ರಾಜ ರಾಜ ಚೋಳ ಹೇಳಿಕೆ ವಿವಾದದಲ್ಲಿ ವಿಚಾರಣೆ ಎದುರಿಸುತ್ತಿದ್ದ ಪ.ರಂಜಿತ್ ರವರಿಗೆ ಮದ್ರಾಸ್ ಹೈಕೋರ್ಟ್ನ ಮಧುರೈ ನ್ಯಾಯಪೀಠವು ಜಾಮೀನು ನೀಡಿದೆ. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ರಾಜಮಣಿಕಂ ಅವರು ಕಾಲಾ ನಿರ್ದೇಶಕರನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಪರೂಪದ ಚಿತ್ರನಿರ್ದೇಶಕ ಪಾ.ರಂಜಿತ್ನ ಇತ್ತೀಚಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದರು. ಇದಕ್ಕೆ ಬಾಲಾ ಎನ್ನುವವವರು ಪೋಲಿಸ್ ಸ್ಟೇಶನ್ನಲ್ಲಿ “ರಂಜಿತ್ ಅವರು ಮಾಡುತ್ತಿರುವ ಸಿನಿಮಾ, ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯ ವೈಷಮ್ಯವನ್ನು ಬೆಳೆಸುತ್ತದೆ” ಎನ್ನುವ ಕಾರಣ ಕೊಟ್ಟು ದೂರನ್ನೂ ದಾಖಲಿಸಿದ್ದರು.
ಈ ತೀರ್ಪು ಒಂದು ರೀತಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಿಕ್ಕ ಗೆಲುವು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಪ.ರಂಜಿತ್ ರವರು ಜೂನ್ 12 ರಂದು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಮೊದಲ ವಿಚಾರಣೆಯ ಸಮಯದಲ್ಲಿ ನಿರ್ದೇಶಕರ ಪರ ವಕೀಲರು ಈ ಭಾಷಣವು ಪ್ರಕಟಿತ ಪುಸ್ತಕಗಳ ಸಂಶೋಧನೆಯ ಮೇಲೆ ಆಧಾರಿತವಾಗಿದೆ ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಗುರಿಯನ್ನು ಹೊಂದಿಲ್ಲ ಎಂದು ವಾದಿಸಿದರು.
ಇದನ್ನು ಓದಿ: ಪ.ರಂಜಿತ್ ಬೆಂಬಲಕ್ಕೆ ನಿಂತ 300ಕ್ಕೂ ಹೆಚ್ಚು ಕಲಾವಿದರು. ಆನ್ ಲೈನ್ ಪಿಟಿಷನ್ ಆರಂಭ
ಜಾಮೀನು ನೀಡಿರುವ ನ್ಯಾಯಾಧೀಶರು ಭವಿಷ್ಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡದಂತೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಒಂದು ವೇಳೆ ಮೀರಿದ್ದಲ್ಲಿ ಜಾಮೀನು ರದ್ದುಗೊಳಿಸುವುದಾಗಿಯೂ ಹೇಳಿದ್ದಾರೆ. ಪ.ರಂಜಿತ್ ರವರು ತಮ್ಮ ವಿರುದ್ಧದ ಅರ್ಜಿಯನ್ನು ರದ್ದುಗೊಳಿಸುವಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಜುಲೈ 8ರಂದು ನಡೆಯಲಿದೆ.
ನ್ಯಾಯಮೂರ್ತಿ ಭಾರತಿದಾಸನ್ ರವರು ಪ್ರತಿಕ್ರಿಯಿಸಿ ವಾಕ್ ಸ್ವಾತಂತ್ರ್ಯಕ್ಕೆ ಮಿತಿಗಳಿವೆ ಎಂದು ಹೇಳಿದ್ದಲ್ಲದೇ, ರಾಜಾ ರಾಜ ಚೋಳ ದಲಿತರಿಂದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದಕ್ಕೆ ಪುರಾವೆ ಕೇಳಿದರು. ಮುಂದಿನ ವಿಚಾರಣೆಯ ವೇಳೆಗೆ ಸಾಕ್ಷ್ಯಗಳೊಂದಿಗೆ ಪ್ರತಿಕ್ರಿಯೆ ಅರ್ಜಿಯನ್ನು ಸಲ್ಲಿಸುವಂತೆ ಅವರು ತಿರುಪ್ಪಾನಂದಲ್ ಪೊಲೀಸರಿಗೆ ನಿರ್ದೇಶನ ನೀಡಿದರು.
ಬ್ಲೂ ಟೈಗರ್ಸ್ ಪಾರ್ಟಿ (ನೀಲಾ ಪುಲಿಗಲ್ ಇಯಕ್ಕಂ) ಯ ಸಂಸ್ಥಾಪಕ ಉಮರ್ ಫಾರೂಕ್ ಅವರ ನಿಧನದ ವಾರ್ಷಿಕೋತ್ಸವದ ನೆನಪಿಗಾಗಿ ಜೂನ್ 5 ರಂದು ಕುಂಬಕೋಣಂನ ತಿರುಪ್ಪಾನಂದಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನಿರ್ದೇಶಕ ಪಾ ರಂಜಿತ್ ಮಾಡಿದ್ದ ಭಾಷಣ ವೈರಲ್ ಆಗಿತ್ತು.
ರಂಜಿತ್ ಅವರ ಜಾಮೀನು ಅರ್ಜಿಯಲ್ಲಿ, “ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ, ನಾನು ರಾಜ ರಾಜ ಚೋಳರ ಕುರಿತ ಕೆಲವು ಸತ್ಯಗಳನ್ನು ಮಾತ್ರ ಮಾತನಾಡಿದ್ದೇನೆ. ಜಾತಿವಾದವನ್ನು ತೆಗೆದುಹಾಕುವುದು ಹೇಗೆ? ಜಾತಿರಹಿತ ಸಮಾಜವನ್ನು ಹೇಗೆ ರಚಿಸುವುದು? ಭೂಹೀನ ಜನರ ಅವಸ್ಥೆ, ವಿಶೇಷವಾಗಿ ಉಮರ್ ಫಾರೂಕ್ ಅವರ ಸೆಂಥಾಮಿಜ್ ನಾತು ಚೆರಿಗಲ್ ನಲ್ಲಿ ಉಲ್ಲೇಖಿಸಲಾದ ಡೆಲ್ಟಾ ಪ್ರದೇಶಗಳ ಅವಸ್ಥೆ ಸೇರಿದಂತೆ ನಾನು ಈ ಎಲ್ಲದರ ಬಗ್ಗೆ ಮಾತನಾಡಿದೆ ಎಂದಿದ್ದಾರೆ”
ಆಧಾರ: ದಿ ನ್ಯೂಸ್ ಮಿನಿಟ್