Homeಮುಖಪುಟಕತ್ತಲ ಕಾಲದಲ್ಲಿ ಒಂದಿಷ್ಟು ಬೆಳಕಿನ ಕಥೆಗಳು

ಕತ್ತಲ ಕಾಲದಲ್ಲಿ ಒಂದಿಷ್ಟು ಬೆಳಕಿನ ಕಥೆಗಳು

- Advertisement -
- Advertisement -

1. ಕಾಳಿ ಗುಡಿಯನ್ನು ಮತ್ತೆ ಕಟ್ಟಿದ ಮುಸ್ಲಿಮರು

ಪಶ್ಚಿಮ ಬಂಗಾಳದ ಬಸಪಾರ ಹಳ್ಳಿಯಲ್ಲಿ ರಸ್ತೆ ಅಗಲೀಕರಣಕ್ಕೆಂದು ಕಾಳಿ ಗುಡಿಯನ್ನು ನೆಲಸಮಗೊಳಿಸಲಾಗಿತ್ತು. ಹಳ್ಳಿಯವರೆಲ್ಲ ಕಾಳಿ ಗುಡಿಯನ್ನು ಮತ್ತೆ ಕಟ್ಟಲು ತೀರ್ಮಾನಿಸಿದರು. ಗುಡಿ ಕಟ್ಟಲು ಹೇಗೋ ಹಣ ಹೊಂದಿಸಿ ತುಂಡು ಭೂಮಿ ಕೊಳ್ಳಲಾಯಿತು. ಆದರೆ ಗುಡಿ ಕಟ್ಟಲು ಸುಮಾರು 10 ಲಕ್ಷ ಬೇಕೆಂದು ಅಂದಾಜಿಸಲಾಯಿತು. ಅದೊಂದು ಪುಟ್ಟ ಹಳ್ಳಿಯಾದ್ದರಿಂದ ಹೊರಗಿನವರ ಸಹಾಯ ಅಗತ್ಯವಾಗಿತ್ತು. ಆಗ ಅದೇ ಹಳ್ಳಿಯ ಮುಸ್ಲಿಮರು ಕೈ ಜೋಡಿಸುತ್ತೇವೆಂದು ಭರವಸೆ ನೀಡಿದರು. ಸುತ್ತಮುತ್ತಲಿನ ಹಳ್ಳಿಯಲ್ಲಿರುವ ತಮ್ಮ ಸಂಬಂಧಿಕರನ್ನು ಸಂಪರ್ಕಿಸಿ 7 ಲಕ್ಷ ದೇಣಿಗೆ ನೀಡಿಯೇ ಬಿಟ್ಟರು. ಕಾಳಿ ಗುಡಿ ಕಟ್ಟಲಾಯಿತು. ಈ ಕಾಳಿ ಗುಡಿಯನ್ನು ಅಲ್ಲಿನ ಹಿಂದೂಗಳು ಮುಸ್ಲಿಂ ಮುಖಂಡ ’ನಾಸಿರುದ್ದೀನ್ ಮಂಡಲ್’ ಅವರಿಂದ ಉದ್ಘಾಟಿಸಿದರು. ಈಗ ಅಲ್ಲಿ ನಿತ್ಯ ಕಾಳಿ ಪೂಜೆ.

ತ್ರಿಪುರಾ ರಾಜ್ಯದ ದುರ್ಗಾಪುರ ಹಳ್ಳಿಯಲ್ಲಿ ಹಿಂದೂ ಒಬ್ಬ ಮುಸ್ಲಿಮನಿಗೆ ತನ್ನ ಜಮೀನನ್ನು ಮಾರಾಟ ಮಾಡಿ ಹೊರಟುಹೋದನಂತೆ. ಆ ಜಮೀನಿನಲ್ಲಿ ಕಾಳಿ ಗುಡಿ ಇತ್ತಂತೆ. ಹಾಗಾಗಿ ಇಂದಿಗೂ ಸಹ ಪ್ರತಿವರ್ಷ ಆ ಮುಸ್ಲಿಂ ಮಾಲೀಕ ಕಾಳಿ ಪೂಜೆಯನ್ನು ಮಾಡಿಸುತ್ತಿದ್ದಾನೆ.

2. ಬನಾರಸ್ಸಿನಲ್ಲಿ ಒಟ್ಟಿಗೆ ’ಮಂತ್ರ ಮತ್ತು ಆಜಾನ್’

ಉತ್ತರ ಪ್ರದೇಶದ ಬನಾರಸ್‌ನಲ್ಲಿ ಭೈರವ ಮಂದಿರ ಹಾಗೂ ಮಸೀದಿ ಇದೆ. ಇವೆರಡರ ವಿಶಿಷ್ಟತೆ ಏನೆಂದರೆ ಅವು ಅಕ್ಕಪಕ್ಕದಲ್ಲಿಯೇ ಸ್ಥಾಪನೆಗೊಂಡಿವೆ. ದಿನನಿತ್ಯ ಸಾಯಂಕಾಲ ಭೈರವನಿಗೆ ಸಲ್ಲಿಸುವ ರಾಮಚರಿತಮಾನಸದ ಶ್ಲೋಕವನ್ನು ಹಾಗೂ ಆಜಾನ್‌ನ ಪ್ರಾರ್ಥನೆಯನ್ನು ಒಟ್ಟಿಗೆ ಕೇಳಬಹುದಾಗಿದೆ. ಈ ಕ್ಷಣವನ್ನು ಆಲಿಸಿ ಸಂತೋಷಗೊಳ್ಳಲೆಂದೇ ಹಲವಾರು ಪ್ರವಾಸಿಗರು ಇಲ್ಲಿ ದಿನನಿತ್ಯ ಸೇರುತ್ತಾರೆ. ಈ ಆಚರಣೆಯನ್ನು ಸುಮಾರು 350 ವರ್ಷಗಳಿಂದಲೂ ನೆರವೇರಿಸಿಕೊಂಡು ಬರಲಾಗಿದೆ.

3. ಮುಸ್ಲಿಂ ಹೆಣ್ಣುಮಗಳ ’ಕುಮಾರಿ ಪೂಜೆ’

ಉತ್ತರ ಭಾರತದ ಪ್ರಸಿದ್ಧ ಹಬ್ಬ ದುರ್ಗಾ ಪೂಜೆ. ಎಂಟನೇ ದಿನದ ಪೂಜೆಯಂತ ಬಹಳ ಪವಿತ್ರವಾದದ್ದೆಂದು ಪಶ್ಚಿಮಬಂಗಾಳದ ಜನತೆ ಭಾವಿಸುತ್ತಾರೆ. ಈ ದಿನವನ್ನು ’ಮಹಾಅಷ್ಟಮಿ’ ಎಂದು ಕರೆಯುತ್ತಾರೆ. ಈ ದಿನದಂದು ಹೆಣ್ಣುಮಕ್ಕಳಿಗೆ ದುರ್ಗೆಯ ವೇಷ ತೊಡಿಸಿ ಪೂಜೆ ಮಾಡುವುದು ವಿಶೇಷ. ಇದನ್ನೇ ’ಕುಮಾರಿ ಪೂಜೆ’ ಎನ್ನಲಾಗುತ್ತದೆ. 2013ರಿಂದಲೂ ಕೋಲ್ಕತ್ತಾದ ಕಮಲ್ ದತ್ತಾ ಮತ್ತವರ ಹೆಂಡತಿ ಮೌಶುಮಿ ತಮ್ಮ ಮನೆಯಲ್ಲಿ ಕುಮಾರಿ ಪೂಜೆ ಮಾಡುತ್ತಾ ಬಂದಿದ್ದಾರೆ. ಮೊದಲ ವರ್ಷ ಬ್ರಾಹ್ಮಣ ಹೆಣ್ಣುಮಗಳನ್ನು ಪೂಜಿಸಲಾಗಿತ್ತು ನಂತರದ ವರ್ಷಗಳಲ್ಲಿ ದಲಿತ ಹೆಣ್ಣುಮಕ್ಕಳು ಸೇರಿದಂತೆ ಇತರೆ ಜಾತಿಯ ಹೆಣ್ಣುಮಕ್ಕಳಿಗೂ ಕುಮಾರಿ ಪೂಜೆ ಮಾಡಿದ್ದಾರೆ. 2019ರಲ್ಲಿ ಕುಮಾರಿ ಪೂಜೆಗೆ ಅವರು ಆಹ್ವಾನಿಸಿದ್ದು ಆಗ್ರಾದ ಕಿರಾಣಿ ಅಂಗಡಿಯೊಂದರ ಮಾಲೀಕ ಮಹಮ್ಮದ್ ತಾಹಿರ್ ಮತ್ತು ಬುಶ್ರಾ ಬೀಬಿಯವರ ಮಗಳು ’ಫಾತಿಮಾ’ಳನ್ನು. ಯಾವ ಅಡೆತಡೆಗಳಿಲ್ಲದೆ ಆ ವರ್ಷದ ಕುಮಾರಿ ಪೂಜೆ ನೆರವೇರಿದೆ.

4. ಹಿಂದೂ ದೇಗುಲ ರಕ್ಷಕ ಮೋತಿಬಾರ್ ರಹಮಾನ್

ಅಸ್ಸಾಂ ರಾಜ್ಯದ ಗುವಾಹಟಿಯ ರಂಗಮಹಲ್ ಎಂಬ ಹಳ್ಳಿಯಲ್ಲಿ ಶಿವನ ದೇಗುಲವೊಂದಿದೆ. ಈ ದೇಗುಲಕ್ಕೆ 500 ವರ್ಷಗಳ ಇತಿಹಾಸವಿದೆ ಹಾಗೂ ಸ್ಥಳಪುರಾಣವೂ ಇದೆ. ಸ್ಥಳಪುರಾಣದ ಪ್ರಕಾರ 500 ವರ್ಷಗಳ ಹಿಂದೆ ಈ ಹಳ್ಳಿ ವಾಸಿಯಾಗಿದ್ದ ’ಬೊರ್ಹಾಸ’ ಎಂಬ ಮುಸಲ್ಮಾನನ ಕನಸಲ್ಲಿ ಶಿವ ಪ್ರತ್ಯಕ್ಷನಾದನಂತೆ. ’ನಾನು ಈ ಸ್ಥಳದಲ್ಲಿ ನೆಲೆಸಬೇಕು. ಇಂದಿನಿಂದ ನಿನ್ನ ಕುಟುಂಬವೇ ನನ್ನನ್ನು ಸಲಹಬೇಕೆಂದು’ ಹೇಳಿದನಂತೆ. ಅಂದಿನಿಂದ ಇಂದಿನವರೆಗೂ ಬೊರ್ಹಾಸನ ವಂಶಸ್ಥರು ಶಿವನ ದೇಗುಲದ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಈಗ ’ಮೋತಿಬಾರ್ ರಹಮಾನ್’ ಎಂಬ ಬೊರ್ಹಾಸನ ವಂಶಸ್ಥ ಈ ದೇಗುಲದ ನಿರ್ವಹಣೆ ಮಾಡುತ್ತಿದ್ದಾನೆ. ಈ ದೇಗುಲಕ್ಕೆ ಹಿಂದೂ-ಮುಸ್ಲೀಂ ಭಕ್ತರು ಭೇಟಿಕೊಡುತ್ತಾರೆ. ಮರಕ್ಕೆ ಕೆಂಪು ಮತ್ತು ಅರಿಶಿನದ ದಾರ ಕಟ್ಟಿ ಬೇಡಿಕೊಳ್ಳುತ್ತಾರೆ.

5. ಮುಸ್ಲಿಮರಿಂದ ಬ್ರಾಹ್ಮಣನ ಅಂತ್ಯಸಂಸ್ಕಾರ

ಅಬು, ನಾಸಿರ್ ಮತ್ತು ಜುಬೇರ್ ಖುರೇಶಿ ಈ ಮೂವರು ಗುಜರಾತಿನ ಸಹೋದರರು. ದಿನಗೂಲಿ ನೌಕರರಾದ ಇವರು ದಿನಕ್ಕೆ ಐದು ಬಾರಿ ನಮಾಜ್ ಹಾಗೂ ರಂಜಾನ್ ಉಪವಾಸವನ್ನು ಅಪ್ಪಿತಪ್ಪಿಯೂ ತಪ್ಪಿಸದಷ್ಟು ಧಾರ್ಮಿಕರು. ಇವರ ತಂದೆ ’ಭಿಕು ಖುರೇಶಿ’ಯವರ ಆತ್ಮೀಯ ಸ್ನೇಹಿತ ಬ್ರಾಹ್ಮಣ ’ಭಾನುಶಂಕರ್ ಪಾಂಡ್ಯ’ ಎಂದರೆ ಇವರಿಗೆ ಬಹಳಷ್ಟು ಪ್ರೀತಿ. ಭಿಕು ಖುರೇಶಿ ಹಾಗೂ ಭಾನುಶಂಕರ್ ಇಬ್ಬರದ್ದು ಬರೋಬ್ಬರಿ 40 ವರ್ಷಗಳ ಸ್ನೇಹ. ಭಾನುಪ್ರಕಾಶ್ ಸಂಬಂಧಿಕರೆಲ್ಲರನ್ನೂ ಕಳೆದುಕೊಂಡಿದ್ದರು. ಅವರ ಕಾಲು ಮುರಿದ ಮೇಲೆ ತಮ್ಮ ಮುಸ್ಲಿಂ ಸ್ನೇಹಿತನ ಮನೆಯಲ್ಲೆ ಬಂದು ನೆಲೆಸಿದರು. ಖುರೇಶಿ ತಮಗಿಂತ ಮೊದಲೇ ಇಹಲೋಕ ತ್ಯಜಿಸಿದ್ದಕ್ಕೆ ಕಣ್ಣೀರಾಗಿದ್ದರು. ಮೂರು ವರ್ಷಗಳ ನಂತರ ಭಾನುಶಂಕರ್ ಸಹ ಕಣ್ಮುಚ್ಚಿದರು. ಮೂವರು ಮುಸ್ಲಿಂ ಸಹೋದರರು ತಂದಿದ್ದ ಗಂಗಾ ನದಿಯ ನೀರನ್ನು ಗುಟುಕೇರಿಸುತ್ತಲೇ ಭಾನುಶಂಕರ್ ಪ್ರಾಣಬಿಟ್ಟರು. ಊರಿನ ಹಿಂದೂಗಳಲ್ಲಿ ಈ ಮುಸ್ಲೀಂ ಸಹೋದರರು ತಾವೇ ಅಂತ್ಯಸಂಸ್ಕಾರ ಮಾಡುತ್ತೇವೆಂದು ಕೇಳಿಕೊಂಡಾಗ ’ಬ್ರಾಹ್ಮಣರ ವಿಧಿವಿಧಾನದಲ್ಲಿಯೇ ನೆರವೇರಬೇಕು’ ಎಂದು ಹೇಳಿದರು. ’ಜನಿವಾರ ಧರಿಸಲೇಬೇಕೆಂದು’ ತಿಳಿಸಿದರು. ಮುಸ್ಲಿಂ ಸಹೋದರರು ಸ್ವಲ್ಪವೂ ಯೋಚಿಸದೆ ತಲೆಯಾಡಿಸಿ ಜನಿವಾರ ಹಾಕಿಸಿಕೊಂಡರು. ನಾಸಿರ್ ಮಗ ’ಅರ್ಮಾನ್’ ಚಿತೆಗೆ ಬೆಂಕಿ ಹಚ್ಚಿದನು. 12 ದಿನದ ನಂತರ ಅರ್ಮಾನ್‌ನ ಕೇಶಮುಂಡನ ಮಾಡಿಸಲಾಯಿತು. ಗಂಗಾನದಿಯಲ್ಲಿ ಅಸ್ಥಿಯನ್ನು ತೇಲಿಬಿಡಲಾಯಿತು. ನಾಸಿರ್, ಭಾನುಶಂಕರ್ ಅವರನ್ನು ನೆನೆಯುತ್ತ ’ದೊಡ್ಡಪ್ಪ ನಮ್ಮೊಂದಿಗೆ ಬೆರೆತುಹೋಗಿದ್ದರು. ನಮ್ಮ ತಂದೆ ಅವರಿಗಾಗಿ ಸ್ವತಃ ಶುದ್ಧ ಸಸ್ಯಾಹಾರವನ್ನು ಮಾಡಿ ಹಾಕುತ್ತಿದ್ದರು. ದೊಡ್ಡಪ್ಪ ನಮ್ಮೊಂದಿಗೆ ಈದ್ ಆಚರಿಸುತ್ತಿದ್ದರು. ನಮ್ಮ ಮನೆಯ ಸೊಸೆಯಂದಿರು ಅವರ ಕಾಲಿಗೆ ಬಿದ್ದು ನಮಸ್ಕರಿಸಿದಾಗ ಆಶೀರ್ವದಿಸುತ್ತಿದ್ದರು’ ಎಂದು ಹೇಳುತ್ತಾರೆ.

6. ಶಹೀನ್ ಪರ್ವೇಜ್ ಬಾಯಲ್ಲಿ ಹನುಮಾನ್ ಚಾಲಿಸಾ, ಅಯ್ಯಪ್ಪಸ್ವಾಮಿಯ ಮುಸ್ಲಿಂ ಸ್ನೇಹಿತ ವಾವರ್

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಒರಿಸ್ಸಾದಿಂದ ಅಯ್ಯಪ್ಪಸ್ವಾಮಿ ಮಾಲೆ ಹಾಕಿಕೊಂಡು ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆ ಹೋಗಿರುವವರಿಗೆ ’ವಾವರಸ್ವಾಮಿ’ ಹೆಸರಲ್ಲಿ ನಿರ್ಮಿಸಿರುವ ಮಸೀದಿ ಚಿರಪರಿಚಿತ. ಪುರಾಣ ಕಥೆ ಹೇಳುವಂತೆ ಮಹಿಶಿಯೊಡನೆ ಯುದ್ಧ ಮಾಡುವಾಗ ’ವಾವರ್’ ಎಂಬ ಮುಸ್ಲಿಂ ಅಯ್ಯಪ್ಪನಿಗೆ ಸಹಾಯ ಮಾಡಿದ್ದನಂತೆ. ಅಂದಿನಿಂದ ವಾವರ್ ಅಯ್ಯಪ್ಪನಿಗೆ ಸ್ನೇಹಿತನಾದನು. ಅಯ್ಯಪ್ಪ ಮಹಿಶಿಯನ್ನು ಎರುಮೆಲಿಯಲ್ಲಿ ಕೊಂದು ಶಬರಿಮಲೆಗೆ ಹೋಗುವ ಮುನ್ನ ವಾವರ್‌ನಿಗೆ ಅಲ್ಲಿಯೇ ನೆಲೆನಿಲ್ಲಲು ಹೇಳಿದನಂತೆ. ಜೊತೆಗೆ ತನ್ನನ್ನು ನೋಡಲು ಬರುವ ಭಕ್ತಾದಿಗಳು ನನಗೂ ಮುಂಚೆ ವಾವರ್‌ನ ದರ್ಶನ ಪಡೆಯಬೇಕೆಂದು ಹೇಳಿದನಂತೆ. ಅಂದಿನಿಂದ ಶಬರಿಮಲೆಗೆ ಹೋಗುವ ಭಕ್ತರು ಮೊದಲು ವಾವರಸ್ವಾಮಿ ಮಸೀದಿಗೆ ಭೇಟಿ ಕೊಟ್ಟು ತೆಂಗಿನಕಾಯಿ ಹೊಡೆದು ಪ್ರದಕ್ಷಿಣೆ ಹಾಕುತ್ತಾರೆ. ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಾರೆ. ಶಬರಿಮಲೆಯಲ್ಲಿ ನಡೆಯುವ ಮಕರಸಂಕ್ರಾಂತಿಯಂದು ಇಲ್ಲಿಯೂ ಉತ್ಸವವನ್ನು ಹಾಗೂ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುತ್ತದೆ.

7. ಇಲ್ಲಿ ಮುಸ್ಲಿಮರಿಲ್ಲ ಆದರೆ ಮಸೀದಿ ಇದೆ.

ಪಂಜಾಬಿನಲ್ಲಿ ಲೂಧಿಯಾನ ಎಂಬ ಹಳ್ಳಿ ಇದೆ. ಈ ಹಳ್ಳಿಯಲ್ಲಿನ ಸಿಖ್ಖರು ಭಾರತದ ವಿಭಜನೆಯ ಕಥೆಯನ್ನು ನೆನೆದು ಕಣ್ಣೀರಾಗುತ್ತಾರೆ. ಭಾರತ ವಿಭಜನೆ ಆಗುವ ಮೊದಲು ಇಲ್ಲಿದ್ದ 50 ಮುಸ್ಲಿಂ ಕುಟುಂಬ ಪ್ರಾರ್ಥನೆಗಾಗಿ 1920ರಲ್ಲಿ ಮಸೀದಿ ನಿರ್ಮಿಸಿದ್ದವು. 1947ರ ನಂತರ ಭಾರತದ ವಿಭಜನೆಯ ಫಲವಾಗಿ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಬೇಕಾಗಿ ಬಂದಿತು. ಈಗ ಈ ಹಳ್ಳಿಯಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ಆದರೆ ಅವರು ಕಟ್ಟಿದ್ದ ಮಸೀದಿ ಇಂದಿಗೂ ತಲೆಎತ್ತಿ ನಿಂತಿದೆ. ಹಳ್ಳಿಯ ಹಿರಿಯ ಸಿಖ್ಖರು ಪಾಳಿಯ ಪ್ರಕಾರ ಮಸೀದಿಯನ್ನು ಸ್ವಚ್ಛಗೊಳಿಸಲು ಯುವಕರನ್ನು ನೇಮಿಸಿದ್ದಾರೆ. ಮಸೀದಿಯಲ್ಲಿ ’ಕುರಾನ್’ ಪವಿತ್ರ ಗ್ರಂಥವನ್ನು ಇಡಲಾಗಿದೆ. ದೀಪ ಹಚ್ಚಲಾಗುತ್ತದೆ. ಇದುವರೆಗೂ ಲೂಧಿಯಾನದ ಒಬ್ಬರೂ ಸಹ ಅದನ್ನು ತೆರವುಗೊಳಿಸುವ ಒಂದು ಮಾತನ್ನೂ ಆಡಿಲ್ಲ.

8. ಅಯೋಧ್ಯೆಯ ದೇಗುಲದಲ್ಲಿ ಇಫ್ತಾರ್ ಊಟ

ಅಯೋಧ್ಯೆಯ ತುಂಬಾ ಹಲವಾರು ಸೀತಾರಾಮ ದೇಗುಲಗಳಿವೆ. ಬಾಬರಿ ಮಸೀದಿ ಧ್ವಂಸ ಪ್ರಕರಣದ ನಂತರ ಅಲ್ಲಿನ ಸೀತಾರಾಮ ದೇಗುಲವೊಂದರ ಭಕ್ತರು ಸೌಹಾದತೆಯ ಕಾರ್ಯವೊಂದನ್ನು ಮಾಡಲು ತೀರ್ಮಾನಿಸಿದರು. ಅದೇನೆಂದರೆ ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರಿಗೆ ದೇಗುಲದ ಆವರಣದಲ್ಲಿ ಇಫ್ತಾರ್ ಊಟ ಆಯೋಜಿಸುವುದು. ಹಿಂದೂ ಮುಸ್ಲಿಂ ಒಟ್ಟಿಗೆ ಕುಳಿತು ಊಟ ಮಾಡುವುದು. ಇಂದಿಗೂ ಅದು ನಡೆದುಕೊಂಡು ಬರುತ್ತಲೇ ಇದೆ. ದೇಗುಲದ ಪೂಜಾರಿ ಯುಗಲ್ ಕಿಶೋರ್ ’ಈ ಇಫ್ತಾರ್ ಊಟವನ್ನು ನಾವು ಮುಂದುವರೆಸುತ್ತೇವೆ’ ಎಂದೂ ಮುಜಮಿಲ್ ಫಿಜಾ ’ನಾನು ನವರಾತ್ರಿಯನ್ನು ನನ್ನ ಹಿಂದೂ ಸ್ನೇಹಿತರೊಂದಿಗೆ ಆಚರಿಸುತ್ತೇನೆ’ ಎಂದೂ ಹೇಳುತ್ತಾರೆ.

9. ಪುತ್ತೂರಿನ ಸರ್ವೆ ಹಳ್ಳಿಯಲ್ಲಿ ದೇಗುಲ ನಿರ್ಮಿಸುತ್ತಿರುವ ಹಿಂದೂ-ಮುಸ್ಲಿಂ

ಮಂಗಳೂರಿನ ಸರ್ವೆ ಹಳ್ಳಿಯಲ್ಲಿ 800 ವರ್ಷಗಳಷ್ಟು ಹಳೆಯದಾದ ಶ್ರೀ ವಿಷ್ಣುಮೂರ್ತಿ ದೇಗುಲವಿದೆ. ಈ ಹಳ್ಳಿಯ ಮುಸ್ಲಿಮರು ದೇಗುಲದ ಜೀರ್ಣೋದ್ಧಾರ ಮಾಡಬೇಕಾಗಿ ಪದೇ ಪದೇ ಕೇಳಿಕೊಂಡದ್ದರಿಂದ ಈಗ ದೇಗುಲವನ್ನು ನವೀಕರಣಗೊಳಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಇದರ ಕಾರ್ಯಕ್ಕೆ ಹಿಂದೂಗಳೊಂದಿಗೆ ಮುಸ್ಲಿಮರೂ ಸಹ ಹಣಸಹಾಯ ಮಾಡಿದ್ದಾರೆ. ಸಮಿತಿಯ ಖಜಾಂಚಿ ಪ್ರಸನ್ನ ರೈ ಹೇಳುವಂತೆ ’ಸಂಪೂರ್ಣ ಹಳ್ಳಿ ಸೌಹಾರ್ದತೆಯಿಂದ ಕೂಡಿದೆ. ನಾವು ಉರುಸ್‌ನಲ್ಲಿ ಭಾಗವಹಿಸುತ್ತೇವೆ. ಮುಸ್ಲಿಮರು ದೇಗುಲದ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ’ ಎನ್ನುತ್ತಾರೆ.

10. ಇಲ್ಲಿ ಮಠ ಮತ್ತು ದರ್ಗಾ ಎರಡೂ ಒಂದೆಡೆ.

ಕಲಬುರ್ಗಿಯ ಸುರಪುರದ ಬಳಿ ಕೃಷ್ಣಾ ನದಿಯ ದಂಡೆಯಲ್ಲಿ ತಿಂತಿಣಿ ಎಂಬ ಹಳ್ಳಿಯಿದೆ. ಇಲ್ಲಿ ಮೌನೇಶ್ವರ ದೇವಸ್ಥಾನ ಮತ್ತು ದರ್ಗಾ ಇದೆ. ಈ ಕಟ್ಟಡವನ್ನು ನೀವೊಮ್ಮೆ ನೋಡಿದರೆ ಮಂದಿರ-ಮಸೀದಿ ಕಂಡಂತಾಗುತ್ತದೆ. ಹಿಂದೂ ಹಾಗೂ ಮುಸ್ಲಿಂ ವಾಸ್ತುಶಿಲ್ಪ ಎರಡನ್ನೂ ಬೆರೆಸಿ ನಿರ್ಮಿಸಲಾಗಿದೆ. ಇದರೊಳಗೆ ಹೋದರೆ ಎದುರಿಗೆ ಮೌನೇಶ್ವರ ಸ್ವಾಮಿ ಸಾಧು ರೀತಿಯಲ್ಲಿ ಕುಳಿತಿರುವ ಮೂರ್ತಿ ಕಾಣುತ್ತದೆ. ಅದರ ಹಿಂಭಾಗದಲ್ಲಿ ಒಂದು ಬಾಗಿಲಿದೆ. ಆ ಬಾಗಿಲನ್ನು ತೆರೆದರೆ ಹಸಿರು ಚಾದರ ಹೊದ್ದಿರುವ ಸಮಾಧಿ ಕಾಣುತ್ತದೆ. ಈ ಮಠ ಮತ್ತು ದರ್ಗಾಕ್ಕೆ ಹಿಂದೂ ಮುಸ್ಲಿಂ ಇಬ್ಬರೂ ನಡೆದುಕೊಳ್ಳುತ್ತಾರೆ. ಫೆಬ್ರವರಿ ತಿಂಗಳಲ್ಲಿ ಇಲ್ಲಿ ತಿಂತಿಣಿ ಜಾತ್ರೆ ನಡೆಯುತ್ತದೆ. ಭರತ ಹುಣ್ಣಿಮೆಯನ್ನು ಐದು ದಿನಗಳ ಕಾಲ ಇಲ್ಲಿ ಆಚರಿಸಲಾಗುತ್ತದೆ. ಮೊಹರಂ ಆಚರಿಸಲಾಗುತ್ತದೆ. ಹಿಂದೂ-ಮುಸ್ಲಿಂ ಭಕ್ತರೆಲ್ಲರೂ ಪ್ರಸಿದ್ಧ ’ಅಲಿ ಪೀರ್’ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದೂಗಳು ’ಇದನ್ನು ಪೀರಲ ಹಬ್ಬ’ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ನೂರಾರು ಕಡೆಗಳಲ್ಲಿ ಹಿಂದೂ-ಮುಸ್ಲೀಂ ಇಬ್ಬರೂ ಮೊಹರಂ-ಪೀರಲ ಹಬ್ಬವನ್ನು ಆಚರಿಸುತ್ತಾರೆ.

* ಸಂಗ್ರಹ ಮತ್ತು ನಿರೂಪಣೆ:

ವಿಕಾಸ್ ಆರ್ ಮೌರ್‍ಯ

ವಿಕಾಸ್ ಆರ್ ಮೌರ್‍ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚಮ್ಮಟಿಕೆ’ ಪ್ರಕಟಿತ ಕೃತಿ


ಇದನ್ನೂ ಓದಿ: ಹಿಜಾಬ್ ವಿವಾದ ವಿಶೇಷ ವರದಿ: ಬಹುತ್ವ ಸಂಸ್ಕೃತಿಯ ಭಾರತದಲ್ಲಿ ಮತೀಯ ರಾಜಕಾರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...