ಪ್ರಸ್ತುತ ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ವ್ಯಾಪ್ತಿಯಲ್ಲಿರುವ ಹಿಮಾಚಲ ಪ್ರದೇಶ ಸರ್ಕಾರಿ ನೌಕರರು ಏಪ್ರಿಲ್ 1 ರಿಂದ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಸರ್ಕಾರ ತಿಳಿಸಿರುವುದಾಗಿ ‘ದಿ ಟ್ರಿಬ್ಯೂನ್’ ವರದಿ ಮಾಡಿದೆ.
ಒಪಿಎಸ್ ಜಾರಿಗೆ ತರಲು ಶನಿವಾರ ಕ್ಯಾಬಿನೆಟ್ ನಿರ್ಧರಿಸಿದ ನಂತರ ಕಂದಾಯ ಮತ್ತು ತೋಟಗಾರಿಕೆ ಸಚಿವ ಜಗತ್ ಸಿಂಗ್ ನೇಗಿ ಅವರು ಪ್ರತಿಕ್ರಿಯಿಸಿದ್ದು, “ಎನ್ಪಿಎಸ್ಗೆ ಸರ್ಕಾರ ಮತ್ತು ನೌಕರರು ನೀಡುತ್ತಿರುವ ಕೊಡುಗೆಯನ್ನು ಏಪ್ರಿಲ್ 1ರಿಂದ ಸ್ಥಗಿತ ಮಾಡಲು ಸರ್ಕಾರ ತೀರ್ಮಾನಿಸಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಒಪಿಎಸ್ ಅನುಷ್ಠಾನಕ್ಕೆ 2023-24ರಲ್ಲಿ ಸರ್ಕಾರ ಹೆಚ್ಚುವರಿ 1,000 ಕೋಟಿ ರೂ. ವಿನಿಯೋಗಿಸಲಿದೆ. ಎನ್ಪಿಎಸ್ ಅಡಿಯಲ್ಲಿ ಅಸ್ತಿತ್ವದಲ್ಲಿರುವ 1.36 ಲಕ್ಷ ಉದ್ಯೋಗಿಗಳನ್ನು ಸೇರಿದಂತೆ, ಸರ್ಕಾರಿ ಸೇವೆಯಲ್ಲಿನ ಎಲ್ಲಾ ಹೊಸ ನೇಮಕಾತಿಗಳನ್ನೂ ಒಪಿಎಸ್ ಅಡಿಯಲ್ಲಿ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.
“ಯಾವುದೇ ಉದ್ಯೋಗಿ ಎನ್ಪಿಎಸ್ ಅಡಿಯಲ್ಲಿ ಮುಂದುವರಿಯಲು ಬಯಸಿದರೆ, ಅವರು ಈ ನಿಟ್ಟಿನಲ್ಲಿ ಸರ್ಕಾರಕ್ಕೆ ತಮ್ಮ ಒಪ್ಪಿಗೆಯನ್ನು ನೀಡಬಹುದು” ಎಂದು ನೇಗಿ ವಿವರಿಸಿದ್ದಾರೆ.
“ಇದಲ್ಲದೆ, ಎನ್ಪಿಎಸ್ ಕಡಿತಗಳನ್ನು ನಿಲ್ಲಿಸಿದ ನಂತರ ನೌಕರರನ್ನು ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್) ವ್ಯಾಪ್ತಿಗೆ ತರಲು ಕ್ಯಾಬಿನೆಟ್ ನಿರ್ಧರಿಸಿದೆ. ಮೇ 15, 2003ರ ನಂತರ ನಿವೃತ್ತರಾದ ಎನ್ಪಿಎಸ್ ಅಡಿಯಲ್ಲಿನ ಉದ್ಯೋಗಿಗಳಿಗೆ ಪ್ರಸ್ತಾವಿತ ದಿನಾಂಕದಿಂದ ಒಪಿಎಸ್ ನೀಡಲಾಗುವುದು” ಎಂದಿದ್ದಾರೆ ನೇಗಿ.
ಇಲ್ಲಿಯವರೆಗೆ ಎನ್ಪಿಎಸ್ ಕೊಡುಗೆಯಾಗಿ ಠೇವಣಿಯಾಗಿರುವ 8,000 ಕೋಟಿ ರೂ.ಗಳನ್ನು ಕೇಂದ್ರದಿಂದ ಹಿಂಪಡೆಯಲು ಕ್ಯಾಬಿನೆಟ್ ನಿರ್ಣಯವನ್ನು ಅಂಗೀಕರಿಸಿತು.
“ಒಪಿಎಸ್ಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರದ ಅನುಷ್ಠಾನಕ್ಕಾಗಿ ‘ನಿಯಮಗಳು ಮತ್ತು ಪ್ರಮಾಣಿತ ಕಾರ್ಯಚರಣಾ ಕಾರ್ಯವಿಧಾನ’ (SOP) ರೂಪಿಸಲು ಹಣಕಾಸು ಇಲಾಖೆಗೆ ನಿರ್ದೇಶಿಸಲಾಗಿದೆ” ಎಂದು ನೇಗಿ ಮಾಹಿತಿ ನೀಡಿದ್ದಾರೆ.
ಒಪಿಎಸ್ ಅನ್ನು ಜಾರಿಗೆ ತರಲು ರಾಜ್ಯವು ತನ್ನದೇ ಆದ ಸೂತ್ರವನ್ನು ಅಳವಡಿಸಿಕೊಳ್ಳಲಿದೆ ಎಂದಿದ್ದಾರೆ ಸಚಿವರು. ಇದನ್ನು ಜಾರಿಗೆ ತರಲು ರಾಜ್ಯದಲ್ಲಿ ಛತ್ತೀಸ್ಗಢ ಸೂತ್ರವನ್ನು ಅಳವಡಿಸಿಕೊಳ್ಳಬಹುದು ಎಂಬ ಮಾತುಕತೆಗಳೂ ಆರಂಭದಲ್ಲಿ ನಡೆದಿವೆ. “ನಾವು ಬೇರೆ ಯಾವುದೇ ರಾಜ್ಯದ ಸೂತ್ರವನ್ನು ನಕಲು ಮಾಡಿಲ್ಲ. ನಾವು ಒಪಿಎಸ್ಅನ್ನು ನಮ್ಮದೇ ಆದ ಸೂತ್ರದ ಪ್ರಕಾರ ಜಾರಿಗೊಳಿಸುತ್ತೇವೆ” ಎಂದಿದ್ದಾರೆ ನೇಗಿ.
ಇದನ್ನೂ ಓದಿರಿ: ಒಪಿಎಸ್ ಆಯ್ಕೆ ಮಾಡಿಕೊಳ್ಳಲು ಆಯ್ದ ಕೇಂದ್ರ ಸರ್ಕಾರಿ ನೌಕರರಿಗೆ ಅವಕಾಶ; ಆದೇಶ
“ಎನ್ಪಿಎಸ್ಗೆ ನೀಡುತ್ತಿರುವ ಕೊಡುಗೆಯನ್ನು ನಿಲ್ಲಿಸುವುದಾಗಿ ಘೋಷಿಸಿರುವುದು ಮಹತ್ವದ್ದಾಗಿದೆ. ಒಪಿಎಸ್ ಜಾರಿಗೆ ಇರುವ ದೊಡ್ಡ ಅಡತಡೆಯನ್ನು ಈ ಘೋಷಣೆಯಿಂದ ತೆಗೆದುಹಾಕಲಾಗಿದೆ” ಎಂದು ನೌಕರರು ಖುಷಿಯಾಗಿದ್ದಾರೆ.
“ಒಮ್ಮೆ ಎನ್ಪಿಎಸ್ ಕಡಿತಗಳನ್ನು ನಿಲ್ಲಿಸಿದರೆ, ಎಲ್ಲಾ ಎನ್ಪಿಎಸ್ ಉದ್ಯೋಗಿಗಳಿಗೆ ಜಿಪಿಎಫ್ ಸಂಖ್ಯೆಯನ್ನು ನೀಡಲಾಗುತ್ತದೆ” ಎಂದು ಎನ್ಪಿಎಸ್ ನೌಕರರ ಸಂಘದ ನಾಯಕರೊಬ್ಬರು ಹೇಳಿದ್ದಾರೆ. “ಆದರೆ ‘ನಿಯಮಗಳು ಮತ್ತು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ’ದ ಸ್ಪಷ್ಟ ಚಿತ್ರಣವನ್ನು ಪಡೆಯಲು ನಾವು ಕಾಯಬೇಕಾಗಿದೆ” ಎಂದಿದ್ದಾರೆ.
ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೂ ಮೊದಲು ಸರ್ಕಾರಿ ನೌಕರರು ‘ವೋಟ್ ಫಾರ್ ಒಪಿಎಸ್’ ಅಭಿಯಾನ ನಡೆಸಿದ್ದರು. ಜೊತೆಗೆ ಒಪಿಎಸ್ ಜಾರಿಗೊಳಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ನೌಕರರು ಭಾವಿಸುತ್ತಾರೆ. ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ನಲ್ಲೇ ‘ಒಪಿಎಸ್ ಜಾರಿ’ಯ ಘೋಷಣೆಯನ್ನು ಸರ್ಕಾರ ಮಾಡಿತ್ತು.
ಕೆಲವು ರಾಜ್ಯಗಳಲ್ಲಿ ಮಾತ್ರ ಒಪಿಎಸ್ ಜಾರಿಯಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ‘ವೋಟ್ ಫಾರ್ ಒಪಿಎಸ್’ ಅಭಿಯಾನವನ್ನು ನೌಕರರು ನಡೆಸುತ್ತಿದ್ದಾರೆ.