ರಾಜ್ಯದಲ್ಲಿ ಯಾವುದೇ ಕಾಮಗಾರಿಯ ಗುತ್ತಿಗೆ ಪಡೆಯಲು 40% ಕಮಿಷನ್ ನೀಡಬೇಕಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಕೆಂಪಣ್ಣನವರು ಆರೋಪಿಸಿದ್ದರು. ಆ ನಂತರ ಈ ವಿಷಯ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಈ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶ ನೀಡಿಲ್ಲ ಎಂದು ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯನವರು ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಇದೇ ವಿಷಯದ ಕುರಿತು ಜಾಗೃತ ಕರ್ನಾಟಕ ಸಂಘಟನೆಯು ಮಾರ್ಚ್ 27ರ ಭಾನುವಾರ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ.
“40% ಕಮಿಷನ್ – ಯಾರಿಗೂ ಆಘಾತ ತರದ ಭಾರೀ ಹಗರಣ: ಕರ್ನಾಟಕಕ್ಕೆ ಏನು ಕಾದಿದೆ” ಎಂಬ ಹೆಸರಿನಲ್ಲಿ ಜಾಗೃತ ಕರ್ನಾಟಕ ವೇದಿಕೆಯು ಭಾನುವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಇಸ್ಟಿಟ್ಯೂಟ್ ಆಫ್ ಅಗ್ರಿಕಲ್ಟರ್ ಟೆಕ್ನಾಲಾಜಿಸ್ಟ್ (ಐಎಐ ) ನಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.
ಭ್ರಷ್ಟಾಚಾರ ನಿರ್ಮೂಲನಾ ಕ್ರಮಗಳ ಸಲಹಾಗಾರರು ಮತ್ತು ನಿವೃತ್ತ ಐಎಎಸ್ ಅಧಿಕಾರಿಗಳಾದ ಟಿ. ಅರ್. ರಘುನಂದನ್, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಡಿ. ಕೆಂಪಣ್ಣ ಮತ್ತು ಕಾರ್ಯನೀತಿ ವಿಶ್ಲೇಷಕರಾದ ಕೆ.ಸಿ. ರಘುರವರು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಆರ್. ಆಂಜನೇಯ ರೆಡ್ಡಿಯವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಾಗೃತ ಕರ್ನಾಟಕದ ಮುಖಂಡರಾದ ರಾಜಶೇಖರ್ ಅಕ್ಕಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2019 ರಿಂದ ಗುತ್ತಿಗೆ ಪಡೆಯಲು ಕಮಿಷನ್ ನೀಡುವ ಭ್ರಷ್ಟಾಚಾರದಲ್ಲಿ ಭಾರೀ ಏರಿಕೆಯಾಗಿದೆಯೆಂದು ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಕೆಂಪಣ್ಣನವರು 2021ರ ಡಿಸೆಂಬರ್ನಲ್ಲಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು. ಅಲ್ಲದೇ ರಾಜ್ಯದ ಯಾವುದೇ ಕಾಮಗಾರಿಯ ಗುತ್ತಿಗೆ ಪಡೆಯಬೇಕಾದರೆ 40% ಕಮಿಷನ್ ನೀಡಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದರು. ಈ ಕುರಿತು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದರು. ಅಷ್ಟು ಮಾತ್ರವಲ್ಲದೇ 40% ಕಮಿಷನ್ ಕೇಳುವ ಭ್ರಷ್ಟಾಚಾರ ನಿಲ್ಲದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಕೆಲಸಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಇನ್ನು ಸರ್ಕಾರ ಈ ವಿಷಯದಲ್ಲಿ ರಾಕೇಶ್ ಸಿಂಗ್ ಎಂಬುವವರ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶಿಸಿತ್ತು. ಅದನ್ನು ವಿರೋಧಿಸಿದ್ದ ಕೆಂಪಣ್ಣನವರು, “ನೀರಾವರಿ ಇಲಾಖೆಯಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದ್ದು, ಕಮಿಷನ್ ಕೇಳುತ್ತಿದ್ದಾರೆ. ಆ ಇಲಾಖೆಯ ಮುಖ್ಯಸ್ಥರನ್ನೆ ತನಿಖೆ ಮುಖ್ಯಸ್ಥರನ್ನಾಗಿ ನೇಮಿಸಿದರೆ ಪಾರದರ್ಶಕ, ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ ಎಂದು ದೂರಿದ್ದರು. ಹಾಗಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದರು.
ಈ ಹಿಂದೆ 10-15% ಇದ್ದ ಕಮಿಷನ್ ಭ್ರಷ್ಟಾಚಾರ ಈಗ 40%ಗೆ ಏರಿಕೆಯಾಗಿದೆ. ಈ ಕುರಿತು ಎಲ್ಲಾ ದಾಖಲೆಗಳು ನಮ್ಮ ಬಳಿ ಇದ್ದು, ಕೋರ್ಟ್ನಲ್ಲಿಯೂ ಇದನ್ನು ಪ್ರಶ್ನಿಸುತ್ತೇವೆ ಎಂದು ಕೆಂಪಣ್ಣನವರು ಹೇಳಿದ್ದರು.
ಇದನ್ನೂ ಓದಿ : ಕರ್ನಾಟಕದಲ್ಲಿ ಕನ್ನಡಕ್ಕೆ ಭವಿಷ್ಯವಿದೆಯೇ?