ಭಾನುವಾರ ರಾತ್ರಿ ನಡೆದ ಏಷ್ಯಾಕಪ್ ಕ್ರಿಕೆಟ್ನ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ಎದುರು 5 ವಿಕೆಟ್ಗಳ ಸೋಲು ಅನುಭವಿಸಿತು. ಆ ಪಂದ್ಯದ 18ನೇ ಓವರ್ನಲ್ಲಿ ರವಿ ಬಿಷ್ಣೋಯ್ ಬೌಲಿಂಗ್ನಲ್ಲಿ ಪಾಕ್ ಆಟಗಾರ ಆಸಿಫ್ ಅಲಿ ನೀಡಿದ ಕ್ಯಾಚ್ ಅನ್ನು ಅರ್ಶದೀಪ್ ಸಿಂಗ್ ಕೈ ಚೆಲ್ಲಿದರು. ಆನಂತರ ಕೊನೆಯ ಓವರ್ನಲ್ಲಿ 7 ರನ್ ಅನ್ನು ಡಿಫೆಂಡ್ ಮಾಡಿಕೊಳ್ಳಲಾಗದ ಕಾರಣ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟ್ರೋಲ್ ವ್ಯಕ್ತವಾಗಿದೆ. ಆದರೆ ಅದನ್ನು ಖಂಡಿಸಿರುವ ಭಾರತ ತಂಡದ ಹಿರಿಯ ಆಟಗಾರರಾದ ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಅರ್ಶದೀಪ್ ಪರ ದನಿಯೆತ್ತಿದ್ದಾರೆ.
“ಯುವ ಆಟಗಾರರನ್ನು ಟೀಕಿಸುವುದನ್ನು ನಿಲ್ಲಿಸಿ. ಯಾರೂ ಕೂಡ ಬೇಕಂತ ಕ್ಯಾಚ್ ಕೈಚೆಲ್ಲುವುದಿಲ್ಲ. ಭಾರತದ ಯುವ ತಂಡದ ಬಗ್ಗೆ ನಾವು ಅಭಿಮಾನ ವ್ಯಕ್ತಪಡಿಸಬೇಕು. ಪಾಕಿಸ್ತಾನ ನಮಗಿಂತ ಚೆನ್ನಾಗಿ ಆಡಿತು. ಆದರೆ ಭಾರತ ತಂಡ ಮತ್ತು ಅರ್ಶದೀಪ್ ವಿರುದ್ಧ ಕೊಳಕಾಗಿ ಕಮೆಂಟ್ ಮಾಡುವವರ ಬಗ್ಗೆ ನಾಚಿಕೆಯೆನಿಸುತ್ತದೆ. ಅರ್ಶ್ ಎಂದರೆ ಚಿನ್ನ” ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
Stop criticising young @arshdeepsinghh No one drop the catch purposely..we are proud of our 🇮🇳 boys .. Pakistan played better.. shame on such people who r putting our own guys down by saying cheap things on this platform bout arsh and team.. Arsh is GOLD🇮🇳
— Harbhajan Turbanator (@harbhajan_singh) September 4, 2022
ಹರ್ಶದೀಪ್ ಗಟ್ಟಿ ವ್ಯಕ್ತಿತ್ವವುಳ್ಳವರು. ಹಾಗೆಯೇ ಇರಿ ಎಂದು ಇರ್ಫಾನ್ ಪಠಾಣ್ ಟ್ವೀಟ್ ಮಾಡುವ ಮೂಲಕ ಬೆಂಬಲ ನೀಡಿದ್ದಾರೆ.
Arshdeep is a strong character. Stay that way boy. @arshdeepsinghh
— Irfan Pathan (@IrfanPathan) September 4, 2022
ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಕೂಡ ಹರ್ಶದೀಪ್ ಬೆಂಬಲಕ್ಕೆ ನಿಂತಿದ್ದಾರೆ. “ನಾವೆಲ್ಲರೂ ಮನುಷ್ಯರು. ಹಾಗಾಗಿ ಕ್ರೀಡೆಯಲ್ಲಿ ನಾವೆಲ್ಲರೂ ತಪ್ಪು ಮಾಡಬಹುದು. ಆ ತಪ್ಪುಗಳಿಗಾಗಿ ದಯವಿಟ್ಟು ಯಾರನ್ನೂ ಅವಮಾನಿಸಬೇಡಿ” ಎಂದು ಬರೆದು ಹರ್ಶದೀಪ್ರವರನ್ನು ಟ್ಯಾಗ್ ಮಾಡಿದ್ದಾರೆ.
My request to all Indian team fans. In sports we make mistakes as we r human. Please don’t humiliate anyone on these mistakes. @arshdeepsinghh
— Mohammad Hafeez (@MHafeez22) September 4, 2022
ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿ ಸಹ ಅರ್ಶದೀಪ್ ಬೆಂಬಲಿಸಿ ಮಾತನಾಡಿದ್ದಾರೆ. “ಎಲ್ಲರೂ ತಪ್ಪು ಮಾಡುತ್ತಾರೆ. ತುಂಬಾ ಒತ್ತಡ ಸನ್ನಿವೇಷವಿದ್ದಾಗ ತಪ್ಪುಗಳಾಗುವುದು ಸಹಜ. ನನಗಿನ್ನೂ ನೆನಪಿದೆ, ನನ್ನ ಮೊದಲ ಪಂದ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ಎದುರಾಗಿತ್ತು. ಆದರೆ ಎಂದು ಶಾಹಿದ್ ಅಫ್ರಿದಿ ಎದುರು ನಾನು ಕೆಟ್ಟ ಹೊಡೆತ ಹೊಡೆದು ಔಟ್ ಆದೆ. ಅಂದು ರಾತ್ರಿ ನಾನು ನಿದ್ರೆ ಮಾಡಲಿಲ್ಲ ಮತ್ತು ನನ್ನ ಕ್ರಿಕೆಟ್ ಜೀವನ ಮುಗಿಯಿತು ಎಂದುಕೊಂಡೆ. ಆದರೆ ಹಾಗಾಗಲಿಲ್ಲ. ಭಾರತ ತಂಡದಲ್ಲಿ ಹಿರಿಯ ಆಟಗಾರರಿದ್ದಾರೆ. ಒಳ್ಳೆಯ ತಂಡಸ್ಪೂರ್ತಿಯಿದೆ. ಉತ್ತಮ ನಾಯಕ ಮತ್ತು ಕೋಚ್ ಇದ್ದಾರೆ. ಆಟಗಾರರು ತಮ್ಮ ತಪ್ಪುಗಳಿಂದ ಪಾಠ ಕಲಿಯುತ್ತಾರೆ. ತಪ್ಪನ್ನು ಒಪ್ಪಿಕೊಂಡು ಯಾಕಾಯಿತು ಎಂದು ವಿಶ್ಲೇಷಿಸಿ ಮತ್ತೆ ಅಂಥದ್ದೆ ಒತ್ತಡದ ಸಂದರ್ಭಗಳನ್ನು ನಿಭಾಯಿಸುತ್ತಾರೆ’ ಎಂದಿದ್ದಾರೆ.
ಪಂದ್ಯದಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದರೆ ಪಾಕ್ ತಂಡ ಒಂದು ಎಸೆತ ಬಾಕಿ ಇರುವಂತೆಯೇ ಐದು ವಿಕೆಟ್ ಕಳೆದುಕೊಂಡು 182 ರನ್ ಗಳಿಸಿ ಜಯ ಸಾಧಿಸಿತು.
ಇದನ್ನೂ ಓದಿ: ಏಷ್ಯಾ ಕಪ್ ಪಂದ್ಯದ ನಂತರ ಭಾರತದ ತ್ರಿವರ್ಣ ಧ್ವಜ ಹಿಡಿಯಲು ಜಯ್ ಶಾ ನಕಾರ: ವಿಪಕ್ಷಗಳ ತರಾಟೆ