Homeಅಂಕಣಗಳುಮಾತು ಮರೆತ ಭಾರತ-26; ಪಾಯಲ್ ತಡ್ವಿ ಫೈಲ್: ವೈದ್ಯಳಾಗುವ ಕನಸು ಹೊತ್ತವಳನ್ನ ಸ್ಮಶಾನಕ್ಕೆ ಕಳಿಸಿದರು

ಮಾತು ಮರೆತ ಭಾರತ-26; ಪಾಯಲ್ ತಡ್ವಿ ಫೈಲ್: ವೈದ್ಯಳಾಗುವ ಕನಸು ಹೊತ್ತವಳನ್ನ ಸ್ಮಶಾನಕ್ಕೆ ಕಳಿಸಿದರು

- Advertisement -
- Advertisement -

ಮಹಾರಾಷ್ಟ್ರದ ಪಾಯಲ್ ತಡ್ವಿ ಎಂಬ 26 ವರ್ಷದ ಆದಿವಾಸಿ ಯುವತಿ ತಾನು ಮೆಡಿಕಲ್ ಸ್ನಾತಕೋತ್ತರ ಪದವಿ ಓದುತ್ತಿದ್ದ ಮುಂಬೈನ ಟೋಪಿವಾಲ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಲಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಮಹಾರಾಷ್ಟ್ರದ ಮೂಲೆಯೊಂದರ ಕುಗ್ರಾಮದ ಆದಿವಾಸಿ ಕುಡಿಯೊಂದರ ಕನಸು ಅಂದು ನೇಣಿಗೆ ಶರಣಾಗಿ ಅಸುನೀಗಿತು. ಪಾಯಲ್ ತಡ್ವಿಗೆ ತನ್ನ ಗ್ರಾಮದಲ್ಲಿ ಒಂದು ಆಸ್ಪತ್ರೆ ತೆರೆಯುವ ಆಸೆಯಿತ್ತು. ಆ ಆಸೆ ಆಸೆಯಾಗಿಯೇ ಉಳಿದುಹೋಯಿತು. ಇಂತಹ ಅನ್ಯಾಯಕ್ಕೆ ಮೂಲ ಕಾರಣ ಭಾರತದ ಜಾತಿಪದ್ಧತಿ. ಅದರಲ್ಲೂ ಸಂಸ್ಕಾರವಂತರೆನಿಸಿಕೊಂಡ ಮೆಡಿಕಲ್ ಕಾಲೇಜಿನ ಕ್ಯಾಂಪಸ್ಸಿನೊಳಗಿನ ಜಾತಿಪದ್ಧತಿ.

ಇಲ್ಲಿ ದುಃಖದಿಂದಲೇ ನೆನಪಿಸಿಕೊಳ್ಳಬೇಕಾದ ಮತ್ತೊಬ್ಬ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ. ಅವನನ್ನು ಈ ದೇಶದ ಮೇಲ್ಜಾತಿ ರಾಜಕೀಯ-ಸಾಂಸ್ಥಿಕ ವ್ಯವಸ್ಥೆ ಬಲಿಪಡೆದಾಗ ಕಾಕತಾಳಿಯವೆಂಬಂತೆ ಅವನಿಗೂ 26 ವರ್ಷ ತುಂಬಿತ್ತು.

ಪಾಯಲ್ ತಡ್ವಿ ಮೆಡಿಕಲ್ ಕಾಲೇಜಿಗೆ 2018ರಲ್ಲಿ ದಾಖಲಾದಳು. ಅವಳಿಗೆ ಆ ಸದ್ಯಕ್ಕೆ ಯಾವ ರೂಮುಗಳೂ ಖಾಲಿ ಇಲ್ಲದ ಕಾರಣ ಆರಂಭಿಕ ಎರಡು ತಿಂಗಳನ್ನು ಹಿರಿಯ ಸಹಪಾಠಿಗಳಾದ ಅಂಕಿತ ಖಾಂಡೇವಾಲ ಮತ್ತು ಹೇಮಾ ಅಹುಜ ರೂಮಿನಲ್ಲಿ ಹೊಂದಾಣಿಕೆ ಮಾಡಿಕೊಂಡು ಕಳೆಯುವಂತಾಯಿತು. ಈ ಎರಡು ತಿಂಗಳ ಸಮಯದಲ್ಲಿ ತಡ್ವಿಗೆ ನರಕದರ್ಶನವಾಗಿತ್ತು. ಯಾವ ಜಾತಿ ತಾರತಮ್ಯಗಳೂ ಇಲ್ಲದೆ ಜೀವಿಸಿದ್ದ ಆದಿವಾಸಿ ಯುವತಿಗೆ ’ಸೋ ಕಾಲ್ಡ್ ಸಂಸ್ಕಾರವಂತರ’ ನೀಚತನದ ದರ್ಶನವಾಗಿತ್ತು. ಆ ರೂಮಿನಲ್ಲಿ ಅಹುಜ ಮತ್ತು ಖಾಂಡೇವಾಲರಿಗೆ ಮಲಗಲು ಹಾಸಿಗೆ ಇದ್ದವು. ಅವರಿಬ್ಬರೂ ಅದರ ಮೇಲೆ ಮಲಗುತ್ತಿದ್ದರು. ಆದರೆ ಪಾಯಲ್‌ಳಿಗೆ ಹಾಸಿಗೆ ವ್ಯವಸ್ಥೆಯನ್ನು ಮಾಡಿರದ ಕಾರಣ ಆಕೆ ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗುತ್ತಿದ್ದಳು. ದಲಿತ-ಆದಿವಾಸಿ ಮಕ್ಕಳಿಗೆ ಇದೇನು ಹೊಸದಲ್ಲ ಬಿಡಿ. ಇದೇನು ಪಾಯಲ್‌ಳಿಗೆ ಬೇಸರ ತರಿಸಲಿಲ್ಲ. ಆದರೆ ಯಾವಾಗ ಅಹುಜ ಮತ್ತು ಖಾಂಡೇವಾಲ ಶೌಚಾಲಯಕ್ಕೆ ಹೋಗಿ ಬಂದು ತಮ್ಮ ಕಾಲುಗಳನ್ನು ಪಾಯಲ್ ಚಾಪೆಗೆ ಒರೆಸಿಕೊಂಡು ನಗುತ್ತಿದ್ದರೋ ಆಗ ಪಾಯಲ್‌ಗೆ ಜಾತಿಪದ್ಧತಿಯ ಹಾಗೂ ಮೇಲ್ಜಾತಿಯವರ ಕ್ರೂರ ವರ್ತನೆ ಅರ್ಥವಾಗಿಹೋಗಿತ್ತು. ಬಂದಿರುವುದು ಓದಲಿಕ್ಕಾಗಿ ಅಲ್ಲವೇ ಎಂದುಕೊಂಡು ಆಗ ಕಣ್ಮುಚ್ಚಿ ಸಹಿಸಿಕೊಳ್ಳುತ್ತಿದ್ದಳು.

ಅಂಕಿತ ಖಾಂಡೇವಾಲ,ಭಕ್ತಿ ಮೆಹರೆ, ಹೇಮಾ ಅಹುಜ

ಅಂಕಿತ ಖಾಂಡೇವಾಲ ಮತ್ತು ಹೇಮಾ ಅಹುಜ ಇವರೊಟ್ಟಿಗೆ ಭಕ್ತಿ ಮೆಹರೆ ಎಂಬ ಮತ್ತೊಬ್ಬ ಮೇಲ್ಜಾತಿ ಯುವತಿ ಸೇರಿಕೊಂಡು ತಮ್ಮ ವಿಕೃತ ಮೇಲ್ಜಾತಿ ಮನಸ್ಸನ್ನು ಸಂತುಷ್ಟಗೊಳಿಸಿಕೊಳ್ಳಲು ಆರಂಭಿಸಿದರು. ಜಾತಿ ನಿಂದನೆ ಮಾಡುವುದು, ಮಾನಸಿಕ ಕಿರುಕುಳ ನೀಡುವುದನ್ನು ಮುಂದುವರಿಸಿದರು. ಅವಳ ಜಾತಿ ಹಿಡಿದು ಹೀಯಾಳಿಸುತ್ತಿದ್ದರು. ಈ ಕುರಿತು ಕಾಲೇಜಿನ ಆಡಳಿತಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಪಾಯಲ್ ಗೈನೋಕಾಲಜಿಸ್ಟ್ ಆಗಿ ತರಬೇತಿ ಪಡೆಯುತ್ತಿದ್ದಳು. ಬರಬರುತ್ತಾ ಆಕೆಯನ್ನು ಆಪರೇಷನ್ ಥಿಯೇಟರ್ ಹೊರಗಡೆಯೇ ನಿಲ್ಲುವಂತೆ ಮೇಲ್ಜಾತಿಯ ಆ ಮೂವರು ಧಮಕಿ ಹಾಕುತ್ತಿದ್ದರು; ಸರ್ಜರಿ ಮಾಡದಂತೆ ಪಾಯಲ್‌ಳನ್ನು ನಿರ್ಬಂಧಿಸಿದ್ದರು. ನಿರ್ಬಂಧವನ್ನು ಉಲ್ಲಂಘಿಸಿದರೆ, ಎಲ್ಲರೂ ಒಟ್ಟಾಗಿ ಆಕೆಯ ಮೇಲೆ ಇಲ್ಲಸಲ್ಲದ ದೂರು ಹೇಳಿ ಸಸ್ಪೆಂಡ್ ಮಾಡಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಪಾಯಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೂರು ದಿನದ ಮುಂಚೆ ಈ ಮೂವರೂ ಯುವತಿಯರು ಆಕೆಯನ್ನು ಆಸ್ಪತ್ರೆಯ ಕೆಳಹಂತದ ಕೆಲಸವೊಂದಕ್ಕೆ ಮೀಸಲಾಗುವಂತೆ ಮಾಡಿದ್ದರು.

ಇದನ್ನೂ ಓದಿ: ಮಾತು ಮರೆತ ಭಾರತ-25; ಅರಿಯೂರು ಫೈಲ್: ಹಿಂದೂಗಳ ದೃಷ್ಟಿಯಲ್ಲಿ ’ದಲಿತರೆಂದಿಗೂ ಹಿಂದೂಗಳಲ್ಲ’

ಈ ಎಲ್ಲಾ ಕಿರುಕುಳಗಳನ್ನು ಸಹಿಸಲಾರದ ಮುಗ್ಧ ಮನಸ್ಸಿನ ಆದಿವಾಸಿ ಮಗಳು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ಆ ಪತ್ರದಲ್ಲಿ ಅಂಕಿತ ಖಾಂಡೇವಾಲ, ಹೇಮಾ ಅಹುಜ ಮತ್ತು ಭಕ್ತಿ ಮೆಹರೆಯನ್ನು ಉಲ್ಲೇಖಿಸಿದ್ದ ಕಾರಣ ಆ ಮೂವರನ್ನೂ ಬಂಧಿಸಲಾಯಿತು. ಈಗವರು ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ, ಮೆಡಿಕಲ್ ಪರೀಕ್ಷೆ ಬರೆಯಲು ಬಾಂಬೆ ಹೈ ಕೋರ್ಟ್ ಅವಕಾಶ ಮಾಡಿಕೊಟ್ಟಿಲ್ಲ.

ದಲಿತ, ಆದಿವಾಸಿ ಮತ್ತು ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜಿನ ಕ್ಯಾಂಪಸ್ಸಿಗೆ ಪ್ರವೇಶ ಪಡೆದೊಡನೆ ಇತರೆ ಮೇಲ್ಜಾತಿ ವಿದ್ಯಾರ್ಥಿಗಳು ಅವರನ್ನು ಕೇಳುವ ಮೊದಲ ಪ್ರಶ್ನೆ ’ನಿನ್ನ ನೀಟ್ ಅಂಕಗಳೆಷ್ಟು?’ ಎಂಬುವುದಾಗಿರುತ್ತದೆ. ಉತ್ತರ ಪಡೆದ ನಂತರ ಅವರು ಮಾಡುವ ಮೊದಲ ಕೆಲಸ ’ಮೀಸಲಾತಿ ಪಡೆದವರು’ ಮತ್ತು ’ಸಾಮಾನ್ಯ ವಿದ್ಯಾರ್ಥಿಗಳು’ ಎಂದು ಪ್ರತ್ಯೇಕಿಸುವುದಾಗಿದೆ. ಲೈವ್‌ಮಿಂಟ್ ವರದಿಯೊಂದು ತಿಳಿಸುವ ಮಾಹಿತಿ ಭಯಾನಕವಾಗಿದೆ. ಅದು ಪ್ರಕಟಿಸಿದಂತೆ 2019ರ ಸಂಸತ್ತಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗಳಿಸಿದ ಸ್ಥಾನಗಳನ್ನು (303) ಸಾಮಾನ್ಯ ಅಭ್ಯರ್ಥಿಗಳಿಗೂ, ಕಾಂಗ್ರೆಸ್ ಗಳಿಸಿದ ಸ್ಥಾನಗಳನ್ನು (52) ’ಮೀಸಲಾತಿ ಪಡೆದ ವಿದ್ಯಾರ್ಥಿ’ಗಳಿಗೂ ಹೋಲಿಸಿ ಆಡಿಕೊಳ್ಳುವುದನ್ನೂ ಕ್ಯಾಂಪಸ್ಸಿನ ಮೇಲ್ಜಾತಿ ವಿದ್ಯಾರ್ಥಿಗಳು ಆರಂಭಿಸಿದ್ದಾರೆ. ’ನೀವು ಪ್ರತಿಭಾವಂತ ವಿದ್ಯಾರ್ಥಿಯ ಸ್ಥಾನವನ್ನು ಕಳ್ಳತನ ಮಾಡಿಕೊಂಡಿದ್ದೀರಿ; ನೀವು ಓದಿ ಆಸ್ಪತ್ರೆ ಕ್ಲಿನಿಕ್ ತೆರೆದಾಗ ಅದರ ಬಾಗಿಲಿಗೆ ನಿಮ್ಮ ಜಾತಿ ಪ್ರಮಾಣ ಪತ್ರವನ್ನೂ ಅಂಟಿಸಿಕೊಳ್ಳಿ’ ಎಂದು ಎಲ್ಲರೆದುರು ಹೀಯಾಳಿಸಲಾಗುತ್ತದೆ.

ಉನ್ನತ ಶಿಕ್ಷಣದಲ್ಲಿ ಜಾತಿತಾರತಮ್ಯ ಎಂಬುದು ತೀರ ಸಾಮಾನ್ಯ ವಿಷಯವಾಗಿದೆ. ಅದನ್ನು ಸಹಿಸಿಕೊಂಡು ಬದುಕುವ ದಲಿತ-ಆದಿವಾಸಿಗಳು ಬದುಕುಳಿಯುತ್ತಾರೆ. ಆದರೆ ಸ್ವಾಭಿಮಾನಿಗಳಾಗಿ ಸಿಡಿದು ಬಿದ್ದವರು ರೋಹಿತ್ ವೇಮುಲಗಳಾಗುತ್ತಾರೆ. ಸಹಿಸಿಕೊಳ್ಳದೆ ಖಿನ್ನತೆಗೆ ಜಾರುವವರು ಪಾಯಲ್ ತಡ್ವಿಯರಾಗುತ್ತಾರೆ.

2010ರಲ್ಲಿ ದೆಹಲಿಯ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಅಸುನೀಗಿದ ದಲಿತ ಯುವಕ ಬಲ್ಮಕುಂದ್ ಭಾರ್ತಿಯನ್ನು ಅಲ್ಲಿನ ಪ್ರೊಫೆಸರ್ ’ಏಯ್ ಕೋಟಾ ಸ್ಟೂಡೆಂಟ್’ ಎಂದು ಕರೆಯುತ್ತಿದ್ದನು. ಇದು ಉನ್ನತ ಶಿಕ್ಷಣದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಪರಿಯಾಗಿದೆ.

ಇದನ್ನೂ ಓದಿ: ಮಾತು ಮರೆತ ಭಾರತ-24; ಧರ್ಮಾಪುರಿ ಫೈಲ್: ಒಂದು ದುರಂತ ಪ್ರೇಮಕಥೆ

ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯಗಳ ಬಗ್ಗೆ 2007ರಲ್ಲಿಯೇ ಅಧ್ಯಯನವಾಗಿತ್ತು. ಈ ಸಮಿತಿಯ ಅಧ್ಯಕ್ಷರು ಪ್ರಖ್ಯಾತ ಸಮಾಜ ಶಾಸ್ತ್ರಜ್ಞ ಸುಖದೇವ್ ಥೋರಟ್. ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಸಮೀಕ್ಷೆ ಮಾಡಿದ ಸುಖದೇವ್ ಥೋರಟ್‌ರವರಿಗೆ ಭಯಾನಕ ಸಂಗತಿಗಳು ಬಿಚ್ಚಿಕೊಂಡಿದ್ದವು. ಅವರು ನೀಡಿದ ವರದಿಯ ಪ್ರಕಾರ ಶೇ.69 ದಲಿತ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಕ ವೃಂದದಿಂದ ಸಂಪೂರ್ಣ ಸಹಕಾರ ಸಿಗುವುದಿಲ್ಲ. ಶೇ.76 ದಲಿತ ವಿದ್ಯಾರ್ಥಿಗಳು ಹೇಳಿವಂತೆ ಅವರ ಉತ್ತರ ಪತ್ರಿಕೆಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡುವುದಿಲ್ಲ. ಶೇ.84ರಷ್ಟು ವಿದ್ಯಾರ್ಥಿಗಳ ಮೌಖಿಕ ಪರೀಕ್ಷೆಯನ್ನು ನ್ಯಾಯಯುತವಾಗಿ ನೆರವೇರಿಸುವುದಿಲ್ಲ. ಶೇ.84 ದಲಿತ ವಿದ್ಯಾರ್ಥಿಗಳು ಹೇಳುವಂತೆ ಅವರ ಅಂಕಶ್ರೇಣಿಯನ್ನು ಅವರವರ ಜಾತಿಗಳು ನಿರ್ಧರಿಸುತ್ತವೆ. ಈ ವರದಿಯು ಹಾಸ್ಟೆಲ್, ಖಾಸಗಿ ಮೆಸ್‌ಗಳಲ್ಲಿನ ಜಾತಿತಾರತಮ್ಯದ ಕುರಿತೂ ಹೇಳುತ್ತದೆ.

ಎದುರಾಗುವ ನೂರಾರು ಅಡಚಣೆಗಳನ್ನು, ಸಂಕಷ್ಟಗಳನ್ನು ಮೀರಿ ಮುಂದುವರಿಯುವ ದಲಿತ-ಆದಿವಾಸಿ ವಿದ್ಯಾರ್ಥಿಗಳಿಗೆ ಇನ್ನೇನು ಹಣ್ಣು ಕೈಗೆ ದಕ್ಕುವ ಸ್ಥಿತಿ ಬರುವಷ್ಟರಲ್ಲಿ ಉನ್ನತ ಶಿಕ್ಷಣದ ಕ್ಯಾಂಪಸ್ಸಿನ ಜಾತಿ ಮನಸ್ಸುಗಳು ಅದನ್ನೂ ದಕ್ಕದಂತೆ ಮಾಡಿಬಿಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ದಲಿತ-ಆದಿವಾಸಿ-ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳನ್ನು ಕಾಪಾಡುವವರಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....