“ಯಾವುದೇ ರೀತಿಯಲ್ಲಿ ಹಿಂಸೆ ಮಾಡುವುದು ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವುದು ದೊಡ್ಡ ಪಾಪ ಎಂದು ನಾನು ನಂಬುತ್ತೇನೆ” ಎಂದು ಒತ್ತಿ ಹೇಳಿದ್ದ ಖ್ಯಾತ ನಟಿ ಸಾಯಿಪಲ್ಲವಿ ವಿರುದ್ದದ ಮಾಧ್ಯಮಗಳ ದಬ್ಬಾಳಿಕೆಯನ್ನು ಕನ್ನಡದ ನಟ ಕಿಶೋರ್ ಕುಮಾರ್ ಖಂಡಿಸಿದ್ದಾರೆ.
ಗ್ರೇಟ್ ಆಂಧ್ರದ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸಾಯಿಪಲ್ಲವಿಯವರು “ದನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮುಸ್ಲಿಂ ಎಂಬ ಕಾರಣಕ್ಕೆ ಹೊಡೆದು ಕೊಂದಿರುವುದಕ್ಕೂ ಕಾಶ್ಮೀರ ಪಂಡಿತರ ನರಮೇಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ, ಇವೆರೆಡೂ ಒಂದೇ. ಧರ್ಮಕ್ಕಿಂತ ಮಾನಾವೀಯತೆ ಮುಖ್ಯ” ಎಂದು ಹೇಳಿದ್ದರು. ಈ ಹೇಳೀಕೆಯನ್ನು ತಪ್ಪಾಗಿ ವಿಮರ್ಶಿಸಿ ಅವರ ವಿರುದ್ಧ ಕೆಲವರು ಟ್ರೋಲ್ ಮಾಡಿದ್ದರು. ಕನ್ನಡದ ಪಬ್ಲಿಕ್ ಟಿವಿ ಸೇರಿದಂತೆ ಹಲವು ಚಾನೆಲ್ಗಳು ಹರಿಹಾಯ್ದಿದ್ದವರು.
ಈ ಕುರಿತು ಪ್ರತಿಕ್ರಿಯಿಸಿರುವ ಕಿಶೋರ್, “ಬಾಯಿ ಮುಚ್ಚಿಸುವುದು ಸರ್ಕಾರದ ಕೆಲಸವಲ್ಲವೇ, ಮಾಧ್ಯಮಗಳು ಯಾವಾಗಿಂದ ಈ ಕೆಲಸಕ್ಕೂ ಗುತ್ತಿಗೆ ಪಡೆದವು?” ಎಂದು ಮಾಧ್ಯಮಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
“ಸಿನಿಮಾದವರಿಗೆ ಜನಪರ ಕಾಳಜಿ ಇರುವುದು ತಪ್ಪೇ? ಕಾರಣ ಏನೇ ಆದರೂ ಕೊಲೆ ಮಾಡುವ ಮನಸ್ಥಿತಿ ಒಂದೇ ಹಾಗೂ ಅದು ತಪ್ಪು ಎಂದರೆ ತಪ್ಪೇ? ನಮ್ಮಲ್ಲಿನ ಅಲ್ಪಸಂಖ್ಯಾತರನ್ನು ನಾವು ಹೇಗೆ ಸಮಾನರಾಗಿ ಬದುಕಲು ಬಿಡುತ್ತೇವೆನ್ನುವುದು ನಮ್ಮ ಸಮಾಜದ ಸ್ವಾಸ್ಥ್ಯದ, ಸಭ್ಯತೆಯ ಅಳತೆಗೋಲು ಎನ್ನುವುದು ತಪ್ಪೇ? ಜೀವಕ್ಕೆ ಜಾತಿ ಧರ್ಮಗಳ ಹಂಗಿಲ್ಲವೆಂದರೆ ತಪ್ಪೇ? ಒಬ್ಬರ ಆಹಾರ ಕ್ರಮದ ಮೇಲೆ ನಿಷೇಧ ಹೇರಿ ಆಹಾರವನ್ನೂ ದ್ವೇಷದ ಸಾಧನವಾಗಿ ಬಳಸಬಾರದೆಂದರೆ ತಪ್ಪೇ? ಮಾನವೀಯತೆಯ ನಿಲುವಿನ ಸಾಯಿಪಲ್ಲವಿಯಿಂದ ಈ ಮಾಧ್ಯಮದವರು ಕಲಿಯಿವುದು ಸಾಕಷ್ಟಿದೆ. ಸಾಮಾಜಿಕ ಬದ್ಧತೆಯನ್ನು ಧರ್ಮಾಂಧತೆಯ ಕನ್ನಡಿಯಲ್ಲಿ ನೋಡುವ ಮಾಧ್ಯಮ ಗೋಕಾಕ್ ಚಳುವಳಿಯ ಕಾಲದಲ್ಲಿದ್ದಿದ್ದರೆ ರಾಜಕುಮಾರ್ ರವರ ಬಾಯನ್ನೂ ಮುಚ್ಚಿಸುತ್ತಿತ್ತೇನೊ.” ಎಂದು ಕಿಶೋರ್ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ನಟಿ ಸಾಯಿಪಲ್ಲವಿ ಪರವಾಗಿ ಈ ಹಿಂದೆ ಕನ್ನಡದ ನಟಿ ರಮ್ಯಾ ದಿವ್ಯ ಸ್ಪಂದನ ಕೂಡ ದನಿಯೆತ್ತಿದ್ದರು. “ಸಾಯಿ ಪಲ್ಲವಿ ಅವರನ್ನು ಟ್ರೋಲ್ ಮಾಡುವುದು ಹಾಗೂ ಅವರಿಗೆ ಬೆದರಿಕೆಯೊಡ್ಡುವುದು ನಿಲ್ಲಬೇಕು. ಎಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಅಥವಾ ಮಹಿಳೆಯರಿಗೆ ಈ ಅಧಿಕಾರ ಇಲ್ಲ ಎಂಬುವುದು ಈ ವಿರೋಧದ ಅರ್ಥವೇ? ನಿಂದನೆ ಮಾಡದೇ ವಿಷಯವೊಂದರ ಕುರಿತು ವಿರೋಧ ವ್ಯಕ್ತಪಡಿಸಬಹುದು. ಪ್ರಸ್ತುತ ಯಾರಾದರೂ ‘ನೀವು ಒಳ್ಳೆಯ ಮನುಷ್ಯರಾಗಿ’ ಅಥವಾ ‘ದಯಾಳುವಾಗಿ’ ಎಂದರೆ ಅವರಿಗೆ ರಾಷ್ಟ್ರ ವಿರೋಧಿ ಹಣೆಪಟ್ಟಿ ಕಟ್ಟಲಾಗುತ್ತದೆ, ಅದೇ ‘ಗೋಲಿ ಮಾರೊ’ ಎಂಬುವವರು ನಿಜವಾದ ನಾಯಕರಾಗುತ್ತಾರೆ. ನಾವೆಂಥ ಲೋಕದಲ್ಲಿ ಬದುಕುತ್ತಿದ್ದೇವೆ” ಎಂದು ರಮ್ಯಾ ಟ್ವೀಟ್ ಮಾಡಿದ್ದರು.
ಸ್ಪಷ್ಟೀಕರಣ ನೀಡಿದ ಸಾಯಿಪಲ್ಲವಿ
“ಮೊದಲ ಬಾರಿಗೆ ನನ್ನ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವ ಮೊದಲು ನಾನು ಎರಡು ಬಾರಿ ಯೋಚಿಸುತ್ತಿದ್ದೇನೆ. ಏಕೆಂದರೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ, ನೀವು ಎಡಪಂಥೀಯಕ್ಕೆ ಬೆಂಬಲ ನೀಡುತ್ತೀರೋ ಅಥವಾ ಬಲಪಂಥೀಯಕ್ಕೆ ಬೆಂಬಲ ನೀಡುತ್ತೀರೋ? ಎಂಬ ಪ್ರಶ್ನೆ ಕೇಳಿದ್ದರು. ಆಗ ನಾನು ಸ್ಪಷ್ಟವಾಗಿ ನ್ಯೂಟ್ರಲ್ ಆಗಿದ್ದೇನೆ ಎಂದು ಹೇಳಿದೆ. ಜೊತೆಗೆ ನಾವು ಮೊದಲು ಮಾನವೀಯ ಮೌಲ್ಯಗಳಿರುವ ಉತ್ತಮ ಮನುಷ್ಯರಾಗಬೇಕು, ತುಳಿತಕ್ಕೆ ಒಳಗಾದವರನ್ನು ರಕ್ಷಿಸಬೇಕು ಅಂತ ನಾನು ಹೇಳಿದ್ದೆ’ ಎಂದಿದ್ದಾರೆ.
“ಸಂದರ್ಶನದ ಮುಂದುವರಿದ ಭಾಗದಲ್ಲಿ ನಾನು ಉದಾಹರಣೆಯಾಗಿ ಎರಡು ವಿಷಯಗಳನ್ನು ಪ್ರಸ್ತಾಪ ಮಾಡಿದೆ. ನಾನು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ವೀಕ್ಷಿಸಿದ್ದೇನೆ. ಸಿನಿಮಾದ ವೀಕ್ಷಿಸಿ ನಿರ್ದೇಶಕರೊಂದಿಗೆ ಮಾತನಾಡಿದ್ದೆ. ಜನರ ನೋವನ್ನು ಕಂಡು ನನಗೆ ಬೇಸರವಾಗಿದೆ ಎಂದು ನಿರ್ದೇಶಕರಿಗೆ ನಾನು ತಿಳಿಸಿದ್ದೆ. ಜೊತೆಗೆ ಕೊರೊನಾ ಸಮಯದಲ್ಲಿ ಹಲ್ಲೆಗೊಳದಾವರ ವಿಡಿಯೋ ನೋಡಿ ನನಗೆ ಬೇಸರ ಉಂಟಾಗಿತ್ತು. ಯಾವುದೇ ರೀತಿಯಲ್ಲಿ ಹಿಂಸೆ ಮಾಡುವುದು ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವುದು ದೊಡ್ಡ ಪಾಪ ಎಂದು ನಾನು ನಂಬುತ್ತೇನೆ. ನಾನು ಹೇಳಲು ಉದ್ದೇಶಿಸಿದ್ದು ಇಷ್ಟೇ” ಎಂದಿದ್ದಾರೆ.
ಆದರೆ, ವೆಬ್ಸೈಟ್ನಲ್ಲಿ ಅನೇಕರು ಗುಂಪು ಹತ್ಯೆ ಘಟನೆಯನ್ನು ಸಮರ್ಥಿಸಿಕೊಂಡಿರುವುದು ಆತಂಕಕಾರಿಯಾಗಿದೆ. ನಮ್ಮಲ್ಲಿ ಯಾರೊಬ್ಬರಿಗೂ ಇನ್ನೊಬ್ಬರ ಜೀವವನ್ನು ತೆಗೆಯುವ ಹಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ಮೆಡಿಕಲ್ ಗ್ರ್ಯಾಜುಯೇಟ್ ಆಗಿ ಎಲ್ಲರ ಜೀವ ಮುಖ್ಯ ಮತ್ತು ಸಮಾನ ಎಂದು ನಾನು ನಂಬುತ್ತೇನೆ. ಮುಂದೊಂದು ದಿನ ಇಲ್ಲಿ ಹುಟ್ಟುವ ಮಗು ತನ್ನ ಗುರುತನ್ನು ಹೇಳಲು ಹೆದರುವ ದಿನ ಬರುವುದಿಲ್ಲ ಎಂದು ಭಾವಿಸುತ್ತೇನೆ” ಎಂದಿದ್ದಾರೆ ಸಾಯಿ ಪಲ್ಲವಿ.
ಸಂದರ್ಶನವನ್ನು ಪೂರ್ತಿ ನೋಡದೆ ಬರೀ ಒಂದೆರಡು ನಿಮಿಷದ ವಿಡಿಯೋ ನೋಡಿ ಕಾಮೆಂಟ್ ಮಾಡುವವರ ವಿರುದ್ಧ ಬೇಸರ ವ್ಯಕ್ತ ಪಡಿಸಿರುವ ಅವರು, ತಮಗೆ ಬೆಂಬಲ ನೀಡಿದವರಿಗೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ಯಾರಿಗೂ ಯಾರ ಜೀವವನ್ನು ತೆಗೆಯುವ ಹಕ್ಕು ಇಲ್ಲ- ಸ್ಪಷ್ಟನೆ ನೀಡಿದ ನಟಿ ಸಾಯಿ ಪಲ್ಲವಿ