Homeಕವನಅನುವಾದ; ಕೆಲವು ರೂಮಿ ಪದ್ಯಗಳು

ಅನುವಾದ; ಕೆಲವು ರೂಮಿ ಪದ್ಯಗಳು

- Advertisement -
- Advertisement -

ದೀವಿ ಸುಬ್ಬರಾವ್ ಅವರು ತೆಲುಗಿಗೆ ಅನುವಾದಿಸಿರುವ ಮೌಲಾನಾ ಜಲಾಲುದ್ದೀನ್ ರೂಮೀಯವರ ಪದ್ಯಗಳನ್ನು ಲಕ್ಕೂರು ಆನಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವುಗಳು ಪ್ರಕಟವಾಗಿಲಿರುವ ’ದೇವ ಕಣಗಿಲೆ ಹೂ’ (ಶತಮಾನದ ಸೂಫೀ ಕಾವ್ಯ) ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಇದರಲ್ಲಿ ರೂಮೀ, ಫರೀವುದ್ದೀನ್ ಅತ್ತಾರ್, ರಬಿಯಾ ಮತ್ತು ಹಾಫೀಜ್ ಅವರ ಸೂಫಿ ಪದ್ಯಗಳಿವೆ.

ಪ್ರೀತಿಯ ಮುಖಗಳು

ಓ ಪ್ರೀತಿಯೇ!
ನಿನ್ನನ್ನು ಸಾವಿರ ಮಂದಿ ಸಾವಿರ ಹೆಸರಿಟ್ಟು ಕರೆಯುತ್ತಾರೆ.
ದೇಹವೆಂಬ ಪಾನಪಾತ್ರೆಯಲ್ಲಿ ಮಧುವನ್ನು ಹೇಗೆ ತುಂಬಬೇಕೋ
ನಿನಗೆ ಚೆನ್ನಾಗಿ ಗೊತ್ತು.
ಸಾವಿರದಷ್ಟು ನಾಗರಿಕತೆಗಳಿಗೆ
ನಾಗರಿಕತೆ ಏನೆಂದು ಕಲಿಸಿದವಳು.
ನಿನಗೆ ಪ್ರತ್ಯೇಕವಾಗಿ ಒಂದು ರೂಪವೆಂಬುದು ಇಲ್ಲವೇ ಹೊರತು
ಸಾವಿರ ರೂಪಗಳ ಸಮೂಹಾರವು ನೀನು.

ಪ್ರೀತಿ!

ತುರ್ಕಿಯವರನ್ನು, ಐರೋಪಿಯನ್ನರನ್ನುಜಾಂಜಿಬಾರು ದ್ವೀಪದಲ್ಲಿ ಇರುವ ಆದಿವಾಸಿಗಳನ್ನು.
ಭೂಮಿಯ ಮೇಲೆ ಎಲ್ಲರ ಮುಖಗಳಲ್ಲೂ ನೀನೇ ಚಿಗುರುವೆ.
ಅಂತಹ ನೀನು, ಓ ಪ್ರೇಮವೇ!
ನಿನ್ನ ಸೀಸೆಯಲ್ಲಿನದು ತೆಗೆದು ನನ್ನ ಗ್ಲಾಸಿನಲ್ಲಿ ಸ್ವಲ್ಪ ಮಧುವನ್ನು ಸುರಿ.
ನಿನ್ನ ಕೊಂಬೆಗಿರುವ ಎರಡೂ ರೆಂಬೆಗಳನ್ನು ಮುರಿದು
ಸ್ವಲ್ಪ ಭಂಗಿ ಸೊಪ್ಪನ್ನು ಸೇರಿಸಿಕೊಡು.

ಸೀಸೆಗಿರುವ ಬಿರಡೆಯನ್ನು
ಒಂದು ಸಾರಿ ಕಿತ್ತುಬಿಡು.

ಆಗ ನೋಡೋಣ ನಾವು
ವಿಜೃಂಭಿಸಿದ ಸಾವಿರ ಮಂದಿ ಯೋಧರು (ಅಹಂಕಾರದಿಂದ ಮೆರೆದ)
ಚಾಪೆಯ ಸುತ್ತಲೂ ಸಾಷ್ಟಾಂಗ ಬೀಳುವುದ.
ಅಷ್ಟೇನಾ…
ಸುತ್ತಲೂ ಸೇರಿ ಪರವಶದಿಂದ
ಗಾಯಕರು ಘನವಾಗಿ ಹಾಡುಗಳನ್ನು ಹಾಡುವುದ.

ಆಗ
ಮರುಳಾದವನು ಅವುಗಳಿಂದ ಮನಸು ಮರಳಿಸಿಕೊಳ್ಳುತ್ತಾನೆ.
ಅವನು ಆಗ ಪುನರುಜ್ಜೀವಿತನಾಗಿ ಆ ಕೊನೆಯ ದಿನಕ್ಕಾಗಿ
ನಿರ್ಭಯವಾಗಿ ಎದುರು ನೋಡುತ್ತಿರುತ್ತಾನೆ.

*******

ರಾತ್ರಿ ಪಯಣಿಗರು

ಸ್ನೇಹಿತರೊಂದಿಗೆ ಸೇರಿ ಕುಳಿತುಕೋ; ಮತ್ತೆ ನಿದ್ದೆಯೊಳಗೆ ಜಾರಬೇಡ.
ಮೀನಿನಂತೆ ಮುಳುಗಿ ಕಡಲಿನ ಅಡಿಗೆ ಸೇರಬೇಡ.

ಸಮುದ್ರದಂತೆ ಪೂರ್ತಿಯಾಗಿ ಏಳು
ತುಫಾನಿನಂತೆ ದಿಢೀರನೆ ಬಿದ್ದು ಚೆಲ್ಲಾಪಿಲ್ಲಿಯಾಗಬೇಡ.

ಜೀವಜಲ ಭೂಮಿಯ ಕತ್ತಲ ಗರ್ಭದಿಂದ ಚಿಮ್ಮಿಬರುತ್ತದೆ.
ಕತ್ತಲನ್ನು ಶೋಧಿಸು; ಅದರಿಂದ ದೂರಕ್ಕೆ ಸರಿದು ಹೋಗಬೇಡ.

ರಾತ್ರಿ ಪ್ರಯಾಣಿಕರು ಬೆಳಕಿಗೆ ಪ್ರತೀಕಗಳು
ಅವರ ಸಹವಾಸವನ್ನು ಯಾವಾಗಲೂ ಬಿಡಬೇಡ.
ಬಂಗಾರದ ಹಣತೆಯಲ್ಲಿ ಎಚ್ಚರವಾಗಿರುವ ಬೆಳಕಾಗು
ಪಾದರಸದಂತೆ ಜಾರಿ ಕೆಸರಿನಲ್ಲಿ ಬೀಳಬೇಡ.
ರಾತ್ರಿಯ ಪಯಣಿಗರಿಗಾಗಿಯೇ ಚಂದ್ರನು ಉದಯಿಸುತ್ತಾನೆ
ರಾತ್ರಿ ಯಾವ ವೇಳೆಯಲ್ಲಿ ಬರುತ್ತಾನೋ ಪೂರ್ಣಚಂದ್ರನು!
ಎಚ್ಚರದಿಂದ ಕಾಯುತ್ತಾ ಇರು.

******

ಇವು ಎರಡೇ

ಮೋಡ ಕಣ್ಣೀರು ಸುರಿಸದೇ ಹೋದರೇ
ಹೂದೋಟದ ತುಟಿಯ ಮೇಲೆ ನಗು ಹೇಗೆ ಚಿಗುರುತ್ತದೆ?

ಸೂರ್ಯನು ತನ್ನ ಬಿಸಿಯ ಕಿರಣಗಳ ಚಾಟಿಯನ್ನು ಝಳಪಿಸದೆ ಹೋದರೇ
ಹೀಚುಗಳೊಂದಿಗಿರುವ ಗಿಡ ಹೇಗೆ ಫಸಲಿಗೆ ಬರುತ್ತದೆ?

ಮೋಡದ ದುಃಖ, ಸೂರ್ಯನ ಬಿಸಿಲು.
ಇವು ಎರಡೇ ಲೋಕಗಳನ್ನು ಉಳಿಸುವ ಮೂಲಸ್ತಂಭಗಳು.

ನೀನೂ ಕೂಡಾ ನಿನ್ನ ಜ್ಞಾನ ಸೂರ್ಯನನ್ನು ಜ್ವಾಲಾಮಾನವಾಗಿ ಬೆಳಗಿಸು.
ಕಣ್ಣಿನ ಅಂಚುಗಳನ್ನು ದುಃಖಾಶ್ರವಗಳ ತೇವದೊಂದಿಗೆ ಹೊಳೆಯುವಂತೆ ಮಾಡು.

**********

ಕಣ್ಣೀರು

ಇಳಿಬಾವಿಯಿಂದ ಏತದಲ್ಲಿ ನೀರನ್ನು ಮೇಲಕ್ಕೆ ಸೇದಿದಂತೆ
ಅಳುವಿನಿಂದ ನಿನ್ನ ಕಣ್ಣಾಲಿಗಳಲ್ಲಿ ನೀರು ತುಂಬಿಹೋಗಲಿ.

ನಿನ್ನ ಹೃದಯದ ಗದ್ದೆಯ ಬಯಲಿನಲ್ಲಿ
ಹಚ್ಚ ಹಸುರಿನ ಚಿಗುರುಗಳು ಮೊಳಕೆಯೊಡೆಯಲಿ

ಕಣ್ಣೀರು ಬೇಕಾದರೇ
ಕಣ್ಣಿರು ಸುರಿಸುವವರೊಂದಿಗೆ ಪ್ರೀತಿಯಿಂದ-ದಯೆಯಿಂದ ಇರು.
ದಯೆ ಬೇಕಾದರೇ
ನಿಸ್ಸಹಾಯಕರ ಕುರಿತು ದಯೆ ತೋರಿಸು.

*****

ರಾತ್ರಿಹಾಡು

ನಿದ್ದೆ ಹತ್ತದೇ
ರಾತ್ರಿಯಲ್ಲಿ ಹಾಡುಗಳನ್ನು ಕಟ್ಟಿ ಹಾಡಿಕೊಳ್ಳುತ್ತೇನೆ.
ಅರಳಿದ ಪದ್ಮದಂತಿರುವ ಆಕೆಯ ಮುಖ ನೆನಪಾಗಿ
ತುಂಬಾ ಕಳವಳ ಪಡುತ್ತೇನೆ.
ಕಣ್ಣಿಗೆ ಸ್ವಲ್ಪವೂ ತೂಕಡಿಕೆ ಬರದು.
ಮೈಗೆ ಎಚ್ಚರವಾಗಿರುವಷ್ಟು ಸಹನೆಯಿಲ್ಲ.
ಒಳ್ಳೇಯದು ಕೆಟ್ಟದ್ದೂ ಮರ್ಯಾದಸ್ಥರಿಗೆಯೇ ಹೊರತು
ನನಗಿಲ್ಲ.

ಜ್ಞಾನದ ಬಟ್ಟೆಗಳು ಭಾರವಾಗಿ ಬಿಚ್ಚಿ ಪಕ್ಕದಲ್ಲಿ ಬಿಸಾಡಿದೆ.
ಮೇಲ್ಮೈನ ಹೊಳಪು ವಯ್ಯಾರಗಳು ಇಷ್ಟವಾಗದೆ ಅವುಗಳಿಗೆ ದೂರವಾಗಿ ಸರಿದೆ.

ಹೃದಯಕ್ಕೂ, ಮೆದುಳಿಗೂ
ಸಂಬಂಧ ತುಂಡಾಗಿದೆ.
ತಾರೆಗಳಿಗೆ, ಚಂದ್ರನಿಗೆ
ಪ್ರಪಂಚ ಹೀಗೆ ಕುಗ್ಗಿಹೋಗುವುದಕ್ಕೆ ಕಾರಣ
ಪ್ರತಿಯೊಂದಕ್ಕೂ ನಡುವೆ ದೂರ ಬೆಳೆದದ್ದು.

ಚಂದಮಾಮ ಹೇಳುತ್ತದೆಯಲ್ಲವೆ,
“ಎಷ್ಟು ದಿನ ಹೀಗೆ ಒಂಟಿಯಾಗಿ
ಸೂರ್ಯನಿಲ್ಲದೆ ನೇತಾಡುತ್ತಿರಬೇಕು?” ಎಂದು
ನನ್ನಲ್ಲಿರಬೇಕಾದ ಪ್ರೀತಿಯ ಹಾರ ಇಲ್ಲದೆ ಹೋದ ಮೇಲೆ
ಇನ್ನು ಯಾವುದೊ ನನ್ನನ್ನು ಬಾಧಿಸದು.
ಒಂದೊಂದು ಕಲ್ಲು ಉದುರಿ
ಬದುಕಿನ ಅಂಗಡಿ ಪೂರ್ತಿ ಕುಸಿದು ಬಿದ್ದರೂ
ಚಿಂತೆಯಿಲ್ಲ.

*******

ಪ್ರೀತಿಯ ಪೂರ್ಣಚಂದ್ರನು

ಪ್ರೀತಿ ಬಂದರೆ ಅರೆಕೊರೆಯಾಗಿ ಬರುವುದಿಲ್ಲ
ಎದುರು ಕಿಟಕಿಯಲ್ಲಿ ಪೂರ್ಣ ಚಂದ್ರನಂತೆ ಪೂರ್ತಿಯಾಗಿ ಬರುತ್ತದೆ.

ಪೂರ್ವಕ್ಕೋ, ಪಶ್ಚಿಮಕೋ
ಯಾವ ಒಂದು ದಿಕ್ಕಿಗೋ ತಾವಿಗೋ ಪರಿಮಿತವಾಗದ ಸೂರ್ಯನಂತೆ
ದಢಾರನೆ ಬಾಗಿಲುಗಳನ್ನು ತೆರೆದುಕೊಂಡು ಬರುತ್ತದೆ.
ಆ ಸೂರ್ಯನೊಂದಿಗೆ ಸಹ
ಪೂರ್ವ, ಪಶ್ಚಿಮ ಜೋಡಿಯಾಗಿ ಬರುತ್ತವೆ.
ಯಾವುದರ ಕುರಿತು ಆಸೆ ಹೋಯಿತೋ
ಅದನ್ನೆ ಬಯಸು
ದಾರಿ ಯಾವುದಕ್ಕೆ ಕಾಣಿಸದೋ
ಅದನ್ನು ಹುಡುಕಿಕೋ

ಪ್ರೀತಿಯೆಂದರೆ ಸಣ್ಣಗಾತ್ರದ ನದಿಯಲ್ಲ
ಸ್ವಲ್ಪಮಟ್ಟಿನ ಎತ್ತರವಾದ ಬೆಟ್ಟವಲ್ಲ.
ಅದು ಅವಧಿಯಿಲ್ಲದ ಅಹಂಕಾರವಿಲ್ಲದ ಮಹಾಸಮುದ್ರ
ಅಲ್ಲಿ ಈಜು ಯಾವಾಗಲೂ
ಮುಳುಗುವಿಕೆಯಿಂದ ಮುಗಿಯುತ್ತದೆ.

ಸಮುದ್ರದವರೆಗೂ ಪ್ರಯಾಣವೆಂದರೇ
ಕುದುರೆಗಳು ಬೇಕು, ಅವುಗಳಿಗೆ “ಮೇವು ಇಡಬೇಕು, ಪ್ರಯಾಸ ಪಡಬೇಕು”
ಆದರೆ, ನೆಲದ ಅಂಚಿಗೆ ಬರುವ ಸಮಯಕ್ಕೆ
ಎಲ್ಲಾ ಪಾದಮುದ್ರೆಗಳೂ ಅದೃಶ್ಯವಾಗುತ್ತವೆ.

ತೇವವಾಗದೆ ಇರುವುದಕ್ಕೆ
ಬಟ್ಟೆಯ ಕೊನೆಯನ್ನು ಮೇಲಕ್ಕೆ ಎತ್ತಿ ಹಿಡಿಯುವೆ ಯಾಕೆ?
ಬಾ ಬಂದು ಇಲ್ಲಿ ಸಮುದ್ರದಲ್ಲಿ ತಲೆ ತೇವವಾಗುವಂತೆ
ಮುಳುಗು.

ಅಹಂಕಾರ ಲಯಿಸಿದ ವಿಶಾಲ ಸಮುದ್ರದ ಮೇಲೆ
ತಣ್ಣನೆಯ ಚಂದ್ರನು ದಾಟಿ ಹೋಗುತ್ತಿದ್ದಾನೆ.
ಎದ್ದ ತಂಪೆರಲಗಳು ಮರಳಿ
ಅಲೆಗಳ ನೆತ್ತಿಯ ಮೇಲೆ ಜಾರಿ ಬೀಳುತ್ತಿದೆ.

ಕೊನೆಯಿಲ್ಲದ ಆ ಮಹಾಸಮುದ್ರದ ಮೇಲೆ
ಲಕ್ಷ ನಕ್ಷತ್ರಗಳ ಸಮೂಹಗಳೂ ಕೂಡಾ
ಸಣ್ಣ ಮಣ್ಣಿನ ಹೆಂಟೆಯೊಂದಿಗೆ ಸಮಾನ.

*******

ಸುಂಕುರ್

ಆ ಊರಿನ ಧನಿಕನಿಗೆ ಆಗಾಗ ಆವಿಸ್ನಾನ ಮಾಡುವ ಅಭ್ಯಾಸವಿದೆ.
ಒಂದು ದಿನ ಬೆಳಿಗ್ಗೆ ಸೇವಕ ’ಸುಂಕುರ್’ನನ್ನು ಏಳಿಸಿ
ತೇವದ ಮಣ್ಣು, ಹರಕುಬಟ್ಟೆ, ಅಗಲದ ಪಾತ್ರೆಯನ್ನು ತನ್ನ ಹಿಂದೆ ತರಲೆಂದು
ಆ ತಾವಿಗೆ ಹೊರಟುನಿಂತ. ಸುಂಕುರ್ ಕೂಡಾ ಹೇಳಿರುವುದನ್ನೆಲ್ಲಾ ತೆಗೆದುಕೊಂಡು
ಯಜಮಾನಿಯ ಹಿಂದೆ ಹೊರಟ.
ದಾರಿಯಲ್ಲಿ ಮಸೀದಿಯ ಮುಂದೆಯಿಂದ ಹೋಗುತ್ತೀರಬೇಕಾದರೆ
ನಮಾಜಿಗೆ ಸಮಯವಾಗಿದೆಯೆಂದು ಕರೆ ಕೇಳಿಸಿತು.
ಸುಂಕುರ್‌ಗೆ ಐದು ಸಾರಿ ನಮಾಜ್ ಎಂದರೆ ಪ್ರೀತಿ. “ಅಯ್ಯಾ!”

ಈ ಕುರ್ಚಿಯ ಮೇಲೆ ನೀವು ಸ್ವಲ್ಪಹೊತ್ತು ಕುಳಿತಿದ್ದರೇ
ನಾನು ಒಳಗೆ ಹೋಗಿ
“ನಿನ್ನ ಸೇವಕನನ್ನು ದಯೆಯಿಂದ ನೋಡುವ ನೀನು! ಎಂದು ಇರುವ ಅಮೃತವನ್ನು
ಬಾಯಿಪಾಠ ಮಾಡಿ ಬರುತ್ತೇನೆ” ಎಂದನು ವಿನಯವಾಗಿ.

ಪ್ರಾರ್ಥನೆಗಳು ಮುಗಿದ ಮೇಲೂ ಕೂಡಾ,
ಧರ್ಮದ ಹಿರಿಯರು ಉಳಿದವರು ಹೋದ ಮೇಲೆಯೂ ಕೂಡಾ,
ಸುಂಕುರ್ ಒಳಗಡೆಯೇ ಉಳಿದು ಹೋದ. ಯಜಮಾನಿ ನೋಡಿದ ನೋಡಿದ
ಕೊನೆಗೆ ಬೇಸರವಾಗಿ, ದನಿಯೇರಿಸಿ ಕರೆ
ಸುಂಕುರ್!
“ಈ ಬುದ್ಧಿವಂತ ನನ್ನನ್ನು ಬಿಡುತ್ತಿಲ್ಲ ಸ್ವಲ್ಪ ಸಮಯ ಸಹನೆಯಿಂದ ಇರಿ”
ಅದಕ್ಕೂ ಏಳುಪಟ್ಟು ಸಹನೆ ಹಿಡಿದಿದ್ದ ಯಜಮಾನಿ
ಈ ಸಾರಿ ಗಟ್ಟಿಯಾಗಿ ಕಿರುಚಿದ. ಸುಂಕುರ್

ಸುಂಕುರ್ ಉತ್ತರ ಯಾವಾಗಲೂ ಒಂದೇ “ಈಗಲೇ
ಆಗುವುದಿಲ್ಲ. ಆತ ನನ್ನನ್ನು ಇನ್ನೂ ಬಿಡುತ್ತಿಲ್ಲ ನಿನ್ನ ಹೊರತಾಗಿ
ಒಳಗೆ ಇನ್ನು ಯಾರೂ ಇಲ್ಲವಲ್ಲಾ! ಎಲ್ಲರೂ ಯಾವಾಗಲೋ ಹೊರಟುಹೋದರು.
ನಿನ್ನನ್ನು ಯಾರು ಅಲ್ಲಿಯೇ ನಿಲ್ಲಿಸುತ್ತಿರುವುದು?”
“ಇಲ್ಲ ಯಾರು ನನ್ನನ್ನು ಒಳಗೆ ನಿಲ್ಲಿಸುತ್ತಿದ್ದಾರೋ
ಆತನೇ ನಿನ್ನನ್ನು ಹೊರಗೆ ನಿಲ್ಲಿಸಿಕೊಳ್ಳುತ್ತಿದ್ದಾನೆ.
ಯಾರು ನಿನ್ನನ್ನು ಒಳಗೆ ಬರಲು ಬಿಡುತ್ತಿಲ್ಲವೋ
ಆತನೇ ನನ್ನನ್ನು ಹೊರಗೆ ಬರಲು ಬಿಡುತ್ತಿಲ್ಲ.”
ಎಂದನು ಸುಂಕುರ್ ಆ ಕಡೆಯಿಂದ.

********

ಬಿಳಿಹಸು

ಸುತ್ತಲೂ ಹಸಿರು ಬಯಲಿರುವ ಚೊಕ್ಕವಾದ ಕಾಡಿನ ಪ್ರದೇಶದಲ್ಲಿ
ಸುಂದರವಾದ ಬಿಳಿಹಸು ಒಂದೇ ಇರುತ್ತಿತ್ತು.
ಕತ್ತಲಾಗುವವರೆಗೂ ಚೆನ್ನಾಗಿ ಮೇಯ್ದು ಬಲಿಷ್ಠವಾಗಿದ್ದರೂ,
ರಾತ್ರಿಯಾಗುವ ಹೊತ್ತಿಗೆ ಭಯದಿಂದ ಗಾಬರಿಯಲ್ಲಿ ಕಳೆಯುತ್ತಿತ್ತು.
“ಹುಲ್ಲಿನ ಕಡ್ಡಿ ಉಳಿಯಲಿಲ್ಲ. ನಾಳೆ ಏನಿದೆ ತಿನ್ನುವುದಕ್ಕೆ?” ಎಂದು ನೆನೆದು
ಸೊರಗಿ ಬಡವಾಗಿ ಕಡ್ಡಿಪುಳ್ಳೆಯಂತೆ ಆಗುತ್ತಿತ್ತು.
ಬೆಳಗಾಗುವ ಸಮಯಕ್ಕೆ ಹುಲ್ಲು ಮತ್ತೆ ಮೊದಲಿನಂತೆ
ಸೊಂಟದ ಎತ್ತರ ಸೊಂಪಾಗಿ ಬೆಳೆದಿರುತ್ತಿತ್ತು.
ಹಸು ಮೇಯಲು ಶುರುಮಾಡಿ, ಕತ್ತಲಾಗುವ ವೇಳೆಗೆ
ಮೊದಲಿನಂತೆ ಮತ್ತೆ ಬಯಕೆಯಾಗುತ್ತಿತ್ತು.
ದಷ್ಟಪುಷ್ಟವಾಗಿ ಬಲವಾಗಿ ತಯಾರಾಗುತ್ತಿದ್ದಾದರೂ,
ರಾತ್ರಿಯ ವೇಳೆ ಮೊದಲಿನಂತೆ ಭಯ, ಗಾಬರಿಪಟ್ಟು,
ಮತ್ತೆ ಸೊರಗಿ ಬಡವಾಗಿ ಕಡ್ಡಿಪುಳ್ಳೆಯಂತೆ ಆಗುತ್ತಿತ್ತು.

ಹೀಗೆ ಮಾತುಮಾತಿಗೆ ಗಾಬರಿಯಾಗುವುದು,
ಅದಕ್ಕೆ ಯಾವಾಗಲೂ ಹೊಳೆಯಲಿಲ್ಲ-
“ಹಸಿರು ಬಯಲು ಮತ್ತೆ ಬೆಳೆಯದೆ
ಯಾವಾಗಲೂ ಇರಲಿಲ್ಲ. ಪ್ರತಿ ರಾತ್ರಿಯೇಕೆ ಭಯಗೊಳ್ಳುವುದು ನಾನು?” ಎಂದು.

ಈ ಹಸು ದೇಹಾತ್ಮ
ಹಸಿರು ಬಯಲು ಹೊರಗಿನ ಪ್ರಪಂಚ.
ಭಯಗಳಿಂದ ಸೊರಗಿ ಬರಡಾಗುತ್ತಾ,
ವರಗಳಿಂದ ಉಬ್ಬಿಹೋಗುತ್ತಿರುವುದು ದೇಹಾತ್ಮದ ಲಕ್ಷಣ.
ಓ ಬಿಳಿ ಹಸುವೇ!
ಏನು ನಡೆಯುತ್ತದೆಯೋ, ಏನು ನಡೆಯದೋ ಎಂಬ
ಕೊರಗಿನಿಂದ ಬದುಕನ್ನು ಭಾರ ಮಾಡಿಕೊಳ್ಳಬೇಡ.

****

ಮೌಲಾನಾ ಜಲಾಲುದ್ದೀನ್ ರೂಮೀ
13ನೇ ಶತಮಾನದ ಸೂಫಿ ಕವಿ. ಟರ್ಕಿ ದೇಶದಲ್ಲಿ ನೆಲೆಸಿದ್ದ ರೂಮೀಯ ಬೆಡಗಿನ ಪದ್ಯಗಳು ಆಧ್ಯಾತ್ಮವನ್ನು ಮತ್ತು ವಿವೇಕವನ್ನು ಒಳಗೊಂಡಿರುವಂತಹವು.

ದೀವಿ ಸುಬ್ಬಾರಾವ್
ತೆಲುಗಿನ ಖ್ಯಾತ ಕವಿ ಮತ್ತು ಸಾಹಿತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಸುಬ್ಬಾರಾವ್ ಅವರು 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಲಕ್ಕೂರು ಆನಂದ
ಕೇಂದ್ರ ಸಾಹಿತ್ಯ ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕವಿ. ತೆಲುಗಿನಿಂದ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ’ಊರಿಂದ ಊರಿಗೆ’, ’ಇಪ್ಪತ್ತರ ಕಲ್ಲಿನ ಮೇಲೆ’, ’ಬಟವಾಡೆಯಾಗದ ರಸೀತಿ’ ಇವರ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ಕವನ: ಅವಳು ಸಂಪೂರ್ಣವಾಗಿ ಪ್ರಕಟವಾಗದ ಕವಿತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...