ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ತಮ್ಮ ಧಾರ್ಮಿಕ ಗುರುತಿನ ಆಧಾರದ ಮೇಲೆ ಗುಂಪೊಂದು ತನ್ನನ್ನು ಮತ್ತು ತನ್ನ ಕುಟುಂಬವನ್ನು ಥಳಿಸಿದೆ ಎಂದು ಮುಸ್ಲಿಂ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಗುಂಪು ಹಲ್ಲೆ ನಡೆದರೂ ಪೊಲೀಸರು ಎಫ್ಐಆರ್ನಲ್ಲಿ ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಜನರ ಗುಂಪೊಂದು ಹಲ್ಲೆ ನಡೆಸುತ್ತಿರುವ ವಿಡಿಯೊ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸೆಪ್ಟೆಂಬರ್ 15 ರಂದು ಜಿಲ್ಲೆಯ ಔರಿಯಾ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ವಾಜಿದ್ ಅಲಿ (23) ಹೇಳಿದ್ದಾರೆ. ಅವರು ತನ್ನ ತಂದೆ ಮತ್ತು ತಾಯಿಯೊಂದಿಗೆ ಸಹೋದರಿಯ ಭೇಟಿಗೆ ತೆರಳುತ್ತಿದ್ದರು. ಈ ವೇಳೆ ಜನರ ಗುಂಪೊಂದು ಅವರ ಹಲ್ಲೆ ನಡೆಸಿತ್ತು. ಆದರೆ, ಪೊಲೀಸರು ಮಧ್ಯ ಪ್ರವೇಶಿಸಿ ಸಂತ್ರಸ್ತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ನಂತರ ಅವರನ್ನು ಚಿಂದ್ವಾರದ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನಾವು ನನ್ನ ಸಹೋದರಿಯನ್ನು ಭೇಟಿಯಾಗಲು ಹೋಗುತ್ತಿದ್ದಾಗ ಔರಿಯಾ ಗ್ರಾಮದ ಜನರು ನಮ್ಮನ್ನು ತಡೆದು ನನ್ನ ಪೋಷಕರಿಗೆ ಥಳಿಸಲು ಪ್ರಾರಂಭಿಸಿದರು. ನನಗೂ ಥಳಿಸಲಾಗಿದೆ. ಪೊಲೀಸರು ಸಮಯಕ್ಕೆ ಬಾರದಿದ್ದರೆ ಅವರು ನಮ್ಮನ್ನು ಕೊಲ್ಲುತ್ತಿದ್ದರು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗುಂಪು ಹಲ್ಲೆ ಸರಣಿ ಮುಂದುವರಿಕೆ – ‘ಲವ್ ಜಿಹಾದ್’ ಆರೋಪದಲ್ಲಿ ಅಪ್ರಾಪ್ತ ಹಿಂದೂ ಬಾಲಕನಿಗೆ ಥಳಿತ
‘ಸಂತ್ರಸ್ತರ ಹೇಳಿಕೆ ದಾಖಲಾಗಿದೆ’: ಆರೋಪ ನಿರಾಕರಿಸಿದ ಪೊಲೀಸರು
ಧರ್ಮದ ಆಧಾರದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಕುಟುಂಬಸ್ಥರ ಹೇಳಿಕೆಯನ್ನು ಎಫ್ಐಆರ್ನಲ್ಲಿ ತಪ್ಪಾಗಿ ಉಲ್ಲೇಖಿಸಲಾಗಿದೆ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಆಸ್ಪತ್ರೆಯಲ್ಲಿ ಸಂತ್ರಸ್ತರು ನೀಡಿದ ಹೇಳಿಕೆಯ ದೃಶ್ಯಗಳನ್ನು ತಾವು ದಾಖಲಿಸಿರುವುದಾಗಿ ಅವರು ಹೇಳಿದ್ದಾರೆ.
ವಾಜಿದ್ ತನ್ನ ಗ್ರಾಮದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು, ಕೆಲವು ತಿಂಗಳ ಹಿಂದೆ ಆಕೆಯೊಂದಿಗೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
“ಈ ಸಂಬಂಧ ಮಹಿಳೆಯ ಮನೆಯವರು ದೂರು ದಾಖಲಿಸಿದ್ದು, ದಂಪತಿಯನ್ನು ಹೈದರಾಬಾದ್ನಲ್ಲಿ ಪತ್ತೆ ಹಚ್ಚಿ ವಾಪಸ್ ಕರೆತರಲಾಗಿದೆ. ಇದರ ನಂತರ ಎರಡು ಕುಟುಂಬಗಳ ನಡುವೆ ರಾಜಿ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು. ಮಹಿಳೆಯನ್ನು ಔರಿಯಾ ಗ್ರಾಮದ ತನ್ನ ತಾಯಿಯ ಚಿಕ್ಕಪ್ಪನೊಂದಿಗೆ ವಾಸಿಸಲು ಕಳುಹಿಸಲಾಯಿತು” ಎಂದು ಅವರು ತಿಳಿದಿಸಿದ್ದಾರೆ.
ಇದನ್ನೂ ಓದಿ: ಗುಂಪು ಹಲ್ಲೆ – ಯುಪಿಯಲ್ಲಿ 22 ವರ್ಷದ ಮುಸ್ಲಿಂ ಯುವಕ ಸಾವು
“ಯುವಕ ಮತ್ತು ಅವರ ಪೋಷಕರು ಔರಿಯಾಗೆ ಹೋಗಿದ್ದರು. ಅಲ್ಲಿ ಅವರನ್ನು ಮಹಿಳೆಯ ಕುಟುಂಬದ ಸದಸ್ಯರು ಗುರುತಿಸಿದ್ದಾರೆ” ಎಂದು ಕುಪುರ್ಡಾ ಪೊಲೀಸ್ ಹೊರಠಾಣೆ ಉಸ್ತುವಾರಿ ದ್ವಾರಕಾ ಪ್ರಸಾದ್ ಪಾಲ್ ಹೇಳಿದ್ದಾರೆ. ಈ ವೇಳೆ ಕುಟುಂಬ ಸದಸ್ಯರು ಅವರೊಂದಿಗೆ ತರ್ಕಿಸಲು ಪ್ರಯತ್ನಿಸಿದರು, ಅದರ ನಂತರ ಗಲಾಟೆ ನಡೆದಿದ್ದು, ಯುವಕ ಮತ್ತು ಅವನ ಹೆತ್ತವರನ್ನು ಥಳಿಸಲಾಗಿದೆ ಎಂದು ಅವರ ಹೇಳಿದ್ದಾರೆ.
ಸಂತ್ರಸ್ತ ವಾಜಿದ್ ಅವರು ತನಗೆ ಹುಡುಗಿಯೊಂದಿಗೆ ಪ್ರೇಮ ಸಂಬಂಧ ಇರುವುದು ನಿಜವಾಗಿದ್ದು, ತಾವಿಬ್ಬರೂ ಓಡಿಹೋಗಿ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಕಳೆದ ವಾರ ನಡೆದ ಘಟನೆಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ತಮ್ಮ ಮೇಲೆ ಗುಂಪು ಹಲ್ಲೆ ನಡೆದ ಸಂದಂರ್ಭ ಅವರು ಮತ್ತು ಅವರ ಪೋಷಕರು ಆರಿ ಗ್ರಾಮದಲ್ಲಿರುವ ತಮ್ಮ ಸಹೋದರಿಯನ್ನು ಭೇಟಿ ಮಾಡಲು ಹೋಗುತ್ತಿದ್ದದ್ದಾಗಿ ಹೇಳಿದ್ದಾರೆ. ಈ ವೇಳೆ ಗ್ರಾಮಸ್ಥರು ಅವರನ್ನು ತಡೆದು ಗುಂಪು ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ: ‘ನೂರು ಜನರ ಗುಂಪು ಹಲ್ಲೆ ಮಾಡಿತು; ಜೈ ಶ್ರೀರಾಮ್ ಎಂದಿತು, ಊರು ಬಿಡುವಂತೆ ಸೂಚಿಸಿತು’
ಈ ಮಧ್ಯೆ ಪೊಲೀಸರು ಕುಟುಂಬದ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294 (ಸಾರ್ವಜನಿಕವಾಗಿ ಅಶ್ಲೀಲ ಕೃತ್ಯಗಳು) 323 (ಉದ್ದೇಶಪೂರ್ವಕವಾಗಿ ನೋವುಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.


