80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆ ಮಾಡಿದ್ದು, ಮೀನುಗಾರರನ್ನು ಅಟ್ಟಾರಿ-ವಾಘಾ ಗಡಿಯಲ್ಲಿ ಬಿಎಸ್ಎಫ್ ಅಧಿಕಾರಿಗಳ ಜೊತೆ ಕಳುಹಿಸಿಕೊಟ್ಟಿದ್ದಾರೆ.
3 ವರ್ಷದ ಹಿಂದೆ ಅರಬ್ಬಿ ಸಮುದ್ರದಲ್ಲಿ ಅಕ್ರಮವಾಗಿ ಗಡಿರೇಖೆ ಪ್ರವೇಶಿಸಿದ್ದ ಆರೋಪದ ಮೇಲೆ ಮೀನುಗಾರರನ್ನು ಬಂಧಿಸಲಾಗಿದ್ದು, 80 ಭಾರತೀಯ ಮೀನುಗಾರರನ್ನು ಕರಾಚಿಯ ಮಲಿರ್ ಜೈಲಿನಲ್ಲಿರಿಸಲಾಗಿತ್ತು.
ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ ಮೀನುಗಾರರಿಗೆ ತುರ್ತು ಪ್ರಯಾಣ ಪ್ರಮಾಣಪತ್ರ ನೀಡಿದೆ. ಅಟ್ಟಾರಿ-ವಾಘಾ ಗಡಿಯ ಭೂ ಸಾರಿಗೆ ಮಾರ್ಗದ ಮೂಲಕ ಎಲ್ಲಾ ಕೈದಿಗಳು ಶುಕ್ರವಾರ ರಾತ್ರಿ ಭಾರತದ ಗಡಿ ದಾಟಿದ್ದಾರೆ ಎಂದು ಪಂಜಾಬ್ನ ಪೊಲೀಸ್ ಅಧಿಕಾರಿ ಅರುಣ್ ಮಹಲ್ ಹೇಳಿದ್ದಾರೆ.
ಮೀನುಗಾರರ ವಾಪಸ್ಸಾತಿ ನಂತರ ಭಾರತೀಯ ವೈದ್ಯರ ತಂಡವು ವೈದ್ಯಕೀಯ ಪರೀಕ್ಷೆಯನ್ನು ನಡೆಸಿದೆ ಎಂದು ಅಟ್ಟಾರಿ-ವಾಘಾ ಗಡಿಯ ಜಂಟಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಹೇಳಿದ್ದಾರೆ.
ಅರೇಬಿಯನ್ ಸಮುದ್ರದಲ್ಲಿ ಕಡಲ ಗಡಿಯನ್ನು ಸರಿಯಾಗಿ ಗುರುತಿಸದ ಕಾರಣ, ಭಾರತ ಮತ್ತು ಪಾಕಿಸ್ತಾನದ ಎರಡೂ ಕಡೆಯ ಮೀನುಗಾರರು ಆಗಾಗ್ಗೆ ಬಂಧನಕ್ಕೆ ಒಳಗಾಗುತ್ತಾರೆ. ಅನೇಕ ಮೀನುಗಾರಿಕಾ ದೋಣಿಗಳು ತಮ್ಮ ನಿಖರವಾದ ಸ್ಥಳವನ್ನು ಕಂಡುಹಿಡಿಯಲು ಅಗತ್ಯವಾದ ತಂತ್ರಜ್ಞಾನವನ್ನು ಹೊಂದಿರದಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಎಎನ್ಐ ಜೊತೆ ಮಾತನಾಡಿದ ಮೀನುಗಾರರೊಬ್ಬರು, ನಾವು ಆಕಸ್ಮಿಕವಾಗಿ ಚಂಡಮಾರುತದ ವೇಳೆ ಅಂತರಾಷ್ಟ್ರೀಯ ಗಡಿಯನ್ನು ದಾಟಿದ್ದೇವೆ. ನಾವು ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದೆವು. ಈಗ ಎಲ್ಲರೂ ಹಿಂತಿರುಗಿದ್ದಾರೆ. ಇನ್ನೂ 184 ಮಂದಿ ಜೈಲಿನಲ್ಲಿದ್ದಾರೆ. ಅವರನ್ನೂ ವಾಪಸ್ ಕರೆತರುವಂತೆ ನಾನು ಸರ್ಕಾರವನ್ನು ಒತ್ತಾಯಿಸಲು ಬಯಸುತ್ತೇನೆ. ಅವರಲ್ಲಿ ಹಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು.
ನಾವು ಗಡಿ ದಾಟಿದಾಗ ನಮಗೆ ತಿಳಿದಿರಲಿಲ್ಲ. ಪಾಕಿಸ್ತಾನ ನೌಕಾಪಡೆ ಬಂದು ನಮ್ಮನ್ನು ಬಂಧಿಸಿತು. ನಾನು ಬಂದು ಸುಮಾರು 3ವರ್ಷ 3 ತಿಂಗಳಾಗಿದೆ. ನಮ್ಮ ದೋಣಿಗಳನ್ನು ಬಿಡುಗಡೆ ಮಾಡಲು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಅವು ತುಂಬಾ ದುಬಾರಿಯಾಗಿದೆ ಎಂದು ಇನ್ನೋರ್ವ ಮೀನುಗಾರ ಹೇಳಿದ್ದಾರೆ.
#WATCH | Amritsar, Punjab: 80 Indian fishermen, who were released by Pakistan, entered India via the Attari-Wagah border today pic.twitter.com/gHDqnN2dIR
— ANI (@ANI) November 10, 2023
ಇದನ್ನು ಓದಿ: ವಿಜಯೇಂದ್ರನದ್ದು ಅತ್ತೂ, ಕರೆದು ಔತಣ ಮಾಡಿಸಿಕೊಂಡ ಸ್ಥಿತಿ: ಜಗದೀಶ್ ಶೆಟ್ಟರ್