| ನಾನುಗೌರಿ ಡೆಸ್ಕ್ |
ಮುಸ್ಲಿಂ ಯುವಕರೇನಾದರೂ ಬುಡಕಟ್ಟು ಮಹಿಳೆಯರನ್ನು ಹಿಂಬಾಲಿಸಿದರೆ ಅವರ ತಲೆ ತೆಗೆಯುತ್ತೇವೆ ಎಂದು ತೆಲಂಗಾಣದ ಆದಿಲ್ಬಾದ್ ನ ಸಂಸದ ಸೋಯಮ್ ಬಾಪು ಹೇಳಿಕೆ ನೀಡುವ ಮೂಲಕ ವಿವಾದ ಉಂಟು ಮಾಡಿದ್ದಾರೆ. ಇವರ ಹೇಳಿಕೆಯನ್ನು ಖಂಡಿಸಿ ಸಾಜಿದ್ ಖಾನ್ ಎಂಬುವವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ.. ನಾನು ಮುಸ್ಲಿಂ ಯುವಕರಿಗೆ ಒಂದನ್ನು ಹೇಳಲು ಬಯಸುತ್ತೇನೆ. ಆದಿಲ್ಬಾದ್ನಲ್ಲಿ ನಮ್ಮ ಹುಡುಗಿಯನ್ನು ಯಾವುದೇ ಕಾರಣಕ್ಕೂ ಹಿಂಬಾಲಿಸಬೇಡಿ. ಒಂದು ವೇಳೆ ಹಿಂಬಾಲಿಸಿದ್ದೇ ಆದಲ್ಲಿ ನಿಮಗೆ ತೊಂದರೆ ತಪ್ಪಿದ್ದಲ್ಲ ನಿಮ್ಮ ಶಿರಚ್ಛೇಧನ ಮಾಡಬೇಕಾಗುತ್ತದೆ ಎಂದಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೂರು ನೀಡಿರುವ ಸಾಜಿದ್ ಖಾನ್ ಎಂಬುವವರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಇನ್ನು ಸಂಸದರಾದವರು ಈ ಕ್ಷೇತ್ರದ ಪ್ರತಿಯೊಬ್ಬರ ಜನಪ್ರತಿನಿಧಿಯಾಗಿದ್ದು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿಯ ಎಂ.ಕ್ರಿಶಾಂಕ್ರವರು ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಒಂದು ಕಡೆ ಪ್ರಧಾನಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುತ್ತಾರೆ. ಇನ್ನೊಂದು ಕಡೆ ಅವರದೇ ಪಕ್ಷದ ಸಂಸದರು ತೆಲಂಗಾಣದಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಇಂತಹ ಕೋಮು ವಿರೋಧಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದಿದ್ದಾರೆ.
ತೆಲಂಗಾಣದಲ್ಲಿ ಬಿಜೆಪಿ ಮುಖಂಡರು ಮುಸ್ಲಿಮರನ್ನು ಗುರಿಯಾಗಿಸಿ ಈ ರೀತಿಯ ವಿವಾದಾತ್ಮಕ ಹೇಳಿಕೆ ಕೊಡುತ್ತಿರುವುದು ಇದೇ ಮೊದಲೇನಲ್ಲ. 2018ರ ಜುಲೈನಲ್ಲಿಯೂ ಕೂಡ ಅಂಬೇಡ್ಕರ್ ನಗರ ಸಂಸದ ಹರಿ ಓಂ ಪಾಂಡೆಯವರು ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದಂತೆಲ್ಲಾ ಅತ್ಯಾಚಾರ ಮತ್ತು ಅಪರಾಧಗಳ ಪ್ರಮಾಣವು ಹೆಚ್ಚುತ್ತಿವೆ ಎಂದು ಹೇಳಿ ವಿವಾದ ಹುಟ್ಟುಹಾಕಿದ್ದರು.