ತಮಿಳುನಾಡಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರಾಜ್ಯದ ತಿರುವಲ್ಲೂರ್ ಪಶ್ಚಿಮದ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿರುವ ಸತೀಶ್ ಕುಮಾರ್ ಎಂಬುವವರು ತನ್ನ ಕಾರಿಗೆ ತಾನೇ ಬೆಂಕಿ ಹಚ್ಚಿ, ದುಷ್ಕರ್ಮಿಗಳಿಂದ ನಡೆದ ಕೃತ್ಯ ಎಂದು ದೂರು ನೀಡಿ ಈಗ ಸಿಕ್ಕಿಬಿದ್ದಿದ್ದಾರೆ.
ಏಪ್ರಿಲ್ 14ರ ರಾತ್ರಿ ಸತೀಶ್ ಕುಮಾರ್ ಎಂಬುವವರು ‘ತನ್ನ ಕಾರಿನ ಮೇಲೆ ಪೆಟ್ರೋಲ್ ದಾಳಿ ನಡೆದಿದೆ, ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸರಿಗೆ ದೂರು ನೀಡಿದ್ದರು. ಚೆನ್ನೈನ ಮಧುರವಾಯಲ್ ಪ್ರದೇಶದಲ್ಲಿರುವ ಅವರ ಮನೆಯ ಎದುರು ನಿಲ್ಲಿಸಲಾಗಿದ್ದ ಕಾರಿಗೆ ಹಾನಿಯುಂಟಾಗಿದೆ ಎಂದು ಆರೋಪಿಸಿದ್ದರು.
ಈ ಕುರಿತು ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಆ ರಸ್ತೆಯಲ್ಲಿರುವ ಸುತ್ತಲಿನ ಮನೆಗಳ ಎದುರು ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದರು. ರಸ್ತೆ ಬದಿಯಲ್ಲಿದ್ದ ಒಂದು ಮನೆ ಮುಂದಿನ ಸಿಸಿಟಿವಿಯಲ್ಲಿ ಘಟನೆಯ ಪೂರ್ಣ ದೃಶ್ಯಗಳು ಸೆರೆಯಾಗಿದ್ದವು. ಅದರಲ್ಲಿ ಸ್ಕಾರ್ಪಿಯೊ ಕಾರು ಮನೆ ಮುಂದೆ ನಿಂತಿದ್ದಾಗ ಅಲ್ಲಿಗೆ ಸೈಕಲ್ನಲ್ಲಿ ಬಂದ ಬಿಳಿ ಬಣ್ಣದ ಶರ್ಟ್ ಧರಿಸಿದ್ದ ಬಾಲಕನೊಬ್ಬ ಕಾರಿನ ಕಿಟಕಿಯಲ್ಲಿ ಇಣುಕಿ ನೋಡಿ ಅಲ್ಲಿಂದ ಹೊರಡುತ್ತಾರೆ. ಸ್ವಲ್ಪ ಸಮಯದಲ್ಲಿಯೇ ಕಪ್ಪು ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಬಂದು ಕಾರಿಗೆ ಪೆಟ್ರೋಲ್ ರೀತಿಯ ವಸ್ತುವನ್ನು ಸುರಿದು ಬೆಂಕಿ ಹಚ್ಚಿ ಪರಾರಿಯಾಗುವುದು ದಾಖಲಾಗಿದೆ.
Tamil Nadu BJP district secretary of Tiruvallur West, Sathish Kumar arrested for setting fire to his car on his own. Initially there were speculation in the media that petrol bombs were hurled on the car. pic.twitter.com/EX3iSGWKF2
— Mohammed Zubair (@zoo_bear) April 17, 2022
ಇದನ್ನೂ ಓದಿ: ಹುಬ್ಬಳ್ಳಿ ಉದ್ವಿಗ್ನ: ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿ ಅಭಿಷೇಕ್ ಹೀರೆಮಠ ಬಂಧನ
ತದನಂತರ ಅಕ್ಕಪಕ್ಕದ ಮನೆಯ ಜನರು ಹೊರಬಂದು ಕಾರಿಗೆ ಬೆಂಕಿ ಬಿದ್ದಿರುವುದನ್ನು ಬಿಜೆಪಿ ಮುಖಂಡನ ಕುಟುಂಬದ ಗಮನಕ್ಕೆ ತರುತ್ತಾರೆ. ಪೊಲೀಸರಿಗೆ ಕರೆ ಮಾಡಿ ಪೆಟ್ರೋಲ್ ಬಾಂಬ್ ಹಾಕಿರಬಹುದೆಂದು ಅನುಮಾನ ವ್ಯಕ್ತಪಡಿಸಿರುತ್ತಾರೆ.
ಆದರೆ ದೂರು ನೀಡಿದ ಬಿಜೆಪಿ ಮುಖಂಡ ಸತೀಶ್ ನಡವಳಿಕೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ಪೊಲೀಸರಿಗೆ ಕಾರಿಗೆ ಬೆಂಕಿ ಹಚ್ಚಿದ ವ್ಯಕ್ತಿ ಸತೀಶ್ ಕುಮಾರ್ ಅವರನ್ನೇ ಹೋಲುತ್ತಿದ್ದಾನೆ ಎಂದು ಶಂಕಿಸಿದ್ದಾರೆ. ಪೊಲೀಸರು ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸತೀಶ್ ತನ್ನ ಸ್ವಂತ ಕಾರಿಗೆ ತಾನೇ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾನೆ!
ಬೆಂಕಿ ಹಚ್ಚಲು ಕಾರಣವೇನು?
ತನ್ನ ಕಾರಿಗೆ ತಾನೇ ಬೆಂಕಿ ಹಚ್ಚಲು ಕಾರಣವೇನೆಂದು ಸತೀಶ್ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ. “ನನ್ನ ಪತ್ನಿ ಒಡವೆಗಳನ್ನು ಕೊಡಿಸುವಂತೆ ಪದೇ ಪದೇ ಒತ್ತಾಯ ಮಾಡುತ್ತಿದ್ದಳು. ಆದರೆ ನನಗೆ ಕೊಡಿಸಲು ಆಗಿರಲಿಲ್ಲ. ನನ್ನ ಬಳಿ ಹಣವಿಲ್ಲವೆಂದು ಹೇಳಿದರೂ ಕೇಳದೆ ಕಾರನ್ನು ಮಾರಿಯಾದರೂ ಒಡವೆ ಕೊಡಿಸಿ ಎಂದು ದುಂಬಾಲು ಬಿದ್ದಿದ್ದಳು. ಹಾಗಾಗಿ ಕಾರಿಗೆ ಬೆಂಕಿ ಹಚ್ಚಿ ಬರುವ ಇನ್ಶೂರೆನ್ಸ್ ಹಣದಲ್ಲಿ ಒಡವೆ ಕೊಡಿಸಲು ಈ ಕೃತ್ಯ ಎಸಗಿದೆ” ಎಂದು ಒಪ್ಪಿಕೊಂಡಿದ್ದಾನೆ.
ಈ ಕೃತ್ಯದ ಕುರಿತು ಪ್ರಕರಣ ದಾಖಲಿಸಿದರು ಪೊಲೀಸರು ಸತೀಶ್ಕುಮಾರ್ನನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.