Homeಕರ್ನಾಟಕಸಿ.ಟಿ.ರವಿಯ ಮಾಂಸ ಭಕ್ಷಣೆಯೂ ಭಟ್ಕಳ ಬಿಜೆಪಿಯ ಬಣ ಬಡಿದಾಟವೂ!

ಸಿ.ಟಿ.ರವಿಯ ಮಾಂಸ ಭಕ್ಷಣೆಯೂ ಭಟ್ಕಳ ಬಿಜೆಪಿಯ ಬಣ ಬಡಿದಾಟವೂ!

- Advertisement -
- Advertisement -

ತಳ ಸಮುದಾಯದ ಆಹಾರ ಪದ್ಧತಿ ಪ್ರಶ್ನಿಸುವ, ಗೇಲಿ ಮಾಡುವ ಧರ್ಮಕಾರಣದ ಈ ಕಾಲಘಟ್ಟದಲ್ಲಿ ಮಾಂಸಾಹಾರ ಉಂಡು ದೇಗುಲ ಪ್ರವೇಶಿಸುವ ’ಅಪಚಾರ’ ವಿವಾದ, ಹಿಂದುತ್ವ ಓಟ್ ಬ್ಯಾಂಕ್ ರಾಜಕಾರಣದ ಒಂದು ವರಸೆ ಎಂಬುದರಲ್ಲಿ ಈಗ ಯಾವ ಸಂಶಯವೂ ಉಳಿದಿಲ್ಲ. ಕ್ಷುಲ್ಲಕ ಸಂಗತಿಗಳನ್ನು ವಾಟ್ಸ್‌ಪ್-ಯೂಟ್ಯೂಬ್ ಯೂನಿವರ್ಸಿಟಿಯ ಮೂಲಕ ಹಬ್ಬಿಸಿ, ಅದನ್ನು ರಾತ್ರೋರಾತ್ರಿ ಮತ ಧ್ರುವೀಕರಣಕ್ಕೆ ದಾಳವಾಗಿಸುವ ಕುತ್ಸಿತ ಮುತ್ಸದ್ಧಿಗಳು ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಚುರುಕಾಗಿದ್ದವು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ಧರ್ಮದ್ರೋಹ ಮಾಡಿದ್ದಾರೆಂದು ಹುಯಿಲೆಬ್ಬಿಸಿದ್ದರು.

ಇದಿಲ್ಲಿಗೇ ನಿಲ್ಲಲಿಲ್ಲ; ಕೆಲ ತಿಂಗಳ ಹಿಂದೆ ಸಿದ್ದರಾಮಯ್ಯ ಕೊಡಗಿನ ದೇಗುಲವೊಂದಕ್ಕೆ ಮಾಂಸ ಉಂಡು ಪ್ರವೇಶಿಸಿದ್ದಾರೆ ಎಂದು ಕೇಸರಿ ಪಡೆ ಬೊಬ್ಬೆಹೊಡೆದಿತ್ತು. ವಿಪರ್ಯಾಸವೆಂದರೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಾಬಾ ಬುಡನ್‌ಗಿರಿ-ದತ್ತ ಪೀಠ ವಿವಾದದ ಹಿರೇಮಣಿ, ಕಟ್ಟರ್ ಹಿಂದುತ್ವ ಪ್ರತಿಪಾದಕ ಸಿ.ಟಿ.ರವಿ ಇಂತಹದ್ದೇ ’ಮಾಂಸಾಹಾರ ಮತ್ತು ದೇವರು’ ಪ್ರಹಸನದಲ್ಲಿ ಸಿಲುಕಿ ’ಮಿಂಚು’ತ್ತಿರುವುದು; ಜೇಡ ತಾನೆ ಹೆಣೆದ ಬಲೆಯಲ್ಲಿ ಸಿಕ್ಕಿಬಿದ್ದು ಒದ್ದಾಡಿದಂತಿದೆ ಸಿ.ಟಿ.ರವಿ ಪೀಕಲಾಟ ಎಂದು ಬಿಜೆಪಿಯ ಶೂದ್ರ ಸಮೂಹ ಆಡಿಕೊಳ್ಳುವಂತಾಗಿದೆ.

ಕಾರವಾರದಲ್ಲಿ ಕಳೆದ ರವಿವಾರ (19.2.2023) ಜರುಗಿದ ಶಿವಾಜಿ ಜಯಂತಿಗೆ ಹೋಗಿದ್ದ ಸಿ.ಟಿ.ರವಿ ವಾಪಸ್ ಬರುವಾಗ ಭಟ್ಕಳದ ಬಿಜೆಪಿ ಶಾಸಕ ಸುನೀಲ್ ನಾಯ್ಕ್ ಮನೆಗೆ ಕರಾವಳಿಯ ಸ್ವಾದಿಷ್ಠ ಬಾಡೂಟ-ಮೀನೂ ಸವಿಯಲೆಂದು ಹೋಗಿದ್ದರು. ಅಲ್ಲಿ ಅವರಿಗಾಗಿ ವಿಶೇಷ ಆಸಕ್ತಿಯಿಂದ ಇಸ್ವೋಣ (ಎಂಜಲ್) ಮತ್ತಿತರ ’ಪ್ರತಿಷ್ಠಿತ’ ಮೀನು ಹಾಗು ಅರಬ್ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಚಿಕನ್ ಆಲ್‌ಫಾಮ್ ಖಾದ್ಯ ತರಿಸಲಾಗಿತ್ತು. ಭಟ್ಕಳದಲ್ಲಿ ಪ್ರಸಿದ್ಧವಾಗಿರುವ ನವಾಯತ ಮುಸ್ಲಿಮರ “ಆಲ್ ಖಲೀಜ್” ಹೋಟೆಲ್ ಆಲ್‌ಫಾಮ್ ಚಿಕನ್‌ಗೆ ಹೆಸರುವಾಸಿ; ಅಲ್ಲಿಂದಲೇ ಅದನ್ನು ತರಿಸಲಾಗಿತ್ತು ಎಂಬುದು ಈಗ ಎಲ್ಲರಿಗೂ ತಿಳಿದ ಸಂಗತಿ. ಸಂಘಿ ಸರದಾರರ ಕೆಂಗಣ್ಣಿಗೆ ಗುರಿಯಾಗಿರುವ ಶಾಸಕ ಸುನೀಲ್ ನಾಯ್ಕ್ ಬಿಜೆಪಿಯ ಆಯಕಟ್ಟಿನ ಮುಖಂಡ ರವಿಯವರನ್ನು ಸಂಪ್ರೀತಗೊಳಿಸಲು ಭೂರಿ ಭೋಜನ ವ್ಯವಸ್ಥೆ ಮಾಡಿದ್ದರು; ತನ್ನ ಅಧ್ವರ್ಯದಲ್ಲಿ ಜೀರ್ಣೋದ್ಧಾರವಾದ ಭಟ್ಕಳದ ’ಮತೀಯ ಸೂಕ್ಷ್ಮ’ ಧಾರ್ಮಿಕ ಸ್ಥಳ ನಾಗಬನಕ್ಕೆ ಕರೆದೊಯ್ದು ಚುನಾವಣೆ ಹೊತ್ತಲ್ಲಿ ಮೈಲೇಜು ಪಡೆಯುವ ಯೋಜನೆ-ಯೋಚನೆ ಶಾಸಕ ಸುನೀಲ್ ನಾಯ್ಕರದಾಗಿತ್ತೆಂಬುದು ಭಟ್ಕಳದಲ್ಲಿ ’ಟಾಕ್ ಆಫ್ ದಿ ತಾಲೂಕ್’ ಆಗಿದೆ.

ರವಿ ಶಾಸಕ ಸುನೀಲ್ ಮನೆ ತಲುಪಿದಾಗ ಊಟದ ಸಮಯ ಮೀರಿ ಮಧ್ಯಾಹ್ನ ನಾಲ್ಕು ಗಂಟೆ ಸಮೀಪಿಸಿತ್ತು. ತರತರದ ಮತ್ಸ್ಯ-ಮಾಂಸದ ಭಕ್ಷ-ಭೋಜನ ಸವಿದ ನಂತರ ರವಿ ಒಡ್ಡೋಲಗ ಸೀದ ನಾಗಬನ ಮತ್ತು ಕರಿಬಂಟ ಹನುಮ ದೇವಾಲಯಕ್ಕೆ ತೆರಳಿತು. ನಾಗಬನಕ್ಕೆ ಸುತ್ತಲೂ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ. ಪೂಜೆ-ಪುರಸ್ಕಾರದ ಹೊತ್ತಲ್ಲಷ್ಟೆ ಇದರ ಬಾಗಿಲು ತೆರೆಯುತ್ತದೆ. ಬಾಗಿಲಲ್ಲಿ ಕೈಮುಗಿದು ನಿಂತ ರವಿಯವರಿಗೆ ಅಲ್ಲೆ ಹಾರ-ತುರಾಯಿಯ ಸನ್ಮಾನವೂ ಆಗಿದೆ.

ಹತ್ತಿರದಲ್ಲೆ ಇರುವ ಕರಿಬಂಟ ಹನುಮ ದೇವಾಲಯಕ್ಕೂ ರವಿ ಹೋಗಿದ್ದಾರೆ. ಆವರಣ ಪ್ರವೇಶಿಸಿ ಕೈಜೋಡಿಸಿ ಕಣ್ಮುಚ್ಚಿ ಭಕ್ತಿಯಿಂದ ಒಂದು ಕ್ಷಣ ನಿಂತಿದ್ದಾರೆ. ರವಿ ಬಾಡೂಟ-ಮೀನೂಟ ಮಾಡಿದ್ದು, ನಾಗಬನದ ಮುಂದೆ ಸನ್ಮಾನ ಸ್ವೀಕರಿಸಿದ್ದು ಮತ್ತು ಕರಿಬಂಟ ದೇವಸ್ಥಾನದ ಒಳಗೆ ಸುತ್ತಾಡಿದ್ದೆಲ್ಲ ಬಿಜೆಪಿಯ ಕಾರ್ಯಕರ್ತರ ಮೊಬೈಲ್‌ಗಳಲ್ಲಿ ಸೆರೆಯಾಗಿದೆ; ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾರ್ತಾ ವಾಹಿನಿಗಳಲ್ಲಿ ಬಿತ್ತರವಾಗಿದೆ. ಸಿದ್ದರಾಮಯ್ಯ ಮೀನು ಭಕ್ಷ್ಯ ತಿಂದು ಗುಡಿ-ಗುಂಡಾರ ಸುತ್ತುವ ’ಕಾಫಿರ್’ ಎಂದು ಸುಳ್ಳಿನ ಮೇಲೆ ನಿಂತ ಧರ್ಮಸೂಕ್ಷ್ಮದ ವಿವಾದ ಸೃಷ್ಟಿಸುವ ಕೆಲಸಕ್ಕೆ ಕೈಹಾಕಿದ್ದ ಕೇಸರಿ-ಕಮಲ ಪಡೆಯ ಮುಂಚೂಣಿ ನಾಯಕ ಸಿ.ಟಿ.ರವಿಯವರೆ ಧರ್ಮ ಸಂಕಟಕ್ಕೆ ಸಿಲುಕಿದ್ದು ದೊಡ್ಡ ಸುದ್ದಿ-ಸದ್ದಾಯಿತು!

ಈ ’ಮಾಂಸ ಮತ್ತು ದೇವರು’ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ಕೊಟ್ಟ ರವಿ, ತಾನು ನಾಗಬನಕ್ಕೆ ಹೋಗೇ ಇಲ್ಲ; ರೋಡಲ್ಲೆ ನಿಂತು ಕೈಮುಗಿದು ಬಂದಿದ್ದೇನೆ… ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇನೆ… ತಿಂದಿದ್ದು ನಿಜ… ಹಾಗಂತ ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೇನೆ ಏನೀಗ ಎಂದು ಕೇಳಲು ನಾನೇನೂ ಸಿದ್ದರಾಮಯ್ಯ ಅಲ್ಲ… ದತ್ತ ವ್ರತ ಮಾಡುವ ಧರ್ಮನಿಷ್ಠ ನಾನು…” ಎಂದು ಮಾಮೂಲಿಯಾಗಿ ಅಸಂಬದ್ಧ ವರಸೆ ಪ್ರದರ್ಶಿಸಿದ್ದಾರೆ. ರವಿ ಹೇಳಿದ್ದು ಹಸಿ ಸುಳ್ಳು; ಶಾಸಕ ಸುನೀಲ್ ನಾಯ್ಕ್ ಮನೆಯ ಊಟದ ಕೋಣೆಯಿಂದ ನಾಗಬನದ ಕಬ್ಬಿಣದ ಗ್ರಿಲ್ ಬಾಗಿಲಿನ ತನಕ, ಅಲ್ಲಿಂದ ಕರಿಬಂಟ ದೇವಸ್ಥಾನಕ್ಕೆ ತೆರಳಿ, ಗರ್ಭಗುಡಿ ಮುಂದೆ ಕೈ ಮುಗಿದು ಹೊರಡುವವರೆಗಿನ ರವಿ ತಿರುಗಾಟವನ್ನು ಚಿತ್ರೀಕರಿಸಿ ಬಿಜೆಪಿಗರೆ ಹೊರಬಿಟ್ಟ ದೃಶ್ಯಾವಳಿಗಳು ಅಂದಿನ ಘಟನಾವಳಿಗಳನ್ನು ನಿಸ್ಸಂಶಯವಾಗಿ ಸಾಬೀತುಪಡಿಸುತ್ತಿವೆ; ಸಿದ್ದರಾಮಯ್ಯ ಪ್ರಕರಣದಲ್ಲಿ ಹಿಂದೆ ಆಡಿದ ಮಾತುಗಳಿಗೂ ಈಗ ತಾವು ಮಾಡಿದ ಕೆಲಸಕ್ಕೂ ಇರುವ ವೈರುಧ್ಯವನ್ನು ಹೇಗೋ ಸಮರ್ಥಿಸಿಕೊಳ್ಳುವ ಭರದಲ್ಲಿ ರವಿ ಮಾಂಸಾಹಾರ ತಿಂದು ತಾನು ದೇಗುಲಕ್ಕೆ ಹೋದರೆ ’ನಿವೇದನೆ’, ಸಿದ್ದರಾಮಯ್ಯ ಮೀನು ತಿಂದು ಗುಡಿ ಪ್ರವೇಶಿಸಿದರೆ ಅದು “ದಾಷ್ಟ್ರ್ಯ ” ಎಂದು ’ಮಾಂಸ ಮತ್ತು ದೇವರು’ ಪ್ರಹಸನವನ್ನು ವಿಂಗಡಿಸುವುದು ಹಾಸ್ಯಾಸ್ಪದ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸಿ.ಟಿ ರವಿಯವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ: ಸಿದ್ದರಾಮಯ್ಯ

ಧರ್ಮಾಧಾರಿತ ಲಾಭ ತರಬಲ್ಲುದೆಂದು ತೀರಾ ಸಣ್ಣ ಘಟನೆಯನ್ನೂ ಬಿಡದೆ ದೊಡ್ಡ ಗಂಟಲಲ್ಲಿ ಮಾತಾಡುವ ಸಿ.ಟಿ.ರವಿಯಂಥ ಬಡಾ ಲೀಡರ್‌ರನ್ನೇ ಧರ್ಮ ಸಂಕಟಕ್ಕೆ ಸಿಲುಕಿಸಿ ಸತಾಯಿಸಿ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದ ಭಟ್ಕಳ ಶಾಸಕರ ಮನೆಯ ಔತಣಕೂಟದ ಕತೆಯ ಜಾಡುಹಿಡಿದು ಹೊರಟರೆ ಸ್ಥಳೀಯ ಬಿಜೆಪಿಯೊಳಗಿನ ಬಣ ಬಡಿದಾಟ ಗೋಚರಿಸುತ್ತದೆ. ಹಿಂದುತ್ವದ ಚಟುವಟಿಕೆಯಿಂದ ಸದಾ ಸದ್ದುಮಾಡುವ ಸಿ.ಟಿ.ರವಿಯವರನ್ನು ನಾಗಬನ-ಕರಿಬಂಟ ದೇವಸ್ಥಾನಕ್ಕೆ ಕರೆದೊಯ್ದು ಪ್ರಚಾರ ಪಡೆದರೆ ಹಿಂದು ಮತ ಕ್ರೋಢೀಕರಣಕ್ಕೆ ಅನುಕೂಲ ಆಗುತ್ತದೆಂಬ ಎಣಿಕೆ ಶಾಸಕ ಸುನೀಲ್ ನಾಯ್ಕ್‌ರದ್ದಾಗಿದ್ದರೆ, ಸ್ವಪಕ್ಷದ ಹಿತ ಶತ್ರುಗಳು ಎಮ್ಮೆಲ್ಲೆ ಕಾಲೆಳೆಯಲು ಸನ್ನದ್ಧರಾಗಿದ್ದರೆನ್ನಲಾಗಿದೆ.

ಈ ನಾಗಬನದ ಹಿನ್ನೆಲೆ ಗೊತ್ತಾಗದಿದ್ದರೆ ರವಿಯವರ ಮಾಂಸಾಹಾರ ಮತ್ತು ದೇಗುಲ ಪುರಾಣ ಸರಿಯಾಗಿ ಅರ್ಥವಾಗುವುದಿಲ್ಲ. ಕಳೆದ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಸಂಘಪರಿವಾರ ಗಂಭೀರವಾಗಿ ರಣತಂತ್ರ ಹೆಣೆಯುತ್ತಿದ್ದಾಗ ಭಟ್ಕಳ ನಗರದ ಹಳೆ ಬಸ್ ನಿಲ್ದಾಣದ ಪಕ್ಕದ ರಾಜಾಂಗಣ ನಾಗಬನ ಆವರಣದಲ್ಲಿ ದನದ ಮಾಂಸದ ಪ್ಲಾಸ್ಟಿಕ್ ಚೀಲವೊಂದು ರಾತ್ರಿ ಬೆಳಗಾಗುವುದರಲ್ಲಿ ಬಿದ್ದಿತ್ತು. ಗೋಮಾಂಸವನ್ನು ನಾಗಬನದಲ್ಲಿ ಎಸೆಯಲಾಗಿದೆ ಎಂಬ ಸಮಾಚಾರ ನವಾಯತ ಮುಸ್ಲಿಮರು ಜಾಸ್ತಿಯಿರುವ ಭಟ್ಕಳದಲ್ಲಿ ಹಬ್ಬುತ್ತಿದ್ದಂತೆಯೆ ಕೋಮು ಸಂಘರ್ಷ ಶುರುವಾಗಿತ್ತು. ಹಿಂದೂಗಳ ನಾಯಕತ್ವವನ್ನು ಶಾಸಕಗಿರಿ ಕನಸು ಕಾಣುತ್ತಿದ್ದ ಸುನೀಲ್ ನಾಯ್ಕ್ ವಹಿಸಿಕೊಂಡಿದ್ದರು.

ಸುನೀಲ್ ನಾಯ್ಕ್

ಈ ಗೋಮಾಂಸ ನಾಗಬನಕ್ಕೆ ಎಸೆಯಲ್ಪಟ್ಟ ಪ್ರಕರಣದ ರೂವಾರಿ ಸುನೀಲ್ ನಾಯ್ಕ್ ಎಂಬುದು ಬಹಿರಂಗವಾಗಲು ತಡವೇನೂ ಆಗಲಿಲ್ಲ. ಅಂದಿನ ಭಟ್ಕಳ ಎಎಸ್‌ಪಿ ಹಾಗು ಮಹಿಳಾ ಪಿಎಸ್‌ಐ ನಡುವಿನ ಕಾದಾಟ ಇದನ್ನು ಸಾಬೀತುಪಡಿಸಿತ್ತು. ಹಿಂದುತ್ವದ ಪ್ರಯೋಗ ಶಾಲೆ ಎನ್ನಲಾಗುತ್ತಿರುವ ದಕ್ಷಿಣ ಕನ್ನಡ ಮೂಲದ ಎಎಸ್‌ಪಿ ಸಂಘ ಪರಿವಾರದ ದಾಂಧಲೆಕೋರರಿಗೆ ನೆರವಾಗುತ್ತಿದ್ದಾರೆಂಬ ಆರೋಪವಿತ್ತು. ಅಂದಿನ ಪಿಎಸ್‌ಐ ರೇವತಿ ಮೇಲಾಧಿಕಾಗರಿಳಿಗೆ ಎಎಸ್‌ಪಿ ವಿರುದ್ಧ ದೂರಿನಲ್ಲಿ “ಸುನೀಲ್ ನಾಯ್ಕ್ ಮತಿಭ್ರಮಿತನೊಬ್ಬನ ಕೈಗೆ ದನದ ಮಾಂಸ ತುಂಬಿದ ಚೀಲ ಕೊಟ್ಟು ನಾಗಬನದಲ್ಲಿ ಎಸೆಯುವಂತೆ ಹೇಳಿಕಳಿಸಿದ್ದರು” ಎಂದು ವಿವರಿಸಿದ್ದರು! ಶಾಸಕನಾಗಿ ಆಯ್ಕೆಯಾದ ನಂತರ ಸುನೀಲ್ ನಾಯ್ಕ್ ಕುಮಟಾದಲ್ಲಿರುವ ಆರೆಸ್ಸೆಸ್‌ನ ಸರ್ವೋಚ್ಚ ನಾಯಕರೊಬ್ಬರ ಕಾಲಿಗೆರಗಿ ಆಶೀರ್ವಾದ ಪಡೆದಾಗ “ನೀನು ನಾಗಬನದ ವಿವಾದ ಭುಗಿಲೆಬ್ಬಿಸಿದಾಗಲೆ ನಿನಗೆ ಟಿಕೆಟ್ ಕೊಡುವ ನಿರ್ಧಾರವನ್ನು ಸಂಘ ಮಾಡಿತ್ತು” ಎಂದು ಹೇಳಿದ್ದರೆಂಬ ಮಾತು ಇವತ್ತಿಗೂ ಸಂಘಿ ವಲಯದಲ್ಲಿ ಚಾಲ್ತಿಯಲ್ಲಿದೆ.

ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಶಾಸಕ ಸುನೀಲ್ ನಾಯ್ಕ್ ಈ ನಾಗಬನವನ್ನು ಈಚೆಗೆ ಸ್ವಂತ ಖರ್ಚಿನಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಸಿ.ಟಿ.ರವಿಯನ್ನು ನಾಗಬನಕ್ಕೆ ಕರೆದೊಯ್ದು ಸನ್ಮಾನ ಮಾಡಲು ಸುನೀಲ್ ನಾಯ್ಕ್ ಯೋಚಿಸುತ್ತಿರುವುದು ಗೊತ್ತಾಗುತ್ತಿದ್ದಂತೆ ವಿರೋಧಿ ಪಡೆ ಎಚ್ಚೆತ್ತಿದೆ. ಕಳೆದ ಇಲೆಕ್ಷನ್ ಸಂದರ್ಭದಲ್ಲಿ ಶಾಸಕ ನಾಯ್ಕರ ಕಟ್ಟಾ ಬೆಂಬಲಿಗರಾಗಿದ್ದ ಕೆಲವರು ಈಗ ಕಡು ಶತ್ರುಗಳಾಗಿದ್ದಾರೆ. ವಾಟ್ಸ್‌ಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ಬಳಸಿ ಅಂದಿನ ಶಾಸಕ ಮಂಕಾಳ ವೈದ್ಯರ ಹೆಡೆಮುರಿ ಕಟ್ಟಿ ಸುನೀಲ್ ನಾಯ್ಕರನ್ನು ಪ್ರಮೋಟ್ ಮಾಡಲು ಹವಣಿಸಿದ್ದ ತಂಡವೀಗ ಬೂಮರಾಂಗ್ ಆಗಿದೆ! ಹಿಂದೆ ಮಾಜಿ ಶಾಸಕ ವೈದ್ಯ “ನವಾಯತ ಮುಸ್ಲಿಮರಿಗೆ ಕಸಾಯಿಖಾನೆ ಮತ್ತು ಮಾಂಸದ ಮಾರುಕಟ್ಟೆಗೆ ಪರವಾನಗಿ ಕೊಡಿಸಿದ್ದಾರೆ; ನವಾಯತರ ಸರ್ವೋಚ್ಚ ಧಾರ್ಮಿಕ ಸಂಸ್ಥೆ ’ತಂಜೀಮ್’ಗೆ  ಸಾವಿರಾರು ಕೋಟಿ ರೂ. ಅನುದಾನ ಕೊಡಿಸಿದ್ದಾರೆ” ಎಂದೆಲ್ಲ ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡಿ ಹಿಂದೂ ಮತದಾರರ ದಿಕ್ಕುತಪ್ಪಿಸಿದ್ದ ತಂಡವೀಗ ಶಾಸಕ ಸುನೀಲ್ ನಾಯ್ಕ್ ವಿರುದ್ದ ತಿರುಗಿಬಿದ್ದಿದೆ.

ಕಳೆದ ಚುನಾವಣೆಯ ಹೊತ್ತಲ್ಲಿ ಮಾಜಿ ಶಾಸಕ ಮಂಕಾಳ್ ವೈದ್ಯರ ಮೇಲೆ ಪ್ರಯೋಗಿಸಿದ ಅಸ್ತ್ರಗಳನ್ನೇ ಈಗ ಸುನೀಲ್ ನಾಯ್ಕರತ್ತ ಎಸೆಯಲಾಗುತ್ತಿದೆ. ಕಳೆದ ನಾಲ್ಕೂವರೆ ವರ್ಷದಿಂದ ಧರ್ಮ ಮತ್ತು ಅಭಿವೃದ್ಧಿ ಹೆಸರಲ್ಲಿ ಭಟ್ಕಳ ಕ್ಷೇತ್ರದಲ್ಲಿ ಆಗುತ್ತಿರುವ ಭ್ರಷ್ಟಾಚಾರ-ಅವ್ಯವಹಾರ-ಅವಾಂತರಗಳನ್ನು ವಾಟ್ಸಪ್ ಗ್ರೂಪ್ ಮತ್ತು ಯೂಟ್ಯೂಬ್ ವಾಹಿನಿಗಳಲ್ಲಿ ಕಳೆದ ಒಂದೆರಡು ತಿಂಗಳಿಂದ ಬಿಚ್ಚಿಡಲಾಗುತ್ತಿದೆ; ಶಾಸಕ ಸುನೀಲ್ ನಾಯ್ಕರನ್ನು ಹೆಜ್ಜೆಹೆಜ್ಜೆಗೆ ಗೇಲಿ ಮಾಡಲಾಗುತ್ತಿದೆ. ಸುನೀಲ್ ನಾಯ್ಕ್ ಬಿಟ್ಟು ಬೇರೆ ಯಾರಿಗಾದರೂ ಕೇಸರಿ ಟಿಕೆಟ್ ಕೊಡಿ ಎಂದು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕಲಾಗುತ್ತಿದೆ. ಸುನೀಲ್ ಬಿಜೆಪಿ ಅಭ್ಯರ್ಥಿಯಾದರೆ ಸೋಲಿಸುವ ಹಠ ತೊಟ್ಟಿದೆ. ಸ್ಥಳೀಯ ಬಿಜೆಪಿಯ ಒಳಸುಳಿಯ ಅರಿವಿಲ್ಲದೆ ಶಾಸಕ ಸುನೀಲ್ ನಾಯ್ಕರ ಮನೆಗೆ ಅರಬ್ ದೇಶಗಳ ವಿಶಿಷ್ಟ ರುಚಿಯ ಕೋಳಿ ಮಾಂಸದ ಅಡುಗೆ ಉಣ್ಣಲು ಬಂದಿದ್ದ ಸಿ.ಟಿ.ರವಿ ತಮ್ಮದೇ ವ್ಯಾಖ್ಯಾನದ ’ಧರ್ಮದ್ರೋಹ’ದ ವಿವಾದಕ್ಕೆ ಸಿಲುಕಿದರು; ಶತ್ರು ಪಡೆ ಸುನೀಲ್ ನಾಯ್ಕರ ಮುಖಭಂಗಕ್ಕೆ ಹಾಕಿದ ಸ್ಕೆಚ್‌ನಿಂದ ಸಿ.ಟಿ.ರವಿಯ ಅಸಲಿ ಅವತಾರ ಅನಾವರಣವಾಯಿತು ಎಂದೀಗ ವ್ಯಾಖ್ಯಾನಿಸಲಾಗುತ್ತಿದೆ.

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...