Homeಕರ್ನಾಟಕಪಕ್ಷಾಂತರ ನಿಷೇಧ ಕಾಯ್ದೆ: ಸ್ಪೀಕರ್ v/s ಸುಪ್ರೀಂ ಕೋರ್ಟ್

ಪಕ್ಷಾಂತರ ನಿಷೇಧ ಕಾಯ್ದೆ: ಸ್ಪೀಕರ್ v/s ಸುಪ್ರೀಂ ಕೋರ್ಟ್

- Advertisement -
- Advertisement -

| ರಾಜಲಕ್ಷ್ಮಿ ಅಂಕಲಗಿ |
ವಕೀಲರು, ಕರ್ನಾಟಕ ಹೈಕೋರ್ಟ್

ಬಹುಶಃ ಈ ಲೇಖನ ಪ್ರಕಟವಾಗುವಷ್ಟರಲ್ಲಿ ಕರ್ನಾಟಕದ ರಾಜಕೀಯದ ರಮ್ಮಿ ಆಟ ಒಂದು ಹಂತಕ್ಕೆ ಬಂದಿರುತ್ತದೆ. ಅದ್ಯಾಕೋ ‘ರಾಜಕೀಯ ದೊಂಬರಾಟ’ ಎಂದು ಕರೆದು, ಪ್ರಾಣ ಒತ್ತೆಯಿಟ್ಟು ಹೊಟ್ಟೆಪಾಡಿಗಾಗಿ ದೊಂಬರಾಟ ಮಾಡುವವರನ್ನು ಅವಮಾನಿಸಲು ಮನಸ್ಸು ಬರುತ್ತಿಲ್ಲ. ಕೆಲವೊಂದು ಟಿ.ವಿ ಚಾನೆಲ್‍ಗಳು ಹಾಗೂ ಪತ್ರಿಕೆಗಳು ಇವರನ್ನು ರೆಬೆಲ್ ನಾಯಕರು ಎಂದು ಕರೆದಾಗ ಆ ರೆಬೆಲ್ ಎಂಬ ಶಬ್ದಕ್ಕೇನಾದರೂ ಮಾತು ಬರುತ್ತಿದ್ದರೆ ಮಾನಹಾನಿ ಕೇಸು ಹಾಕುತ್ತಿತ್ತು. ಈ ಕೋಟ್ಯಾಧಿಪತಿ ಎಂಎಲ್‍ಎಗಳನ್ನು ಕುರಿಗಳಂತೆ ಕೂಡಿಹಾಕಿ ಕಾಯುತ್ತಿರುವುದನ್ನು ನೋಡಿದ ಜನ ಅಸಹ್ಯಪಡುವುದರ ಜೊತೆಗೆ ನೂರಾರು ಪ್ರಶ್ನೆ ಕೇಳುತ್ತಿದ್ದಾರೆ. ಅದ್ಯಾವ ಪ್ರಲೋಭನೆ ಅಥವಾ ಭಯ ಇವರನ್ನು ಹೀಗೆ ಮಾಡಲು ಪ್ರೇರೇಪಿಸಿರಬಹುದು ಎಂಬುದು ಗೂಢವಾಗಿದೆ. ಒಟ್ಟಿನಲ್ಲಿ ಒಂದು ದೇಶ ಒಂದು ಪಕ್ಷ ಎಂಬ ಸಿದ್ಧಾಂತ ತಂದು ವ್ಯವಸ್ಥಿತವಾಗಿ ವಿರೋಧ ಪಕ್ಷಗಳನ್ನು ನಿರ್ನಾಮಗೊಳಸಿ ಪ್ರಜಾತಂತ್ರವನ್ನು ಅಣುಕು ಯಂತ್ರವನ್ನಾಗಿ ಮಾಡುವ ಹುನ್ನಾರ ನಿಚ್ಚಳವಾಗಿದೆ.

ಸ್ವಾತಂತ್ರ್ಯನಂತರ ಈ ಪಕ್ಷಾಂತರ ಮಾಡುವ ಅವಕಾಶವಾದಿ ರಾಜಕಾರಣಿಗಳು ಹಾಗೂ ನಿರಂತರ ಅಸ್ಥಿರ ಸರ್ಕಾರಗಳು ಇವನ್ನು ಒಂದು ನಿಯಂತ್ರಣದಲ್ಲಿಡುವ ಉದ್ದೇಶದಿಂದ 1985ರಲ್ಲಿ ರಾಜೀವ್‍ಗಾಂಧಿ ಸರ್ಕಾರ ಸಂವಿಧಾನಿಕ ತಿದ್ದುಪಡಿ ಮಾಡುವ ಮೂಲಕ ಹತ್ತನೇ ಶೆಡ್ಯೂಲನ್ನು ಸೇರಿಸಿ ‘ಪಕ್ಷಾಂತರ ನಿಷೇಧ ಕಾಯ್ದೆ’ಯನ್ನು ಜಾರಿಗೆ ತಂದಿತು. ಅದರ ಉದ್ದೇಶ ನಿಚ್ಚಳವಾಗಿತ್ತು.
* ಸಂಸದರ ರಾಜಕೀಯ ಪಕ್ಷಾಂತರ ತಡೆಯುವುದು ಹಾಗೂ ಎರಡು ಕಾರಣಗಳಿಗಾಗಿ ಅವರ ಸದಸ್ಯತ್ವವನ್ನು ರದ್ದುಗೊಳಿಸುವುದು.
* ಅಕಸ್ಮಾತ್ ಸದಸ್ಯರು ತಮ್ಮ ಇಚ್ಛೆಯಿಂದ ತಮ್ಮ ಪಕ್ಷದ ಸದಸ್ಯತ್ವವನ್ನು ಬಿಟ್ಟುಕೊಟ್ಟರೆ
* ಸಂಸದ ತನ್ನ ಪಕ್ಷದ ನಿರ್ದೇಶನಗಳನ್ನು ಉಲ್ಲಂಘಿಸಿ ಮತದಾನ ಮಾಡಿದರೆ

ಇಲ್ಲಿ ಪಕ್ಷದ ಸದಸ್ಯತ್ವವನ್ನು ತೊರೆಯುವುದನ್ನು ರಾಜೀನಾಮೆ ಯೊಂದಿಗೆ ಹೋಲಿಸಲು ಬರುವುದಿಲ್ಲ. ಅವೆರಡೂ ಬೇರೆಯದು. ಆದರೆ ಇದನ್ನು ಹೊರತುಪಡಿಸಿಯೂ ಸಂಸದರ ನಡತೆಯನ್ನು ನೋಡಿ ಸ್ಪೀಕರ್ ತನ್ನ ವಿವೇಚನೆಯನ್ನು ಬಳಸಿ ಅಂತಹ ನಡೆಯನ್ನು ಪಕ್ಷ ವಿರೋಧಿ ಎಂದು ಪರಿಗಣಿಸಿದರೆ ಅವರ ಸದಸ್ಯತ್ವವನ್ನು ರದ್ದುಗೊಳಿಸಬಹುದು. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೇವಲ ಶಿಸ್ತಿನ ಹೆಸರಿನಲ್ಲಿ ಯಾರ ಅಭಿಪ್ರಾಯಗಳನ್ನೂ ಕಟ್ಟಿಹಾಕಲು ಆಗದು. ಆದ್ದರಿಂದಲೇ ಕಾಯ್ದೆಯಲ್ಲಿ ಭಿನ್ನಾಭಿಪ್ರಾಯಗಳನ್ನೂ ಪರಿಗಣಿಸಿ ಅದಕ್ಕೆ ದಾರಿಯನ್ನು ಒದಗಿಸಲಾಗಿದೆ. ಅಕಸ್ಮಾತ್ ಒಂದು ರಾಜಕೀಯ ಪಕ್ಷದ 2/3ರಷ್ಟು ಸದಸ್ಯರು ಒಟ್ಟಾರೆಯಾಗಿ ಪಕ್ಷತೊರೆದು ಮತ್ತೊಂದು ಪಕ್ಷದೊಂದಿಗೆ ವಿಲೀನ ಹೊಂದಲು ಅವಕಾಶ ಮಾಡಿಕೊಡಲಾಗಿದೆ. ‘ಸ್ಪೀಕರ್ ತನ್ನ ವಿವೇಚನೆ ಬಳಸಿ’ ಎಂದ ಕೂಡಲೇ ಅವರ ತೀರ್ಮಾನದ ಬಗ್ಗೆ ಪರ ವಿರೋಧ ನಿಲುವುಗಳು ಬರುವುದಕ್ಕೆ ಪ್ರಾರಂಭಿಸುತ್ತವೆ. ಒಂದು ಸಾಂವಿಧಾನಿಕ ಹುದ್ದೆ ಅಲಂಕರಿಸಿದ ಮೇಲೆ ತಮ್ಮ ಮಾತೃ ಪಕ್ಷವನ್ನು ಮರೆತು ನಿಷ್ಪಕ್ಷವಾಗಿ ನಡೆದುಕೊಂಡ ಉದಾಹರಣೆಗಳು ವಿರಳವಾಗಿರುವಾಗ ಈ ಸಂಶಯಗಳು ಸಹಜ. ಹಾಗಾದರೆ ಸ್ಪೀಕರ್ ವಿವೇಚನೆ ಸರಿಯೋ ತಪ್ಪೋ ಎಂದು ತೀರ್ಮಾನಿಸುವ ಅಧಿಕಾರ ಯಾರಿಗೆ ಇದೆ ಎಂಬ ಪ್ರಶ್ನೆ ಸಹಜ. ಈ ವಿಷಯಕ್ಕೆ ಕುರಿತಂತೆ ಸುಪ್ರೀಂಕೋರ್ಟ್ ಆಗಾಗ ನೀಡಿದ ತೀರ್ಮಾನಗಳ ಮುಖಾಂತರ ಇದು ಸ್ಪೀಕರ್ ಅವರಿಗೆ ಮಾತ್ರ ಸೇರಿದ ವಿಚಾರ ಎಂದು ಸಾರಿ ಹೇಳಿದೆ. ಆದರೆ ಸ್ಪೀಕರ್ ತಮ್ಮ ಕಾರಣಗಳನ್ನು ಸರಿಯಾಗಿ ವಿವರಿಸಬೇಕು.

ಈ ಕಾಯ್ದೆ ಬಂದ ನಂತರ ಸಣ್ಣಪ್ರಮಾಣದ ಪಕ್ಷಾಂತರ ಹಾಗೂ ರಾಜಕೀಯ ಅಸ್ಥಿರತೆಗಳು ಕಡಿಮೆ ಆಗಿವೆಯಾದರೂ ಸಾಮೂಹಿಕ ಗುಳೆ ನಿಂತಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಕಾಯ್ದೆಯು ಸಫಲತೆ ಕಂಡಿದೆ ಎನ್ನಬಹುದು.

ಸುಪ್ರೀಂ ಕೋರ್ಟ್ ಸದಸ್ಯರ ಸದಸ್ಯತ್ವ ಅಮಾನ್ಯಗೊಳಿಸುವ ವಿಷಯಗಳಲ್ಲಿ ಬಹುತೇಕ ನಿರ್ಲಿಪ್ತ ಧೋರಣೆ ಹೊಂದಿದೆ. ಇನ್ನು ಕೆಲವು ಸಲ ಕೆಲವೊಂದು ನಿರ್ದೇಶನಗಳನ್ನು ಮಾತ್ರ ನೀಡಿ ತೀರ್ಪು ನೀಡುವುದರಿಂದ ಹೊರಗುಳಿದಿದೆ. ಇದು ಸಂವಿಧಾನ ಬದ್ಧವಾದ ನಡೆಯೂ ಹೌದು. ಏಕೆಂದರೆ ಸಂವಿಧಾನದಲ್ಲಿ ಸ್ಪೀಕರ್ ಅವರ ಅಧಿಕಾರ ಹಾಗೂ ಕಾರ್ಯವ್ಯಾಪ್ತಿಯನ್ನು ನಿರ್ದಿಷ್ಟವಾಗಿ ವಿವರಿಸಿದಾಗ ಆ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂಬ ಕೋರ್ಟಿನ ನಿಲುವು ಸರಿ. ಆದರೆ ಸುಪ್ರೀಕೋರ್ಟ್‍ನ ಮುಂದೆ ಆಗಾಗ್ಗೆ ಅನೇಕ ದ್ವಂದ್ವಗಳು ಎದುರಾಗುತ್ತಿರುತ್ತವೆ.

ತಮಿಳುನಾಡಿನ ಎಐಡಿಎಂಕೆಯ ಇ.ಪಳನಿಸ್ವಾಮಿ ಸರ್ಕಾರಕ್ಕೆ ಬೆಂಬಲಿಸಲು ನಿರಾಕರಿಸಿದ 18 ಸದಸ್ಯರನ್ನು ರಾಜ್ಯಪಾಲರು ಅಮಾನ್ಯ ಮಾಡಿದಾಗ ಆ ವಿಷಯ ಹೈಕೋರ್ಟಿನ ಮುಂದೆ ಬಂತು. ಆಗ ಕೋರ್ಟು, ಒಂದು ಪಕ್ಷದ ನಾಯಕನೆಂದರೆ ಅವನೊಬ್ಬ ವ್ಯಕ್ತಿ ಮಾತ್ರವೇ ಅಥವಾ ಅವನೇ ಪಕ್ಷವೇ? ಎಂಬ ಪ್ರಶ್ನೆ ಎತ್ತಿತ್ತು. ಇನ್ನು ಕೇವಲ ತಮ್ಮ ಪಕ್ಷದ ಕಾರ್ಯವೈಖರಿಯನ್ನು ಪ್ರಶ್ನಿಸಿದ ಮಾತ್ರಕ್ಕೆ ಅವನನ್ನು ಶಿಸ್ತಿನ ಹೆಸರಿನಲ್ಲಿ ಅಮಾನ್ಯ ಮಾಡುವುದು ಎಷ್ಟು ಸರಿ? ಈ ಪ್ರಶ್ನೆಗಳು ನೈಜವಾದರೂ ನಾವು ದಿನನಿತ್ಯ ನೋಡುವ ಈ ಪಕ್ಷಾಂತರಿಗಳಿಗೆ ಇವು ಅನ್ವಯಿಸುತ್ತವಾ ಎಂಬುದು ಬಹುದೊಡ್ಡ ಪ್ರಶ್ನೆ.

ಬಹುಶಃ ಸೈದ್ಧಾಂತಿಕ ಕಾರಣಗಳಿಗಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಹೊರನಡೆದ, ಇಲ್ಲವೇ ರಾಜೀನಾಮೆ ನೀಡಿದ ರಾಜಕಾರಣಿಗಳನ್ನು ಈಗ ಸಿನಿಮಾಗಳಲ್ಲಿ ಮಾತ್ರ ನೋಡಬಹುದು.

ನಮಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲ ಬಿಡುತ್ತಿಲ್ಲ ಎಂದು ಎಂಎಲ್‍ಎಗಳು ನೆಪ ಹೇಳುವಾಗ ‘ಯಾರ ಅಭಿವೃದ್ಧಿ’ ಎಂದು ಜನ ಮಾತಾಡುವುದು ಸರಿಯಾಗೇ ಇದೆ. ಮುಲಾಯಂ ಸಿಂಗ್ ಪಕ್ಷದ ಸದಸ್ಯನೊಂದಿಗೆ ಸೇರಿ 2007ರಲ್ಲಿ ಮಾಯಾವತಿ ಸರ್ಕಾರದ ವಿರುದ್ಧ ಕೆಲ ಸದಸ್ಯರು ರಾಜ್ಯಪಾಲರನ್ನು ಭೇಟಿ ಮಾಡಿ ಬಿಎಸ್‍ಪಿ ಸರ್ಕಾರವನ್ನು ವಜಾಗೊಳಿಸುವಂತೆ ಕೇಳಿದಾಗ ಅಂಥ ಸದಸ್ಯರನ್ನು ಪಕ್ಷದಿಂದ ಹೊರಹಾಕಲಾಯಿತು. ಆ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‍ಗೆ ಸದಸ್ಯರು ಹೋದಾಗ ‘ಅವರ ನಡೆ ಐಚ್ಛಿಕವಾಗಿ ಪಕ್ಷದ ಸದಸ್ಯತ್ವವನ್ನು ತೊರೆದಿದ್ದಕ್ಕೆ ಸಮ’ ಎಂದು ಹೇಳಿ ಕೋರ್ಟು ರಾಜ್ಯಪಾಲರ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ 2011ರಲ್ಲಿ ಬಿ.ಎಸ್.ಯಡಿಯೂರಪ್ಪ ಕೇಸಿನಲ್ಲಿ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕರ ಸದಸ್ಯತ್ವ ಅಮಾನ್ಯ ಮಾಡಿದ ರಾಜ್ಯಪಾಲರ ತೀರ್ಪನ್ನು ತಳ್ಳಿಹಾಕಿತ್ತು. ಹಾಗೆ ಮಾಡುವಾಗ ಪಕ್ಷದಲ್ಲಿನ ಸ್ವಜನಪಕ್ಷಪಾತ, ದುರಾಡಳಿತ ಯಾವುದನ್ನು ಅವರು ನಿರಾಕರಿಸದೆ ಇದ್ದುದರಿಂದ ಪ್ರತಿಕೂಲ ಅನುಮಾನ (adverse inference) ವ್ಯಕ್ತಪಡಿಸಿ ತೀರ್ಮಾನ ಕೈಗೊಂಡಿತ್ತು. ಇನ್ನು ಮುಖ್ಯವಾಗಿ 2/3 ಸದಸ್ಯರು ಒಂದು ಪಕ್ಷ ತೊರೆದು ಮತ್ತೊಂದು ಪಕ್ಷದೊಂದಿಗೆ ವಿಲೀನ ಹೊಂದಿದಾಗ ಅದು ಪಕ್ಷದ ತೀರ್ಮಾನವಾಗಿರದೆ ಕೇವಲ ಹೊರನಡೆದ ಸದಸ್ಯರ ತೀರ್ಮಾನ ಮಾತ್ರ ಆದಾಗ ಅದನ್ನು ಪಕ್ಷದ ವಿಲೀನ ಎನ್ನಲು ಬರುವುದಿಲ್ಲ. ಅದು ಕೇವಲ ಆ ಸದಸ್ಯರ ವಿಲೀನ ಮಾತ್ರ. ಹಾಗಿದ್ದಾಗ ಇಂತಹ ಸನ್ನಿವೇಶವನ್ನು ಹೇಗೆ ಅರ್ಥೈಸುತ್ತಾರೆ ಎಂಬುದು ಕೂಡ ಒಂದು ದ್ವಂದ್ವವೇ.

ಒಂದು ಸ್ಥಿರತೆ ಹಾಗೂ ಶಿಸ್ತು ತರಲು ಜಾರಿಗೆ ಬಂದ ಈ ಕಾಯ್ದೆ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಜನರ ಎದುರಿಗೆ ಇದೆ. ಒಟ್ಟಿನಲ್ಲಿ ಈ ರಾಜಕೀಯ ರಮ್ಮಿ ಆಟದಲ್ಲಿ ಆಗಬಹುದಾದ ಸಂಯೋಜನೆಗಳಿಗೆ ಅಂತ್ಯವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...