Homeಕರ್ನಾಟಕ2018ರ ಪ್ರಣಾಳಿಕೆಯನ್ನೇ ಮರೆತ ಬಿಜೆಪಿ ಈಗ ಮತ್ತೊಂದು ಬಿಡುಗಡೆ ಮಾಡಿದೆ: ಕೆಪಿ ಸುರೇಶ್

2018ರ ಪ್ರಣಾಳಿಕೆಯನ್ನೇ ಮರೆತ ಬಿಜೆಪಿ ಈಗ ಮತ್ತೊಂದು ಬಿಡುಗಡೆ ಮಾಡಿದೆ: ಕೆಪಿ ಸುರೇಶ್

- Advertisement -
- Advertisement -

ರಾಜ್ಯ ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. 2018ರ ಪ್ರಣಾಳಿಕೆಯನ್ನೇ ಪೂರೈಸಿಲ್ಲ ಇದೀಗ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಶುರುವಾಗಿದೆ.

ಈ ಬಗ್ಗೆ ಲೇಖಕ ಕೆಪಿ ಸುರೇಶ್ ಅವರು ಪೋಸ್ಟ್ ಮಾಡಿದ್ದು, ”ಈ ಬಿಜೆಪಿಗೆ ಒಂದೋ ಬುದ್ಧಿಗೆಟ್ಟಿದೆ, ಇಲ್ಲಾ ಸಂಪೂರ್ಣ ಮಾನಗೆಟ್ಟಿದೆ! 2018ರಲ್ಲಿ ತಾನೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದೆ ಎಂಬು ಮರೆತೇ ಹೋದಂತೆ ಈ ಪಕ್ಷ ನಟಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಸರಕಾರಕ್ಕೂ ಸರಕಾರ ರಚಿಸುವ ಪಕ್ಷಕ್ಕೂ ಒಂದು ಉತ್ತರದಾಯಿತ್ವ ಇದೆ. ಉದಾ: ಒಂದು ಯೋಜನೆ ಅನುಷ್ಠಾನವಾಗಲು ಮೂರು ವರ್ಷ ಬೇಕಿದ್ದರೆ ಮುಂದಿನ ವರ್ಷದ ಬಜೆಟ್‌ನಲ್ಲಿ ಅದಕ್ಕೆ ನಿಗದಿ ಪಡಿಸಿದ ಅನುದಾನ ನೀಡುವುದು ಕಡ್ಡಾಯ. ಕೈಗೆತ್ತಿಕೊಂಡ/ ಘೋಷಿಸಿದ ಕಾರ್ಯಕ್ರಮ ಪೂರೈಸದೇ ಇನ್ನೊಂದನ್ನು ತೆಗೆದುಕೊಳ್ಳುವುದು ಆರ್ಥಿಕ, ಆಡಳಿತ ನಿರ್ವಹಣೆಯ ನೈತಿಕತೆಗೆ ವಿರುದ್ಧವಾಗಿದೆ” ಎಂದಿದ್ದಾರೆ.

ಪಕ್ಷವೊಂದರ ಪ್ರಣಾಳಿಕೆಯೂ ಅಂಥಾದ್ದೇ?

”ಈ ಭಾಜಪ 2018ರಲ್ಲಿ ಹೇಳಿದ ಶೇ.10ರಷ್ಟನ್ನೂ ಅನುಷ್ಠಾನಗೊಳಿಸಿಲ್ಲ. ಶೇ.40ರಷ್ಟು ಸಾಧನೆ ಮಾಡಿದ್ದು ಭ್ರಷ್ಟಾಚಾರದಲ್ಲಿ ಮಾತ್ರ. ಉದಾ: ಕೆ.ಎಂ.ಎಫ್ ಮೂಲಕ ಇತರೇ ಉತ್ಪನ್ನ ಮಾರಲು ಸಾವಿರ ಕೋಟಿ ನೀಡುವ ಭರವಸೆ ಪ್ರಣಾಳಿಕೆಯಲ್ಲಿತ್ತು. ಇಂಥಾ ನೂರು ಉದಾಹರಣೆ ಆ 1ಪ್ರಣಾಳಿಕೆ ಇಟ್ಟುಕೊಂಡರೆ ಕಾಣಿಸುತ್ತೆ.
ಈಗ ಹೊಸದಾಗಿ ಸ್ಪರ್ಧಿಸುವ ಹೊಸ ಪಕ್ಷದ ಹಾಗೆ ಬಿಜೆಪಿ ಪ್ರಣಾಲಿಕೆ ಪ್ರಕಟಿಸಿದೆ. ಬಾಯಿಗೆ ಬಂದ ಸುಳ್ಳುಗಳನ್ನು ಅಸಂಬದ್ಧವಾಗಿ ಪೋಣಿಸಿದ ಪ್ರಣಾಳಿಕೆ ಇದು” ಎಂದು ಟೀಕಿಸಿದ್ದಾರೆ.

”ವಾಕ್ಯ ರಚನೆಗಳೂ ಹೀಗೇ ಇವೆ. ಮಾಡಿದ್ದೇವೆ, ಮಾಡಲಿದ್ದೇವೆ, ಘೋಷಿಸಿದ್ದೇವೆ, ಹೀಗೆ ಗಲಿಬಿಲಿ ಉಂಟು ಮಾಡುವ ವಾಕ್ಯಗಳಿವೆ. ಸಾಧನೆಗಳ ಪಟ್ಟಿ ನೋಡಬೇಕು. ಸತ್ಯದ ತಲೆ ಮೇಲೆ ಹೊಡೆದ ಹಾಗೆ ಕ್ಲೈಮ್ ಮಾಡಿರುವುದು ನೋಡಿದರೆ ಈ ರಾಜ್ಯದ ಮತದಾರರು ಗಾಂಪರು ಅಂತ ಬಿಜೆಪಿ ತಿಳಿದುಕೊಂಡಂತಿದೆ” ಎಂದು ಬರೆದಿದ್ದಾರೆ.

”55 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎನ್ನುವ ಬಿಜೆಪಿ ಯಾವ ವಲಯದಲ್ಲಿ ಎಷ್ಟು ಅಂತ ಹೇಳಿದರೂ ಸಾಕು! ಕೌಶಲ್ಯ ತರಬೇತಿಯಲ್ಲಿ ಸರ್ಟಿಫಿಕೇಟ್ ನೀಡಿರುವ ಅಂಕಿ-ಅಂಶ ನೀಡಲಾಗಿದೆ. ಆದರೆ ದಾಖಲೆ ನೋಡಿ:
ಮೊದಲ ಹಂತದಲ್ಲಿ 1,12,445 ಯುವಕರಿಗೆ ತರಬೇತಿ ಕೊಟ್ಟರೂ ಉದ್ಯೋಗ ಲಭಿಸಿದ್ದು ಕೇವಲ 20956. 2ನೇ ಹಂತದಲ್ಲಿ 4,32,411 ಮಂದಿಗೆ ತರಬೇತಿ ಕೊಟ್ಟ ದಾಖಲೆ ಇದೆ. ಆದರೆ ಉದ್ಯೋಗ ಲಭಿಸಿದ್ದು ಕೇವಲ 58,960 ಯುವಕರಿಗೆ. 3ನೇ ಹಂತದಲ್ಲಿ 31,120 ಮಂದಿಗೆ ತರಬೇತಿ ನೀಡಿದರೆ, ಉದ್ಯೋಗ ಲಭಿಸಿದ್ದು ಕೇವಲ 1388 ಯುವಕರಿಗೆ. ಇದು ಅಧಿಕೃತ ದಾಖಲೆ” ಎಂದು ಮಾಹಿತಿ ನೀಡಿದ್ದಾರೆ.

”ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರದ ಅನುದಾನ 500+ ಕೋಟಿಯಲ್ಲಿ ಒಂದು ರೂಪಾಯಿಯೂ ಬಂದಿಲ್ಲ ಎಂದು ಮೊನ್ನೆ ಮೊನ್ನೆ ಬಯಲಾಗಿದೆ” ಎಂದಿದ್ದಾರೆ.

ಕೇಂದ್ರದ ವಿಶೇಷ ಅನುದಾನ ರಾಜ್ಯಕ್ಕೆ ಸೊನ್ನೆ

”ಭದ್ರಾ, ಮೇಕೆದಾಟು, ಕಳಸಾ ಬಂಡೂರಿ ಯೋಜನೆಗಳು ಅಂತರ್‌ರಾಜ್ಯ ಪ್ರಕರಣಗಳಾಗಿರುವ ಕಾರಣ ಅವು ಪ್ರಸ್ತಾವದಿಂದಾಚೆ ಜರುಗಿಯೇ ಇಲ್ಲ. ಇದರ ಬಗ್ಗೆ ಪ್ರಭಾವ ಬೀರಬಹುದಾದ ಮೋದಿ ಬಾಯಿಮುಚ್ಚಿ ಕೂತಿದ್ದಾರೆ” ಎಂದು ಆರೋಪಿಸಿದ್ದಾರೆ.

”ಈಗ ಹೊಸ ಪ್ರಣಾಳಿಕೆ ಬಿಡುಗಡೆ ಮಾಡುವ ಭಂಡ ಧೈರ್ಯ ಬೇರೆ ಈ ಪಕ್ಷಕ್ಕೆ!! 2018ರ ಪ್ರಣಾಳಿಕೆ ಮುಖಕ್ಕೆ ಹಿಡಿದು ಮತದಾರರು ಇದರಲ್ಲಿರುವ ಭರವಸೆ ಕಳೆದ ನಾಲ್ಕು ವರ್ಷ ಯಾಕೆ ಅನುಷ್ಠಾನ ಮಾಡಿಲ್ಲ ಎಂದು ಕೇಳಬೇಕಿದೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read