ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ರವರನ್ನು ಶಾಸಕ ಸ್ಥಾನದಿಂದ ಚುನಾವಣಾ ಆಯೋಗವು ರದ್ದು ಮಾಡಲಿದೆ ಮತ್ತು ಜಾರ್ಖಂಡ್ನಲ್ಲಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಬಿಜೆಪಿ ಮುಖಂಡರು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಹೇಮಂತ್ ಸೊರೇನ್ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಅವರನ್ನು ಅನರ್ಹಗೊಳಿಸಲಾಗುತ್ತಿದೆ. ಜಾರ್ಖಂಡ್ ರಾಜ್ಯಪಾಲರು ಇಂದು ಈ ವಿಚಾರದ ಕುರಿತು ನಿರ್ಧಾರಕ್ಕೆ ಬರಲಿದ್ದಾರೆ ಎಂದು ಬಿಜೆಪಿ ಮುಖಂಡ ನಿಶಿಕಾಂತ್ ದುಬೆ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಹೇಮಂತ್ ಸೊರೇನ್, “ಈ ವಿಷಯದ ಕುರಿತು ನನ್ನೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ. ಇದೆಲ್ಲವೂ ಬಿಜೆಪಿ ಮತ್ತು ಕೆಲ ಮಾಧ್ಯಮಗಳ ಕಟ್ಟುಕಥೆಯಾಗಿದೆ. ಬಿಜೆಪಿ ನಾಯಕರು, ಸಂಸದರು ಅವರ ಹಿಂಬಾಲಕ ಪತ್ರಕರ್ತರು ಸೇರಿ ಚುನಾವಣಾ ಆಯೋಗದ ವರದಿ ಸಿದ್ದಪಡಿಸಿದ್ದಾರೆ. ಇಲ್ಲದಿದ್ದರೆ ಚುನಾವಣಾ ಆಯೋಗದ ನಿರ್ಧಾರವು ಮುಚ್ಚಿದ ಲಕೋಟೆಯಲ್ಲಿರುತ್ತದೆ” ಎಂದಿದ್ದಾರೆ.
ಇದು ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗವಾಗಿದೆ. ಬಿಜೆಪಿ ಅವುಗಳನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿರುವ ಅವರು ಇಂದು ರಾಂಚಿಯಲ್ಲಿ ಯುಪಿಎ ಶಾಸಕರ ಸಭೆ ಕರೆದಿದ್ದಾರೆ.
ರಾಜ್ಯಪಾಲರಾದ ಬೈಸ್ ಮಾತನಾಡಿ, “ಈ ಕುರಿತು ನನಗೆ ಪೂರ್ಣ ಮಾಹಿತಿಯಿಲ್ಲ. ನಾನು ದೆಹಲಿಯ ಏಮ್ಸ್ನಲ್ಲಿದ್ದೆ. ರಾಜಭವನಕ್ಕೆ ತೆರಳಿದ ನಂತರವಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡಲು ಸಾಧ್ಯ” ಎಂದಿದ್ದಾರೆ.
ಹೇಮಂತ್ ಸೊರೇನ್ರವರು ತನ್ನ ಹೆಸರಿನಲ್ಲಿನ ಮೈನಿಂಗ್ ಗಣಿ ಲೈಸನ್ಸ್ ಅನ್ನು ನವೀಕರಿಸುವ ಮೂಲಕ ಪ್ರಭಾವಿ ಹುದ್ದೆಯಲ್ಲಿದ್ದುಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಅವರ ರಾಜೀನಾಮೆಗೆ ಒತ್ತಾಯಿಸಿದೆ ಮತ್ತು ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಆಗ್ರಹಿಸಿದೆ.
ಒಂದು ವೇಳೆ ಸೊರೇನ್ರವರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿದರೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಅವರ ಪಕ್ಷ ಜೆಎಂಎಂ ತಿಳಿಸಿದೆ. ಸದ್ಯದ 81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ 30 ಮತ್ತು ಕಾಂಗ್ರೆಸ್ 17 ಸ್ಥಾನಗಳೊಂದಿಗೆ ಸೇರಿ ಯುಪಿಎ ಸರ್ಕಾರ ರಚಿಸಿವೆ. ವಿರೋಧ ಪಕ್ಷವಾದ ಬಿಜೆಪಿ 25 ಸದಸ್ಯರನ್ನು ಹೊಂದಿದೆ.
ಇದನ್ನೂ ಓದಿ; ಕಾಂಗ್ರೆಸ್ ಪಕ್ಷ ತೊರೆದ ಹಿರಿಯ ನಾಯಕ ಗುಲಾಂ ನಬಿ ಆಜಾದ್