ಅಧ್ಯಕ್ಷ ಗೊಟಾಬಯ ರಾಜಪಕ್ಸೆ ದೇಶದಿಂದ ಪಲಾಯನಗೈದು ಮಾಲ್ಡೀವ್ಸ್ನಲ್ಲಿ ಆಶ್ರಯ ಪಡೆದ ಕೂಡಲೇ ಜುಲೈ 13 ರಂದು ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.
ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಅನಿರ್ದಿಷ್ಟ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಅಧ್ಯಕ್ಷ ರಾಜಪಕ್ಸೆ ಪಲಾಯನ ಮಾಡುವ ಸುದ್ದಿ ಹೊರಬಿದ್ದ ಕೂಡಲೇ ರಾಜಧಾನಿ ಕೊಲಂಬೊದಲ್ಲಿ ಮತ್ತೆ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವು, ಪ್ರತಿಭಟನಾಕಾರರು ಶ್ರೀಲಂಕಾದ ಪ್ರಧಾನಿ ಕಚೇರಿಯತ್ತ ಸಾಗಿದರು.
ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಕಚೇರಿ ಬಳಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿರುವ ದೃಶ್ಯಗಳು ಕಂಡುಬಂದಿವೆ.
ಕೊಲಂಬೊದಲ್ಲಿರುವ ಶ್ರೀಲಂಕಾದ ಪ್ರಧಾನಿ ನಿವಾಸಕ್ಕೆ ಪ್ರವೇಶಿಸಲು ಗೋಡೆಯನ್ನು ಏರಿದ ಪ್ರತಿಭಟನಾಕಾರರ ವಿರುದ್ಧ ಮಿಲಿಟರಿ ಸಿಬ್ಬಂದಿ ಅಶ್ರುವಾಯು ಶೆಲ್ಗಳನ್ನು ಸಹ ಬಳಸಿದರು. ಈ ಪ್ರದೇಶದಲ್ಲಿ ವಾಯು ಪಡೆ ಗಸ್ತು ತಿರುಗಿದೆ.
ಹೋರಾಟಗಾರರು ನಿವಾಸಕ್ಕೆ ನುಗ್ಗಿದ ನಂತರದಲ್ಲಿ ಅಧ್ಯಕ್ಷ ರಾಜಪಕ್ಸೆ ಬುಧವಾರ ಬೆಳಿಗ್ಗೆ ತನ್ನ ಪತ್ನಿ ಮತ್ತು ಇಬ್ಬರು ಅಂಗರಕ್ಷಕರೊಂದಿಗೆ ದೇಶ ಬಿಟ್ಟು ಓಡಿ ಹೋಗಿದ್ದಾರೆ.
ಶ್ರೀಲಂಕಾ ಅಧ್ಯಕ್ಷರು ರಾಜೀನಾಮೆಗೆ ಮುಂಚಿತವಾಗಿ ಮಿಲಿಟರಿ ಜೆಟ್ನಲ್ಲಿ ಪಲಾಯನ ಮಾಡಿದ್ದಾರೆ. ವೇಲಾನಾ ವಿಮಾನ ನಿಲ್ದಾಣದಲ್ಲಿ ಮಾಲ್ಡೀವ್ಸ್ ಸರ್ಕಾರದ ಪ್ರತಿನಿಧಿಯೊಬ್ಬರು ಅಧ್ಯಕ್ಷರನ್ನು ಬರಮಾಡಿಕೊಂಡಿದ್ದಾರೆ.
ಪ್ರಮುಖ ಆರ್ಥಿಕ ಮತ್ತು ರಾಜಕೀಯ ಏರುಪೇರುಗಳ ನಡುವೆ ರಾಜಪಕ್ಷ ಇಂದು ರಾಜೀನಾಮೆ ನೀಡುತ್ತಾರೆಂದು ಹೇಳಲಾಗಿತ್ತು. ಆದರೆ ಅವರು ಪರಾರಿಯಾಗಿದ್ದಾರೆ. ಗೋತಬಯ ರಾಜಪಕ್ಸೆ ಅವರ ರಾಜೀನಾಮೆಯನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಸ್ಪೀಕರ್ ದೃಢಪಡಿಸಿದ್ದಾರೆ. ಇನ್ನೊಂದು ದಿನದೊಳಗೆ ರಾಜೀನಾಮೆ ಪಡೆಯುವ ಭರವಸೆ ಇದೆ ಎಂದಿದ್ದಾರೆ.
ಹೊಸ ಸರ್ಕಾರದಿಂದ ಬಂಧನದ ಸಾಧ್ಯತೆಯನ್ನು ತಪ್ಪಿಸಲು ರಾಜಪಕ್ಸೆ ರಾಜೀನಾಮೆ ನೀಡುವ ಮೊದಲು ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ರೀಲಂಕಾದಿಂದ ರಾಜಪಕ್ಸೆ ಪಲಾಯನ ಮಾಡಲು ಭಾರತ ಸಹಕರಿಸಿದೆ ಎಂದು ವರದಿಯಾಗಿರುವುದನ್ನು ಭಾರತೀಯ ಹೈಕಮಿಷನ್ ಸ್ಪಷ್ಟವಾಗಿ ನಿರಾಕರಿಸಿದೆ. “ಇದು ಆಧಾರರಹಿತ ಮತ್ತು ಊಹಾಪೋಹದಿಂದ ಕೂಡಿದ ವರದಿ” ಎಂದು ಸ್ಪಷ್ಟಪಡಿಸಿದೆ.