ಮುಂಬೈನಲ್ಲಿ ಹೌಸಿಂಗ್ ಸೊಸೈಟಿಯಲ್ಲಿ ಆಯೋಜಿಸಲಾಗಿದ್ದ ‘ನಕಲಿ ವ್ಯಾಕ್ಸಿನೇಷನ್ ಕ್ಯಾಂಪ್’ ಪ್ರಕರಣದಲ್ಲಿ ನಾಲ್ಕು ಜನರನ್ನು ಬಂಧಿಸಲಾಗಿದೆ. ಸ್ಥಳೀಯ ನಿವಾಸಿಗಳ ಹೇಳಿಕೆಗಳನ್ನು ದಾಖಲಿಸಿ, ಪ್ರಕರಣ ದಾಖಲಿಸಿದ್ದ ಮುಂಬೈ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಚಲನಚಿತ್ರ ನಿರ್ಮಾಪಕ ರಮೇಶ್ ತೌರಾನಿ ಕೂಡ ಹಗರಣದಲ್ಲಿ ಮೋಸವಾಗಿದೆ. ನಾನು ನಕಲಿ ಲಸಿಕೆ ಕ್ಯಾಂಪ್ನ ಸಂತ್ರಸ್ತ ಎಂದು ಹೇಳಿಕೊಂಡಿದ್ದಾರೆ. ಏಕೆಂದರೆ, ತಮ್ಮ ಉದ್ಯೋಗಿಗಳಿಗಾಗಿ ರಮೇಶ್ ಆಯೋಜಿಸಿದ್ದ ವ್ಯಾಕ್ಸಿನೇಷನ್ ಕ್ಯಾಂಪ್ ಇದೇ ರೀತಿಯ ದಂಧೆಗೆ ಬಲಿಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.
ಟಿಪ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥರಾಗಿರುವ ರಮೇಶ್ ತೌರಾನಿ, ಮೇ 30 ಮತ್ತು ಜೂನ್ 3 ರಂದು ತಮ್ಮ ಸಂಸ್ಥೆಯ 365 ಉದ್ಯೋಗಿಗಳಿಗೆ ಲಸಿಕಾ ಶಿಬಿರವನ್ನು ಏರ್ಪಡಿಸಿದ್ದರು. ಆದರೆ ಇಲ್ಲಿಯವರೆಗೂ ಇನ್ನೂ ಲಸಿಕೆ ಪ್ರಮಾಣಪತ್ರವನ್ನು ಪಡೆದಿಲ್ಲ.
ಇದನ್ನೂ ಓದಿ: ತಬ್ಲೀಘಿ ಜಮಾತ್ ಗುರಿಯಾಗಿಸಿ ಕಾರ್ಯಕ್ರಮ: ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡಕ್ಕೆ 1.5 ಲಕ್ಷ ದಂಡ
“ನಾವು ಇನ್ನೂ ಪ್ರಮಾಣಪತ್ರಗಳಿಗಾಗಿ ಕಾಯುತ್ತಿದ್ದೇವೆ. ಪ್ರಮಾಣಪತ್ರಗಳಿಗಾಗಿನನ್ನ ಕಚೇರಿಯಿಂದ ಎಸ್ಪಿ ಈವೆಂಟ್ನ ಸಂಜಯ್ ಗುಪ್ತಾ ಅವರನ್ನು ಸಂಪರ್ಕಿಸಿದಾಗ, ಶನಿವಾರ (ಜೂನ್ 12) ರ ವೇಳೆಗೆ ಪ್ರಮಾಣಪತ್ರಗಳು ಸಿಗಲಿವೆ ಎಂದು ಹೇಳಿದ್ದರು. ಆದರೆ, ಇನ್ನೂ ನಮಗೆ ಪ್ರಮಾಣ ಪತ್ರ ದೊರೆತಿಲ್ಲ. ಮುಂಬೈನ ಕೋಕಿಲಾಬೆನ್ ಧಿರುಬಾಯಿ ಅಂಬಾನಿ ಆಸ್ಪತ್ರೆಯಿಂದ ಲಸಿಕೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ನಮಗೆ ತಿಳಿಸಿದ್ದರು” ಎಂದು ನಿರ್ಮಾಪಕ ರಮೇಶ್ ತೌರಾನಿ ಹೇಳಿದ್ದಾರೆ.
’ನಮ್ಮ ಸಂಸ್ಥೆಯ 356 ಜನರಿಗೆ ಲಸಿಕೆ ನೀಡಲಾಗಿದೆ. ಪ್ರತಿ ಡೋಸ್ಗೆ 1,200 ರೂಪಾಯಿ ಪಾವತಿಸಿದ್ದೇವೆ. ಇದರ ಜೊತೆಗೆ ಹೆಚ್ಚುವರಿ ಜಿಎಸ್ಟಿ ಹಣವನ್ನು ನೀಡಲಾಗಿದೆ. ಆದರೆ, ಈಗ ಚಿಂತೆಗೆ ಈಡು ಮಾಡಿರುವುದು ಹಣವಲ್ಲ. ಲಸಿಕೆ ಎಂದು ನಮಗೆ ಏನು ನೀಡಿದ್ದಾರೆ ಎಂಬ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಇದು ನಿಜವಾದ ಕೋವಿಶೀಲ್ಡ್ ಅಥವಾ ಯಾವುದೋ ಲವಣಯುಕ್ತ ನೀರೇ? ಎಂಬ ಬಗ್ಗೆ ಅನುಮಾನ ಬಂದಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಯನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಮೂಲಕ ವ್ಯಾಕ್ಸಿನೇಷನ್ ಶಿಬಿರವನ್ನು ಆಯೋಜಿಸಿದ ಕೆಲವು ವ್ಯಕ್ತಿಗಳು ಮೋಸ ಮಾಡಿದ್ದಾರೆ. ನಕಲಿ ಲಸಿಕೆ ನೀಡಿದ್ದಾರೆ ಎಂದು ಕಂಡಿವಲ್ಲಿ ಉಪನಗರದಲ್ಲಿನ ವಸತಿ ಸಂಘವು ಪೊಲೀಸರಿಗೆ ದೂರು ನೀಡಿತ್ತು. ಕೋವಿನ್ ಪೋರ್ಟಲ್ನಲ್ಲಿ ಇವರ ಯಾವುದೇ ದಾಖಲುಗಳು ಇಲ್ಲ ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ: ಪ್ರತಿದಿನ ಭಯದಲ್ಲೇ ಮನೆಗೆ ಹೋಗುವ ನಮಗೆ, ನಮ್ಮ ಹಳ್ಳಿಗಳಲ್ಲೇ ಗೌರವವಿಲ್ಲ: ಆಶಾ ಕಾರ್ಯಕರ್ತರ ಅಳಲು