ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ನಂತರ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಮಮತಾ ಬ್ಯಾನರ್ಜಿ ಆಡಳಿತದ ಪಶ್ಚಿಮ ಬಂಗಾಳದ ಮೇಲೆ ಕಣ್ಣಿಟ್ಟಿದೆ. 2023 ರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಆಪ್ ಸಿದ್ಧವಾಗಿದೆ.
“ಆಮ್ ಆದ್ಮಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ 2023 ರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಸ್ಥಳೀಯ ಘಟಕ ಈಗಾಗಲೇ ಪ್ರಚಾರ ಆರಂಭಿಸಿದೆ. ಎಎಪಿ ಮಾರ್ಚ್ 13 ರಂದು ಕೂಡ ಕೋಲ್ಕತ್ತಾದಲ್ಲಿ ರ್ಯಾಲಿ ನಡೆಸಿದೆ” ಎಂದು ಎಎಪಿಯ ಬಂಗಾಳ ಉಸ್ತುವಾರಿ ಸಂಜಯ್ ಬಸು ಎಎನ್ಐಗೆ ತಿಳಿಸಿದ್ದಾರೆ.
2014 ರಲ್ಲಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ರಾಜಕೀಯ ಪ್ರವೇಶ ಮಾಡಿರುವ ಆಮ್ ಆದ್ಮಿ ಪಕ್ಷಕ್ಕೆ ರಾಜ್ಯದಲ್ಲಿ ಗಟ್ಟಿ ನೆಲೆ ಇಲ್ಲ. ಆದರೂ, ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಾಗ ಆಪ್, ತೃಣಮೂಲ ಕಾಂಗ್ರೆಸ್ನ ಭದ್ರಕೋಟೆಯಲ್ಲಿ ತನ್ನ ನೆಲೆಯನ್ನು ಸ್ಥಾಪಿಸಲು ಪಂಚಾಯತ್ ಚುನಾವಣೆಗಳ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: `ಕಾಶ್ಮೀರ್ ಫೈಲ್ಸ್’ ಎಂದು ಕೂಗುತ್ತಿರುವವರಿಗೆ ‘ದಲಿತ್ ಫೈಲ್ಸ್’ ಕಾಣುವುದಿಲ್ಲವೇ?
ಭಾನುವಾರ (ಮಾರ್ಚ್ 13) ರಂದು ಪಂಜಾಬ್ನಲ್ಲಿ ಪಕ್ಷದ ಅಭೂತಪೂರ್ವ ಗೆಲುವನ್ನು ಆಚರಿಸಲು ಎಎಪಿಯ ಬಂಗಾಳ ಘಟಕವು ವಿಜಯೋತ್ಸವವನ್ನು ನಡೆಸಿತ್ತು.
ಎಎಪಿ ಬೆಂಬಲಿಗರು ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಪೋಸ್ಟರ್ಗಳನ್ನು ಮತ್ತು ಪಂಜಾಬ್ನ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪೋಸ್ಟರ್ಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸಿದ್ದಾರೆ.
‘ಪದಾರ್ಪಣ್ ಯಾತ್ರೆ’ ಎಂದು ಕರೆಯಲಾಗಿದ್ದ ಮೆರವಣಿಗೆಯನ್ನು ಗಿರೀಶ್ ಪಾರ್ಕ್ನಿಂದ ಕೋಲ್ಕತ್ತಾದ ಎಸ್ಪ್ಲನೇಡ್ವರೆಗೆ ನಡೆಸಲಾಗಿದೆ. ಇದು ಆಪ್ ಪಶ್ಚಿಮ ಬಂಗಾಳದಲ್ಲಿ ನಡೆಸಿದ ಮೊದಲ ರ್ಯಾಲಿ ಎಂದು ಹೇಳಲಾಗಿದೆ.
ಪಂಜಾಬ್ ಗೆಲುವಿನಿಂದ ಉತ್ಸಾಹಿತವಾಗಿರುವ ಪಕ್ಷ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಲು ನಿರ್ಧರಿಸಿದೆ.
ಇದನ್ನೂ ಓದಿ: ಭಗತ್ ಸಿಂಗ್ ಸ್ವಗ್ರಾಮದಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ಪಂಜಾಬ್ ಚುನಾಯಿತ ಮುಖ್ಯಮಂತ್ರಿ