ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಜಂತರ್ ಮಂತರ್ನಲ್ಲಿ ಕ್ರೀಡಾಪಟುಗಳು ಹೋರಾಟ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಮಾತನಾಡಿರುವ ಭಾರತದ ದಿಗ್ಗಜ ಕುಸ್ತಿಪಟು ವಿನೇಶ್ ಫೋಗಟ್ ಅವರು, ”ಬಹಳ ಸಮಯದವರೆಗೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಪ್ರಬಲ ವ್ಯಕ್ತಿಯ ವಿರುದ್ಧ ನಿಲ್ಲುವುದು ಅತ್ಯಂತ ಕಠಿಣ. ಅವರನ್ನು ಕೂಡಲೇ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಒಲಿಂಪಿಯನ್ ವಿನೇಶ್ ಫೋಗಟ್, ”ಇಷ್ಟು ದಿನ ಅಧಿಕಾರ ಮತ್ತು ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿಯ ವಿರುದ್ಧ ನಿಲ್ಲುವುದು ತುಂಬಾ ಕಷ್ಟ” ಎಂದರು.
ಕುಸ್ತಿಪಟುಗಳು ಮೊದಲ ಬಾರಿಗೆ ಜಂತರ್ ಮಂತರ್ನಲ್ಲಿ ತಮ್ಮ ಪ್ರತಿಭಟನೆಯನ್ನು ಪ್ರಾರಂಭಿಸುವ ಮೊದಲು ಅಧಿಕಾರಿಯನ್ನು ಭೇಟಿಯಾಗಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿನೇಶ್ ಫೋಗಟ್ ಬಹಿರಂಗಪಡಿಸಿದರು.
”ನಾವು ಜಂತರ್ ಮಂತರ್ನಲ್ಲಿ ಕುಳಿತುಕೊಳ್ಳುವ ಮೂರ್ನಾಲ್ಕು ತಿಂಗಳ ಮೊದಲು, ಅಧಿಕಾರಿಯನ್ನು ಭೇಟಿಯಾಗಿದ್ದೆವು. ಈ ವೇಳೆ ಮಹಿಳಾ ಅಥ್ಲೀಟ್ಗಳಿಗೆ ಹೇಗೆ ಲೈಂಗಿಕ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತದೆ ಎಂದು ನಾವು ಅವರಿಗೆ ಎಲ್ಲವನ್ನೂ ಹೇಳಿದ್ದೆವು. ಆದರೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದಾಗ ನಂತರ ನಾವು ಧರಣಿ ಕುಳಿತಿದ್ದೇವೆ” ಎಂದು ವಿನೇಶ್ ವಿವರಿಸಿದರು.
”ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಯಾವುದೇ ಕ್ರಮ ಕೈಗೊಳ್ಳದ ಮತ್ತು ಸಮಿತಿಯನ್ನು ರಚಿಸುವ ಮೂಲಕ ವಿಷಯವನ್ನು ಹತ್ತಿಕ್ಕಿದ್ದಾರೆ” ಎಂದು ವಿನೇಶ್ ಫೋಗಟ್ ಟೀಕಿಸಿದರು.
”ನಾವು ಕಳೆದ ಬಾರಿ ಕೇಂದ್ರ ಕ್ರೀಡಾ ಸಚಿವ (ಅನುರಾಗ್ ಠಾಕೂರ್) ಅವರೊಂದಿಗೆ ಮಾತನಾಡಿದ ನಂತರ ನಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದ್ದೇವೆ ಮತ್ತು ಎಲ್ಲಾ ಅಥ್ಲೀಟ್ಗಳು ಲೈಂಗಿಕ ಕಿರುಕುಳದ ಬಗ್ಗೆ ಅವರಿಗೆ ತಿಳಿಸಿದ್ದರು. ಅವರು ಸಮಿತಿಯನ್ನು ರಚಿಸುವ ಮೂಲಕ, ಅಲ್ಲಿ ವಿಷಯವನ್ನು ಹತ್ತಿಕ್ಕಲು ಪ್ರಯತ್ನಿಸಿದರೇ ವಿನಃ ಆ ಸಮಯದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ” ಎಂದು ಅವರು ಹೇಳಿದರು.