Homeಅಂತರಾಷ್ಟ್ರೀಯಬ್ರೆಜಿಲ್: ಬೊಲ್ಸೊನಾರೊ ಸೋಲು; ಅಮೆಜಾನ್ ಕಾಡು ಉಳಿವ ಭರವಸೆ; ಜಗತ್ತಿಗೂ ನಿಟ್ಟುಸಿರು

ಬ್ರೆಜಿಲ್: ಬೊಲ್ಸೊನಾರೊ ಸೋಲು; ಅಮೆಜಾನ್ ಕಾಡು ಉಳಿವ ಭರವಸೆ; ಜಗತ್ತಿಗೂ ನಿಟ್ಟುಸಿರು

- Advertisement -
- Advertisement -

ಬ್ರೆಜಿಲ್ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಜೈರ್  ಬೊಲ್ಸೊನಾರೊರನ್ನು ಸೋಲಿಸಿರುವ ಲೂಯಿಜ್ ಇನಾಸಿಯೋ ಲೂಲಾ ಡಿಸಿಲ್ವಾ ನೂತನ ಅಧ್ಯಕ್ಷರಾಗಲಿದ್ದಾರೆ. ಇದು ಕೇವಲ ಲೂಲಾರ ಬೆಂಬಲಿಗರಿಗೆ ಮಾತ್ರವಲ್ಲ ಇಡೀ ವಿಶ್ವಕ್ಕೇ ನಿಟ್ಟುಸಿರು ಬಿಡುವ ಸುದ್ದಿ. ಕನಿಷ್ಠಪಕ್ಷ ಮುಂದಿನ ಅವಧಿಯವರೆಗಾದರೂ ಅಮೆಜಾನ್ ಕಾಡುಗಳ ನಾಶಕ್ಕೆ ಸ್ವಲ್ಪವಾದರೂ ತಡೆ ಬೀಳಬಹುದು ಎಂಬ ಆಶಾವಾದವನ್ನು ಪರಿಸರ ಪ್ರಿಯರಲ್ಲಿ ಅಷ್ಟೇ ಅಲ್ಲದೆ ಸಾಮಾನ್ಯ ಜನತೆಯಲ್ಲಿ ಕೂಡ ಈ ಫಲಿತಾಂಶವು ಮೂಡಿಸಿದೆ. ಅಮೆಜಾನ್ ಕಾಡುಗಳ ಮೇಲೆ ಯುದ್ಧವನ್ನೇ ಸಾರಿದ್ದ ಬೊಲ್ಸೊನಾರೊ ಕೇವಲ ಬ್ರೆಜಿಲ್ ಅಷ್ಟೇ ಅಲ್ಲದೆ ಇಡೀ ವಿಶ್ವದ ಮನುಕುಲದ ಅಸ್ತಿತ್ವಕ್ಕೇ ಧಕ್ಕೆ ತರುವ ಮಟ್ಟಕ್ಕೆ ಅರಣ್ಯನಾಶದ ಪರವಾಗಿ ನಿಂತಿದ್ದರು. ಅವರ ಅವಧಿಯಲ್ಲಿ ಅರಣ್ಯನಾಶವು ಕಳೆದ ಎರಡು ದಶಕಗಳಲ್ಲಿಯೇ ಅತೀ ಹೆಚ್ಚಿನದಾಗಿತ್ತು ಮತ್ತು ಅಮೆಜಾನ್ ಅರಣ್ಯವು ಕಂಡು ಕೇಳರಿಯದ ಮಾನವಜನ್ಯ ಕಾಳ್ಗಿಚ್ಚಿಗೆ ಒಳಗಾಗಿತ್ತು.

ಕನ್ನಡಿಗರಿಗೆ ಅಮೆಜಾನ್ ಕಾಡುಗಳ ಕುರಿತ ಮಾಹಿತಿ ಹೊಸದೇನಲ್ಲ; ಆ ಕಾಡಿನ ಅಗಾಧತೆಯ ಮತ್ತು ಶ್ರೀಮಂತ ಜೀವ ವೈವಿಧ್ಯದ ಪರಿಚಯ ಪೂರ್ಣಚಂದ್ರ ತೇಜಸ್ವಿಯವರ ವಿಸ್ಮಯ ಸರಣಿ ಪುಸ್ತಕದ ಮೂಲಕ ಆಗಿಯೇ ಇರುತ್ತದೆ. ಅಲ್ಲಿನ ಬುಡಕಟ್ಟು ಜನ, ಪಿರಾನ್ಹಾ ಮತ್ತು ಎಲೆಕ್ಟ್ರಿಕ್ ಈಲ್ ಮೀನು, ಅನಕೊಂಡಾ ಹಾವು ಮತ್ತು ಅಲ್ಲಿನ ಜನ ಬೇಟೆಯಾಡಲು ಬಾಣಗಳ ತುದಿಗೆ ಸವರುತ್ತಿದ್ದ ಕುರಾರೇ ಎಂಬ ವಿಷ, ಇವೆಲ್ಲ ಮಾಹಿತಿಯನ್ನು ಹೊತ್ತ ಪುಸ್ತಕ ಸರಣಿಯು ನಮ್ಮೆದುರಿಗೆ ಅಮೆಜಾನಿನ ರಮ್ಯಲೋಕವನ್ನೇ ತೆರೆದಿಟ್ಟಿತ್ತು ಮತ್ತು ಅಮೆಜಾನ್ ಎಂದೂ ಪಳಗಿಸಲು ಸಾಧ್ಯವೇ ಇಲ್ಲದ ದಟ್ಟ ಅರಣ್ಯಗಳ ಭೂ ಪ್ರದೇಶವಾಗಿ ಕನ್ನಡಿಗರ ಭಾವಕೋಶದಲ್ಲಿ ದಾಖಲಾಗಿತ್ತು. ಇಂತಹ ಅರಣ್ಯ ಕೂಡ ಇನ್ನು ಸರಿಪಡಿಸಲಾಗದಷ್ಟು ಪ್ರಮಾಣದಲ್ಲಿ ಕಳೆದ ಕೆಲ ದಶಕಗಳಲ್ಲಿ ನಾಶಕ್ಕೆ ಒಳಗಾಗುತ್ತಿದೆ ಮತ್ತು ಅದರ ಜೊತೆಗೇ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಇನ್ನಷ್ಟು ಕ್ಷಿಪ್ರಗೊಳಿಸುತ್ತಿದೆ.
ಅಮೆಜಾನ್ ಅರಣ್ಯ ಮತ್ತು ಅದರ ವಿನಾಶವು ಕೇವಲ ದಕ್ಷಿಣ ಅಮೆರಿಕದ ವಿಷಯವಷ್ಟೇ ಅಲ್ಲ, ಕಾರಣ, ವಿಶ್ವದ ಅಳಿವು ಉಳಿವು ಅಮೆಜಾನ್ ಅರಣ್ಯಗಳ ಸುಸ್ಥಿತಿಯ ಮೇಲೆ ನಿಂತಿದೆ. ಹವಾಮಾನ ವೈಪರೀತ್ಯದ ಕುರಿತ ಎಲ್ಲ ಜಾಗತಿಕ ಸಭೆಗಳಲ್ಲಿಯೂ ಅಮೆಜಾನ್ ಕುರಿತ ಚರ್ಚೆ ಇದ್ದೆ ಇರುತ್ತದೆ. ಜಾಗತಿಕ ಸಮುದಾಯದ ಒತ್ತಾಸೆ ಮತ್ತು ಬೆಂಬಲದ ಕಾರಣದಿಂದಾಗಿ, ಬೊಲ್ಸೊನಾರೊರ ಅಧ್ಯಕ್ಷೀಯ ಅವಧಿಗೂ ಮುಂಚೆ, ಬ್ರೆಜಿಲ್‌ನ ಈ ಕಾಡುಗಳ ನಾಶದ ಪ್ರಮಾಣವು ಸ್ವಲ್ಪ ಮಟ್ಟಿಗಾದರೂ ತಗ್ಗಿತ್ತು. ಸುಮಾರು ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಲೂಲಾರ ಕ್ರಮಗಳಿಂದಾಗಿ ಅಲ್ಲಿನ ಮೂಲನಿವಾಸಿಗಳ ಹಕ್ಕುಗಳ ರಕ್ಷಣೆ ಕೂಡ ತಕ್ಕಮಟ್ಟಿಗೆ ಆಗಿತ್ತು. ಆದರೆ 2019-2022ರ ಅವಧಿಗೆ ಅಧ್ಯಕ್ಷರಾಗಿದ್ದ ಬೊಲ್ಸೊನಾರೊ, ಅಮೆಜಾನ್ ಕಾಡುಗಳ ಮೇಲೆ ಬ್ರೆಜಿಲ್ ಜನರಿಗಷ್ಟೇ ಹಕ್ಕು ಇದೆ, ಅದರಲ್ಲಿ ವಿದೇಶಿ ಹಸ್ತಕ್ಷೇಪ ಆಗಕೂಡದು ಎಂಬ ತತ್ವದ ಮೂಲಕ ಬ್ರೆಜಿಲ್ ನಲ್ಲಿ ವ್ಯಾಪಕವಾಗಿ ಕೃಷಿ ಉದ್ಯಮ, ಗಣಿಗಾರಿಕೆಗೆ ಅವಕಾಶ ಕೊಟ್ಟರು; ಮತ್ತು ಅದರ ಮುಸುಕಿನಲ್ಲಿ ನಡೆಯುವ ಮರಮುಟ್ಟುಗಳ ಉದ್ಯಮಕ್ಕೆ ಸಂಪೂರ್ಣ ಬೆಂಬಲ ಕೊಟ್ಟರು. ಇಲ್ಲಿ ಕೃಷಿಯೆಂದರೆ ನಮ್ಮ ದೇಶದಲ್ಲಿ ಇದ್ದಂತೆ ಸಣ್ಣ ಹಿಡುವಳಿದಾರರ ಸಾಂಪ್ರದಾಯಿಕ ಕೃಷಿ ಅಲ್ಲ. ವಿಶಾಲವಾದ ಪ್ರದೇಶದಲ್ಲಿ ಕಾಡುಗಳನ್ನು ಸವರಿ ಬೆಂಕಿ ಕೊಟ್ಟು ಅಲ್ಲಿ ಸೋಯಾ ಅವರೆಯನ್ನು ಏಕ ಬೆಳೆಯನ್ನಾಗಿ ಬೆಳೆಸುವ ಬೃಹತ್ ಉದ್ಯಮ. ಯಾವ ದೃಷ್ಟಿಯಲ್ಲಿಯೂ ಪರಿಸರ ಸ್ನೇಹಿಯಲ್ಲದ ಈ ಕೃಷಿಯು ಅಪಾರವಾದ ಕೀಟನಾಶಕಗಳನ್ನು ಬೇಡುತ್ತದೆ, ಹೀಗಾಗಿ ಇವರ ಅವಧಿಯಲ್ಲಿ ಬ್ರೆಜಿಲ್, ವಿಶ್ವದ ಅತಿದೊಡ್ಡ ಕೀಟನಾಶಕಗಳ ಬಳಕೆದಾರ ರಾಷ್ಟ್ರವಾಗಿಯೂ ಹೊರಹೊಮ್ಮಿತು. ಮುಂಚೆ ನಿಷೇಧಿತವಾಗಿದ್ದ ಅಪಾಯಕಾರಿ ಕೀಟನಾಶಕಗಳ ಬಳಕೆಗೆ ಅವಕಾಶ ನೀಡಲಾಯಿತು. ಇದಷ್ಟೇ ಅಲ್ಲದೆ ಬ್ರೆಜಿಲ್ ವಿಶ್ವದ ಅತಿದೊಡ್ಡ ದನದ ಮಾಂಸದ ರಫ್ತುದಾರ ರಾಷ್ಟ್ರ.ಇದೇನು ಬಡ ದನಗಾಹಿಗಳು ನಡೆಸುವ ಉದ್ಯೋಗವಲ್ಲ, ದೊಡ್ಡ ದೊಡ್ಡ ಕಾಡುಗಳನ್ನು ಸವರಿ ಅವನ್ನು ಹುಲ್ಲುಗಾವಲನ್ನಾಗಿ ಪರಿವರ್ತಿಸಿ ದನಗಳನ್ನು ಸಾಕುವ ವಿಧಾನ. ಇದು ಕೂಡ  ಅಮೆಜಾನ್ ನಾಶಕ್ಕೆ ದೊಡ್ಡ ಕೊಡುಗೆ ನೀಡಿದೆ.
ಇಷ್ಟೇ ಅಲ್ಲದೆ, ಬೊಲ್ಸೊನಾರೊ ಅಮೆಜಾನ್‌ನ ನಾಶಕ್ಕೆ ಇನ್ನೂ ಮುಂದುವರೆದು ಹೊಸ ಆಯಾಮವನ್ನೇ ತೆರೆದರು. ಕೃಷಿ ಉದ್ಯಮ ಲಾಬಿಯ ಅಣತಿಯಂತೆ ಅಕ್ರಮವಾಗಿ ಕಾಡು ಕಡಿದು ನಿರ್ಮಿಸಿದ ಕೃಷಿ ಭೂಮಿಯನ್ನು ಸಕ್ರಮ ಮಾಡುವ ಕರಡು ಮಸೂದೆಯನ್ನು ಹೊರಡಿಸಿದರು. ಇದು, ಅಪರಾಧಿಗಳಾಗಿ ಕಾನೂನಿನ ಕ್ರಮವನ್ನು ಎದುರಿಸಬೇಕಾಗಿದ್ದಂತವರನ್ನು ಭೂಮಿಯ ಒಡೆಯರನ್ನಾಗಿಸುತ್ತಿತ್ತು. ಅಲ್ಲಿನ ಮೂಲನಿವಾಸಿಗಳ ಹಕ್ಕನ್ನು ಮೊಟಕುಗೊಳಿಸಿ ಅವರ ವ್ಯಾಪ್ತಿಯ ಭೂಮಿಯನ್ನು ಕಾಡುಗಳ್ಳರು ಸುಲಭವಾಗಿ ಪಡೆಯುವಂತಹ ಕರಡನ್ನು ರೂಪಿಸಿದರು. ಸಾಮಾನ್ಯವಾಗಿ ಪರಿಸರ ವಿರೋಧಿ ಧೋರಣೆಯುಳ್ಳವರು ಮಾಡುವ ಮೊದಲ ಕೆಲಸವೆಂದರೆ ವಿಜ್ಞಾನ ಮತ್ತು ವಿಜ್ಞಾನಿಗಳನ್ನು ದೂಷಿಸುವುದು ಮತ್ತು ಸಂಶೋಧನೆಗೆ ಇದ್ದ ಬೆಂಬಲವನ್ನು ಮೊಟಕುಗೊಳಿಸುವುದು.  ಬೊಲ್ಸೊನಾರೊ ಕೂಡ ಇದನ್ನು ಚಾಚೂ ತಪ್ಪದೆ ಜಾರಿಗೆ ತಂದರು. ಬ್ರೆಜಿಲ್‌ನ ಪರಿಸರ ರಕ್ಷಣೆ ಮತ್ತು ಸಂಶೋಧನೆಗೆ ಮೀಸಲಾಗಿದ್ದ ಹಣಕಾಸಿನ ನೆರವನ್ನು ಕಡಿತಗೊಳಿಸಿದರು. ಇದರ ಪರಿಣಾಮವಾಗಿ ಪರಿಸರ ಅಪರಾಧಗಳನ್ನು ಪತ್ತೆ ಹಚ್ಚುವ ಮತ್ತು ಶಿಕ್ಷಿಸುವ ಪ್ರಕ್ರಿಯೆಯು ಕುಂಠಿತವಾಗಿ ಅರಣ್ಯನಾಶ ಇನ್ನೂ ಹೆಚ್ಚಿತು. ಇದು ಅಮೆಜಾನಿನ ಇತಿಹಾಸದಲ್ಲೇ ಭೀಕರವಾದ ಕಾಳ್ಗಿಚ್ಚಿಗೂ ನಾಂದಿ ಹಾಡಿತು. ಈವರೆಗೂ ಜಾಗತಿಕ ಇಂಗಾಲವನ್ನು ಹೀರಿಕೊಳ್ಳುವ ತಾಣವಾಗಿದ್ದ ಅಮೆಜಾನ್, ಭಾರೀ ಪ್ರಮಾಣದ ಇಂಗಾಲವನ್ನು ಹೊರಸೂಸುವ ಕುಲುಮೆಯಾಗಿ ಮಾರ್ಪಟ್ಟಿತು. ಇದರ ತೀವ್ರತೆ ಯಾವ ಮಟ್ಟಕ್ಕೆ ಇತ್ತೆಂದರೆ ಬ್ರೆಜಿಲ್‌ನ ಸಾವೋ ಪೌಲೊ ನಗರ ಬೆಂಕಿಯ ಹೊಗೆಯಿಂದಾಗಿ ಒಂದು ದಿನ ಪೂರ್ತಿ ಕತ್ತೆಲೆಯಿಂದ ಅವರಿಸಲ್ಪಟ್ಟಿತ್ತು. ಇತ್ತ ಎಚ್ಛೆತ್ತ ಜಾಗತಿಕ ಸಮುದಾಯ ನೆರವಿಗೆ ನಿಂತರೂ ಮೊಂಡಾಟ ಬಿಡದ ಬೊಲ್ಸೊನಾರೊ, ಜಿ7 ರಾಷ್ಟ್ರಗಳು ನೀಡಿದ ನೆರವನ್ನು ನಾನು ಸ್ವೀಕರಿಸಲಾರೆ ಎಂದು ಚಂಡಿ ಹಿಡಿದರು. ಬದಲಾಗಿತ್ತರುವ ಜಾಗತಿಕ ರಾಜಕೀಯ ಸಮೀಕರಣಗಳೂ ಅವರ ಮೊಂಡು ಹಠಕ್ಕೆ ಕಾರಣ ಎನ್ನಬಹುದು. ಒಂದು ವೇಳೆ ಯುರೋಪ್ ಅಥವಾ ಅಮೆರಿಕ ಬ್ರೆಜಿಲ್‌ನ ಉತ್ಪನ್ನಗಳನ್ನು ನಿರ್ಬಂಧಿಸಿದರೂ ಚೀನಾ ಅವುಗಳಿಗೆ ದೊಡ್ಡ ಮಾರುಕಟ್ಟೆಯನ್ನೇ ಒದಗಿಸಿದೆ. ಹೀಗಾಗಿ  ಪರಿಸರ ರಕ್ಷಣೆಗೆ ಜಾಗತಿಕ ಒತ್ತಡ ಮುಂಚಿನಷ್ಟು ಪರಿಣಾಮಕಾರಿಯಾಗಿ ಇಲ್ಲದೆ ಹೋಗಬಹುದು, ಒಂದು ವೇಳೆ ಇದ್ದರೂ, ಅದನ್ನು ದೇಶಭಕ್ತಿಯ ಆಧಾರದ ಮೇಲೆ ಅಲ್ಲಗಳೆಯುವ ಕ್ರಮಗಳೂ ಹೆಚ್ಚುತ್ತಿವೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಬಾಹ್ಯ ಹಸ್ತಕ್ಷೇಪವನ್ನು ವಿರೋಧಿಸುವುದೇನೋ ಸರಿ ಆದರೆ ಆ ವಿರೋಧವನ್ನು ಕೇವಲ ಇನ್ನೂ ಹೆಚ್ಚಿನ ಅರಣ್ಯ ನಾಶಕ್ಕೆ ಬಳಸಿಕೊಳ್ಳಲಾಗಿದೆಯೇ ಹೊರತು ತಮ್ಮದೇ ದೇಶದ ಪರಿಸರ ರಕ್ಷಣೆಯ ಬಾಧ್ಯತೆಯಾಗಿ ಮಾತ್ರ ಪರಿವರ್ತನೆಯಾಗುತ್ತಿಲ್ಲ.
ಇದೆಲ್ಲದರ ಪರಿಣಾಮ ಕಳೆದ ಕೆಲ ವರ್ಷಗಳಲ್ಲಿ ಉಪಗ್ರಹ ಆಧಾರಿತ ಸಂಶೋಧನೆಯ ಪ್ರಕಾರ ಅಮೆಜಾನ್ ಕಾಡಿನ ಕೆಲ ಭಾಗಗಳು ಸರಿಪಡಿಸಲಾಗದಷ್ಟು ನಾಶ ಹೊಂದಿವೆ. ಕಾಳ್ಗಿಚ್ಚಿನ ಪರಿಣಾಮವಾಗಿ ಅಮೆಜಾನ್ ಅರಣ್ಯಗಳು ತೇವವನ್ನು ಕಳೆದುಕೊಂಡು ಬೆಂಕಿಗೆ ಮುಂಚಿಗಿಂತಲೂ ಸುಲಭವಾಗಿ ತುತ್ತಾಗುತ್ತಿವೆ ಮತ್ತು ಇದರಿಂದಾಗಿ ಬರದ ಪ್ರಮಾಣವು ಹೆಚ್ಚಿದೆ. ಹೆಚ್ಚಿನ ಮಳೆಯಿಂದ ಯಾವತ್ತೂ ತೇವವಾಗಿ ಇರುತ್ತಿದ್ದ ಇಲ್ಲಿನ ಕಾಡುಗಳು, ನಿಧಾನವಾಗಿ ಆ ನೀರನ್ನು ಭೂಮಿಗೆ ಬಿಡುವುದಲ್ಲದೆ ತಮ್ಮಲ್ಲಿಯೂ ಸಹ ತೇವವನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದೆ ತೇವವನ್ನು ವರ್ಷಪೂರ್ತಿ ವಾತಾವರಣಕ್ಕೆ ಆವಿಯ ರೂಪದಲ್ಲಿ ಬಿಡುಗಡೆ ಮಾಡತ್ತವೆ. ಇದೇ ಆವಿಯು ಮಳೆಯ ರೂಪದಲ್ಲಿ ಮತ್ತೆ ಭೂಮಿಗೆ ಬರುತ್ತದೆ. ಒಂದು ಅಂದಾಜಿನ ಪ್ರಕಾರ, ಅಮೆಜಾನ್ ಅರಣ್ಯದ ಮರಗಳು ಬಿಡುಗಡೆ ಮಾಡುವ ಆವಿಯು, ಅಮೆಜಾನ್ ನದಿಯು ಸಮುದ್ರಕ್ಕೆ ಬಿಡುವ ನೀರಿನ ಪ್ರಮಾಣದಷ್ಟು ಅಗಾಧ. ದಕ್ಷಿಣ ಅಮೆರಿಕದ ಸರಿಸುಮಾರು ಎಲ್ಲ ದೇಶಗಳೂ ಮಳೆಗಾಗಿ ಈ ಸೂಕ್ಷ್ಮ ಜಲಚಕ್ರದ ಮೇಲೆಯೇ ಅವಲಂಬಿತವಾಗಿವೆ. ಈ ಸಂಕೀರ್ಣ ಪ್ರಕ್ರಿಯೆಗೆ ತೊಂದರೆ ಉಂಟಾದರೆ ದಕ್ಷಿಣ ಅಮೆರಿಕದ ಎಲ್ಲ ದೇಶಗಳಿಗೂ ತೊಂದರೆ  ತಪ್ಪಿದ್ದಲ್ಲ.

ಅಮೆಜಾನ್ ಕಾಡುಗಳ ಸಂಕೀರ್ಣ ವ್ಯವಸ್ಥೆ ಬಹುಶಃ ವಿಜ್ಞಾನಕ್ಕೆ ಸಂಪೂರ್ಣವಾಗಿ ಯಾವತ್ತೂ ನಿಲುಕಲಾರದೇನೋ. ಮನುಷ್ಯನ ಹಸ್ತಕ್ಷೇಪದಿಂದ ಉಂಟಾದ ಪರಿಣಾಮವನ್ನು ತಿಳಿಯಲೂ ಸಹ ವರ್ಷಗಳೇ ಬೇಕು. ಇಂತಹ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಅದರ ಬೆಲೆ ಅರಿಯದೇ ಹಿಗ್ಗಾಮುಗ್ಗಾ ನಾಶಪಡಿಸಿದರೆ ಅದನ್ನು ಯಾವತ್ತೂ ನಾವು ಮರಳಿ ಪಡೆಯಲಾರವು. ಆಗ “ತುಂಬಲಾರದ ನಷ್ಟ” ಎಂಬ ಪದ ಕೇವಲ ಕ್ಲೀಷೆಯಾಗಿ ಉಳಿಯುತ್ತದೆ.

ಗುರುಪ್ರಸಾದ್ ತಿಮ್ಮಾಪುರ
ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...