Homeಕವನಮರೆವಿಗೆ ಎದುರಾಗಿ.. ಯುದ್ಧ ವಿರೋಧಿ ಪದ್ಯಗಳು

ಮರೆವಿಗೆ ಎದುರಾಗಿ.. ಯುದ್ಧ ವಿರೋಧಿ ಪದ್ಯಗಳು

- Advertisement -
- Advertisement -

1.

ನನ್ನ ಮಗಳು,
ಅವಳ ಸೈಕಲ್‌ನ ಹ್ಯಾಂಡಲ್ ನಡುವೆ ಕಟ್ಟಿದ್ದ
ಜೇಡರ ಬಲೆಯನ್ನು ಕತ್ತರಿಸಿ
ಆ ಜೇಡರ ಹುಳುವನ್ನು ಘಾಸಿ ಮಾಡಲು
ಸುತರಾಂ ಸಿದ್ಧಳಾಗಲಿಲ್ಲ.

ಎರಡು ವಾರ ಕಾಯ್ದಳು
ಜೇಡ ತಾನೇತಾನಾಗಿ
ಆ ಜಾಗ ಖಾಲೀ ಮಾಡುವ ತನಕ.

ನಾನು ಅವಳಿಗೆ ಬುದ್ಧಿ ಹೇಳಿದೆ.
ಅಲ್ಲ ಮಗಳೇ,
ನೀನು ಆ ಬಲೆಯನ್ನು ಕತ್ತರಿಸಿಬಿಟ್ಟಿದ್ದರೆ
ಜೇಡಕ್ಕೆ ಗೊತ್ತಾಗುತ್ತಿತ್ತು
ಆ ಜಾಗ ಅದರ ಮನೆಯಲ್ಲವೆಂದು,
ಮತ್ತು ನೀನು ಸೈಕಲ್ ಕೂಡ ಓಡಾಡಿಸಬಹುದಿತ್ತು.
ಮಗಳು ಕಣ್ಣು ಪಿಳುಕಿಸುತ್ತ….

ಅಪ್ಪಾ
ಹೀಗೆ ಮಾಡುವುದರಿಂದಲೇ ಅಲ್ವಾ
ಜನ, ರೆಫ್ಯೂಜಿಗಳಾಗೋದು?

ಫಾಡಿ ಜೂಡ,
ಪ್ಯಾಲೆಸ್ತೇನಿಯನ್-ಅಮೆರಿಕನ್ ಕವಿ

******

2.

“ನಾವು ರಿಯಲಿಸ್ಟಿಕ್ ಆಗಿ ಯೋಚಿಸಬೇಕು”
ಎಂದು ರಾಜಕಾರಣಿಗಳು ಎಚ್ಚರಿಕೆಯಿಂದ
ಗಂಭೀರವಾಗಿ ಮಾತಾಡುವಾಗ,
ಬಹುತೇಕ ಅವರು, ಸೋತು ಸುಣ್ಣವಾಗಿದ್ದಾರೆ
ಆದ್ದರಿಂದಲೇ ಅವರು ’ಸಮಾಧಾನ ಪ್ರಿಯರು’

ಆದರೆ, ಇದೇ ರಾಜಕಾರಣಿಗಳು
ಮೌಲ್ಯ, ಹೆಮ್ಮೆ ಮುಂತಾದವುಗಳ ಬಗ್ಗೆ
ಮಾತನಾಡಲು ಶುರು ಮಾಡಿದರೆಂದರೆ,
ಗಮನಿಸಿ,
ಈಗಾಗಲೇ ಅವರ ಜನರಲ್‌ಗಳು
ನಕ್ಷೆಯ ಮೇಲೆ
ಏನೋ ಗುರುತು ಮಾಡುತ್ತಿದ್ದಾರೆ.

ಡಬ್ಲ್ಯು ಎಚ್ ಆಡೆನ್ (1907-1973),
ಬ್ರಿಟಿಷ್-ಅಮೆರಿಕನ್ ಕವಿ

******

3

ಕ್ರೂರಿಯೊಬ್ಬನ ಗೋರಿಯ ಮೇಲಿನ ಬರಹ

ಕೆಲಸದಲ್ಲಿ ಭಾರೀ ಅಚ್ಚುಕಟ್ಟು
ಒಂದು ಕೆಲಸ ಹಿಡಿದರೆ, ಮುಗಿಸುವವರೆಗೂ
ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.
ಪದ್ಯ ಅಂತೂ ಅದ್ಭುತ
ಎಂಥ ಸಾಮಾನ್ಯರೂ ಮೈಮರೆತು ತಲೆದೂಗುತ್ತಾರೆ.
ಮನುಷ್ಯ ಜಾತಿಯ ಅವಿವೇಕದ ಇತಿಹಾಸವನ್ನು
ಅರೆದು ಕುಡಿದವರಂತೆ ಮಾತನಾಡುತ್ತಾನೆ.
ಸೈನ್ಯ, ಯುದ್ಧನೌಕೆಗಳ ಬಗ್ಗೆ ಅಪಾರ ತಿಳಿವಳಿಕೆ.
ಪಾರ್ಲಿಮೆಂಟಲ್ಲಿ ತಮಾಷೆ ಮಾಡಿದಾಗ
ಗೌರವಾನ್ವಿತ ಸದಸ್ಯರು
ಬೆಂಚು ಕುಟ್ಟಿ, ಗಹಗಹಿಸಿ ನಗುತ್ತಾರೆ.
ಹಾಗು
ಇವನು ಕಣ್ಣೀರು ಹಾಕಿದಾಗ
ಪುಟ್ಟ ಮಕ್ಕಳು
ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ.

ಡಬ್ಲ್ಯು ಎಚ್ ಆಡೆನ್ (1907-1973), ಬ್ರಿಟಿಷ್-ಅಮೆರಿಕನ್ ಕವಿ

*********

4

ತಾವೋ ಮಾರ್ಗದಲ್ಲಿ
ಹತೋಟಿಗೆ ಬಲಪ್ರಯೋಗ,
ಗೆಲುವಿಗೆ ಆಯುಧ ನಿಷಿದ್ಧ.
ಸೈನಿಕರು ಓಡಾಡಿದಲ್ಲೆಲ್ಲ

ಬೆಳೆದು ನಿಂತಿವೆ ಮುಳ್ಳಿನ ಪೊದೆಗಳು.
ಹಿಂಸೆ ಅಂಟು ರೋಗ
ಉದ್ದೇಶ ಎಷ್ಟೇ ಒಳ್ಳೆಯದಾದರೂ.

ನಿಜದ ನಾಯಕ
ಯುದ್ಧದ ನಂತರ ನೆಲೆಗೊಳ್ಳುವ
ಶಾಂತಿಯ ಬುಡದಲ್ಲಿ ಜ್ವಾಲಾಮುಖಿ ಕಾಣಬಲ್ಲ.
ಅದಕ್ಕೇ ಅವನಿಗೆ ಯುದ್ಧದ ಬಗ್ಗೆ ಹೆಮ್ಮೆಯಿಲ್ಲ.

ಅವನಿಗೆ ತನ್ನ ಬಗ್ಗೆ ನಂಬಿಕೆ
ಆದ್ದರಿಂದ ಬೇರೆಯವರ ಮನ ಒಲಿಸುವುದಿಲ್ಲ,

ಅವನಿಗೆ ತನ್ನ ಬಗ್ಗೆ ಸಮಾಧಾನ
ಆದ್ದರಿಂದ ಬೇರೆಯವರ ಒಪ್ಪಿಗೆ ಬೇಕಿಲ್ಲ,

ಅವನು ತನ್ನನ್ನು ಒಪ್ಪಿಕೊಂಡಿರುವದರಿಂದ
ಜಗತ್ತು ಅವನನ್ನು ಒಪ್ಪಿಕೊಂಡಿದೆ.

ಲಾವೋತ್ಸೆ (ಚೀನಾದ ಪ್ರಾಚೀನ ಕವಿ)

*******

5

ರೆಫ್ಯೂಜಿ ಕ್ಯಾಂಪಿನ ನಾಲ್ಕು ಕವಿತೆಗಳು
(ಅ)
ಅವಳ ಹೆಸರು ಯಾರಿಗೂ ಗೊತ್ತಿಲ್ಲ,
ಮರದ ದಿಣ್ಣೆಯ ಮೇಲೆ ಕುಳಿತಿರುವ
ಆ ಹೆಂಗಸನ್ನು ಯಾರೂ
ಅವಳ ಹೆಸರಿನಿಂದ ಕೂಗುವುದೇ ಇಲ್ಲ.

ಗರಗಸದಿಂದ ಕತ್ತರಿಸಲ್ಪಟ್ಟ
ಮಗುವಿನ ತಾಯಿ ಎಂದೇ

ಗುರುತಿಸುತ್ತಾರೆ ಅವಳನ್ನು ಇಲ್ಲಿ ಎಲ್ಲ
ಈ ರೆಫ್ಯೂಜಿ ಕ್ಯಾಂಪ್‌ನಲ್ಲಿ.

———

(ಆ)

ಅವರು, ತಮ್ಮ ಹಳ್ಳಿ, ಮನೆ, ಒಲೆ,
ಒಲೆ ಮೇಲಿನ ರೊಟ್ಟಿ ಎಲ್ಲವನ್ನೂ
ಇದ್ದಕ್ಕಿದ್ದ ಹಾಗೆಯೇ ಬಿಟ್ಟು
ಓಡಿ ಬಂದ ರಾತ್ರಿಯ

ಹಿಂದಿನ ರಾತ್ರಿ
ಯಾರು ತಟ್ಟಿದ್ದರು ಅವರ ಮನೆಯ ಬಾಗಿಲನ್ನ?

ಯಾಕೆ ಅವರು ತಮ್ಮ ಮನೆಯ
ಬಾಗಿಲು, ಕಿಟಕಿಗಳನ್ನ
ಆಮೇಲೆ ಯಾರಿಗೂ ತೆರೆಯಲೇ ಇಲ್ಲ?

ಯಾಕೆ ಅವರು ಆಮೇಲೆ
ತಮ್ಮ ಮನೆಯ ಹೆಣ್ಣುಮಕ್ಕಳ ಕಣ್ಣಲ್ಲಿ
ಕಣ್ಣಿಟ್ಟು ನೋಡಲೇ ಇಲ್ಲ
ಎನ್ನುವುದನ್ನ ಹೇಳುವುದಕ್ಕಿಂತ ಮೊದಲೇ….

ಭಾರಿ ಚಿನಾರ್ ಮರ
ಕರ್ಕಶವಾಗಿ ಸದ್ದು ಮಾಡುತ್ತಾ
ನೆಲಕ್ಕುರುಳಿತು.
ಅವರಿಗೆ ಹೇಳಬೇಕಾದ್ದನ್ನು ಹೇಳಲಿಕ್ಕಾಗಲೇ ಇಲ್ಲ.

——-

(ಇ)

ತನ್ನ ಟೆಂಟ್ ಹೊರಗೆ
ಆಟ ಆಡುತ್ತಿದ್ದ
ಆ ಪುಟ್ಟ ಹುಡುಗಿ
ಹತ್ತಾರು ಬಾರಿ ಕರೆದರೂ
ನಮ್ಮತ್ತ ಕಣ್ಣೆತ್ತಿ ನೋಡಲಿಲ್ಲ.

ಆಕೆ ಓಡಿ ಹೋಗಿ
ತನ್ನ ಟೆಂಟ್‌ನ ಬಾಗಿಲಲ್ಲಿ
ಎರಡೂ ಬದಿಯ ಹಗ್ಗ ಜಗ್ಗಿ ಹಿಡಿದು
ಅಡ್ಡ ನಿಂತುಕೊಂಡಳು,
ಇನ್ನು ಮುಂದೆ
ಯಾರನ್ನೂ ಒಳಗೆ ಬಿಡಲಾರೆ ಎಂಬಂತೆ.

ಅವಳು ಗುರುತಿಸದ
ಯಾವ ಮುಖಕ್ಕೂ
ಇನ್ನು ಅವಳ ಹೊಸಮನೆಯಲ್ಲಿ
ಜಾಗವಿಲ್ಲ.

———-

(ಈ)

ಒಂದು ಟೆಂಟ್‌ನಿಂದ
ಇನ್ನೊಂದು ಟೆಂಟ್‌ಗೆ,
ಎರಡೇ ಎರಡು ಹೆಜ್ಜೆ ದಾಟಿ
ನವ ವಧು
ಗಂಡನ ಮನೆಗೆ ಬಂದಿದ್ದಾಳೆ.

ನಿನ್ನೆಯತನಕ
ಗುರುತು ಪರಿಚಯವೇ ಇಲ್ಲದ
ಎರಡು ಪರಿವಾರಗಳು
ಇಂದು
ಮದುವೆಯ ಹಾಡು ಹಾಡುತ್ತಾ
ಜೋರಾಗಿ ಗದ್ದಲ ಮಾಡುತ್ತಿವೆ,
ಗುಂಡಿನ ಸದ್ದಿನ ಸುದ್ದಿ
ಒಂದಿಷ್ಟು ಹೊತ್ತಾದರೂ
ಕಿವಿ ಮೇಲೆ ಬೀಳದಂತೆ.

ಚಹಾದ ಪಾತ್ರೆಯಲ್ಲಿ ವಿಧಿಯಿಲ್ಲದೇ

ಕುದಿಯುತ್ತಿರುವ ಬಣ್ಣ ಬಣ್ಣದ ಮಸಾಲೆ.
ವಧುವಿನ ಮೊದಲರಾತ್ರಿ.

ಕಲ್ಪನಾ ಸಿಂಗ್ ಚಿಟ್ನಿಸ್,
ಭಾರತೀಯ-ಅಮೆರಿಕನ ಕವಿ

***********

6

ಮರಿ,
ತೊಗೋ ಈ ಕಿತ್ತಳೆ ಹಣ್ಣು
ಗಫೂರ್‌ನ ಕೊಲ್ಲಬೇಡ
ಅವ ನನ್ನ ಮೊಮ್ಮಗ.

ಮರಿ,
ತೊಗೋ ಈ ಸೇಬು
ಇಸ್ಮಾಯಿಲ್‌ನ ಬಿಟ್ಟುಬಿಡು

ಆವಾ ನನ್ನ ಸಂಬಂಧಿ.

ಮರಿ,
ಈ ಆಲಿವ್ಸ್ ತೊಗೋ
ನಿಸ್ಸಾರ್‌ಗೆ ಏನು ಮಾಡಬೇಡ
ಅವನು ಒಳ್ಳೆಯ ಹುಡುಗ.

ಕೊಲ್ಲಲೇಬೇಕಾದರೆ
ಈ ಮುದುಕಿಯನ್ನು ಕೊಲ್ಲು
ಮಾತು ಸತ್ತ ಊರಿನಲ್ಲಿ
ಈ ಬಾಯ್ಬಡುಕಿಗೇನು ಕೆಲಸ?

ದೇವರನ್ನೂ ಕೊಲ್ಲು
ಅವನಿಗೂ ಬಂದೂಕಿನ ಹೊಗೆ
ಆಗಿ ಬರುವುದಿಲ್ಲ.

ನನ್ನ ಭಾಷೆ
ಅವಳ ರಕ್ತದೊಂದಿಗೆ ಚಿಮ್ಮಿದೆ,
ಸಿಡಿದ ಗುಂಡಿನ ಚೂರುಗಳು

ನನ್ನ ಅಕ್ಷರಗಳನ್ನು ಘಾಸಿ ಮಾಡಿವೆ.
ನನ್ನ ಕವಿತೆಯಿಂದ ರಕ್ತ ಸೋರುತ್ತಿದೆ.

ಕಟಕಟೆಯಲ್ಲಿ ನಿಂತ ಕವಿತೆ
ವಿಷದ ಗಾಳಿಯನ್ನು
ಸಹಿಸಿಕೊಳ್ಳದೆ ಹೋದರೆ ಹೇಗೆ?

ಕೆ. ಸಚ್ಚಿದಾನಂದನ್, ಕೇರಳ ಮೂಲದ ಕವಿ

7

ವಿಯೆಟ್ನಾಂ
“ಮಗಳೇ, ನಿನ್ನ ಹೆಸರೇನು”
“ನನಗೆ ಗೊತ್ತಿಲ್ಲ”

“ಎಷ್ಟು ವಯಸ್ಸು? ಯಾವೂರು?”
“ನನಗೆ ಗೊತ್ತಿಲ್ಲ”

“ಯಾಕೆ ಆ ಬಿಲವನ್ನ ಮತ್ತೆ ಅಗೆಯುತ್ತಿದ್ದೀಯ?”
“ನನಗೆ ಗೊತ್ತಿಲ್ಲ”

“ಎಷ್ಟು ದಿನಗಳಾಯ್ತು ಹೀಗೆ ಅಡಗಿಕೊಂಡು?”
“ನನಗೆ ಗೊತ್ತಿಲ್ಲ”

“ನನ್ನ ಬೆರಳನ್ನ ಯಾಕೆ ಕಚ್ಚಿದೆ?”
“ನನಗೆ ಗೊತ್ತಿಲ್ಲ”

“ನಮ್ಮಿಂದ ಅಪಾಯ ಇಲ್ಲದಿರುವುದು ನಿನಗೆ ಗೊತ್ತಿಲ್ಲವೆ?”
“ನನಗೆ ಗೊತ್ತಿಲ್ಲ”

“ನೀನು ಯಾರ ಪರವಾಗಿರುವೆ?”
“ನನಗೆ ಗೊತ್ತಿಲ್ಲ”

“ಇದು ಯುದ್ಧ, ನೀನು ಯಾರನ್ನಾದರೂ ಆಯ್ಕೆ ಮಾಡಲೇ ಬೇಕು”
“ನನಗೆ ಗೊತ್ತಿಲ್ಲ”

“ನಿನ್ನ ಹಳ್ಳಿ ಇನ್ನೂ ಇದೆಯಾ?”
“ನನಗೆ ಗೊತ್ತಿಲ್ಲ”

“ಈ ಹುಡುಗ, ಹುಡುಗಿ ನಿನ್ನ ಮಕ್ಕಳಾ?”
“ಹೌದು”

ವಿಸ್ವಾವಾ ಸಿಂಬೋರ್‍ಸ್‌ಕ, ಪೋಲಿಶ್ ಕವಿ

ಸಂಗ್ರಹ ಮತ್ತು ಕನ್ನಡ ಅನುವಾದ: ಚಿದಂಬರ ನರೇಂದ್ರ


ಇದನ್ನೂ ಓದಿ: ಪ್ರತಿರೋಧವೊಡ್ಡದೆ ನನ್ನೊಳಗಿನ ಕವಿತೆ ಪೂರ್ಣವಾಗುವುದೇ ಇಲ್ಲ: ಮಿಸ್ರಿಯಾ. ಐ.ಪಜೀರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...