ಆಗಿನ ಊರಬ್ಬಗಳು ಚನ್ನಾಗಿದ್ದೊ. ಹಬ್ಬ ಅಂದ ಕೂಡ್ಲೆ ಊರಿಗೆ ಓಡಿ ಬತ್ತಿದ್ದೊ. ಹಬ್ಬಕೆ ಅಂತ ಬಂದ ನಂಟ್ರನ್ಯಲ್ಲ ಮಾತಾಡಿಸಿ ಮೈಸೂರಲ್ಲಿ ಡಾಗುಟ್ರಾಗ್ತಾ ಅವುನೆ ಅಂತ ಅವುರಿವುರಿಂದ ಹೊಗಳಿಸಿಕಂಡು ಬರದು ಅಂದ್ರೆ ಭಾಳ ಖುಷಿಯಾಗದು. ಬರುವಾಗ ಹಬ್ಬದ ತಿಂಡಿನ್ಯಲ್ಲ ಗಂಟುಕಟ್ಟಿ ಕಳುಸರು. ನಾನು ತಂದ ಗಂಟ ರಾಮಣ್ಣ ನರಿ, ಕೋಳಿ ನೋಡಿದಂಗೆ ನೋಡಿ ಲಲ್ಲಲ್ಲಾ ಲಲ್ಲಲ್ಲಾ ಅಂತ ನಾಲಗೆಲೆ ಹಾಡೇಳನು. ಅವುನಿಗೆ ಖುಷಿಯಾದಾಗ ಲಿರಿಕ್ ಇಲ್ಲದ ಹಾಡು ಬರುವು. ಅದು ಬರಿ ಲಲ್ಲಲ್ಲಾ ಅಂತ. ನಾನದನ್ನ ನೆಗ್ಲೆಟ್ ಮಾಡಿದ್ರೆ, “ಅದೇನ್ಲ ಗಂಟು ಬಿಚ್ಚಲಾ, ವಬ್ನೆ ತಿನ್ನಕ್ಕೆ ಮಡಿಕಂಡಿದ್ದಿಯಾ” ಅನ್ನನು. ಆಗ ನಾನು, “ನಾನೂ ಹಂಚಿ ತಿನ್ನೋನು ಕನೊ, ವಬ್ನೆ ಯಾವತ್ತಾರ ತಿಂದಿದ್ದಿನಾ, ಗಂಟು ಬಿಚ್ಚಗಂಟ ವಸಿ ತಡಕೊ, ಅಂಗೆ ಬೊಬ್ಬೆ ವಾತನಂಗಾಡಬ್ಯಾಡ” ಅಂತಿದ್ದೆ.
“ಸುಮ್ಮನಂಗಂದೆ ಕಲ, ಆಟೊಂತರ ವಬ್ನೆ ತಿನ್ನಕೋದಿಯಾ. ನಿಮ್ಮ ಕಡೆ ಕರ್ಜಿಕಾಯಿ, ಚಿಕ್ಕಿನುಂಡೆ, ವಡಕಜ್ಜಾಯ ಚನ್ನಾಗಿರತವೆ ಕಲ. ವಯಿಸಾದೆಂಗೆಸರ ಕೈಯೇ ಚಂದ ಕಲ. ಹದ ಹಿಡಿದಿರತವೆ; ಅವುರು ಯಡಗೈಲಿ ಉಪ್ಪಾಕಿದ್ರೂ ಕರಟ್ಟಾಗಾಕ್ತರೆ. ವಡೆ ಅಗಿತ ಅಗಿತ ರುಚಿ ಬತ್ತವೆ.” ಅಂತ ನಮ್ಮಳ್ಳಿ ಹೆಂಗಸರ ಹೊಗಳೋನು. ಊರಿನಿಂದ ಏನಾರ ಬಾಡಿನೆಸರು ಕಳಿಸಿದ್ರೆ, “ಇರ್ಲ ವಸಿಯ, ಇಲ್ಲೆ ಬಂದೆ” ಅಂತ ಒಂದೇ ಉಸುರಿಗೋಡೋಗಿ ತ್ರಿಬಲ್ಲೆಕ್ಸ್ ರಂ ತರೋನು. ಅದೇನಾಗ ಐದು ರೂಪಾಯಿಗೊಂದು ಸೀಸ ಸಿಗದು. ಅದ ತಂದು ಮಟ್ಟವಾಗಿ ಕೂತಗಂಡು ಭಾಳ ಸ್ಟೈಲಾಗಿ ಜಾದೂ ಮಾಡೋನಂಗೆ ಮುಚ್ಚಳ ತಗದು ಗ್ಲಾಸಿಗುಯ್ಕಂಡು ಕುಡಿವಾಗ ನನ್ನ ಕಡಿಗೆ ಕಣ್ಣು ಬುಡೋನು. ಮದ್ಲೆ ಅವುನವು ಕೆಂಪುಕಣ್ಣು. ಯಣ್ಣೆ ಹೀರತ ಸುಖಪಡೊ ಭಂಗಿಯ ಈಗ್ಲು ಮರಿಯಂಗಿಲ್ಲ. ಅಮ್ಯಾಲೆ ಬಾಡಿನಿಲಕ ತಗದು ಬಾಯಿಗೆಸಗಳನು, ಅಂಗೆ ಅಣ್ಣೆಕಲ್ಯಸದಂಗೆ ಗುರಿಯಿಟ್ಟು ಅಂಗಳಿಗೆ ತಾಕಂಗೆ ಯಸಿಯನು. ಬಾಡಿನೆಸರು ಅಂದ್ರು ಸಾಕು ಮರಿಯನಂಗೆಯ. ನಮ್ಮ ಜನಗಳ ಆಗಿನಿಂದ್ಲೂ ನೋಡಿದ್ದಿನಿ, ವಡೆ ಪಯಸದ ಊಟ ಅಂದ್ರೆ ಅಂಗಾಡದಿಲ್ಲ. ಅಲ್ಲಿ ಯಾವ ಜಗಳನೂ ಇರದಿಲ್ಲ. ಅದೇ ಬಾಡಿನೆಸರು ಮಾಡಿದ ಪಾಸಾಲೆನೆ ಪ್ರಕ್ಷುಬ್ದವಾಗಿರತದೆ. ಈಗಂತು ಅಂತ ಜಾಗಕ್ಕೆ ಹೋಗಕ್ಕೆ ಭಯಾಯ್ತದೆ. ಬಾಡಿನೆಸರೂಟಕ್ಕೆ ಜನ ತಯಾರಾಗಿ ಬಂದಿರತರೆ. ರಾಮಣ್ಣಂಗೆ ಆಗಾಗ್ಗೆ ಬಾಡಿನೆಸರು ಮೆಸ್ಗೋಗಬೇಕು ಅನ್ಸದು. ಆಗ ನನ್ನ ಕರದು “ಬಾಲ ಬಾಯಿಕೆಟ್ಟದೆ ಹೋಗಮು” ಅನ್ನೋನು.
ರಾಮಣ್ಣ ಮೆಡಿಕಲ್ ಪುಸ್ತಕ ಓದದಕಿಂತ ಕತೆ ಕಾದಂಬರಿ ಓದೊನು. ಅವುನು ಮೆಡಿಕಲ್ ಓದಕ್ಕೆ ಅಂತ ಬಂದಿರಂಗೆ ಕಾಣ್ತಾಯಿರಲಿಲ್ಲ. ಅವುನು ಸುತ್ತ ಬ್ಯಾರೆ ಪುಸ್ತಕನೆ ಇರವು. ಹೊಸಹೊಸ ಪುಸ್ತಕ ತಂದು. ಮುಗಿಯೊವರಿಗೂ ಬುಡ್ತಿರಲಿಲ್ಲ. ಇದ ನೋಡಿದ ನಾವು “ಅದೇನು ಓದ್ತಿಯೋ, ಮೊದಲು ಸಬ್ಜೆಕ್ಟೋದು, ಅಮ್ಯಾಲೆ ನಿನ್ನ ಕತೆ ಕಾದಂಬರಿ, ಇವೇನು ಎಗ್ಸಾಮಿಗೆ ಬಂದವಾ” ಅಂದೆ, ಅವುನಿಗೆ ಸಿಟ್ಟು ಬಂದು, “ಅದೇನು ಕೇಮಿದ್ರ ಕೆಯಿಲ, ನಿನಿಗೇನು ಗೊತ್ತಾದತೂ ಸಾಯಿತ್ಯ ಅಂತಿದ್ದ.
“ಮದ್ಲು ಸಬ್ಜೆಕ್ಟು ಆಮ್ಯಾಲೆ ಸಾಹಿತ್ಯ ಕಣೊ” ಅಂದ್ರೆ “ಅಮಿಕ್ಕಂಡು ಕುತಗಳ್ಳ, ನಾನೀಗ ಚಂಬಲ್ ಕಣಿವೆ ಮಂಗಳ್ ಸಿಂಗ್ ಒತ್ತಾಯಿದ್ದಿನಿ ಕಲ. ಈ ನಮ್ಮ ವಿದ್ವಾಂಸರು ಕತೆ ಕಾದಂಬರಿ ತರನೆ ಸಬ್ಜಕ್ಟ್ ಬುಕ್ಕುನೂ ಬರದಿದ್ರೆ ಎಷ್ಟು ಚನ್ನಾಗಿರದ್ಲ” ಅಂದ.
“ಏನೋತ್ತಾಯಿದ್ದಿ ನೀನು?”
“ಹೇಳ್ಳಿಲವೇನ್ಲ ಚಂಬಲ್ ಕಣಿವೆ ಮಂಗಳ್ ಸಿಂಗ್ ಒತ್ತಾಯಿದ್ದಿನಿ. ಅವುನಕ್ಕನ್ ಏನ್ ಜನರಯ್ಯ ಅವುರು”.
“ಸರಿಯಪ್ಪ ಅದರ್ವಳಿಕೆನಿನ್ನ ಮೆಡಿಕಲ್ ಯಂಗೆ ಸೇರಸಮ?”
“ವಿಜ್ಞಾನ ಓದಿದೋನು ಸಾಯಿತಿಯಾದ್ರೆ ಬರಿಬವುದು ಕಲ” ಅಂದ.
“ಆಯ್ತು ನೀನೆ ಅಂತ ವಿಜ್ಞಾನದ ಸಾಯಿತಿ ಯಾರಾಗಬಾರದು” ಅಂದೆ.
“ಸುಮ್ಮನೆ ನಿಂದೇನದೆ ಅದ ಓದ್ಕಲ” ಅಂದ.
ರಾಮಣ್ಣ ಯಂತ ಗಿರಾಕಿ ಅಂದ್ರೇ, ಅವುನ ಸಬ್ಜೆಕ್ಟ್ನ ನನ್ನ ಕೈಲಿ ಜೋರಾಗಿ ಓದಕ್ಕೆ ಕೊಟ್ಟು ಸುಮ್ಮನೆ ಜಂತಿಗೆ ಕಣ್ಣು ಬುಟುಗಂಡು ನೋಡನು. ಅಮ್ಯಾಲೆ ನನ್ನ ಓದಿನ ಯಥಾವತ್ ಪದ ಬಳಸಿ ಬರಿತಿದ್ದ. ಕೇಳಿದ್ದನ್ನ ನ್ಯಾಪಗ ಇಟ್ಗಳದ್ರಲ್ಲಿ ನಿಸ್ಸೀಮ ಅವುನು. ಆದ್ರು ಪೇಲಾಗೋನು.
“ಸರಿಯಪ್ಪ ಇಷ್ಟು ಬುದ್ದಿವಂತ ಅದ್ಯಾಕ್ ಪೇಲಾಯ್ತೀ” ಅಂದ್ರೆ, “ಅದೇ ಕಲ ನನಿಗೂ ಆಶ್ಚರ್ಯ” ಅನ್ನೋನು. ಆದರೆ ನಿಜವಾಗಿ ಅವುನು ಪ್ರಾಕ್ಟಿಕಲ್ನಲ್ಲಿ ಡಲ್ಲಾಗಿದ್ದ. ಯಾಕಂದ್ರೆ ಪ್ರಾಕ್ಟಿಕಲ್ ಚಕ್ಕರ್ ಹೊಡದು ಊರಿಗೋಗಿಬುಡತಿದ್ದ. ಆಗ ಊರು ಅಂಗೇ ಇರತಿದ್ದೊ. ಅಲ್ಲಿನ ಬಾಂಧವ್ಯ ಸಮಂಧಿಕರ ಮಾತುಕತೆಯಿಂದ ಮನಸ್ಸು ತಣದಮ್ಯಾಲೆ ಮೈಸೂರಿಗೆ ಬರೋನು. ಈ ಸಮಂಧಕಿಂತ ಅವುನಿಗೆ ಪ್ರಾಕ್ಟಿಕಲ್ ಮುಖ್ಯ ಅನ್ನಸತಿರಲಿಲ್ಲ. ಆದ್ರೆ ಮೆಡಿಕಲ್ಲಲ್ಲಿ ಅದು ಬಹಳ ಮುಖ್ಯ. ಬೆಡ್ಡಲ್ಲಿರೊ ಪೇಷಂಟ್ ಮುಂಖಾಂತರ ಕಲಿಯೋದು ಬಹಳ ಮುಖ್ಯ. ಒಂಥರ ಅಕ್ಕಸಾಲಿಗ ಒಡವೆ ಹಿಡಕಂಡು ಉಜ್ಜತನೆ ನೋಡು, ಅಂಗೆ ಬೆಡ್ಡಲ್ಲಿರೊ ಪೇಷಂಟ್ ತಪಾಸಣೆ ಬಹಳ ಮುಖ್ಯ. ಆದ್ರಿಂದ ರಜ ಸಿಕ್ಕಿದೇಟಿಗೆ ಊರಿಗೋಗೊ ರಾಮಣ್ಣ ಪ್ರಾಕ್ಟಿಕಲಲ್ಲಿ ಡಲ್ಲಾಗಿದ್ದ. ಒಂದು ವೇಳೆ ಅವುನು ಊರಿಗೋಡೋಗದು, ಕತೆ ಬರಿಯ ಶ್ರಮನ್ಯಲ್ಲ ಇಲ್ಲಾಕಿದ್ರೆ ನಮ್ಮನ್ಯಲ್ಲ ಮೀರಿ ಒಳ್ಳೆ ಡಾಕ್ಟರಾಗೋನು.
“ಅಂಗಾಗಿದ್ರೆ ಕನ್ನಡಕ್ಕೆ ಒಬ್ಬ ಒಳ್ಳೆ ಕತೆಗಾರ ಸಿಗತಿರಲಿಲ್ಲ ಕಣಣ್ಣ. ಈ ನಾಡಲ್ಲಿ ಬೇಕಾದಷ್ಟು ಜನ ಡಾಕ್ಟರವುರೆ. ಆದ್ರೆ ಕನ್ನಡ ಸಾಹಿತ್ಯದಲ್ಲಿ ರಾಮಣ್ಣನಂತ ಕತೆಗಾರ ಇದ್ದುದ್ದು ಅವುನೊಬ್ಬನೆ. ಅದೂ ಯಂಥಾ ಕಾಲದಲ್ಲಿ ಅಂತೀ. ಅವುನು ಬರಿತಿದ್ದ ಕಾಲದಲ್ಲಿ ಕನ್ನಡದ ಮುಖ್ಯ ಕತೆಗಾರರೆಲ್ಲ ನವ್ಯ ಸಂವೇದನೆ ಮೈಮ್ಯಾಲ್ಯಳಕಂಡು ವಿಮರ್ಶಕರ ಮುಖಾಂತರ ನಮಗೆ ಅರ್ಥವಾಗದಂಗೆ ಕತೆ ಬರಿತಿದ್ರು. ಆದ್ರೆ ರಾಮಣ್ಣ ಈ ನ್ಯಲಕ್ಕೆ ನಿಷ್ಟನಾಗಿ ಬರದು ನೇರವಾಗಿ ನಮ್ಮ ಹೃದಯನ ತಟ್ಟೋನು. ಮನ ಮುಟ್ಟಂಗೆ ಬರತಿದ್ದ. ನಮಿಗ್ಯಲ್ಲ ಬರಿಯದ ಕಲಿಸಿದೋನೆ ಅವುನು. ಒಂದು ಕತೆಯಂತೂ ಇವತ್ನೋಡಿದ್ರು ನಮ್ಮನ್ನು ಅಲ್ಲಾಡಿಸಿಬುಡ್ತದೆ ಕಣಣ್ಣ, ಗಾಂಧಿ ಕತೆ ಓದಿದ್ದಿಯಾ. ಅದರಲ್ಲಿ ಗಾಂಧಿ ಹೆಸರಿನ ಹುಡುಗನ್ನ ಉಳಿಸಗಳಕ್ಕಾಗದಿಲ್ಲ. ಕರಿಸಿದ್ದೇಗೌಡ ದನನೊ ಅಥವಾ ಮರನೋ ಮಾರಿ ದುಡ್ಡು ತತ್ತನೆ. ಅಷ್ಟ್ರಲ್ಲಿ ಗಾಂಧಿ ಅವ್ವ ಅಳತಾ ಬಾಗಲಲ್ಲಿ ನಿಂತಿರತಳೆ. ಕರಿಸಿದ್ದೇಗೌಡ ಬಂದು ’ಜೀವ ಯಾವಾಗೊಯ್ತು’ ಅಂತನೆ. ಅಳನೆ ಅವಳುತ್ತರವಾಯ್ತದೆ. ಆಗ ಕರಿಸಿದ್ದೇಗೌಡ, ’ಮನುಸ್ರು ಸಾಯ್ದೆ ಕಲ್ಲು ಸತ್ತವಾ ಸುಮ್ನಿರು’ ಅಂತ ಗಾಂಧಿ ಶವ ತಗಳಕ್ಕೆ ಅಂತ ಡಾಕ್ಟರು ಕೇಳಕ್ಕೋಯ್ತನೆ. ರಾಮಣ್ಣ ಬರದ ಈ ಸಾಲು ಕನ್ನಡ ಸಾಹಿತ್ಯನೆ ಆಳ್ಳಾಡಿಸಿಬುಡ್ತು ಕಣಣ್ಣ.”
“ನಿಜ ರಾಮಣ್ಣನ ಕತೆಗಳು ಓದುಗರ ಮನಸ ಮುಟ್ಟಿದ್ಕೆ ಅಲವೆ ಅವುನು ವಳ್ಳೆ ಕತೆಗಾರ ಅನ್ನಿಸಿಗಂಡಿದ್ದು.”
“ರಾಮಣ್ಣ ನಮ್ಮ ಏರಿಯಾದ ಭಾಷೆನ ಯಾವುದೆ ಸಂಕೋಚವಿಲ್ಲದೆ ಬಳಸಿದ. ಲೇ ಆ ಕರ ಹಿಡಿಕಂಡೋಗಿ ಬಿತ್ತ ಕೆಚ್ಚಿಸಿಗಂಡು ಬಾರ್ಲ. ಸಿಕ್ಕಿದ ಹಸಿನ ಮ್ಯಾಲ್ಯಲ್ಲ ನ್ಯಗಿತದೆ” ಅಂತ ರಾಮಣ್ಣ ಬರದಿದ್ರಿಂದ ನಾವ್ಯಲ್ಲ ನಮ್ಮೂರ ಭಾಷೆ ಬಳಸಕ್ಕೆ ಧೈರ್ಯ ಮಾಡಿದ್ದು.”
“ಅಂತ ಮಾತು ಅವುನ ಕತೆಲಿ ತುಂಬಾ ಬತ್ತವೆ. ಆಲನಹಳ್ಳಿ ಕೃಷ್ಣ ಹಳ್ಳಿ ಕತೆ ಬರುದ್ರು, ರಾಮಣ್ಣನೇ ಬ್ಯಾರೆ ತರ ಬರಿಯೋನು. ಅವುನ ಕತೆ ಜನಪ್ರಗತಿಲೊ ಮಯೂರದಲ್ಲೊ ಪ್ರಜಾವಾಣಿಲೋ ಬಂದ್ರೆ ಅದೇ ಒಂದು ಸುದ್ದಿಯಾಗದು ಆ ಟೈಮಲ್ಲಿ. ಆಲನಹಳ್ಳಿ ’ಏನ್ಲ ರಾಮಣ್ಣ ಯಂಗಿದ್ದಿಲ’ ಅಂತ ಬಂದುಬುಡೋನು. ಅವುನು ಬಂದೇಟಿಗೆ ವಾಕ್ ಮಾಡೋರು. ನನಿಗೆ ರಾಮಣ್ಣ, ’ಹೋಗ್ಲಾ ಒಂದು ಮೂರು ಕಾಳು ಚೌಚೌ ತಗಂಬಾಲ ಅನ್ನೋನು’. ನಾನು ಹೋಗಿ ಕತೆಗಾರರಿಗೆ ಚೌಚೌ ಕಟ್ಟಿಸಿಗಂಡು ಬರಿವೆ”.
ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ
ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-2; ಮಂಡ್ಯಜಿಲ್ಲೆ ಒರಟುತನ ಇಲವಲ್ಲಾ, ಇಷ್ಟು ನಯವಂತಿಕೆ ಯಂಗೆ ಬತ್ತೂ ಅನ್ನಕಂಡೆ!


