ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸೋಮವಾರ ಮಧ್ಯಾಹ್ನ ಜಿಲ್ಲೆಯ ಮಹೈಸಾಲ್ ಪಟ್ಟಣದಲ್ಲಿ ಒಂದೇ ಕುಟುಂಬದ ಒಂಬತ್ತು ಸದಸ್ಯರು ಶವವಾಗಿ ಪತ್ತೆಯಾಗಿದ್ದ ಘಟನೆ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಸಾಲಗಾರರ ಕಿರುಕುಳವೇ ಸಾವಿಗೆ ಕಾರಣ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ತನಿಖೆ ನಡೆಸಿದ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಡ್ಡಿದಾರರು ಸೇರಿದಂತೆ 13 ಜನ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಕುಟುಂಬಕ್ಕೆ ಕಿರುಕುಳ ನೀಡಿದ್ದಕ್ಕಾಗಿ ಸೋಮವಾರ ರಾತ್ರಿ 25 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅದರಲ್ಲಿ ಈವರೆಗೆ 13 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯ್ದೆಯನ್ನು ಸಹ ಪೊಲೀಸರು ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಸಂಕಷ್ಟ: ಸರ್ಕಾರದ ಅಳಿವು-ಉಳಿವಿನ ನಂಬರ್ ಗೇಮ್ ಹೀಗಿದೆ
ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಅಜಯ್ ಸಿಂದ್ಕರ್ ಮಾತನಾಡಿ, “ವಾನ್ಮೋರ್ ಸಹೋದರರು ಮತ್ತು ಕುಟುಂಬದ ಇತರ ಕೆಲವು ಸದಸ್ಯರು ಆರೋಪಿ ಲೇವಾದೇವಿಗಾರರಿಂದ ಬಡ್ಡಿಗೆ ಸಾಲ ಪಡೆದಿದ್ದರು. ಅವರು ನಿಯಮಿತವಾಗಿ ಬಡ್ಡಿಯ ಮೊತ್ತವನ್ನು ಪಾವತಿಸುತ್ತಿದ್ದರೂ, ಲೇವಾದೇವಿಗಾರರು ಮತ್ತು ಇತರ ಆರೋಪಿಗಳು ಪದೇ ಪದೇ ಸಾರ್ವಜನಿಕವಾಗಿ ಅವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಕಿರುಕುಳ ಸಹಿಸಲಾಗದೆ ಎಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಸದ್ಯ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ 12 ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಸಾಂಗ್ಲಿ, ಕೊಲ್ಲಾಪುರ, ಸೊಲ್ಲಾಪುರ ಮತ್ತು ಕರ್ನಾಟಕಕ್ಕೆ ತಂಡಗಳನ್ನು ಕಳುಹಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಇಬ್ಬರು ಸಹೋದರರಾದ ಮಾಣಿಕ್ ವಾನ್ಮೋರ್ (49) ಮತ್ತು ಪೋಪಟ್ ವಾನ್ಮೋರ್ (52), ಅವರ ಪತ್ನಿಯರು, ಮಕ್ಕಳು ಮತ್ತು ತಾಯಿ ಪ್ರತ್ಯೇಕ ಮನೆಗಳಲ್ಲಿ ಶವವಾಗಿ ಪತ್ತೆಯಾಗಿದ್ದರು. ಪೊಲೀಸ್ ಅಧಿಕಾರಿಗಳಿಗೆ ಮನೆಯಲ್ಲಿ ಪತ್ರವೊಂದು ದೊರಕಿ, ಸಾಲದ ಕಾರಣದಿಂದ ಕುಟುಂಬ ಸದಸ್ಯರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಬೆಳಕಿಗೆ ಬಂದಿತ್ತು. ಅಣ್ಣ ತಮ್ಮಂದಿರಾದ ಪಶುವೈದ್ಯ ಮಾಣಿಕ್ ಮತ್ತು ಶಿಕ್ಷಕರಾಗಿದ್ದ ಪೋಪಟ್ ಒಂದು ಕಿಲೋಮೀಟರ್ ಅಂತರದಲ್ಲಿ ವಾಸಿಸುತ್ತಿದ್ದರು.
ಮಾಣಿಕ್ ವಾನ್ಮೋರ್ ಅವರ ತಾಯಿ ಅಕ್ಕತೈ (72), ಅವರ ಪತ್ನಿ ರೇಖಾ (45), ಅವರ ಮಕ್ಕಳಾದ ಅನಿತಾ (28) ಮತ್ತು ಆದಿತ್ಯ (15) ಮತ್ತು ಪೋಪಟ್ ಅವರ ಮಗ ಶುಭಂ (28) ಅವರ ಶವಗಳು ಮಾಣಿಕ್ ಅವರ ಮನೆಯಲ್ಲಿ ಪತ್ತೆಯಾಗಿದ್ದವು. ಪೋಪಟ್ ವಾನ್ಮೋರ್ ಅವರ ಪತ್ನಿ ಸಂಗೀತಾ (48) ಮತ್ತು ಮಗಳು ಅರ್ಚನಾ (30) ಅವರ ಮೃತದೇಹಗಳು ಪೋಪಟ್ ಅವರ ಮನೆಯಲ್ಲಿ ಪತ್ತೆಯಾಗಿದ್ದವು.
ಇದನ್ನೂ ಓದಿ: ಮಹಾರಾಷ್ಟ್ರ: ಒಂದೇ ಕುಟುಂಬದ ಒಂಬತ್ತು ಮಂದಿಯ ಮೃತದೇಹಗಳು ಪತ್ತೆ, ತನಿಖೆ ಆರಂಭ