Homeಮುಖಪುಟಅಧಿಕಾರಕ್ಕೆ ಸವಾಲೆಸೆದ ತಮಿಳುನಾಡಿನ ಇಬ್ಬರು ಯುವಪ್ರತಿಭೆಗಳು

ಅಧಿಕಾರಕ್ಕೆ ಸವಾಲೆಸೆದ ತಮಿಳುನಾಡಿನ ಇಬ್ಬರು ಯುವಪ್ರತಿಭೆಗಳು

- Advertisement -
- Advertisement -

ಇತ್ತೀಚೆಗಿನ ದಿನಗಳಲ್ಲಿ ತಮ್ಮ ವೃತ್ತಿ ಕುರಿತಾದ ಅಸಾಧಾರಣ ಬದ್ಧತೆಯ ಮೂಲಕ ಇಡೀ ದೇಶದ ಗಮನ ಸೆಳೆದ ಚಿತ್ರನಟಿ ಸಾಯಿಪಲ್ಲವಿ ಹಾಗೂ ಕರೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಸಂಸದೆಯಾಗಿ ಆಯ್ಕೆಯಾಗಿರುವ ಜ್ಯೋತಿ ಮಣಿ ಎಂಬ ಯುವ ಪ್ರತಿಭೆಗಳು ಇಂದಿನ ಯುವತಲೆಮಾರಿಗೆ ಮಾದರಿಯಾಗುವ ತಮ್ಮ ನಡೆನುಡಿಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಚಿತ್ರ ನಟಿಯಾಗಿರುವ ಸಾಯಿಪಲ್ಲವಿ ತಮಿಳುನಾಡಿನ ಊಟಿ ಬಳಿ ಇರುವ ಕೋಟಗಿರಿ ಎಂಬ ಸ್ಥಳದ ಬಡಗ ಜನಾಂಗ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಹೆಣ್ಣು ಮಗಳು. ಜೊತೆಗೆ ವೈದ್ಯಕೀಯ ಪದವಿಯನ್ನು ಪಡೆದಿರುವ ಪ್ರತಿಭಾವಂತೆ. ಆಕೆಯ ತಂದೆ ಮತ್ತು ತಾಯಿ ಇಬ್ಬರೂ (ಸೆಂತಮಾರೈ ಕಣ್ಣನ್ ಮತ್ತು ರಾಧಾ) ಉದ್ಯೋಗದ ನಿಮಿತ್ತ ಕೊಯಮತ್ತೂರಿನಲ್ಲಿದ್ದವರು. 1992ರಲ್ಲಿ ಜನಸಿದ ಸಾಯಿ ಬಾಲ್ಯದ ಶಿಕ್ಷಣವನ್ನೆಲ್ಲಾ ಕೊಯಮತ್ತೂರು ಕಾನ್ವೆಂಟ್ ಶಾಲೆಯಲ್ಲಿ ಪಡೆದವಳು. ನೃತ್ಯದಲ್ಲಿ ಆಸಕ್ತಿ ಇದ್ದ ಕಾರಣದಿಂದಾಗಿ ಉತ್ತಮ ನೃತ್ಯಗಾತಿಯಾಗಿ ರೂಪುಗೊಂಡಿದ್ದ ಸಾಯಿ ಪಲ್ಲವಿ ಅನಿರೀಕ್ಷಿತವಾಗಿ ಕಲಾವಿದೆಯಾಗಿ ಗುರುತಿಸಿಕೊಂಡವಳು. ಜೊತೆಗೆ ತಮಿಳು, ಮಲೆಯಾಳಂ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲಾ ಪ್ರೇಕ್ಷಕರ ಮನಗೆದ್ದವಳು. ಈಗಾಗಲೇ ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾದ ಫಿಲಂಫೇರ್ ಪ್ರಶಸ್ತಿಗೆ ಸಾಯಿಪಲ್ಲವಿ ಪಾತ್ರರಾಗಿದ್ದಾರೆ. ಅಪಾರ ಓದು ಮತ್ತು ವಿದ್ಯಾರ್ಹತೆ ಹಾಗೂ ಈ ಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸುವ ಗುಣ ಇವೆಲ್ಲವೂ ಆಕೆಯನ್ನು ಪ್ರಬುದ್ಧ ನಟಿಯನ್ನಾಗಿ ರೂಪಿಸಿವೆ. ಈಗ ಬಿಡುಗಡೆಯಾಗಿರುವ ನಕ್ಸಲ್ ಚಳುವಳಿಯ ಕಥೆಯಾಧಾರಿತ (ವಾರಂಗಲ್‌ನ ಸರಳ ಎಂಬ ತೊಂಬತ್ತರ ದಶಕದ ನಕ್ಸಲ್ ಕಾರ್ಯಕರ್ತೆಯ ಜೀವನಾಧಾರಿತ ಕಥೆ) ’ವಿರಾಟ ಪರ್ವಂ’ ತೆಲುಗು ಸಿನಿಮಾದಲ್ಲಿನ ಸಾಯಿ ಪಲ್ಲವಿಯ ಅಭಿನಯ ಕುರಿತಾಗಿ ಎಲ್ಲರಿಂದ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ.

2015ರಲ್ಲಿ ’ಪ್ರೇಮಂ’ ಎಂಬ ಮಲೆಯಾಳಂ ಸಿನಿಮಾದ ಮಲರ್ ಎಂಬ ಪಾತ್ರದ ಮೂಲಕ ಗಮನ ಸೆಳೆದ ಈಕೆ ಮತ್ತೆ ಹಿಂತಿರುಗಿ ನೋಡಿಲ್ಲ. ಮತ್ತೋರ್ವ ಪ್ರತಿಭಾವಂತೆ ಕೀರ್ತಿ ಸುರೇಶ್ ಎಂಬ ಕಲಾವಿದೆಯ ಜೊತೆಗೆ ಸಾಯಿಪಲ್ಲವಿ ಕುರಿತಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇತ್ತೀಚೆಗೆ ’ವಿರಾಟ ಪರ್ವಂ’ ಸಿನಿಮಾ ಪ್ರಚಾರ ಕುರಿತ ಪತ್ರಿಕಾಗೋಷ್ಠಿಯಲ್ಲಿ ತಾನು ನಂಬಿದ ಸಿದ್ಧಾಂತಗಳ ಕುರಿತು ಮಾತನಾಡುತ್ತಾ, ಧರ್ಮಕ್ಕಿಂತ ಮನುಷ್ಯ ಜೀವ ದೊಡ್ಡದು; ಕಾಶ್ಮೀರದಲ್ಲಿ ಹಿಂದೂ ಪಂಡಿತರ ಹತ್ಯೆಯಾಗುವುದು ಅಮಾನುಷ ಕೃತ್ಯ ನಿಜ; ಅದೇ ರೀತಿ ಗೋವುಗಳನ್ನು ಹಿಡಿದುಕೊಂಡು ಹೋಗುತ್ತಿರುವ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿ ಜೈ ಶ್ರೀರಾಂ ಎಂದು ಘೋಷಣೆ ಕೂಗುವುದು ಕೂಡ ಅಮಾನುಷ ಕ್ರಿಯೆ ಎಂದು ಸಾಯಿ ಪ್ರತಿಕ್ರಿಯಿಸಿದ್ದಳು.

ಸಾಯಿಪಲ್ಲವಿಯ ಈ ಪ್ರಬುದ್ಧತೆಯ ಮಾತುಗಳು ಮಾರಿಕೊಂಡ ಮಾಧ್ಯಮಗಳ ಬೃಹಸ್ಪತಿಗಳನ್ನು ಕೆರಳಿಸಿತು. ಈಕೆಯ ಕುರಿತಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡಿದರು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಎದುರಿಗೆ
ಮೈಕ್ ಮತ್ತು ಕ್ಯಾಮರಾ ಇದ್ದರೆ ಸಾಕು ಹನುಮಂತನ ಪಾತ್ರಧಾರಿಗಳಂತೆ ಕುಣಿಯುವ ಪತ್ರಕರ್ತರೆಂಬ ಮಂಡೂಕಗಳಿಗೆ ನಾವು ಬದುಕುತ್ತಿರುವ ಗ್ರಾಮೀಣ ಜಗತ್ತಿನ ಪರಿಸ್ಥಿತಿಯ ಅರಿವಿಲ್ಲ. ಇಂದಿಗೂ ಕೂಡ ನಮ್ಮ ಕರ್ನಾಟಕ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಕೃಷಿಯನ್ನು ಮೂಲ ವೃತ್ತಿಯಾಗಿಸಿಕೊಂಡ ಮುಸ್ಲಿಮರಿದ್ದಾರೆ, ಜೊತೆಗೆ ಪಶು ಸಾಕಾಣಿಕೆಯ ಮೂಲಕ ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡ ಅನೇಕ ಬಡ ಮುಸ್ಲಿಂ ಕುಟುಂಬಗಳು ಇವೆ. ಆದರೆ, ಈಗಿನ ’ನವ ದೇಶ ಭಕ್ತ’ರು ಮತ್ತು ’ಹಿಂದೂಭಕ್ತ’ರು ಎಂಬ ಅಸಭ್ಯರ ಕಾರಣದಿಂದಾಗಿ ಯಾವೊಬ್ಬ ಮುಸ್ಲಿಂ ವ್ಯಕ್ತಿ ಸಾರ್ವಜನಿಕವಾಗಿ ಹಸುಗಳನ್ನು ಹಿಡಿದುಕೊಂಡು ಪಶು ವೈದ್ಯಕೀಯ ಕೇಂದ್ರಗಳಿಗೆ ಹೋಗುವುದು ಅಥವಾ ಮಾರಾಟಕ್ಕೆ ಇಲ್ಲವೆ ಕೊಳ್ಳುವುದಕ್ಕೆ ಜಾನುವಾರುಗಳ ಸಂತೆಗೆ ಹೋಗಲು ಅಸಾಧ್ಯವಾಗುತ್ತಿದೆ. ತಮ್ಮ ಪರಿಚಯದ ಹಿಂದೂಧರ್ಮದ ಗೆಳೆಯರನ್ನು ಆಶ್ರಯಿಸಿ ಬದುಕಬೇಕಾದ ಸ್ಥಿತಿ ಅವರದು.

ಹಿಂದುಳಿದ ಸಮುದಾಯದಲ್ಲಿ ಜನಿಸಿ ಗ್ರಾಮೀಣ ಭಾರತದ ಅನುಭವಗಳನ್ನು ದಕ್ಕಿಸಿಕೊಂಡಿರುವ ನಟಿ ಸಾಯಿಪಲ್ಲವಿಗೆ ಇರುವ ಇಂತಹ ಸೂಕ್ಷ್ಮತೆಯನ್ನು ನಮ್ಮ ಮಾಧ್ಯಮಗಳ ಅವಿವೇಕಿಗಳು ದಕ್ಕಿಸಿಕೊಂಡಿದ್ದರೆ ಅವರ ಮಾತು ಮತ್ತು ಬರವಣಿಗೆಗೆ ಅರ್ಥ ಬರುತ್ತಿತ್ತು.

ಇನ್ನು ಎರಡನೆಯದಾಗಿ ಜ್ಯೋತಿ ಮಣಿ ಎಂಬ ತಮಿಳು ಭಾಷೆಯ ಯುವ ಕಥೆಗಾರ್ತಿಯೊಬ್ಬಳು ತನ್ನ ಬದ್ಧತೆಯ ಹೋರಾಟದ ಬದುಕಿನ ಮೂಲಕ ಸತತ ಹದಿನೈದು ವರ್ಷಗಳ ಕಾಲ ತಮಿಳುನಾಡು ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡ ಸೂಕ್ಷ್ಮ ಮನಸ್ಸಿನ ಹೆಣ್ಣು ಮಗಳು. 2009 ಮತ್ತು 2014ರ ಎರಡು ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೂ ಎದೆಗುಂದದೆ ಹಾಗೂ ಪಕ್ಷ ನಿಷ್ಟೆಯನ್ನು ಬದಲಾಯಿಸದೆ 2019ರಲ್ಲಿ ಕರೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾಳೆ. ಬೆಂಗಳೂರು-ಮಧುರೈ ಮತ್ತು ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇಲಂ ನಂತರ ಸಿಗುವ ಕರೂರು ಮುಂದುವರಿದ ವಾಣಿಜ್ಯ ಹಾಗೂ ಕೈಗಾರಿಕಾ ಜಿಲ್ಲಾ ಕೇಂದ್ರವಾಗಿದೆ. ಜ್ಯೋತಿ ಮಣಿ ಸಂಸದೆಯಾದ ನಂತರವೂ ತನ್ನ ಹಳ್ಳಿಯ ವಾಸಸ್ಥಳವನ್ನು ಬದಲಾಯಿಸಿಲ್ಲ. ಪೆರಿಯತಿರು ಮಂಗಲಂ ಎಂಬ ಹಳ್ಳಿಯಲ್ಲಿ ಜನಸಾಮಾನ್ಯರ ನಡುವೆ ಸಾಮಾನ್ಯಳಂತೆ ಬದುಕುವ ಜ್ಯೋತಿ ಮಣಿಗೆ ಸಾಹಿತ್ಯದ ಓದು ಮತ್ತು ಬರವಣಿಗೆ ಒಬ್ಬ ಜನಪ್ರತಿನಿಧಿ ಹೇಗಿರಬೇಕು ಎಂಬುದನ್ನು ಕಲಿಸಿಕೊಟ್ಟಿದೆ. ಅಣ್ಣಾ ಮಲೈ ವಿ.ವಿ.ಯ ಪದವೀಧರೆಯಾದ ಈಕೆಯ ’ಒಟ್ಟು ವಾಸನೈ’ ಎಂಬ ಕಥಾ ಸಂಕಲನ, ’ಸಿಥಿರಕ್ ಕೂಡು’ ಎಂಬ ಕಾದಂಬರಿಯ ಜೊತೆಗೆ ’ನಾಯಕತ್ವಕ್ಕೆ ಅಡ್ಡದಾರಿಗಳಿಲ್ಲ’ (ನೀರ್ ಪಿರಕ್ಕು ಮನ್) ಎಂಬ ಅನುಭವ ಕಥನ ಪುಸ್ತಕಗಳು ಜ್ಯೋತಿ ಮಣಿಯನ್ನು ತಮಿಳು ಜನತೆ ಪಕ್ಷ ಭೇದವಿಲ್ಲದೆ ಪ್ರೀತಿಸುವಂತೆ ಮಾಡಿದೆ.

ಕಳೆದ ವಾರ ದೆಹಲಿಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಜಾರಿ ನಿರ್ದೆಶನಾಲಯದ ವಿರುದ್ಧ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ದೆಹಲಿ ಪೊಲೀಸರ ವಿರುದ್ಧ ಜ್ಯೋತಿ ಮಣಿ ಗುಡುಗಿದ ವೈಖರಿಯು ದೇಶಾದ್ಯಂತ ಮಾಧ್ಯಮಗಳ ಗಮನ ಸೆಳೆಯಿತು. ತಾನೋರ್ವ ಸಂಸದೆ ಎಂಬುದನ್ನು ಕಡೆಗಣಿಸಿ ತೊಟ್ಟಿದ ಬಟ್ಟೆಗಳು ಹರಿದು ಹೋಗುವಂತೆ ಎಳೆದಾಡಿದ ಪೊಲೀಸರ ಅಮಾನವೀಯ ವರ್ತನೆಯ ಬಗ್ಗೆ ಮಾತನಾಡುತ್ತ ಯಾವುದೇ ಸಂಕೋಚವಿಲ್ಲದೆ ಧರಿಸಿದ್ದ ಪೈಜಾಮಿನ ಹರಿದ ಭಾಗವನ್ನು ತೋರಿಸಿ, ಅದಕ್ಕೆ ಕಾರಣಕಾದವರನ್ನು ತರಾಟೆಗೆ ತೆಗೆದುಕೊಂಡ ಬಗೆ ನಿಜಕ್ಕೂ ಮೆಚ್ಚುವಂತಹದ್ದು. ಕುಡಿಯಲು ನೀರು ಕೇಳಿದರೂ ಸಹ ನೀಡದೆ ಸತತ ಮೂರು ಗಂಟೆಗಳ ಕಾಲ ಪೊಲೀಸ್ ವಾಹನದಲ್ಲಿ ಕೂಡಿ ಹಾಕಿದ್ದ ಬಗೆಯನ್ನು ಈ ಹೆಣ್ಣುಮಗಳು ಇಂಗ್ಲಿಷ್ ಭಾಷೆಯಲ್ಲಿ ವಿವರಿಸುವುದರ ಮೂಲಕ ದೆಹಲಿ ಪೊಲೀಸರ ಗೂಂಡಾಗಿರಿಯನ್ನು ಜಗತ್ತಿಗೆ ಪರಿಚಯಿಸಿದಳು.

ಅಧಿಕಾರ, ಸ್ಥಾನಮಾನ ಹಾಗೂ ಹಣಕ್ಕಾಗಿ ನಿಷ್ಠೆ ಬದಲಿಸಿ ಪಕ್ಷದಿಂದ ಪಕ್ಷಕ್ಕೆ ಹಾರುವ ಇಂದಿನ ಎಡಬಿಡಂಗಿ ಜಾಯಮಾನದ ಅವಿವೇಕಿಗಳಿಗೆ ಈ ಹೆಣ್ಣುಮಗಳ ರಾಜಕೀಯ ಜೀವನಗಾಥೆ ಪಾಠವಾಗಬೇಕು. ಜೊತೆಗೆ ಯುವಕ/ ಯುವತಿಯರಿಗೆ ಜ್ಯೋತಿ ಮಣಿಯ ಬದ್ಧತೆ ಆದರ್ಶವಾಗಬೇಕು.

ಡಾ.ಎನ್.ಜಗದೀಶ್ ಕೊಪ್ಪ

ಡಾ.ಎನ್.ಜಗದೀಶ್ ಕೊಪ್ಪ
ಹಿರಿಯ ಪತ್ರಕರ್ತರು, ಬರಹಗಾರರು ಮತ್ತು ಸಾಮಾಜಿಕ ಹೋರಾಟಗಾರರು. ಬಿಳಿ ಸಾಹೇಬನ ಭಾರತ, ಮರುಭೂಮಿಯ ಹೂವು, ಪುತ್ರಶೋಕ ಅವರು ರಚಿಸಿದ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಸಾಯಿ ಪಲ್ಲವಿಯವರಿಂದ ಮಾಧ್ಯಮಗಳು ಕಲಿಯುವುದು ಬಹಳಷ್ಟಿದೆ: ಬೆಂಬಲಕ್ಕೆ ನಿಂತ ನಟ ಕಿಶೋರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...