ರಾಜ್ಯ ಚುನಾವಣಾ ಸಂದರ್ಭದಲ್ಲಿ ಸಿಎಂ ರೇಸ್ನಲ್ಲಿದ್ದ ಬಿಜೆಪಿಯ ಕೆಲವು ಲಿಂಗಾಯತ ನಾಯಕರು ಬಿಜೆಪಿ ತೊರೆಯುತ್ತಿರುವುದಕ್ಕೆ ಪಕ್ಷದಲ್ಲಿನ ಬ್ರಾಹ್ಮಣ ನಾಯಕರೇ ಕಾರಣ ಎನ್ನುವ ಆರೋಪಗಳು ಕೇಳಿಬಂದಿವೆ. ಇದ್ದಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಲಿಂಗಾಯತರೇ ಮುಖ್ಯಮಂತ್ರಿ ಆಗೋದು ಎಂದು ಹೇಳಿದ್ದಾರೆ.
ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ”ಯಾವ್ ಜೋಶಿ? ಯಾವ್ ಬಿ.ಎಲ್. ಸಂತೋಷ? ಅವರು ಮುಖ್ಯಮಂತ್ರಿ ಆಗಲ್ಲ. ಈ ಬಾರಿ ಲಿಂಗಾಯತರೇ ಮುಖ್ಯಮಂತ್ರಿ ಆಗೋದು” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು ಎಂಬ ಚರ್ಚೆ ಬೆನ್ನಲ್ಲೇ ಬಸನಗೌಡ ಪಾಟೀಲ್ ಯತ್ನಾಳ್ ಅವರು ಲಿಂಗಾಯತರೇ ಮುಖ್ಯಮಂತ್ರಿಯಾಗುತ್ತರೆ ಎಂದು ಹೇಳಿದ್ದಾರೆ. ”ಪ್ರಹ್ಲಾದ್ ಜೋಶಿ ಅವರು ಕೇಂದ್ರ ರಾಜಕೀಯದಲ್ಲಿ ಇರುತ್ತಾರೆ. ಅವರು ಇಲ್ಲಿಗೆ ಬರುವ ಪ್ರಮೇಯ ಇಲ್ಲ. ಬಿಎಲ್ ಸಂತೋಷ್ ಕೂಡ ಇಲ್ಲಿಗೆ ಬರುವ ಮಾತಿಲ್ಲ. ಹೀಗಾಗಿ ಮುಂದೆ ಯಾವತ್ತಿದ್ದರೂ ಲಿಂಗಾಯತ ನಾಯಕರೇ ಮುಂದಿನ ಮುಖ್ಯಮಂತ್ರಿ” ಎಂದು ಹೇಳಿದರು.
ಇದನ್ನೂ ಓದಿ: ನನಗೆ ಟಿಕೆಟ್ ತಪ್ಪಲು ಬಿಎಲ್ ಸಂತೋಷ್ ನೇರ ಕಾರಣ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
”ನಾನು ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿ ಇಲ್ಲ. ಲಿಂಗಾಯತರು ಯಾರದರೂ ಬರಬಹುದು. ಅರವಿಂದ ಬೆಲ್ಲದ್ ಬಗ್ಗೆ ನನಗೆ ಗೊತ್ತಿಲ್ಲ. ಕರ್ನಾಟಕದಲ್ಲಿ ಬಿಜೆಪಿಯೊಳಗೆ ಲಿಂಗಾಯತರು ಮಾತ್ರವೇ ಮುಖ್ಯಮಂತ್ರಿ ಆಗುತ್ತಾರೆ” ಎಂದರು.
ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ
”ಕೆಲವರು ಭಾರತೀಯ ಜನತಾ ಪಾರ್ಟಿಯನ್ನು ಬಿಟ್ಟು ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಯಾವುದು ದೇಶ ವಿರೋಧಿ 2047ರಲ್ಲಿ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಉದ್ದೇಶವಿರುವ ಎಸ್ಡಿಪಿಐ ಹಾಗೂ ಪಿಎಫ್ಐ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಜೊತೆ ಹೋಗಿರುವವರು ಬಿಜೆಪಿಯಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿದ್ದಾರೆ” ಎಂದು ಹೆಸರು ಹೇಳದೇ ಶೆಟ್ಟರ್ ವಿರುದ್ಧ ಯತ್ನಾಳ್ ವಾಗ್ಧಾಳಿ ನಡೆಸಿದರು.
”ಬಿಜೆಪಿಯಲ್ಲಿ ಎಲ್ಲ ಸುಖವನ್ನು ಅನುಭವಿಸಿದ ಶೆಟ್ಟರ್ ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ಹೋದರೆ ಪಕ್ಷಕ್ಕೆ ನಷ್ಟವಿಲ್ಲ. ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ನಾಯಕರಿದ್ದಾರೆ. ಲಿಂಗಾಯತ ಹೆಸರು
ಹೇಳಿಕೊಂಡು ಶೆಟ್ಟರ್ ಶಾಸಕ, ಮಂತ್ರಿ, ಉಪ ಮುಖ್ಯಮಂತ್ರಿ, ಸ್ಪೀಕರ್ ಆಗಿ ಸುಖ ಉಂಡಿದ್ದಾರೆ” ಎಂದು ಟೀಕಿಸಿದರು.
”ಶಾಸಕ, ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಹಾಗೂ ಸ್ಪೀಕರ್ ಹೀಗೆ ಎಲ್ಲ ಸ್ಥಾನಮಾನಗಳನ್ನು ಅನುಭವಿಸಿ ಹೋಗಿದ್ದಾರೆ. ದುಡಿಯದೇ ದುಃಖಪಡದೆ ಉಂಡಿದ್ದಾರೆ. ಇಲ್ಲಿ ದುಡಿದವರೇ ಬೇರೆ. ಕರ್ನಾಟಕಕ್ಕೆ ಹೊಸ ನಾಯಕತ್ವ ಬರಲಿದೆ. ಹೊಸ ಎರಡನೇ ಸಾಲಿನ ನಾಯಕರು ಇಲ್ಲಿ ಮುಂದೆ ಬರಲಿದ್ದಾರೆ, ನಮ್ಮಲ್ಲೂ ಯುವ ನಾಯಕರು ಇದ್ದಾರೆ” ಎಂದು ಹೇಳಿದರು.