HomeUncategorizedಪ್ರಾಣವಾಯು ಕೊರತೆಯಲ್ಲಿ ಪರದಾಟ ಆಡಳಿತಗಾರರ ಚೆಲ್ಲಾಟ!

ಪ್ರಾಣವಾಯು ಕೊರತೆಯಲ್ಲಿ ಪರದಾಟ ಆಡಳಿತಗಾರರ ಚೆಲ್ಲಾಟ!

- Advertisement -
- Advertisement -

ಯೋಗ ದಿನದಂದು ದೇಶದ ಪ್ರಧಾನಿ ಮೈಸೂರಿಗೆ ಭೇಟಿ ಕೊಟ್ಟಿದ್ದರು. 2019 ಮತ್ತು ನಂತರದ ಎರಡು ವರ್ಷ ರಾಜ್ಯದಲ್ಲಿ ಭಾರಿ ಪ್ರಮಾಣದ ಪ್ರವಾಹ ಬಂದಿದ್ದಾಗ ಬಾರದ ಪ್ರಧಾನಿಯವರಿಗೆ ಈಗ ರಾಜ್ಯದ ನೆನಪಾಗಿದೆ ಎಂದು ಮೈಸೂರಿಗರೇ ಆದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದರು. ಕೊರೊನಾ ಬಂದಾಗ ಪ್ರಾಣವಾಯು ಸಿಗದೆ ಹಲವು ಮಂದಿ ಜೀವಬಿಟ್ಟರೆಂಬುದನ್ನು ಸೇರಿ ಹಲವು ವಿಚಾರಗಳ ಬಗ್ಗೆ ಅವರು ಪ್ರಸ್ತಾಪಿಸಿ ಟೀಕಿಸಿದ್ದರು.

ಕೊರೊನಾ ಎರಡನೇ ಅಲೆಯ ಸಮಯದಲ್ಲಿ ಸಾವಿರಾರು ಜನ ‘ಮೆಡಿಕಲ್ ಆಕ್ಸಿಜನ್’ ಸಿಗದೆ ಜೀವಬಿಟ್ಟಿದ್ದನ್ನು ಕಂಡಿದ್ದೇವೆ. ದಿನವೊಂದಕ್ಕೆ 3 ಲಕ್ಷ ಜನ ಕೊರೊನಾ ಪತ್ತೆ ಪರೀಕ್ಷೆಗೆ ಒಳಗಾಗುತ್ತಿದ್ದರು. ಜಗತ್ತಿನಲ್ಲಿಯೇ ಅತಿಹೆಚ್ಚು ಜನ ನಮ್ಮಲ್ಲಿ ಸೋಂಕಿಗೆ ಗುರಿಯಾಗುತ್ತಿದ್ದರು. ಸರಾಸರಿ 2 ಸಾವಿರ ಜನ ಜೀವ ಬಿಡುತ್ತಿದ್ದರು. ನಮ್ಮ ಸರ್ಕಾರ ಪ್ರಾಣವಾಯು ಕೊರತೆ ನಿವಾರಿಸಲು ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದು ನಿಜ. ರಾಜ್ಯಕ್ಕೆ 262 ಆಕ್ಸಿಜನ್ ತಯಾರಿಕಾ ಘಟಕಗಳು ಹಂಚಿಕೆಯಾಗಿದ್ದವು. ಅವುಗಳಲ್ಲಿ 224 ಘಟಕಗಳ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿತ್ತು. 190 ಘಟಕಗಳನ್ನು ವಿವಿಧ ಜಿಲ್ಲೆಗಳಲ್ಲಿ ಅಳವಡಿಸಲಾಗಿದೆ. ಇವುಗಳ ಒಟ್ಟು ಉತ್ಪಾದನಾ ಸಾಮರ್ಥ್ಯ 1,08,077 ಎಲ್‌ಎಂಪಿ (ಪ್ರತಿ ನಿಮಿಷಕ್ಕೆ ತಯಾರಾಗುವ ಲೀಟರ್‌ಗಳು) ದಿನವೊಂದಕ್ಕೆ 187 ಟನ್‌ಗಳಷ್ಟು ಆಕ್ಸಿಜನ್ ಉತ್ಪಾದನೆ ಮಾಡಬಹುದಾಗಿದೆ ಎಂದು ವೈದ್ಯಕೀಯ ಮೂಲಗಳು ಹೇಳುತ್ತವೆ. ಕೆಲವು ಸಂಸ್ಥೆಗಳು ಔದ್ಯಮಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಡಿ ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಹಣ ನೀಡುವುದಾಗಿಯೂ ಭರವಸೆ ನೀಡಿದ್ದವು. ಆಕ್ಸಿಜನ್ ಘಟಕಗಳ ನಿರ್ವಹಣೆಗಾಗಿ 245 ಜನರಿಗೆ ತರಬೇತಿಯನ್ನು ನೀಡಲಾಗಿತ್ತು. ಇನ್ನೂ ಐದು ತಂಡಗಳಿಗೆ ತರಬೇತಿ ನೀಡಲು ಕೌಶಲ ಅಭಿವೃದ್ಧಿ ಇಲಾಖೆಯ ಜೊತೆ ಸಮಾಲೋಚನೆಯನ್ನು ನಡೆಸಲಾಗಿತ್ತು. ನಿರ್ವಹಣೆಗಾಗಿ ತಂತ್ರಜ್ಞರಿಗೆ, ಅರೆವೈದ್ಯಕೀಯ ಸಿಬ್ಬಂದಿ, ವೈದ್ಯರು, ನರ್ಸ್‌ಗಳು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಆನ್‌ಲೈನ್ ಮೂಲಕವೂ ತರಬೇತಿ ನೀಡಲಾಗಿತ್ತು.

ಆದರೂ ರಸ್ತೆ ಬದಿಗಳಲ್ಲಿ ಜನ ಬಟ್ಟೆ-ಗಂಟು ಹೊತ್ತು ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮತ್ತೊಂದೆಡೆ ‘ಪ್ರಾಣವಾಯು’ಗಾಗಿ ರೋಗಿಗಳನ್ನು ಹೊತ್ತ ಆಂಬುಲೆನ್ಸ್‌ಗಳು ಆಸ್ಪತ್ರೆಗಳ ಬಳಿ ಸಾಲುಗಟ್ಟಿ ನಿಂತಿರುತ್ತಿದ್ದವು.
ಭಾಜಪ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು, 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ‘ಆಕ್ಸಿಜನ್ ಕೊರತೆ’ ಉಂಟಾಗಲು ಕಾರಣ ಎಂದು ಟೀಕಿಸಿದ್ದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಎದುರಾದ ಕೊರೊನಾ ತಡೆಗಟ್ಟಲು ಸಾಕಷ್ಟು ‘ಆಕ್ಸಿಜನ್ ಘಟಕ’ಗಳನ್ನು ಆರಂಭಿಸಲಾಗಿದೆ ಎಂದಿದ್ದರು. ಆದರೆ, ಸೋಂಕು ತೀವ್ರವಾಗಿ ಕಾಡುತ್ತಿದ್ದಾಗ, ಜನಸಮೂಹವನ್ನು ಒಟ್ಟುಗೂಡಿಸಲು ಪಶ್ಚಿಮ ಬಂಗಾಳದ ಚುನಾವಣಾ ರ್‍ಯಾಲಿಯಲ್ಲಿ ಅಧಿಕಾರಸ್ಥರು ಹರಸಾಹಸ ಪಡುತ್ತಿದ್ದರು. ಪ್ರಾಣವಾಯುವಿನ ಕೊರತೆ ತೀವ್ರವಾಗಿ ಕಾಣಿಸಿಕೊಂಡಾಗ ‘ರ್‍ಯಾಲಿ’ಗಳ ಬಗ್ಗೆ ಟೀಕೆ ಹೆಚ್ಚಾಯಿತು. ಕೇಂದ್ರ ಸಚಿವರಾಗಿದ್ದ ಪಿಯೂಷ್ ಗೋಯಲ್ ಅವರು, ರೋಗಿಗಳಿಗೆ ಅಗತ್ಯ ಇರುವಷ್ಟು ಮಾತ್ರ ‘ಆಕ್ಸಿಜನ್’ ನೀಡಬೇಕು. ಹಲವೆಡೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಇಲ್ಲದಿದ್ದಾಗಲೂ ನೀಡುತ್ತಿರುವ ವರದಿಗಳಿವೆ ಎಂದು ಟ್ವೀಟ್ ಮಾಡಿದ್ದರು.
ಆದರೆ ‘ಆಕ್ಸಿಜನ್ ಕೊರತೆ’ಯಿಂದ ಯಾವುದೇ ಸಾವುಗಳು ಸಂಭವಿಸಿಲ್ಲವೆಂದು 19 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡಿದ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವರಾಗಿದ್ದ ಮನ್‌ಸುಖ್ ಮಾಂಡವೀಯ ಲೋಕಸಭೆಗೆ ಕೊಟ್ಟಿದ್ದರು. ಇದಾದಬಳಿಕ ಪಂಜಾಬ್‌ನಲ್ಲಿ ಮಾತ್ರ 4 ಅನುಮಾನಾಸ್ಪದ ಸಾವುಗಳು ಉಂಟಾಗಿವೆ. ಇದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆಂಬ ಹೇಳಿಕೆಯನ್ನು ಕೊಟ್ಟಿದ್ದರು. ಇವರೊಂದಿಗೆ ಕೇಂದ್ರ ಸಚಿವೆ ಅರ್ಜುನ್ ತುಳಸಿರಾಮ್ ಪವಾರ್ ಅವರು ಕೂಡ ‘ಆಕ್ಸಿಜನ್ ಕೊರತೆ’ಯಿಂದ ಯಾವುದೇ ಸಾವು-ನೋವುಗಳಾಗಿಲ್ಲವೆಂಬ ಹೇಳಿಕೆಯನ್ನು ಸಂಸತ್ತಿಗೆ ಕೊಟ್ಟಿದ್ದರು.

ಮರೆಯದಿರಿ, ಕೊರೊನಾ ಪೀಕ್‌ನಲ್ಲಿದ್ದಾಗ ಜನ ತಮ್ಮ ಕುಟುಂಬಸ್ಥರ ಜೀವ ಉಳಿಸಿಕೊಳ್ಳಲು ‘ಆಕ್ಸಿಜನ್’ಗಾಗಿ ಮೊರೆ ಇಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ‘ಅಗತ್ಯ’ ಇರುವ ಸೋಂಕಿತರಿಗೆ ಆಕ್ಸಿಜನ್ ಒದಗಿಸಿಕೊಡಲು ಜನ ಶ್ರಮಿಸಿದ್ದರು. ವಿಡಂಬನೆ ಎಂದರೆ, ಅಧಿಕಾರಿಗಳು ‘ಆಕ್ಸಿಜನ್ ಕೊರತೆ’ ಇಲ್ಲವೆಂದು ನಂಬಿಸುವುದರಲ್ಲಿ ತಲ್ಲೀನರಾಗಿದ್ದುದು.

ನವದೆಹಲಿಯ ಬಾತ್ರಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಸಿ.ಎಲ್. ಗುಪ್ತ ಅವರು, ಆಸ್ಪತ್ರೆಯಲ್ಲಿ ಸಂಪೂರ್ಣ ಭೀತಿ ಇದೆ. ಹಾಗೆಯೇ ಆಕ್ಸಿಜನ್ ಕೊರೆತಯೂ ಉಂಟಾಗಿದೆ. ಪರಿಸ್ಥಿತಿ ನಿಭಾಯಿಸುವುದು ಕಷ್ಟಕರವಾಗಿದೆ. ಆಕ್ಸಿಜನ್ ದೊರಕುವ ಕಡೆಗೆ ರೋಗಿಗಳನ್ನು ಕರೆದೊಯ್ಯಬಹುದೆಂದು ಎಎನ್‌ಐ ವಾಹಿನಿಯ ಮೂಲಕ ಮನವಿಯನ್ನು ಮಾಡಿದ್ದರು. ಸಂದರ್ಶನದ ಮಧ್ಯೆ ಭಾವೋದ್ವೇಗಕ್ಕೆ ಒಳಗಾಗಿ ಕುಸಿದುಬಿದ್ದಿದ್ದರು. ಇನ್ನೂ ಪರ್‌ಪರ್‌ಗಂಜ್‌ನ ಮ್ಯಾಕ್ಸ್ ಆಸ್ಪತ್ರೆ ಆಕ್ಸಿಜನ್ ಬೇಡಿಕೆಗಾಗಿ ನ್ಯಾಯಾಲಯದ ಮುಂದೆ ಹೋಗಿತ್ತು. ಸುಪ್ರೀಂ ಕೋರ್ಟ್ ಕೂಡ ಕೊರೊನಾ ನಿರ್ವಹಣೆ ಕುರಿತಂತೆ ಪರಿಶೀಲಿಸಲು, ತಾನಾಗಿಯೇ ಪ್ರಕರಣ ದಾಖಲಿಸಿಕೊಂಡಿತು. ಪ್ರಕರಣದಲ್ಲಿ ಅಮಿಸ್‌ಕ್ಯೂರಿಯಾಗಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಪ್ರಕರಣದಿಂದ ಹಿಂದೆ ಸರಿದಿದ್ದರು. ಅಲ್ಲದೆ, ಆಮ್ಲಜನಕ, ರೆಮ್‌ಡೆಸಿವರ್ ಸೇರಿ ವಿವಿಧ ಔಷಧಗಳ ಕೊರತೆಯ ವಿಷಯದ ಮೇಲ್ವಿಚಾರಣೆ ಮತ್ತು ಹಂಚಿಕೆ ಸಂಬಂಧ ರಾಷ್ಟ್ರೀಯ ಮಟ್ಟದ 12 ಸದಸ್ಯರ ಕಾರ್ಯಪಡೆ ರಚಿಸಿತ್ತು.
ಸಂಸತ್ತಿನ ಚರ್ಚೆಯಲ್ಲಿ ಇಂತಹ ಅನಿರ್ದಿಷ್ಟ ಉತ್ತರಗಳು ಇದೇ ಮೊದಲು ಎನ್ನಲಾರೆ. ಹಿಂದೆಯೂ ಇದೇ ಮಾದರಿಯ ಉತ್ತರಗಳನ್ನು ಕೊಟ್ಟಿರಬಹುದು. ಹೀಗೆ ಉತ್ತರಗಳನ್ನು ಸಿದ್ಧಪಡಿಸಲೆಂದೇ ಕೇಂದ್ರದ ಪ್ರತಿಯೊಂದು ಸಚಿವಾಲಯವೂ ಓರ್ವ ತಜ್ಞ ‘ಉತ್ತರ ಬರಹಗಾರ’ನನ್ನು ಹೊಂದಿರುತ್ತದೆ. ಇವರು ಎಂತಹದ್ದೇ ಕಠಿಣ, ಕಿರಿಕಿರಿ ಅನಿಸುವ ಪ್ರಶ್ನೆ ಬಂದರೂ ಅದಕ್ಕೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರ ಸಿದ್ಧಪಡಿಸಿಕೊಟ್ಟುಬಿಡುತ್ತಾರೆ.

ಪಿಯೂಷ್ ಗೋಯಲ್

ಇಷ್ಟಕ್ಕೂ ‘ಆಕ್ಸಿಜನ್’ ಪದಕ್ಕಾಗಿ ಗೂಗಲ್ ಟ್ರೆಂಡ್‌ಗಳನ್ನು ನೋಡಿದಾಗ, ನಮ್ಮಲ್ಲಿ ಕೊರೊನಾ ಅಲೆಯ ಏರಿಕೆ ಮತ್ತು ಕುಸಿತ ಅದರ ಜೊತೆಗೆ ನಿಕಟವಾಗಿ ಥಳಕು ಹಾಕಿಕೊಂಡಿರುವುದನ್ನು ತೋರಿಸುತ್ತದೆ. ಆರಂಭದಲ್ಲಿ ಪ್ರಕರಣಗಳು ಹೆಚ್ಚಾದಂತೆಲ್ಲ, ವೆಂಟಿಲೇಟರ್‌ಗಳ ಕೊರತೆಯುಂಟಾಗುತ್ತದೆ ಎಂಬ ಭೀತಿ ಕಾಡಿತ್ತು. ಆದರೆ, ವೆಂಟಿಲೇಟರ್‌ಗಿಂತ ಆಕ್ಸಿಜನ್ ಜೀವಗಳನ್ನು ಉಳಿಸುತ್ತದೆ ಎಂಬುದನ್ನು ವೈದ್ಯರು ಶೀಘ್ರದಲ್ಲಿಯೇ ಅರಿತುಕೊಂಡರು. ಆದರೂ, ಆಕ್ಸಿಜನ್ ಪೂರೈಕೆ ಸರಪಳಿಗಳನ್ನು ಸಿದ್ಧಪಡಿಸುವುದು ‘ಯೋಜನೆ’ಯ ಭಾಗವಾಗಿರಲಿಲ್ಲ.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಂಗ್ರಹದ ಅಸಮರ್ಪಕ ನಿರ್ವಹಣೆಯಿಂದ 2021 ಮೇ 2ರಂದು 36 ಜನ ರೋಗಿಗಳು ಜೀವ ತ್ಯಜಿಸಿದ್ದರು. ಇವರಲ್ಲಿ 24 ಜನರ ಕುಟುಂಬಕ್ಕೆ ಪರಿಹಾರ ಕೊಟ್ಟು 12 ಜನರ ಕುಟುಂಬಕ್ಕೆ ನಯಾಪೈಸೆಯನ್ನು ಕೊಟ್ಟಿರುವುದಿಲ್ಲ. ಆಕ್ಸಿಜನ್ ದುರಂತಕ್ಕೆ ಜಿಲ್ಲಾಧಿಕಾರಿಯ ನಿರ್ಲಕ್ಷ್ಯವೇ ಕಾರಣವೆಂದು ನ್ಯಾಯಮೂರ್ತಿ ವೇಣುಗೋಪಾಲ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಹೇಳಿತ್ತು. ಇದುವರೆಗೂ ಯಾರ ಮೇಲೂ ಕ್ರಮವಾಗಿಲ್ಲ. ನ್ಯಾಯಾಂಗ ವರದಿಯೂ ಬಹಿರಂಗಗೊಂಡಿಲ್ಲ. ಇನ್ನೂ ದುರಂತವೆಂದರೆ, ಇದೇ ದಿನ ಕೊಳ್ಳೆಗಾಲ ತಾಲೂಕಿನ ಮುಡಿಗುಂಡಂ ಗ್ರಾಮದ 36 ವರ್ಷದ ಜಯಶಂಕರ್ ಆಕ್ಸಿಜನ್ ಕೊರತೆಯಿಂದ ಅಸುನೀಗಿದ್ದಾರೆ. ಒತ್ತಡ ಹೇರಿದ ಪರಿಣಾಮ ನಡುರಾತ್ರಿಯೇ ಶವ ಹೊತ್ತೊಯ್ಯಲಾಗಿದೆಯೆಂದು ಸಿದ್ದರಾಜಮ್ಮ ಅಳಲು ತೋಡಿಕೊಂಡಿದ್ದರು. ಇಬ್ಬರು ಹೆಣ್ಣುಮಕ್ಕಳು ಮತ್ತು ಅತ್ತೆ-ಮಾವನನ್ನು ಸಾಕಲು ನಮಗೂ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು.

ಇಷ್ಟಕ್ಕೂ ಕೊರೊನಾ ತಡೆಗಟ್ಟಲು ರಚಿಸಲಾಗಿದ್ದ ತಜ್ಞರ ಸಮಿತಿ ಹಿಂದೆಯೇ ‘ಆಕ್ಸಿಜನ್ ಕೊರತೆ’ಯ ಬಗ್ಗೆ ಮುನ್ಸೂಚನೆ ನೀಡಿತ್ತೆಂದು ಕೆಲವರು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಮೊದಲ ಅಲೆಯು ತಗ್ಗುತ್ತಾ ಸಾಗಿತ್ತು. ಆದರೆ, 2021ರ ಫೆಬ್ರವರಿ ನಂತರವಷ್ಟೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಾ ಸಾಗಿತು. ಇದರ ನಡುವೆಯೂ ಪಶ್ಚಿಮ ಬಂಗಾಳದಲ್ಲಿ ರ್‍ಯಾಲಿ ಸತತವಾಗಿ ನಡೆಸಲಾಗಿತ್ತು. ಉತ್ತರಾಖಂಡ್‌ನಲ್ಲಿ ಕುಂಭಮೇಳ ನಡೆಸಲು ಅವಕಾಶ ಮಾಡಿಕೊಡಲಾಗಿತ್ತೆಂಬುದನ್ನು ಮರೆಯಲಾಗದು.

ಒಂದೊಮ್ಮೆ ಆಮ್ಲಜನಕ ಕೊರತೆಯಿಂದ ಯಾರೂ ಜೀವಬಿಟ್ಟಿಲ್ಲ ಎನ್ನುವುದಾದರೆ, ಕೈಗಾರಿಕಾ ಆಮ್ಲಜನಕ ಉತ್ಪಾದನೆಯನ್ನು ರೈಲ್ವೆಯಲ್ಲಿ ವೈದ್ಯಕೀಯ ಬಳಕೆಗೆ ತಿರುಗಿಸುವ ಅವಶ್ಯಕತೆ ಏನಿತ್ತು? ಆಕ್ಸಿಜನ್ ಸರಬರಾಜಿಗೆ ತುರ್ತು ರೈಲುಗಳನ್ನು ಓಡಿಸಲಾಯಿತು. ಇದರೊಂದಿಗೆ ಆಕ್ಸಿಜನ್ ಸಾಗಾಣಿಕೆಗೆ ರಕ್ಷಣಾ ಪಡೆಯ ಯುದ್ಧ ವಿಮಾನವನ್ನು ಬಳಸಲಾಗಿದೆ. ಯಾರೂ ಜೀವ ಬಿಟ್ಟಿಲ್ಲವೆಂದರೆ, ಉಚ್ಚ ನ್ಯಾಯಾಲಯಗಳೇಕೆ ಪ್ರಕರಣಗಳನ್ನು ತುರ್ತಾಗಿ ಆಲಿಸಿದವು? ಸುಪ್ರೀಂ ಕೋರ್ಟ್ ಅದ್ಹೇಗೆ ಪ್ರಕರಣವನ್ನು ವಿಶೇಷ ವಿಚಾರಣಾ ಘಟಕದ ಮೂಲಕ ಆಲಿಸಿತು. ಡಾ. ಅರ್ಜುನ್ ತುಳಸಿರಾಮ್ ಪವಾರ್ ಅವರ ಹೇಳಿಕೆ ದುಃಖದಲ್ಲಿರುವ ಜನರನ್ನು ಸಂತೈಸುವುದಿಲ್ಲ.

ಇಲ್ಲಿ ಕೊರೊನಾದ ಲಕ್ಷಣವೇ ಪ್ರಾಣವಾಯು ಮಟ್ಟವನ್ನು ಕೆಳಗಿಳಿಸಿ, ಉಸಿರಾಟದ ಸಮಸ್ಯೆಯನ್ನು ಉಂಟುಮಾಡುವುದು. ಇದು ಶ್ವಾಸಕೋಶದಿಂದ ರಕ್ತಕ್ಕೆ ಆಮ್ಲಜನಕ ಸಾಗಿಸುವ ಕೋಶಗಳನ್ನು ಉರಿಯೂತಕ್ಕೆ ತಳ್ಳುತ್ತವೆ. ಆಗ ಸಣ್ಣ ಗಾಳಿಯ ಚೀಲಗಳು ಸಹ ದ್ರವದಿಂದ ತುಂಬಿರುತ್ತವೆ. ಅಂದರೆ ಆರೋಗ್ಯಕರ ಪ್ರಾಣವಾಯು ವಿನಿಮಯ ದುರ್ಬಲಗೊಳ್ಳುತ್ತದೆ. ಒಟ್ಟಾರೆ ಇವೆಲ್ಲವೂ ಕೊರೊನಾ ಸಾವುಗಳನ್ನು ನಿರಾಕರಿಸುವ ಭಾಗವೆಂದೇ ಹೇಳಬಹುದಾಗಿದೆ. ಕೊರೊನಾ ಸಾವು-ನೋವು-ಪರಿಹಾರಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲವು ಪ್ರಕರಣಗಳಲ್ಲಿ ಮುಗುಮ್ಮಾಗಿ ಉಳಿದಿವೆ. ಎಲ್ಲಿ ಪರಿಹಾರ ನೀಡಬೇಕಾಗುತ್ತದೆಯೋ ಎಂಬ ಭೀತಿಯೂ ಬಹುಶಃ ಇವರಲ್ಲಿರಬೇಕು. ಹೀಗೆ ಮೌನವಾಗಿದ್ದ ಮಾತ್ರಕ್ಕೆ ‘ಸತ್ಯ’ ಮರೆಮಾಚಲು ಸಾಧ್ಯವಿಲ್ಲ. ಅಥವಾ ಸಾಂಕ್ರಾಮಿಕ ಉಂಟುಮಾಡಿರುವ ವಿನಾಶವನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ. ಹಾಗೆಯೇ ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ ಜೀವ ಬಿಟ್ಟವರ ನೋವಿನ ಕೂಗನ್ನು ಅಡಗಿಸಿದರೆ ಎಲ್ಲ ಸಮಸ್ಯೆಗಳು ಪರಿಹಾರಗೊಳ್ಳುವುದಿಲ್ಲ.

ನಮ್ಮ ದೇಶದಲ್ಲಿ ಕೊರೊನಾದಿಂದ 35 ರಿಂದ 50 ಲಕ್ಷದವರೆಗೆ ಜನ ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ. ಇದರ ಬಗ್ಗೆ ವರದಿಗಳು ಮೂಡಿ ವಿಶ್ಲೇಷಣೆಗಳು ಬಂದಾಗ, ಆಕ್ಷೇಪಣೆ, ಟೀಕೆಯೂ ವ್ಯಕ್ತವಾಗಿತ್ತು. ಒಂದು ದೇಶದ ನಾಗರಿಕರಾಗಿ ನಾವು ಎದುರಿಸಿದ ಸಮಸ್ಯೆ-ಸವಾಲುಗಳ ಬಗ್ಗೆ ‘ಸಾಮೂಹಿಕ ಪ್ರಜ್ಞೆ’ ಮೂಡಿಸುವ ಅಗತ್ಯವಿದೆ. ಹಾಗೆಯೇ ಸಾಂಕ್ರಾಮಿಕ ವ್ಯವಸ್ಥೆಯ ವಿರುದ್ಧ ಹೋರಾಡುವ ಸಂಕಲ್ಪವನ್ನು ಬೆಳೆಸಬೇಕಿದೆ.
ಜಗತ್ತಿನಲ್ಲಿ ಅತಿಹೆಚ್ಚು ‘ಕೈಗಾರಿಕಾ ಆಕ್ಸಿಜನ್’ ಉತ್ಪಾದಕ ನಾವೆಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದೇವೆ. ಆದರೆ, ಕೊರೊನಾ ಕಾಡುವಾಗ ಅಮೆರಿಕದಿಂದ 7 ಲಕ್ಷ ಟೆಸ್ಟಿಂಗ್ ಕಿಟ್ ಮತ್ತು ‘ಆಕ್ಸಿಜನ್ ಸಿಲಿಂಡರ್’ಗಳನ್ನು
ತರಿಸಿಕೊಳ್ಳಲಾಗಿದೆ.

ಇವೆಲ್ಲವನ್ನೂ ವಿಷದವಾಗಿ ಕಂಡಾಗ ಸಂಸತ್ತಿನಲ್ಲಿ ಸಚಿವರ ಹೇಳಿಕೆಯಲ್ಲಿ ಬ್ರಿಟಿಷ್ ಧೋರಣೆ ಪ್ರತಿಫಲಿಸುತ್ತದೆ. ಸತ್ಯವನ್ನು ಮರೆಮಾಚುವ ಪ್ರಯತ್ನ ಎದ್ದುಕಾಣುತ್ತದೆ. ಇದರಿಂದ ಪ್ರಜಾಪ್ರಭುತ್ವದ ಮೂಲತತ್ವದ ಉಲ್ಲಂಘನೆಯಾಗಿದೆ. ಚುನಾವಣೆಗಳಲ್ಲಿ ಗೆಲ್ಲುವುದರೊಂದಿಗೆ ಹೊಣೆಗಾರಿಕೆ ಮುಗಿಯುವುದಿಲ್ಲ. ಗೆಲುವಿನ ನಂತರದ ಆಡಳಿತ ಜನಪರವಾದ ಯೋಜನೆಗಳು ಮತ್ತು ಪರಿಹಾರಗಳನ್ನು ನಿರೀಕ್ಷಿಸುತ್ತದೆ. ಚುನಾಯಿತ ಸರ್ಕಾರಕ್ಕೆ ಅಧಿಕಾರಶಾಹಿಯನ್ನು ಬದ್ಧತೆಯಿಂದಿರುವಂತೆ ನೋಡಿಕೊಳ್ಳುವ ಕರ್ತವ್ಯವೂ ಅದರ ಮುಂದಿದೆ.

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ ಪುಸ್ತಕಗಳು ಪ್ರಕಟವಾಗಿದೆ. ಮನುಭಾರತ ಬಿಡುಗಡೆಗೆ ಸಿದ್ಧವಾಗಿದೆ.


ಇದನ್ನೂ ಓದಿ: ‘ಕೋವಿಡ್‌ ಆಕ್ಸಿಜನ್ ದುರಂತ: ಚಾ.ನಗರ ಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...