ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ಮಾಡಿರುವ ಎಡವಟ್ಟುಗಳ ವಿರುದ್ಧ ಬಿಜೆಪಿ ನಾಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಐವರು ಬಿಜೆಪಿ ನಾಯಕರು ಈವರೆಗೆ ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವರಾದ ವಿ.ಶ್ರೀನಿವಾಸ ಪ್ರಸಾದ್, “ಪಠ್ಯಪುಸ್ತಕಕ್ಕೆ ಸಾಕಷ್ಟು ಪರವಿರೋಧ ಬಂದಿದೆ. ಸಮಿತಿ ಎಡವಿದೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂಬುದನ್ನು ತೆಗೆದಿರುವುದಾಗಿರಬಹುದು, ಬಸವಣ್ಣನವರ ಬಗ್ಗೆ ಇರಬಹುದು ಇದನ್ನೆಲ್ಲ ಒಪ್ಪಿಕೊಳ್ಳಲೇಬೇಕು. ಇದನ್ನೆಲ್ಲವನ್ನೂ ಪುನರ್ ಪರಿಶೀಲನೆ ನಡೆಸುವುದಾಗಿ ಸಿಎಂ ಹೇಳಿದ್ದಾರೆ” ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸರ್ಕಾರಕ್ಕೆ ಪತ್ರ ಬರೆದಿರುವ ನಂಜನಗೂಡು ಶಾಸಕ ಬಿ.ಹರ್ಷವರ್ದನ್, “ಈ ಸಾಲಿನ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಎಡವಟ್ಟಿನಿಂದಾಗಿ ರಾಜ್ಯದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿದ್ದು, ಪ್ರಸ್ತುತ ಸಿದ್ಧಗೊಂಡಿರುವ ಪಠ್ಯಪುಸ್ತಕಗಳು ಯಾರಿಗೂ ತೃಪ್ತಿ ತಂದಂತಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ರವರ ಕುರಿತ ಪಾಠದಲ್ಲಿ ‘ಸಂವಿಧಾನ ಶಿಲ್ಪಿ’ ಎನ್ನುವ ವಿಶೇಷಣವನ್ನು ಕೈಬಿಟ್ಟಿರುವುದು ಅತ್ಯಂತ ಖಂಡನೀಯ. ಆ ಪದವನ್ನು ತೆಗೆಯುವ ಏನಿತ್ತೋ ಗೊತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಪಠ್ಯದಲ್ಲಿ ಬಸವಣ್ಣನವರ ಚಿತ್ರಣವೂ ಅವರ ಬದುಕು ಮತ್ತು ಆಶಯಗಳಿಗೆ ತಕ್ಕಂತೆ ಇಲ್ಲ. ಕುವೆಂಪು ಮತ್ತು ಅವರು ರಚಿಸಿರುವ ನಾಡಗೀತೆಗೆ ಪರಿಷ್ಕರಣಾ ಸಮಿತಿ ಅಧ್ಯಕ್ಷರು ಅವಮಾನಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಟಿಪ್ಪಣಿಗಳಲ್ಲಿ ಕೆಲವರಿಗೆ ಏಕವಚನ ಮತ್ತೆ ಕೆಲವರಿಗೆ ಬಹುವಚನ ಪದ ಬಳಸಿರುವ ಬರವಣಿಗೆಗಳು ಸಹ ಟೀಕೆಗೆ ಒಳಗಾಗಿವೆ. ಪರಿಷ್ಕೃತ ಪಠ್ಯಗಳ ಬಗ್ಗೆ ಕನ್ನಡಪರ ಸಂಘಟನೆಗಳು ದಲಿತಪರ ಸಂಘಟನೆಗಳು, ಮಠಾಧೀಶರು, ಶಿಕ್ಷಣತಜ್ಞರು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಷ್ಕೃತ ಪಠ್ಯಗಳಲ್ಲಿ ಇರುವ ಲೋಪದೋಷಗಳ ಕುರಿತು ಸಾರ್ವಜನಿಕ ವಲಯದಿಂದಲೂ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿದೆ” ಎಂದು ಉಲ್ಲೇಖಿಸಿದ್ದಾರೆ.

“ನಮ್ಮ ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಗೊಂದಲದ ಗೂಡಾಗಿರುವ ಈ ಪಠ್ಯಪುಸ್ತಕಗಳನ್ನು ತಡೆಹಿಡಿದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪಠ್ಯಗಳನ್ನೇ ಮುಂದುವರೆಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯವಾಗಿರುವ ಕ್ರಮ. ಹಾಗಾಗಿ ಪರಿಷ್ಕರಣಾ ಗೊಂದಲಗಳಿಗೆ ಆಸ್ಪದ ಕಲ್ಪಿಸದೇ ಆದಷ್ಟು ಸರ್ವ ಸಮ್ಮತ ಪಠ್ಯಪುಸ್ತಕಗಳನ್ನು ನೀಡುವ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಎಳೆಯಬೇಕಿದೆ” ಎಂದಿದ್ದಾರೆ.
ವಿವಾದದ ಆರಂಭದಲ್ಲೇ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯರಾದ ಅಡಗೂರು ಎಚ್.ವಿಶ್ವನಾಥ್, “ರೋಹಿತ್ ಚಕ್ರತೀರ್ಥ ಶಿಕ್ಷಣ ತಜ್ಞ ಅಲ್ಲ. ಶಿಕ್ಷಣ ತಜ್ಞರಲ್ಲದವರು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿರುವುದು ದುರಂತ” ಎಂದಿದ್ದರು.
“ಮನಸ್ಸಿಗೆ ಬಹಳ ಬೇಜಾರಾಗುತ್ತಿದೆ. ಪಠ್ಯಪುಸ್ತಕ ಎಂಬುದು ರಾಜಕೀಯ ಸಂಘರ್ಷವಲ್ಲ. ಒಂದು ಸರ್ಕಾರದ ನೀತಿಯ ಮೇಲೆ ಅವುಗಳು ರಚನೆಯಾಗಬಾರದು. ಇನ್ನೊಂದು ಸರ್ಕಾರ ಅವುಗಳನ್ನು ಬದಲಿಸುವುದು ಸರಿಯಲ್ಲ” ಎಂದು ತಿಳಿಸಿದ್ದರು.
“ಇವತ್ತು ನಾವು ಶಿಕ್ಷಣವನ್ನು ಹಾಳು ಮಾಡಿದರೆ ದೇಶವನ್ನು ಹಾಳು ಮಾಡಿದ ಹಾಗೆ ಅರ್ಥ. ಈ ರೋಹಿತ್ ಚಕ್ರತೀರ್ಥ ಎಂಬುವವರು ಯಾರು? ನೀನೇನು ಪ್ರೊಫೆಸರ? ಯಾವ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಿದ್ದೀಯ? ನೀವು ಸಂಘಪರಿವಾರದ ಕಾರ್ಯಕರ್ತ ಅಷ್ಟೇ” ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.
“ಹೆಡಗೇವಾರ್ ಪಠ್ಯ ಸೇರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಟಿಪ್ಪು ಸುಲ್ತಾನ್ಗೂ ಹೆಡಗೇವಾರ್ಗೂ ಹೋಲಿಕೆ ಸಾಧ್ಯವಿಲ್ಲ. ಟಿಪ್ಪು ಸುಲ್ತಾನ್ ದೇಶಕ್ಕಾಗಿ ತನ್ನ ಮಕ್ಕಳನ್ನೆ ಒತ್ತೆ ಇಟ್ಟವನು. ಆತ ಬ್ರೀಟಿಷರ ಎದುರು ಮಂಡಿಯೂರಲಿಲ್ಲ. ಆದರೆ ಹೆಡಗೇವಾರ್ ಯಾರು? ಅವರ ಕೊಡುಗೆಯೇನು? ಆತ ಆರ್ಎಸ್ಎಸ್ ಸ್ಥಾಪಕ ಅಷ್ಟೆ” ಎಂದು ಹೇಳಿದ್ದರು.
ಇದನ್ನೂ ಓದಿರಿ: ಮರ್ಯಾದೆಗೇಡು ಹತ್ಯೆ: ಸಾವಿನ ಕುರಿತು ಮೊದಲೇ ಬರೆದಿದ್ದ ಯುವತಿ; ಪತ್ರದಲ್ಲೇನಿದೆ?
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು, “ಸಂವಿಧಾನ ಶಿಲ್ಪಿ ಪದವನ್ನು ಪಠ್ಯದಲ್ಲಿ ಮತ್ತೆ ಹಾಕುವ ಮೂಲಕ ನಮ್ಮ ಸರ್ಕಾರ ಅಂಬೇಡ್ಕರ್ ಕುರಿತು ಹೊಂದಿರುವ ಗೌರವ ಮತ್ತು ಬದ್ಧತೆಯನ್ನು ಸಾಬೀತು ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ನಮ್ಮ ಸಂವಿಧಾನ ಎಂಬ ಪಾಠದಲ್ಲಿ ಡಾ.ಅಂಬೇಡ್ಕರ್ ಅವರ ಆತ್ಮವೇ ಆಗಿರುವ ಸಂವಿಧಾನ ಶಿಲ್ಪಿ ಎಂಬ ನಾಮಾಂಕಿತವನ್ನು ಕೈಬಿಟ್ಟಿದ್ದು ವಿಕೃತ ನಡೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಈ ಪ್ರಮಾದವನ್ನು ಸರಿಪಡಿಸಿ ಮುದ್ರಿಸುವುದಾಗಿ ಶಿಕ್ಷಣ ಸಚಿವರು ಹೇಳಿರುವುದು ಅಭಿನಂದನೀಯ” ಎಂದಿದ್ದಾರೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ಪ್ರತಿಕ್ರಿಯೆ ನೀಡಿದ್ದು, “6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಭಾಗ-2ರ ಪುಟ ಸಂಖ್ಯೆ 82ರಲ್ಲಿ ಸುರಪುರ ನಾಯಕರು ಶೀರ್ಷಿಕೆಯಡಿ ಸುರಪುರ ರಾಜ ವೆಂಕಟಪ್ಪ ನಾಯಕರ ಭಾವಚಿತ್ರವನ್ನು ಒಳಗೊಂಡ ವಿಸ್ತಾರವಾದ ಒಂದು ಪುಟದ ಪಠ್ಯವು ಇತ್ತು. ಶೀರ್ಷಿಕೆ ಮತ್ತು ವೆಂಕಟಪ್ಪ ನಾಯಕರ ಚಿತ್ರ ತೆಗೆದುಹಾಕಿ ಪಠ್ಯ ವಿಷಯ ಕಡಿತ ಮಾಡಿದ್ದು ಬೇಸರದ ಸಂಗತಿ” ಎಂದು ಹೇಳಿದ್ದಾರೆ.



Correct openions by leaders who are for survival in politics jooined BJP. Otherwise they are not followers dividing politics.
Hat’s off sir’s