Homeಕರ್ನಾಟಕಡಾ. ಸುಧಾಕರ್ ಅವರೇ, ವಿಜ್ಞಾನಿ ಮತ್ತು ಜ್ಯೋತಿಷಿ ಇಬ್ಬರೂ ಸಮರೇ?

ಡಾ. ಸುಧಾಕರ್ ಅವರೇ, ವಿಜ್ಞಾನಿ ಮತ್ತು ಜ್ಯೋತಿಷಿ ಇಬ್ಬರೂ ಸಮರೇ?

- Advertisement -
- Advertisement -

“ಬೌದ್ಧ ಧರ್ಮದ ಸುಳಿಗೆ ಸಿಕ್ಕ ವಿಶ್ವದ ನಾನಾ ದೇಶಗಳು ಆ ಧರ್ಮಕ್ಕೆ ಮತಾಂತರ ಆಗುತ್ತಿರುವಾಗ ಅದನ್ನು ತಡೆದು ಭಾರತೀಯ ಧರ್ಮವನ್ನು ಉಳಿಸಿದ ಕೀರ್ತಿ ಬ್ರಾಹ್ಮಣ ಸಮುದಾಯದ ಆದಿ ಶಂಕರಾಚಾರ್ಯರಿಗೆ ಸಲ್ಲುತ್ತದೆ” – ಹೀಗೆ ಹೇಳಿದ್ದು ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್.

ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಬ್ರಾಹ್ಮಣ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸುಧಾಕರ್, ಒಂದು ಸಮುದಾಯವನ್ನು ಮೆಚ್ಚಿಸುವ ಭರದಲ್ಲಿ ಬೌದ್ಧಧರ್ಮದ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿಬಿಟ್ಟರು. ಸ್ಥಳೀಯ ಪತ್ರಿಕೆ ’ಸುವರ್ಣ ಪಾಲರ್’ನಲ್ಲಿ ವರದಿಯಾಗದೆ ಇದ್ದಿದ್ದರೆ ಬಹುತೇಕ ಆ ಸುದ್ದಿ ಮುಚ್ಚಿಹೋಗುತ್ತಿತ್ತೇನೋ!

ಆ ವೇದಿಕೆಯಲ್ಲಿ ಸುಧಾಕರ್ ಮುಂದುವರಿದು, “ವಿಜ್ಞಾನಕ್ಕೂ ಮೊದಲು ಮಾನವ ಸಮಾಜಕ್ಕೆ ದಿಕ್ಕುದೆಸೆ ತೋರಿ ಆಚಾರ್ಯ ಸ್ಥಾನದಲ್ಲಿರುವ ಬ್ರಾಹ್ಮಣ ಸಮುದಾಯ, ಎಲ್ಲಾ ಸಮಾಜದ ಕಾರ್ಯಕ್ರಮಗಳಿಗೂ ನೈತಿಕ ಬಲ ತುಂಬುವ ಶಕ್ತಿಯನ್ನು ಹೊಂದಿದೆ. ಇಂದು ಭಾರತೀಯ ಸಂಸ್ಕೃತಿ, ಆಚಾರವಿಚಾರ ವಿಶ್ವಮಾನ್ಯವಾಗಿದ್ದರೆ ಅದರ ಶ್ರೇಯ ಈ ಸಮುದಾಯಕ್ಕೆ ಸಲ್ಲಬೇಕು. ಈ ನಿಟ್ಟಿನಲ್ಲಿ ಸಾವಿರಾರು ವರ್ಷದಿಂದ ನಾಗರಿಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿರುವ ಬ್ರಾಹ್ಮಣ ಸಮುದಾಯವು ವಿಶೇಷ ಗೌರವ ಸ್ಥಾನವನ್ನು ಹೊಂದಿದೆ” ಎಂದಿದ್ದರು. ಸುದ್ದಿ ವೈರಲ್ ಆದ ಬಳಿಕ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ ಸುಧಾಕರ್, “ಈ ಹೇಳಿಕೆಯನ್ನು ತಿರುಚಲಾಗಿದೆ. ನಾನು ಕೂಡ ಬುದ್ಧನ ಅನುಯಾಯಿ” ಎಂದು ಹೇಳುತ್ತಾ, ಬೌದ್ಧಧರ್ಮದ ತಾತ್ವಿಕತೆಯನ್ನೇ ಅಣಕಿಸುವಂತೆ ಮಾತನಾಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

“ಸನಾತನ ಧರ್ಮದ ಉಳಿವಿಗಾಗಿ, ಪುನರುತ್ಥಾನಕ್ಕಾಗಿ ಜಗದ್ಗುರು ಶಂಕರಾಚಾರ್ಯರ ಕೊಡುಗೆ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ನಾನು ಮಾತನಾಡುತ್ತಿರುವುದನ್ನು ತಿರುಚಿ ಬೌದ್ಧ ಮತಕ್ಕೆ, ಭಗವಾನ್ ಬುದ್ಧರಿಗೆ ಅಪಮಾನ ಎಸಗಿದ್ದೇನೆ ಎನ್ನುವಂತಹ ರೀತಿಯಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸನಾತನ ಹಿಂದೂ ಧರ್ಮದಲ್ಲಿ ಮಹಾ ವಿಷ್ಣುವಿನ ದಶಾವತಾರ ಕಲ್ಪನೆ ಇದೆ. ಮತ್ಸ್ಯಾವತಾರ, ಕೂರ್ಮಾವತಾರ, ವರಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಹಾಗೂ ಕಲ್ಕಿ. ಇವು ವಿಷ್ಣುವಿನ ದಶಾವತಾರಗಳು ಎಂಬುದು ಸಮಸ್ತ ಹಿಂದೂಗಳ ನಂಬಿಕೆ. ಹಿಂದೂಗಳು ಪೂಜಿಸುವಂತಹ ನರಸಿಂಹ ದೇವರು, ರಾಮ, ಕೃಷ್ಣನಿಗೆ ಸಮನಾದ ಸ್ಥಾನವನ್ನು ನಾವು ಭಗವಾನ್ ಬುದ್ಧರಿಗೂ ಕೊಟ್ಟಿದ್ದೀವಿ. ಬುದ್ಧನನ್ನು ಸಾಕ್ಷಾತ್ ಮಹಾನ್ ವಿಷ್ಣುವಿನ ಅವತಾರವೆಂದು ನಂಬಿದ್ದೇವೆ. ಈ ರೀತಿಯ ನಂಬಿಕೆ ಉಳ್ಳವರು ಹಿಂದೂಗಳು. ಬೌದ್ಧಮತ ಹಿಂದೂಧರ್ಮ ಎಂಬ ಹೆಮ್ಮರದ ಶಾಖೆ ಎಂಬುದು ಹಿಂದೂಗಳ ನಂಬಿಕೆ” ಎಂದಿದ್ದಾರೆ.

“ಸುಧಾಕರ್ ಅವರು ಒಂದು ಹೇಳಿಕೆಯನ್ನು ಮತ್ತೊಂದು ಸುಳ್ಳಿನಿಂದ-ತಪ್ಪು ಮಾಹಿತಿಯಿಂದ ಮುಚ್ಚಲು ಹೊರಟಿದ್ದಾರೆ. ಬುದ್ಧನನ್ನು ಅವತಾರ ಪುರುಷ, ಸನಾತನ ಧರ್ಮದ ಭಾಗ ಎಂದು ಬಿಂಬಿಸಲು ಸುಧಾಕರ್ ಪ್ರಯತ್ನಿಸಿದ್ದಾರೆ” ಎಂಬ ಆಕ್ಷೇಪ ವ್ಯಕ್ತವಾಗಿವೆ. ಬೌದ್ಧತಾತ್ವಿಕತೆಯನ್ನು ಅರಿತವರು ’ನ್ಯಾಯಪಥ’ದೊಂದಿಗೆ ಮಾತನಾಡಿದ್ದು, ಸುಧಾಕರ್ ಹೇಳಿಕೆಗಳ ಅವಾಸ್ತವಿಕತೆಯನ್ನು ಬಿಚ್ಚಿಟ್ಟಿದ್ದಾರೆ.

ಬೌದ್ಧಧರ್ಮದಿಂದ ಸನಾತನ ಧರ್ಮ ಕಲಿಯಬೇಕಿದೆ: ಬಂಜಗೆರೆ

ವೈದಿಕ ಹಾಗೂ ಅವೈದಿಕ ಪರಂಪರೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, “ಸನಾತನ ಧರ್ಮ ಬೌದ್ಧಧರ್ಮದಿಂದ ಕಲಿತು ಸುಧಾರಣೆಗೊಳ್ಳಬೇಕಾದ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

“ಬೌದ್ಧಧರ್ಮ ಭಾರತದಲ್ಲಿ ನಿರ್ವಹಿಸಿದ ಚಾರಿತ್ರಿಕ ಪಾತ್ರದ ಬಗ್ಗೆ ಸರಿಯಾದ ಆವಗಾಹನೆ ಇಲ್ಲದೆ ಸಚಿವರು ಮಾತನಾಡಿರುವುದು ಸರಿಯಲ್ಲ. ಸನಾತನ ಧರ್ಮದೊಳಗಿನ ಅಸಮಾನತೆ, ಅನಿಷ್ಠ ಆಚರಣೆಗಳನ್ನು ಖಂಡಿಸಿದ ಬೌದ್ಧಧರ್ಮ ಜನರ ನಡುವೆ ಬಹಳ ವ್ಯಾಪಕವಾಗಿ ಹರಡಿತು. ಬೌದ್ಧಧರ್ಮದ ಜನಪ್ರಿಯತೆಯನ್ನು ಕಂಡು ತತ್ತರಿಸಿದ ಬ್ರಾಹ್ಮಣಶಾಹಿ ಸನಾತನ ಧರ್ಮದವರು ಒಂದು ಕಡೆ ಬೌದ್ಧ ವಿಹಾರಗಳ ಮೇಲೆ ದಾಳಿ ಮಾಡಿದರು; ಮತ್ತೊಂದು ಕಡೆ ಬೌದ್ಧನ ಅನುಯಾಯಿಗಳನ್ನು ಸನಾತನ ಧರ್ಮದೊಳಕ್ಕೆ ಸೆಳೆದುಕೊಳ್ಳುವುದಕ್ಕೆ ಬೌದ್ಧನನ್ನು ವಿಷ್ಣುವಿನ ಅವತಾರ ಎಂದು ಕಥೆ ಕಟ್ಟಿದರು. ಈ ಎರಡೂ ಕೂಡ ಬೌದ್ಧಧರ್ಮಕ್ಕೆ ಮಾಡಿದ ಅಪಚಾರಗಳಾಗಿದ್ದವು” ಎನ್ನುತ್ತಾರೆ ಬಂಜಗೆರೆ.

ಬಂಜಗೆರೆ ಜಯಪ್ರಕಾಶ

“ಮನುಷ್ಯರೊಳಗಿನ ಮೇಲುಕೀಳುಗಳನ್ನು ನಿರಾಕರಿಸುವ ಬೌದ್ಧಧರ್ಮ ದುಃಖದ ಸಂಕೋಲೆಗಳಿಂದ ಬಿಡುಗಡೆಗೊಳಿಸುವ ಮಹೋನ್ನತ ಗುರಿಯನ್ನು ಹೊಂದಿತ್ತು. ಅಂತಹ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಜನಪ್ರತಿನಿಧಿಯಾದ ಸುಧಾಕರ್ ಅವರಿಗೆ ಶೋಭಿಸುವುದಿಲ್ಲ. ಸನಾತನ ಧರ್ಮವು ಬೌದ್ಧಧರ್ಮದಿಂದ ಕಲಿತು ಸುಧಾರಣೆಗೊಳ್ಳಬೇಕಾದ ಅಗತ್ಯವಿದೆ. ಜಾತಿ ವ್ಯವಸ್ಥೆಯ ಅನಿಷ್ಠವನ್ನು ಇಂದಿಗೂ ಪ್ರತಿಪಾದನೆ ಮಾಡುವ ಬ್ರಾಹ್ಮಣಶಾಹಿಗೆ ಪ್ರತ್ಯುತ್ತರವಾಗಿ ಬುದ್ಧನ ತತ್ವಾದರ್ಶಗಳು ನಿಂತಿವೆ” ಎಂದು ತಿಳಿಸಿದರು.

ವಾಸ್ತವ ಮತ್ತು ಪೊಳ್ಳು ಜೊತೆಗಿರಲು ಸಾಧ್ಯವೆ: ಡಾ.ಬೂದಾಳು

ಬೌದ್ಧ ಹಾಗೂ ಇತರೆ ಶ್ರಮಣ ಪರಂಪರೆಗಳ ಕುರಿತು ಬೆಳಕು ಚೆಲ್ಲುತ್ತಿರುವ ಸಮಕಾಲೀನ ಚಿಂತಕರ ಸಾಲಲ್ಲಿ ಡಾ.ನಟರಾಜ ಬೂದಾಳು ಅವರ ಹೆಸರು ಮುಂಚೂಣಿಯಲ್ಲಿದೆ. ಬೌದ್ಧ ತಾತ್ವಿಕತೆಯ ಕುರಿತು ಸರಣಿ ಕೃತಿಗಳನ್ನು ಬರೆದಿರುವ ಅವರು ’ನ್ಯಾಯಪಥ’ದ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

“ಬೌದ್ಧ ಧರ್ಮವನ್ನು ಇತರೆ ಧರ್ಮಗಳ ಜೊತೆಗಿಟ್ಟು ಹೋಲಿಸಿ ಮಾತನಾಡಲು ಸಾಧ್ಯವಿಲ್ಲ. ಯಾಕೆಂದರೆ ವಿಜ್ಞಾನವನ್ನು ಸಾಂಸ್ಥಿಕ ಧರ್ಮಗಳ ಜೊತೆಗಿಟ್ಟು ಹೋಲಿಸಿ ಚರ್ಚಿಸಲು ಆಗುವುದಿಲ್ಲ. ವಿಜ್ಞಾನಿಯೊಬ್ಬನ ಪಕ್ಕದಲ್ಲಿ ಜ್ಯೋತಿಷಿಯನ್ನು ಕೂರಿಸಿ ಇಬ್ಬರೂ ತಮ್ಮತಮ್ಮ ಅಭಿಪ್ರಾಯವನ್ನು ಹೇಳಿರೆಂದರೆ ಹೇಗಿರುತ್ತದೆ? ಅದು ಸುಳ್ಳು ಮತ್ತು ಸತ್ಯ ಹಾಗೂ ವಾಸ್ತವ ಮತ್ತು ಪೊಳ್ಳನ್ನು ಜೊತೆಜೊತೆಯಲ್ಲಿ ಕೂರಿಸಿದಂತಾಗುತ್ತದೆ” ಎನ್ನುತ್ತಾರೆ ಬೂದಾಳು.

“ವಿಜ್ಞಾನವಾಗಲೀ, ಬೌದ್ಧಧರ್ಮವಾಗಲೀ ಸತ್ಯ ಹಾಗೂ ವಾಸ್ತವವನ್ನು ಮಾತ್ರ ನುಡಿಯುತ್ತವೆ. ಯಾರನ್ನೋ ವಿರೋಧಿಸುವುದಕ್ಕಾಗಿ ಬೌದ್ಧಧರ್ಮ ಸತ್ಯವನ್ನು ಹೇಳುವುದಿಲ್ಲ. ಸತ್ಯವನ್ನು ಹೇಗಿದೆಯೋ ಹಾಗೆಯೇ ತಿಳಿಸಬೇಕೆಂಬ ಕಾರಣಕ್ಕಾಗಿ ಸತ್ಯವನ್ನು ಸಾರುತ್ತದೆ. ಸುಳ್ಳುಗಳನ್ನು ಹೇಳುವ ಧರ್ಮಗಳು ಸಹಜವಾಗಿ ತಿರಸ್ಕೃತಗೊಳ್ಳುತ್ತವೆ. ಸೂರ್ಯನ ಸುತ್ತ ಭೂಮಿ ತಿರುಗುತ್ತ ಇದೆ ಎಂದು ಹೇಳಿದ್ದು ಯಾವುದೋ ಧರ್ಮವನ್ನು ವಿರೋಧಿಸಬೇಕೆಂದಲ್ಲ. ಸತ್ಯವನ್ನು ಹೇಳುವುದಷ್ಟೇ ವಿಜ್ಞಾನಿಯ ಉದ್ದೇಶವಾಗಿತ್ತು. ಭೂಮಿಯ ಸುತ್ತ ಸೂರ್ಯ ತಿರುಗುತ್ತಿದೆ ಎಂದು ಹೇಳುವ ಧರ್ಮ ತನ್ನಷ್ಟಕ್ಕೆ ತಾನೇ ತಿರಸ್ಕೃತಗೊಳ್ಳುವುದಿಲ್ಲವೇ?” ಎಂದು ಪ್ರಶ್ನಿಸಿದರು.

ನಟರಾಜ್ ಬೂದಾಳು

“ಸುಧಾಕರ್ ಹೇಳಲಿ, ಮತ್ತ್ಯಾರಾದರೂ ಹೇಳಲಿ, ಬೌದ್ಧಧರ್ಮ ಇನ್ನೊಂದು ಧರ್ಮವನ್ನು ವಿರೋಧಿಸುವುದಕ್ಕಾಗಿಯೋ, ಮತ್ತೊಂದು ಧರ್ಮವನ್ನು ಆಚೆಗೆ ಹಾಕುವುದಕ್ಕಾಗಿಯೋ ಹುಟ್ಟಿದ್ದಲ್ಲ. ಶಂಕರಾಚಾರ್ಯರಾಗಲೀ, ಹಿಂದೂ ಧರ್ಮ ಆಗಲಿ, ಮತ್ತ್ಯಾವುದೇ ಧರ್ಮವಾಗಲೀ ಬೌದ್ಧಧರ್ಮವನ್ನು ಆಚೆಗೆ ಹಾಕಲು ಸಾಧ್ಯವಿಲ್ಲ. ವಿಜ್ಞಾನವನ್ನು ಆಚೆ ಹಾಕಲು ಸಾಧ್ಯವೆ? ಸರಿಯಾದ ಮಾರ್ಗದಲ್ಲಿನ ಧರ್ಮವನ್ನು ನೀವು ತಿರಸ್ಕರಿಸಲು, ಹೊರಗೆ ಹಾಕಲು ಅಡ್ಡದಾರಿ ಹಿಡಿಯಬೇಕಷ್ಟೇ. ಬೌದ್ಧಧರ್ಮಕ್ಕೆ ಯಾರ ಭಯ ಹಾಗೂ ಹಂಗೂ ಇಲ್ಲ. ಬೌದ್ಧಧರ್ಮವನ್ನು ಬಿಟ್ಟು ಇತರೆ ಧರ್ಮಗಳು ತಾವು ಹೇಳಬೇಕಾದದ್ದನ್ನು ಹೇಳಿ ಮುಗಿಸಿವೆ. ಆದರೆ ಬೌದ್ಧಧರ್ಮದ ತಾತ್ವಿಕತೆ ಇನ್ನೂ ಮುಕ್ತವಾಗಿದೆ. ವಿಜ್ಞಾನ ಯಾವುದೇ ಸಂಗತಿಯನ್ನು ಹೇಳಿ ಮುಗಿಸಿರುವುದಾಗಿ ಪ್ರತಿಪಾದಿಸುವುದಿಲ್ಲ. ಮುಂದೆ ಹೊಸ ಸಂಶೋಧನೆಗಳು ಬರಬಹುದು, ಇಂದಿನ ತಿಳಿವಳಿಕೆಗಳು ನಾಳೆಯ ಸಂಶೋಧನೆಯಿಂದ ಬದಲಾಗಬಹುದು. ಬೌದ್ಧ ತಾತ್ವಿಕತೆಯೂ ಹಾಗೆಯೇ. ಅದೊಂದು ಜ್ಞಾನದ ಪ್ರವಾಹ. ಅದು ಹರಿಯುತ್ತಾ ಹೋಗುತ್ತದೆ. ಹೊಸ ತಿಳಿವಳಿಕೆ ಸೇರುತ್ತಾ ಹೋಗುತ್ತದೆ” ಎಂದು ಬೂದಳು ವಿಶ್ಲೇಷಿಸಿದರು.

“ಬೌದ್ಧಧರ್ಮವನ್ನು ಯಾರುಯಾರು, ಯಾವ್ಯಾವ ಕಾಲಕ್ಕೆ ವಿರೋಧಿಸಿದ್ದಾರೋ ಅದು ಅವರವರ ಕಾರಣಗಳಿಗಷ್ಟೇ. ಆದರೆ ಬೌದ್ಧಧರ್ಮಕ್ಕೆ ಯಾರೂ ವಿರೋಧಿಗಳಿಲ್ಲ. ಸುಳ್ಳು ಪೊಳ್ಳು ಹೇಳೋರು, ಅವಾಸ್ತವವನ್ನು ನುಡಿಯುವವರು ಮಾತ್ರ ತಮ್ಮಷ್ಟಕ್ಕೆ ತಾವೇ ತಿರಸ್ಕೃತಗೊಳ್ಳುತ್ತಾರೆ. ಬೌದ್ಧಧರ್ಮದ ಕುರಿತು ಹೀಗೆ ಹೇಳುವ ಮುನ್ನ ಅತ್ಯಂತ ಪ್ರಾಮಾಣಿಕವಾಗಿ ಬೌದ್ಧ ತಾತ್ವಿಕತೆಯನ್ನು ಓದಿಕೊಳ್ಳಬೇಕು” ಎಂದು ಅವರು ತಿಳಿಸಿದರು.

ಸುಧಾಕರ್ ವೇದಿಕೆ ನೋಡಿಕೊಂಡು ಬದಲಾಗುತ್ತಾರೆ: ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್‌ನ ಯುವ ನಾಯಕ, ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಸದನ ಒಳಗೆ ಹಾಗೂ ಹೊರಗೆ ದಿಟ್ಟವಾಗಿ ವಿರೋಧ ಪಕ್ಷದ ಕೆಲಸವನ್ನು ನಿರ್ವಹಿಸುತ್ತಿರುವವರು. ಸುಧಾಕರ್ ಹೇಳಿಕೆಗೆ ಪ್ರಿಯಾಂಕ್ ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದು, “ಸುಧಾಕರ್ ಅವರು ವೇದಿಕೆ ನೋಡಿಕೊಂಡು ನಾಲಿಗೆ ಬದಲಿಸುತ್ತಾರೆ ಅನಿಸುತ್ತದೆ. ಯಾಕೆಂದರೆ ಈ ಮೊದಲು ಬುದ್ಧನ ಬಗ್ಗೆ ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದರು. ಕೇಸರೀಕರಣವಾದ ತಕ್ಷಣ ದಶಾವತಾರಕ್ಕೆ ಇಳಿದಿದ್ದಾರೆ” ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆ

“ಸುಧಾಕರ್ ಅವರು ಬುದ್ಧನ ಕುರಿತು ಆರ್‌ಎಸ್‌ಎಸ್ ಇತಿಹಾಸ ಹೇಳುತ್ತಿದ್ದಾರೆ. ವೈದಿಕ ಧರ್ಮವನ್ನು ಬಿಟ್ಟು ಹೊರಗೆ ಹೋಗುತ್ತಿದ್ದವರನ್ನು ತಡೆಯುವುದಕ್ಕಾಗಿ ನೀವು ಕೂಡ ನಮ್ಮವರೇ ಎಂದು ಬುದ್ಧನನ್ನು ಅವತಾರ ಪುರುಷನನ್ನಾಗಿ ಮಾಡಲಾಯಿತು. ಸುಧಾಕರ್ ಅವರಿಗೆ ಬುದ್ಧ ಧರ್ಮದ ಕುರಿತು ಬಹಳ ಕಡಿಮೆ ಜ್ಞಾನವಿದೆ. ಸಂಘ ಪರಿವಾರದವರು ಫೇಸ್‌ಬುಕ್, ವಾಟ್ಸ್‌ಆಪ್ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವುದನ್ನೇ ಜ್ಞಾನ ಅಂದುಕೊಂಡಿದ್ದಾರೇನೋ” ಎಂದು ಪ್ರಿಯಾಂಕ್ ಅನುಮಾನ ವ್ಯಕ್ತಪಡಿಸಿದರು.

“ದೇಶದ ಇತಿಹಾಸವನ್ನು ಸರಿಯಾಗಿ ಓದಿದವರು ಬುದ್ಧನನ್ನು ವಿಷ್ಣುವಿನ ಅವತಾರ ಎಂದು ಹೇಳುವುದಿಲ್ಲ. ನಾನು ದೇವರಲ್ಲ, ನಿಮ್ಮಂತೆ ಮನುಷ್ಯ ಎಂದು ಬುದ್ಧನೇ ಹೇಳಿಕೊಂಡಿದ್ದಾನೆ. ಅವತಾರಗಳಲ್ಲಿ ಬುದ್ಧನಿಗೆ ನಂಬಿಕೆಯೇ ಇರಲಿಲ್ಲ. ಧಮ್ಮವನ್ನು ಅಧ್ಯಯನ ಮಾಡಿದರೆ ಇದು ತಿಳಿಯುತ್ತದೆ” ಎಂದು ತಿಳಿಸಿದರು.

ಎಲ್ಲಿಯ ಬೌದ್ಧತ್ವ, ಎಲ್ಲಿಯ ಬ್ರಾಹ್ಮಣತ್ವ: ಮಾವಳ್ಳಿ ಶಂಕರ್

ದಲಿತ ಸಂಘರ್ಷ ಸಮಿತಿಯ ದಿಟ್ಟ ದನಿ ಮಾವಳ್ಳಿ ಶಂಕರ್ ಪುರಾಣಗಳ ಉದ್ದೇಶಗಳನ್ನು ನ್ಯಾಯಪಥದೊಂದಿಗೆ ವಿವರಿಸಿದರು. “ಬುದ್ಧನನ್ನು ಬ್ರಾಹ್ಮಣಶಾಹಿಯೊಳಗೆ ಎಳೆದುಕೊಳ್ಳಲು ಅವತಾರದ ಕಥೆ ಕಟ್ಟಿದ್ದಾರೆ. ಅದು ಸಾಧ್ಯವೇ ಇಲ್ಲ. ಬುದ್ಧತತ್ವಕ್ಕೂ ಬ್ರಾಹ್ಮಣತ್ವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬ್ರಾಹ್ಮಣಧರ್ಮದಲ್ಲಿ ಜಾತಿ ಪದ್ಧತಿ, ಮೇಲು-ಕೀಳು ತರತಮವೇ ಮುಖ್ಯವಾಗಿದೆ” ಎಂದು ಶಂಕರ್ ತಿಳಿಸಿದರು.

ಮಾವಳ್ಳಿ ಶಂಕರ್

“ಬೌದ್ಧಧರ್ಮದಲ್ಲಿ ಜಾತಿ ಪದ್ಧತಿ ಇಲ್ಲ. ಇಲ್ಲಿ ನೈತಿಕತೆಯೇ ಆಧಾರ. ಬುದ್ಧ ಮೌಢ್ಯವನ್ನು ಒಪ್ಪುವುದಿಲ್ಲ. ಪ್ರಶ್ನಿಸದೆ ಯಾವುದನ್ನೂ ಸ್ವೀಕರಿಸಬೇಡಿ ಎಂದಿದ್ದಾನೆ. ವೈದಿಕ ಧರ್ಮದಲ್ಲಿ ಬರುವ ಎಲ್ಲ ಅವತಾರಗಳು ಬ್ರಾಹ್ಮಣರ ವಿರುದ್ಧ ಬಂಡೆದ್ದವರನ್ನು ಕೊಲ್ಲುವುದಕ್ಕೆ ಹೂಡಿದ್ದ ಸಂಚಿನ ಕಥೆಗಳಾಗಿವೆ. ಬಲಿ ಚಕ್ರವರ್ತಿ, ನರಕಾಸುರ, ಮಹಿಷಾಸುರ ಥರದ ಮೂಲ ನಿವಾಸಿಗಳನ್ನು ಕೊಂದ ಕಥೆಗಳನ್ನು ಪುರಾಣಗಳು ಹೇಳುತ್ತವೆ” ಎಂದರು.

ಸುಧಾಕರ್ ಫ್ಯೂಡಲ್ ಮನಸ್ಥಿತಿ ತೋರಿಸಿದ್ದಾರೆ: ಎನ್.ವೆಂಕಟೇಶ್

ಹಿರಿಯ ದಲಿತ ನಾಯಕ, ದಸಂಸ ಸಂಸ್ಥಾಪಕರಲ್ಲಿ ಒಬ್ಬರಾದ ಎನ್.ವೆಂಕಟೇಶ್ ಮಾತನಾಡಿ, “ಸುಧಾಕರ್ ಮಾತನಾಡಿರುವ ರೀತಿ ಫ್ಯೂಡಲ್ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

“ಡಾ.ಬಿ.ಆರ್ ಅಂಬೇಡ್ಕರ್ ಅವರು ಬೌದ್ಧಧರ್ಮವನ್ನು ಸ್ವೀಕರಿಸುವ ಮೂಲಕ ಹಿಂದೂಧರ್ಮವನ್ನು ತ್ಯಜಿಸಿದರು. ಹಿಂದೂಧರ್ಮ ಅಸ್ಪೃಶ್ಯತೆ, ಜಾತಿ ಪದ್ಧತಿಯಿಂದ ಕೂಡಿದೆ. ಅವಮಾನದಿಂದ ಮುಂದುವರಿಯಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿರುವ ಧಮ್ಮವನ್ನು ಒಪ್ಪಿಕೊಳ್ಳುವ ಮೂಲಕ ನಾವು ನಮ್ಮದೇ ಆದ ಧಮ್ಮವನ್ನು ಕಟ್ಟಿಕೊಳ್ಳಬೇಕು ಎಂಬ ದಾರಿಯನ್ನು ಬಾಬಾ ಸಾಹೇಬರು ತೋರಿಸಿದರು” ಎಂದು ಸ್ಮರಿಸಿದರು.

ಎನ್.ವೆಂಕಟೇಶ್

“ಸ್ಪಷ್ಟನೆ ನೀಡುವುದಾಗಿ ವಿಡಿಯೊ ಬಿಡುಗಡೆ ಮಾಡಿರುವ ಸುಧಾಕರ್, ಅಲ್ಲಿಯೂ ಪಶ್ಚಾತ್ತಾಪದ ಮನೋಭಾವವನ್ನು ಹೊಂದಿಲ್ಲ. ಸುಧಾಕರ್ ರಾಜೀನಾಮೆ ನೀಡಬೇಕು ಅಥವಾ ಬಹಿರಂಗವಾಗಿ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದರು.


ಇದನ್ನೂ ಓದಿ: ಬೌದ್ಧಧರ್ಮವು ಹಿಂದೂ ಧರ್ಮದ ಒಂದು ಶಾಖೆ: ಸಚಿವ ಡಾ.ಕೆ.ಸುಧಾಕರ್‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...