ದ್ವೇಷ – ಅಸೂಯೆಗಳನ್ನು ಮೀರೋಣ, ಶಾಂತಿ ಸಾಮರಸ್ಯದ ದೇಶ ಕಟ್ಟೋಣ ಎಂಬ ಕರೆಯೊಂದಿಗೆ 2022ರ ಅಂಬೇಡ್ಕರ್ ಹಬ್ಬವನ್ನು ಆಚರಿಸಲು ಸ್ಫೂರ್ತಿಧಾಮ ಸಂಸ್ಥೆ ನಿರ್ಧರಿಸಿದೆ. ಏಪ್ರಿಲ್ 14 ರಂದು ಬೆಂಗಳೂರಿನ ಮಾಗಡಿ ರಸ್ತೆಯ ಅಂಜನಾನಗರದ ಸ್ಫೂರ್ತಿಧಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ‘ತಳಸ್ತರದವರ ಅಭಿವೃದ್ದಿ ಮತ್ತು ಏಳಿಗೆಗಾಗಿ ದುಡಿದ’ ಆರು ಹೋರಾಟಗಾರರಿಗೆ ಬೋಧಿವೃಕ್ಷ ಮತ್ತು ಬೋಧಿವರ್ಧನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗುರುವಾರ ನಡೆಯುವ ಅಂಬೇಡ್ಕರ್ ಹಬ್ಬದಲ್ಲಿ ಬೆಳಿಗ್ಗೆಯಿಂದಲೂ ಪ್ರೀತಿ-ಸಹಬಾಳ್ವೆಯನ್ನು ಎತ್ತಿ ಹಿಡಿಯುವ ಹಾಡು, ಕುಣಿತ, ಕಾವ್ಯ ವಾಚನ, ಚಿತ್ರಕಲೆ ಮತ್ತು ವಿಚಾರ ವಿನಿಮಯ ನಡೆಯಲಿದೆ. ಸಂಜೆ 6 ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ಸ್ಪೂರ್ತಿಧಾಮದ ಅಧ್ಯಕ್ಷರಾದ ಎಸ್.ಮರಿಸ್ವಾಮಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯಾಯಮೂರ್ತಿ ವಿ.ಗೋಪಾಲಗೌಡರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಹಿರಿಯ ಹೋರಾಟಗಾರರಾದ ಜಿ.ರಾಮಕೃಷ್ಣರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೋದಿವೃಕ್ಷ ಪ್ರಶಸ್ತಿಗೆ ಆಯ್ಕೆಯಾದ ಡಾ.ಆರ್.ಎಸ್ ಪ್ರವೀಣ್ ಕುಮಾರ್
ತೆಲಂಗಾಣದ ಮೆಹಬೂಬ್ನಗರ ಜಿಲ್ಲೆಯ ಅಲ್ಲಂಪುರ ಗ್ರಾಮದವರಾದ ಡಾ.ಆರ್.ಎಸ್ ಪ್ರವೀಣ್ ಕುಮಾರ್ರವರು ಐಪಿಎಸ್ ಅಧಿಕಾರಿಯಾಗಿದ್ದರು. ತಮ್ಮ ವೃತ್ತಿಗೆ ರಾಜೀನಾಮೆ ಸಲ್ಲಿಸಿ ಸಂಪೂರ್ಣ ಸಮಯವನ್ನು ತಳಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ಮೆಲ್ದರ್ಜೆಗೇರಿಸುವುದು, ಕೂಲಿಕಾರರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತೆಲಂಗಾಣ ರಾಜ್ಯಾದ್ಯಂತ ಬಹುಜನ ಯಾತ್ರೆ ನಡೆಸುತ್ತಾ ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆಗಾಗಿ ದುಡಿಯುತ್ತಿದ್ದಾರೆ. ಇವರು ಈ ಬಾರಿಯ ಸ್ಪೂರ್ತಿಧಾಮ ನೀಡುವ ಬೋದಿವೃಕ್ಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೋದಿವರ್ಧನ ಪ್ರಶಸ್ತಿಗೆ ಆಯ್ಕೆಯಾದವರು
ಸ್ಪೂರ್ತಿಧಾಮ ಸಂಸ್ಥೆಯು ಐವರು ಹೋರಾಟಗಾರರಿಗೆ ಬೋದಿವರ್ಧನ ಪ್ರಶಸ್ತಿ ನೀಡುತ್ತಿದೆ. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಮಂಡ್ಯದ ಗುರುಪ್ರಸಾದ್ ಕೆರಗೋಡುರವರು, ರಾಜ್ಯಾದ್ಯಂತ ಆಶಾ ಕಾರ್ಯಕರ್ತರನ್ನು ಸಂಘಟಿಸುತ್ತಿರುವ ಬಳ್ಳಾರಿಯ AIMSS ಸಂಘಟನೆಯ ಡಿ.ನಾಗಲಕ್ಷ್ಮಿಯವರು, ಯುವಜನರಲ್ಲಿ ಬುದ್ದ ಧರ್ಮದ ಅರಿವು ಮೂಡಿಸುತ್ತಿರುವ ಕೋಲಾರದ ಪದ್ಮಾಲಯ ನಾಗರಾಜ್ರವರು, ಆದಿವಾಸಿಗಳ ಹಕ್ಕುಗಳಿಗಾಗಿ ಹಲವು ದಶಕಗಳಿಂದ ಹೋರಾಡುತ್ತಿರುವ ಉತ್ತರ ಕನ್ನಡದ ಡಾ.ಬಿ.ಪಿ ಮಹೇಂದ್ರ ಕುಮಾರ್ರವರು ಮತ್ತು ದಾದಿಯಾಗಿ ಬಡಜನರ ಸೇವೆಗೈಯುತ್ತಿರುವ ಮೈಸೂರಿನ ಮೇರಿ ಲೋಬೋರವರು ಬೋದಿವರ್ಧನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೋಧಿವೃಕ್ಷ ಪ್ರಶಸ್ತಿಯು ಒಂದು ಲಕ್ಷ ರೂ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದ್ದರೆ, ಬೋದಿವರ್ಧನ ಪ್ರಶಸ್ತಿಗಳು ತಲಾ 25 ಸಾವಿರು ರೂ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ದೇಶದ ಸಾಕ್ಷಿಪ್ರಜ್ಞೆ ಬಾಬಾಸಾಹೇಬರ ಬೌದ್ಧಿಕ ವಾರಸುದಾರ: ಚಿಂತಕ ಆನಂದ್ ತೇಲ್ತುಂಬ್ಡೆ



It’s good