ಈ ಎಲ್ಲವನ್ನೂ ಮೀರಿ ಶೇನ್ ವಾರ್ನ್‌ಗೆ ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಗುಣಗಳಿದ್ದವು. ಹಾಗಾಗಿಯೇ ಆತ ವಿಶ್ವ ಕ್ರಿಕೆಟ್‌ನ ಎವರ್‌ಗ್ರೀನ್ ಹೀರೋ ಆಗಿಬಿಟ್ಟ!

ಇದನ್ನೂ ಓದಿ: ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕ್ರಿಕೆಟ್ ಮೈದಾನಗಳು

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡ ಐಪಿಎಲ್‌ನಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆ ನೀಡುವ ಮೂಲಕ ಭವಿಷ್ಯವನ್ನು ಕಟ್ಟಿಕೊಟ್ಟದ್ದು ಇದೇ ವಾರ್ನ್. ಮೊದಲ ಋತುವಿನಲ್ಲೇ ರಾಜಸ್ತಾನ ರಾಯಲ್ಸ್ ತಂಡದ ನಾಯಕ ಮತ್ತು ಕೋಚ್ ಆಗಿ ಕಣ ಪ್ರವೇಶಿಸಿದ್ದ ವಾರ್ನ್ ಅಂದು ತಮ್ಮ ತಂಡದಲ್ಲಿ ರವೀಂದ್ರ ಜಡೇಜಾ ಸೇರಿದಂತೆ ಅನೇಕ ಯುವಕರಿಗೆ ಅವಕಾಶ ನೀಡಿದ್ದರು. ತಮ್ಮ ಅನುಭವದ ಮೂಲಕ ಮಾರ್ಗದರ್ಶನವನ್ನೂ ಧಾರೆ ಎರೆದಿದ್ದರು. ಪರಿಣಾಮ ಮೊದಲ ಆವೃತ್ತಿಯಲ್ಲೇ ರಾಜಸ್ಥಾನ ಚಾಂಪಿಯನ್ ಪಟ್ಟ ಧರಿಸಿತು, ಭಾರತದ ಆಲ್‌ರೌಂಡರ್ ಜಡೇಜಾ ಏರಿರುವ ಉತ್ತುಂಗ ಎಲ್ಲರಿಗೂ ತಿಳಿದೇ ಇದೆ.

ಆತ ಚೆಂಡನ್ನು ಕೈ ಬೆರಳಿನಲ್ಲೇ ಆಡಿಸುವ ಮೋಡಿಗಾರ. ಏರಿಳಿತಗಳ ನಡುವೆಯೇ ಯಶಸ್ಸಿನ ಉತ್ತುಂಗಕ್ಕೇರಿದ್ದ ಅತ್ಯದ್ಭುತ ಬೌಲರ್. ಕವಲು ದಾರಿಯ ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದು ಬಂದ ಚಾಣಕ್ಯ. ಮೂರು ಹೆಜ್ಜೆಗಳನ್ನು ಹಾಕಿ 22 ಯಾರ್ಡ್‌ನ ಪಿಚ್‌ನಲ್ಲಿ ಆತ ಮಾಡಿರುವ ಮೋಡಿಯನ್ನು ಕ್ರಿಕೆಟ್ ಜಗತ್ತು ಎಂದೆಂದೂ ಮರೆಯಲು ಸಾಧ್ಯವಿಲ್ಲ.

ಕವಲುದಾರಿಯನ್ನು ರಹದಾರಿಯನ್ನಾಗಿಸಿಕೊಂಡು ಪ್ರತಿ ವಿಕೆಟ್‌ಅನ್ನೂ ಒಂದೊಂದು ಮೈಲುಗಲ್ಲಾಗಿಸಿಕೊಂಡಿದ್ದ. ಒಟ್ಟಾರೆ ಕ್ರಿಕೆಟ್ ವೃತ್ತಿಜೀವನದಲ್ಲಿ 1001 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಉರುಳಿಸಿದ. ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳಿಸಿದ ಮೊದಲ ಬೌಲರ್ ಎಂಬ ಶ್ರೇಯಕ್ಕೂ ಪಾತ್ರನಾದ. ಆದರೆ, ತನ್ನ ವಿಕೆಟ್ ಗಳಿಕೆ ಸಾವಿರದೊಂದು ತಲುಪುವಷ್ಟರಲ್ಲಿ ಕ್ರಿಕೆಟ್ ಸಾಕು ಎಂದು ಆತನಿಗೆ ಅನ್ನಿಸಿಬಿಟ್ಟಿತ್ತು. ಅದಕ್ಕೊಂದು ಸಲಾಂ ಹೊಡೆದು ತನ್ನ ಎರಡನೇ ಇನಿಂಗ್ಸ್‌ನ ಬದುಕನ್ನು ಚೆನ್ನಾಗಿಯೇ ಎಂಜಾಯ್ ಮಾಡುತ್ತಿದ್ದ.

ಮೈದಾನದಲ್ಲಿ ವಿಕೆಟ್ ಪಡೆದ ಹಾಗೇ ವಿದಾಯದ ನಂತರ ಒಂದೊಂದು ದುಶ್ಚಟಗಳನ್ನು ಹವ್ಯಾಸವನ್ನಾಗಿಸಿಕೊಂಡ. ಆರೋಗ್ಯದ ಕಡೆ ಗಮನ ಹರಿಸಲಿಲ್ಲ. ಅಷ್ಟರಲ್ಲೇ ವಿಧಿಯ ಆಟಕ್ಕೆ ಈ ಲೋಕವನ್ನೇ ಬಿಟ್ಟು ಹೋದ ಈ ಮಹಾನ್ ಕ್ರಿಕೆಟಿಗ.

ಹೌದು, ಶೇನ್ ವಾರ್ನ್, ಮೂರು ಹೆಜ್ಜೆ ಗುರುತುಗಳು.. ನೂರಾರು ಕವಲು ದಾರಿಗಳು… ಸಾವಿರದೊಂದು ರಹದಾರಿಗಳು! ಇನ್ನು ನೆನಪು ಮಾತ್ರ.


ಇದನ್ನೂ ಓದಿ: ನಾಗರಾಜ್‌ ಮಂಜುಳೆಯ ‘ಝುಂಡ್‌’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...