ಗ್ರಾಮಸ್ಥರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ 8 ಮಕ್ಕಳು ಸೇರಿ 22 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಮಾಘ ಪೂರ್ಣಿಮೆಯ ನಿಮಿತ್ತ ಪುಣ್ಯ ಸ್ನಾನಕ್ಕಾಗಿ ಕದರ್ಗಂಜ್ ಎಂಬಲ್ಲಿನ ಗಂಗಾನದಿಯೆಡೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ವರದಿಗಳು ಹೇಳಿವೆ.
ದುರ್ಘಟನೆಯಲ್ಲಿ ಎಂಟು ಮಕ್ಕಳು, ಏಳು ಮಹಿಳೆಯರು ಸೇರಿದಂತೆ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲಿಘರ್ ವ್ಯಾಪ್ತಿಯ ಐಜಿ ಶಲಭ್ ಮಾಥುರ್ ಆರಂಭದಲ್ಲಿ ಮಾಹಿತಿ ನೀಡಿದ್ದರು. ಬಳಿಕ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮಾಥುರ್ ಪ್ರಕಾರ, ಕಾರೊಂದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾದಾಗ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿದ್ದು, ಅದರ ಟ್ರಾಲಿ ಕೆಸರು ತುಂಬಿದ್ದ ಕೆರೆಗೆ ಉರುಳಿದೆ.
ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೃತರ ಸಂಬಂಧಿಕರಿಗೆ ₹2ಲಕ್ಷ ಮತ್ತು ಗಾಯಗೊಂಡವರಿಗೆ ₹50ಸಾವಿರ ಪರಿಹಾರ ಘೋಷಿಸಿದ್ದಾರೆ.
ಅಪಘಾತದಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದು, ಅವರಿಗೆ ತ್ವರಿತ ಮತ್ತು ಸಮರ್ಪಕ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿಗಳು ಕಸ್ಗಂಜ್ ಜಿಲ್ಲೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ತುರ್ತಾಗಿ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ : Explained: ಭಾರತೀಯ ವಿದ್ಯಾರ್ಥಿನಿಯ ಕೊಂದ ಯುಎಸ್ ಅಧಿಕಾರಿ ವಿರುದ್ಧ ಕ್ರಮ ಯಾಕಿಲ್ಲ?