ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ತರಗತಿಗೆ ಹಾಜರಾಗಲು ಪ್ರಾಂಶುಪಾಲರು ಅವಕಾಶ ನಿರಾಕರಿಸಿದ ಕಾರಣ 11 ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗದೇ ಮನೆಗೆ ಹಿಂತಿರುಗಿದ ಘಟನೆ ಬುಧವಾರ ನಡೆದಿದೆ ಎಂದು ವರದಿಯಾಗಿದೆ.
ಸೋಮವಾರವಷ್ಟೇ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥನಾರಾಯಣ ಅವರು ಪದವಿ ಕಾಲೇಜಿಗೆ ಯಾವುದೆ ಸಮವಸ್ತ್ರ ಇಲ್ಲ, ವಿದ್ಯಾರ್ಥಿಗಳು ತಮ್ಮ ಇಷ್ಟದ ವಸ್ತ್ರಗಳನ್ನು ಧರಿಸಿಕೊಂಡು ಬರಬಹುದು ಎಂದು ಚಾಮರಾಜನಗರದಲ್ಲಿ ಮಾತನಾಡುತ್ತಾ ಹೇಳಿದ್ದರು. ಅಲ್ಲದೆ, ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಹೈಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಯ ಮಧ್ಯೆ ನೀಡಿದ್ದ ಮಧ್ಯಂತರ ಆದೇಶ, “ಕೇವಲ ದಾವೆ ಹೂಡಿದ ವಿದ್ಯಾರ್ಥಿನಿಯರು ಓದುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ” ಎಂದು ಶಿಕ್ಷಣತಜ್ಞ ನಿರಂಜನಾರಾಧ್ಯ ಹಾಗೂ ಹೈಕೋರ್ಟ್ ವಕೀಲರಾದ ಎಸ್. ಬಾಲನ್ ಅವರು ಹೇಳಿದ್ದಾರೆ. (ವಿಡಿಯೊ ನೋಡಿ)
ಈ ಮಧ್ಯೆ ಹಲವಾರು ಶಾಲಾ-ಕಾಲೇಜುಗಳು ಕೋರ್ಟ್ನ ಮಧ್ಯಂತರ ಆದೇಶವನ್ನು ತಪ್ಪಾಗಿ ತಿಳಿದುಕೊಂಡು, ತಮ್ಮ ವಿದ್ಯಾರ್ಥಿಗಳನ್ನು ಮಾಧ್ಯಮಗಳ ಕೈಗೆ ಬಿಟ್ಟುಕೊಡುತ್ತಿವೆ. ಇದರ ವಿರುದ್ದ ಕೂಡಾ ದೇಶದಾದ್ಯಂತ ಗಣ್ಯರು ಧ್ವನಿ ಎತ್ತಿದ್ದು, ಇಂತಹ ಜನರ ವಿರುದ್ದ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ವಿಟ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 11 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ತರಗತಿಗೆ ಹೋಗಲು ಮುಂದಾಗಿದ್ದರು. ಆದರೆ ಪ್ರಾಂಶುಪಾಲರಾದ ಶ್ರೀಜಾ ಅವರು ಹಿಜಾಬ್ ಧರಿಸಿ, ತರಗತಿ ಒಳಗಡೆ ಪ್ರವೇಶಿಸಬಾರದು, ಈ ಬಗ್ಗೆ ನ್ಯಾಯಾಲಯದ ಆದೇಶ ಕೂಡ ಇದೆ ಎಂದಿದ್ದಾರೆ ಎಂದು ಸ್ಥಳೀಯ ವೆಬ್ಸೈಟ್ ವರದಿ ಮಾಡಿದೆ. ಪ್ರಾಂಶುಪಾಲರು ತರಗತಿಗೆ ಅವಕಾಶ ನೀಡದ ಕಾರಣ ವಿದ್ಯಾರ್ಥಿಗಳು ನೇರವಾಗಿ ಮನೆಗೆ ತೆರಳಿದ್ದಾರೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.
ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಒಳಪಟ್ಟಿದೆಯಾದ್ದರಿಂದ ನಾನುಗೌರಿ.ಕಾಂ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ. ಅವರನ್ನು ಸಂರ್ಪಕಿಸಿ, ವಿಟ್ಲ ಕಾಲೇಜಿನ ಬಗ್ಗೆ ಕೇಳಿದಾಗ, “ಕೋರ್ಟ್ನ ಮಧ್ಯಂತರ ಆದೇಶ ಎಲ್ಲಾ ಕಾಲೇಜಿಗೆ ಅನ್ವಯವಾಗುತ್ತದೆ” ಎಂದು ಸಮರ್ಥಿಸಿಕೊಂಡರು. ನಂತರ ನಾನುಗೌರಿ.ಕಾಂ ಸಮವಸ್ತ್ರದ ಬಗ್ಗೆ ಸಚಿವ ಅಶ್ವತ್ಥನಾರಾಯಣ ನೀಡಿರುವ ಹೇಳಿಕೆ ಮತ್ತು ಕೋರ್ಟ್ನ ಮಧ್ಯಂತರ ಆದೇಶದ ಅಂಶವನ್ನು ಅವರ ಗಮನಕ್ಕೆ ತಂದಿತು. ನಂತರ ಮಾತನಾಡಿದ ಅವರು, “ಈ ಬಗ್ಗೆ ನಾನು ಕಾಲೇಜಿನ ಪ್ರಾಂಶುಪಾಲರಿಗೆ ಮಾತನಾಡಿ, ಈ ಬಗ್ಗೆ ಅವರಲ್ಲಿ ವಿಚಾರಿಸುತ್ತೇನೆ ಮತ್ತು ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆಗಾಗಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಜಾ ಅವರನ್ನು ಮಾತನಾಡಿಸಿ ಸಚಿವರ ಹೇಳಿಕೆ ಮತ್ತು ನ್ಯಾಯಾಲಯದ ಮಧ್ಯಂತರ ಆದೇಶದ ಅಂಶಗಳನ್ನು ಗಮನಕ್ಕೆ ತಂದಿದ್ದೇವೆ. ನಂತರ ಯಾವ ಆಧಾರದಲ್ಲಿ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಅವರನ್ನು ಪ್ರಶ್ನಿಸಿದಾಗ, “ಈ ಬಗ್ಗೆ ನಾನು ನನ್ನ ಮೇಲಾಧಿಕಾರಿಗೆ ಹೇಳುತ್ತೇನೆ” ಎಂದಷ್ಟೇ ಹೇಳಿ, ಮುಂದುವರೆದು ಮಾತನಾಡಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದರೆ ಆಯೋಗ ಸುಮ್ಮನೇ ಕೂರಲ್ಲ: ಮಾಧ್ಯಮಗಳಿಗೆ ಎಚ್ಚರಿಕೆ
ನಮ್ಮ ಮುಂಡಗೋಡ ಪದವಿ ಕಾಲೇಜಿನಲ್ಲಿ ಕೂಡ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಲಿಲ್ಲ ಅವರನ್ನು ಗೇಟಿನ ಹೊರಗಡೆ ನಿಲ್ಲಿಸಲಾಯಿತು
Ban Nanu Gauri for provoking people.