Homeಮುಖಪುಟಮಣಿಪುರವನ್ನು ಸಾಮಾಜಿಕವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ..

ಮಣಿಪುರವನ್ನು ಸಾಮಾಜಿಕವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ..

- Advertisement -
- Advertisement -

’ದಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಮಣಿಪುರ್’ ಸಂಘಟನೆಯು ಮೈತೇಯಿಗಳ ಮೀಸಲಾತಿ ಬೇಡಿಕೆಯನ್ನು ವಿರೋಧಿಸಿ ಒಂದು ಪ್ರತಿಭಟನಾ ಮೆರವಣಿಗೆ ನಡೆಸಿತು. ಆ ಸಂದಭದಲ್ಲಿ ಘರ್ಷಣೆಗಳು ಉಂಟಾದವು ಮತ್ತು ಅವುಗಳನ್ನು ತಪ್ಪಿಸಲಾಗಲೀ, ನಿಯಂತ್ರಿಸಲಾಗಲೀ ರಾಜ್ಯದ ಆಡಳಿತ ಏನನ್ನೂ ಮಾಡಲಿಲ್ಲ.

ಸರಿಯಾದ ಜನಗಣತಿ ಇಲ್ಲದೇ ಇರುವುದು- ರಾಜಕಾರಣಿಗಳಿಗೆ ಮಣಿಪುರದ ಜನರ ಆಶೋತ್ತರಗಳು, ಭರವಸೆಗಳು, ಭಾವನೆಗಳು, ಭಾಷಾ ಪರಂಪರೆಗಳು ಮತ್ತು ಸಾಮಾಜಿಕ ಗುರುತು ಅಥವಾ ಅಸ್ಮಿತೆಗಳನ್ನು ತಮಗೆ ಬೇಕಾದಂತೆ ದುರುಪಯೋಗ ಮಾಡುವುದಕ್ಕೆ ಆವಕಾಶ ಒದಗಿಸುತ್ತದೆ.

ಇತ್ತೀಚಿನ ವಾರಗಳಲ್ಲಿ ಮಣಿಪುರವು ಎದುರಿಸುತ್ತಿರುವ ಮಾನವೀಯ ದುರಂತ ಮತ್ತು ಸಾಮಾಜಿಕ ತಲ್ಲಣಗಳು- ವಿಭಜನಕಾರಿ ರಾಜಕಾರಣದ ಪರಿಣಾಮ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ವಿವರಣಾತ್ಮಕ ಜನಾಂಗೀಯ ಪರಿಭಾಷೆಯ ಗೊಂದಲ, ವಿವಿಧ ಸಮುದಾಯಗಳ ಮೂಲಗಳ ಕುರಿತು ದತ್ತಾಂಶ-ಮಾಹಿತಿಗಳ ಕೊರತೆ, ವೈಜ್ಞಾನಿಕವಾದ ಜನಗಣತಿ ನಡೆಯದೇ ಇರುವುದು ಸೇರಿದಂತೆ ಇನ್ನೂ ಹಲವು ಸಂಗತಿಗಳು ಈ ಬಿಕ್ಕಟ್ಟಿಗೆ ತಮ್ಮ ಪಾಲು ಸಲ್ಲಿಸಿವೆ.

ಇತ್ತೀಚಿನ ಹಿಂಸಾತ್ಮಕವಾದ ಘರ್ಷಣೆಗಳು ಮತ್ತು ರಕ್ತಪಾತವು ಮೈತೇಯಿ (Meitei ಅಥವಾ Meiteyi) ಸಮುದಾಯಕ್ಕೆ ಪರಿಶಿಷ್ಟ ಬುಡಕಟ್ಟು (ಎಸ್‌ಟಿ) ಸ್ಥಾನಮಾನ ನೀಡಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಮುಂದಡಿಯಿಡಲು ಮಣಿಪುರ ಸರಕಾರಕ್ಕೆ ಅನುಮತಿ ನೀಡುವ ಹೈಕೋರ್ಟಿನ ನಿರ್ಧಾರದ ಪರಿಣಾಮವಾಗಿ ಉಂಟಾಯಿತು.

ಈ ಬೇಡಿಕೆ- ಮತ್ತು ಅದಕ್ಕೆ ಈಗಾಗಲೇ ಎಸ್‌ಟಿ ಸ್ಥಾನಮಾನ ಹೊಂದಿರುವ ಗುಂಪುಗಳ ತೀವ್ರ ವಿರೋಧವು- ರಾಜ್ಯದಲ್ಲಿರುವ ಗುಡ್ಡ-ಕಣಿವೆ ಪ್ರತ್ಯೇಕತೆಯಲ್ಲಿ ಮತ್ತು ಈ ಮೈತೇಯಿ ಸಮುದಾಯದವರು ಯಾರು ಎಂಬುದರ ಸುತ್ತ ಇರುವ ಗೊಂದಲದಲ್ಲಿ ದೊಡ್ಡ ಪಾತ್ರ ಹೊಂದಿದೆ.

ಮೈತೇಯಿ (ಮೈತೈ ಅಥವಾ ಮೈತ್‌ಯಿ ಎಂದೂ ಕರೆಯಲಾಗುತ್ತದೆ) ಎಂಬುದು ಸಾಮಾನ್ಯವಾಗಿ ಮಣಿಪುರದ ನಿವಾಸಿಗಳನ್ನು ಕರೆಯಲಾಗುವ ಜನಜನಿತ ಹೆಸರು. ಮಣಿಪುರದಲ್ಲಿ ಮುಖ್ಯವಾಗಿ ಮಾತನಾಡಲಾಗುವ ಭಾಷೆ ಮಣಿಪುರಿ ಮತ್ತು ಅದು ರಾಜ್ಯದ ಅಧಿಕೃತ ಭಾಷೆಯೂ ಹೌದು. ಮತ್ತಿದು ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಮಾನ್ಯತೆ ಪಡೆದಿರುವ ಭಾಷೆಯೂ ಕೂಡಾ.

ಆದರೆ, ಮಣಿಪುರಿ ಭಾಷೆಯನ್ನು ಮಣಿಪುರ ಮಾತ್ರವಲ್ಲದೇ, ಅಸ್ಸಾಂ, ತ್ರಿಪುರ ಮುಂತಾದ ಈಶಾನ್ಯ ರಾಜ್ಯಗಳಲ್ಲಿ ಮತ್ತು ಪಶ್ಚಿಮ ಬಂಗಾಳ ಹಾಗೂ ನೆರೆಯ ದೇಶಗಳಾದ ಮಯನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿಯೂ ಮಾತನಾಡಲಾಗುತ್ತದೆ. ಈ ಸಮಾನಾತ್ಮಕವಾದ ಅಂಶವು- ಮಣಿಪುರಿ ಭಾಷೆಯನ್ನು ಮಾತನಾಡುವ ಎಲ್ಲರೂ ಮೈತೇಯಿಗಳು ಎಂಬ ಭಾವನೆಯನ್ನು ಮೂಡಿಸುತ್ತದೆ. ’ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’ (ಪಿಎಲ್‌ಎಸ್‌ಐ- ಲೇಖಕರು ಇದರ ಸ್ಥಾಪಕರು)ದ ’ದಿ ಲ್ಯಾಂಗ್ವೇಜಸ್ ಆಫ್ ಮಣಿಪುರ್’ (ಮಣಿಪುರದ ಭಾಷೆಗಳು) ನೀಡಿರುವ ಪರಿಚಯದ ಪ್ರಕಾರ, ಮಣಿಪುರವು, ಸ್ವಭಾವತಃ ಬಹುಭಾಷೆಗಳ, ಹಲವು ಬುಡಕಟ್ಟುಗಳ, ಬಹುಸಂಸ್ಕೃತಿಗಳ ಒಂದು ರಾಜ್ಯ.

ಈ ರಾಜ್ಯದ ಕಣಿವೆಯನ್ನು ಬಿಷ್ಣುಪುರ್, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ತೌಬಲ್ ಎಂಬ ನಾಲ್ಕು ಆಡಳಿತಾತ್ಮಕ ಜಿಲ್ಲೆಗಳಾಗಿ ವಿಭಜಿಸಲಾಗಿದೆ. ಅದೇ ರೀತಿಯಲ್ಲಿ, ಗುಡ್ಡಗಾಡು (ಅಥವಾ ಬೆಟ್ಟಗಳನ್ನು) ಪ್ರದೇಶವನ್ನು ಚಂದೇಲ್, ಚೂರಾಚಂದ್‌ಪುರ್, ಸೇನಾಪತಿ, ತಮೆಂಗ್‌ಲಾಂಗ್ ಮತ್ತು ಉಖ್ರುಲ್ ಜಿಲ್ಲೆಗಳಾಗಿ ವಿಭಜಿಸಲಾಗಿದೆ. ರಾಜ್ಯದ ಭೂಪ್ರದೇಶವು 22,327 ಚದರ ಕಿ.ಮೀ. ವಿಸ್ತಾರವಾಗಿದ್ದು, ವಿವಿಧ ಭಾಷೆಗಳನ್ನು ಮಾತನಾಡುವ, ವಿವಿಧ ಸಂಸ್ಕೃತಿಗಳನ್ನು ಅನುಸರಿಸುವ ಮೂರು ಡಜನ್ನಿಗೂ ಹೆಚ್ಚು ಬುಡಕಟ್ಟುಗಳಿಗೆ ಮನೆಯಾಗಿದೆ.

ರಾಜ್ಯವು ಮುಖ್ಯವಾಗಿ ಮೈತೇಯಿ, ಕುಕಿ ಮತ್ತು ನಾಗಾಗಳ ವಾಸಸ್ಥಾನವಾಗಿದ್ದು, ಅವು ಟಿಬೆಟೋ-ಬರ್ಮನ್ ಭಾಷಾ ಗುಂಪುಗಳಿಗೆ ಸೇರಿವೆ. ಇನ್ನಷ್ಟು ಪರಿಶೀಲನೆ ನಡೆಸಿದಲ್ಲಿ, ಪೂರ್ವ ಇಂಫಾಲ್ ಜಿಲ್ಲೆಯ ಜಿರಿಬಾಮ್ ಉಪವಿಭಾಗದಲ್ಲಿ ಆಸ್ಟ್ರೋ-ಏಷಿಯಾಟಿಕ್ ಭಾಷೆಗಳನ್ನು ಮಾತನಾಡುವವರನ್ನೂ, ಚಂದೇಲ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಮೊರೆಹ್ ಪಟ್ಟಣದಲ್ಲಿ ದ್ರಾವಿಡ ಭಾಷೆ ಮಾತಾಡುವವರನ್ನೂ, ರಾಜಧಾನಿ ಇಂಪಾಲ್‌ನಲ್ಲಿ ಹೆಚ್ಚಾಗಿ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಇಂಡೋ-ಆರ್ಯನ್ ಭಾಷೆಗಳನ್ನು ಮಾತನಾಡುವವರನ್ನೂ ಕಾಣಬಹುದು.

ರಾಜ್ಯದ ಒಳಗೆ ಮಣಿಪುರಿಯನ್ನು ಜನವಾಸವಿರುವ ಪ್ರದೇಶಗಳಿಗೆ ಅನುಗುಣವಾಗಿ ವಿವಿಧ ರೂಪಗಳಲ್ಲಿ ಮಾತನಾಡಲಾಗುತ್ತದೆ. ಈ ರೂಪಗಳ ವ್ಯತ್ಯಾಸ ಎಲ್ಲರಿಗೂ ಗೊತ್ತಾಗುವುದಿಲ್ಲ. ರಾಜ್ಯದಲ್ಲಿ ಎಲ್ಲಾ ಸರಕಾರಿ ವ್ಯವಹಾರಗಳಲ್ಲಿ ಮೂರು ಲಿಪಿಗಳನ್ನು ಬಳಸಲಾಗುತ್ತದೆ- ಬಂಗಾಳಿ ಲಿಪಿ, ಮೈತೇಯಿ-ಮಾಯೆಕ್ ಲಿಪಿ ಮತ್ತು ರೋಮನ್ ಲಿಪಿ. ಮೈತೇಯಿಗಳು ಬಾಂಗ್ಲಾ (ಬಂಗಾಳಿ) ಲಿಪಿಯನ್ನು ಬಳಸಲು ಆರಂಭಿಸುವುದಕ್ಕೆ ಮೊದಲು ಬರವಣಿಗೆಗೆ ಮೈತೇಯಿ-ಮಾಯೆಕ್ ಲಿಪಿಯನ್ನು ಬಳಸುತ್ತಿದ್ದರು. ಇಂದು, ಸ್ಥಳೀಯ ಎಂದು ಪರಿಗಣಿಸಲಾಗುತ್ತಿರುವ ಮೈತೇಯಿ-ಮಾಯೆಕ್ ಲಿಪಿಯು ಸರಕಾರಿ ಮತ್ತು ಸರಕಾರೇತರ ವ್ಯವಹಾರಗಳಲ್ಲಿ ಬಳಕೆಯಲ್ಲಿ ಮತ್ತೆ ತನ್ನ ನೆಲೆಯನ್ನು ಹೆಚ್ಚಿಸುತ್ತಾ ಬರುತ್ತಿದೆ.

ಕೆಲವು ಮೈತೇಯಿ ಸಮುದಾಯಗಳನ್ನು (ಮೈತೇಯಿ ಒಂದು ಏಕರೂಪಿ-ಏಕ ಮೂಲದ ಸಮುದಾಯವಲ್ಲ) ಈಗಾಗಲೇ ಪರಿಶಿಷ್ಟ ಬುಡಕಟ್ಟು ಆಥವಾ ಇತರೆ ಹಿಂದುಳಿದ ವರ್ಗಗಳ ಗುಂಪುಗಳಿಗೆ ಸೇರಿಸಲಾಗಿದೆ. ಮಣಿಪುರದ ಪರಿಸ್ಥಿತಿಯನ್ನು ಮಹಾರಾಷ್ಟ್ರದೊಂದಿಗೆ ಹೋಲಿಸಿದರೆ, ಬೇರೆ ರಾಜ್ಯದವರು ಮಣಿಪುರದಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಮರಾಠ ಎಂಬುದು ಹಲವು ಜಾತಿ-ಉಪಜಾತಿ, ಜನಾಂಗಿಯ ಗುಂಪುಗಳನ್ನು ಹೊಂದಿರುವ ಒಂದು ಸಾಮಾನ್ಯ ಸಮುದಾಯ. ಅದಕ್ಕೆ ಹೊರತಾಗಿ, ಸಾಮಾನ್ಯವಾಗಿ- ಅದರಲ್ಲೂ ವಿಶೇಷವಾಗಿ ವಸಾಹತುಶಾಹಿ ಕಾಲಘಟ್ಟದ ಸಾಂಸ್ಕೃತಿಕ ಬರಹಗಳಲ್ಲಿ ’ಮರಾಠ’ ಮತ್ತು ’ಮಹಾರಾಷ್ಟ್ರ’ ಎಂಬುದನ್ನು ಜೊತೆಜೊತೆಗೇ ಸೇರಿಸಲಾಗಿದೆ. ಆದರೆ, ಎಲ್ಲಾ ಮಹಾರಾಷ್ಟ್ರೀಯರು ಮರಾಠರಲ್ಲ ಅಥವಾ ಮರಾಠಿ ಭಾಷೆ ಮಾತನಾಡುವವರೆಲ್ಲರೂ ಮರಾಠರಲ್ಲ ಎಂಬುದು ಎಲ್ಲರಿಗೂ ಗೊತ್ತಿರುವಂತದ್ದು. ಆದುದರಿಂದ ಎಸ್‌ಸಿ ಸ್ಥಾನಮಾನ ನೀಡಬೇಕೆಂಬ ಮೈತೇಯಿಗಳ ಬೇಡಿಕೆಯನ್ನು ಮಹಾರಾಷ್ಟ್ರದ ಮರಾಠ ಆರಕ್ಷಣ್ (ಮೀಸಲಾತಿ) ಮೋರ್ಚಾ ಮತ್ತು ರಾಜಸ್ಥಾನದ ಜಾಟ್ ಮೀಸಲಾತಿ ಆಂದೋಲನಗಳಿಗೆ ಹೋಲಿಸಬಹುದು.

ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?: ಜೈರಾಮ್ ರಮೇಶ್ ಪ್ರಶ್ನೆ

’ದಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಮಣಿಪುರ್’ ಸಂಘಟನೆಯು ಮೈತೇಯಿಗಳ ಮೀಸಲಾತಿ ಬೇಡಿಕೆಯನ್ನು ವಿರೋಧಿಸಿ ಒಂದು ಪ್ರತಿಭಟನಾ ಮೆರವಣಿಗೆ ನಡೆಸಿತು. ಆ ಸಂದಭದಲ್ಲಿ ಘರ್ಷಣೆಗಳು ಉಂಟಾದವು ಮತ್ತು ಅವುಗಳನ್ನು ತಪ್ಪಿಸಲಾಗಲೀ, ನಿಯಂತ್ರಿಸಲಾಗಲೀ ರಾಜ್ಯದ ಆಡಳಿತ ಏನನ್ನೂ ಮಾಡಲಿಲ್ಲ.

ಈ ಗಲಭೆಗಳ ಪ್ರಾಥಮಿಕ ಜವಾಬ್ದಾರಿಯು ಆಳುವ ಸರಕಾರದ ಹೆಗಲೇರುತ್ತದೆ. ಭಾರತೀಯ ಜನತಾ ಪಕ್ಷವು 60 ಸದಸ್ಯಬಲದ ವಿಧಾನಸಭೆಯಲ್ಲಿ 32 ಸ್ಥಾನಗಳನ್ನು ಗೆದ್ದು ಮಣಿಪುರದಲ್ಲಿ ಸರಕಾರ ರಚಿಸಿತ್ತು. ಸಂಯುಕ್ತ ಜನತಾ ದಳ (ಜೆಡಿ-ಯು) ಆರು ಸ್ಥಾನಗಳನ್ನು ಗೆದ್ದಿತ್ತು. ಇದೀಗ ಜೆಡಿ-ಯು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಿಂದ (ಎನ್‌ಡಿಎ) ಹೊರಬಂದಿರುವುದರಿಂದ ಬಿಜೆಪಿಯು ರಾಜಕೀಯ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಭವಿಷ್ಯದಲ್ಲಿ ಚುನಾವಣಾ ಯಶಸ್ಸನ್ನು ಖಾತರಿಪಡಿಸಿಕೊಳ್ಳಲು ಅದು ಮೈತೇಯಿಗಳಿಗೆ ಮೀಸಲಾತಿ ಕೊಡಮಾಡುವುದರ ಜೊತೆಗೆ, ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಎಂದಿನ ಮಾಮೂಲಿ ತಂತ್ರವನ್ನು ಅನುಸರಿಸಿದೆ.

ಈ ಆಳುವ ಸರಕಾರವು ಪ್ರಾಮಾಣಿಕವಾಗಿ ಬಹುಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿದ್ದೇ ಆಗಿದ್ದಲ್ಲಿ-ಅದು ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ವಿಷಯವಾಗಿರುವ- ರಾಜ್ಯಮಟ್ಟದ ಸಮುದಾಯಗಳ ಗಣತಿಯನ್ನು ನಡೆಸುತ್ತಿತ್ತು. ಸರಿಯಾದ ಜನಗಣತಿ ಇಲ್ಲದೇ ಇರುವುದು- ರಾಜಕಾರಣಿಗಳಿಗೆ- ಯಾರ ಹೆಸರಿನಲ್ಲಿ ಅವರು ಅಧಿಕಾರ ಬಯಸುತ್ತಾರೋ, ಅದೇ ಜನರ ಆಶೋತ್ತರಗಳು, ಭರವಸೆಗಳು, ಭಾವನೆಗಳು, ಭಾಷಾ ಪರಂಪರೆಗಳು ಮತ್ತು ಸಾಮಾಜಿಕ ಗುರುತು ಅಥವಾ ಅಸ್ಮಿತೆಗಳನ್ನು ತಮಗೆ ಬೇಕಾದಂತೆ ದುರುಪಯೋಗ ಮಾಡುವುದಕ್ಕೆ ಅವಕಾಶ ಒದಗಿಸುತ್ತದೆ.

ಮಣಿಪುರವು ಬಹಳ ದೀರ್ಘಕಾಲದಿಂದಲೂ ಭಾರೀ ಮಿಲಿಟರಿ ಪಡೆಯ ಅಸ್ತಿತ್ವ ಹೊಂದಿರುವ ನಾಗರಿಕ ಪ್ರದೇಶವಾಗಿದೆ. ತೀವ್ರವಾದ ಸ್ವತಂತ್ರ ಮನೋಭಾವದ ಮತ್ತು ತಮ್ಮ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅಪಾರ ಗೌರವ ಹೊಂದಿರುವ ಇಲ್ಲಿನ ಜನರ ಮೇಲೆ, ಕೇಂದ್ರ ಸರಕಾರದ ತನ್ನಿಚ್ಛೆಗಳನ್ನು ಹೇರುವುದರ ವಿರುದ್ಧ ದೀರ್ಘಕಾಲದ ಪ್ರತಿಭಟನೆಗಳೂ ಇಲ್ಲಿ ನಡೆಯುತ್ತಾ ಬಂದಿವೆ. ಒಂದು ವೈಜ್ಞಾನಿಕವಾದ ಜನಗಣತಿಯು ಭವಿಷ್ಯದ ರಾಜ್ಯಾಡಳಿತಕ್ಕೆ ಮಣಿಪುರದ ಹಲವು ಜನಾಂಗೀಯ ಮತ್ತು ಭಾಷಾ ಸಮುದಾಯಗಳ ಅಗತ್ಯಗಳನ್ನು ಅಂದಾಜು ಮಾಡಲು ನೆರವಾಗುತ್ತದೆ. ಆದರೆ, ಅಧಿಕಾರದ ಲಾಲಸೆ ಹೊತ್ತಿರುವ ವಿಭಜನಕಾರಿ ರಾಜಕೀಯವು ಅದಕ್ಕೆ ಅವಕಾಶ ನೀಡುವುದಿಲ್ಲ.

ಈ ಹೊತ್ತಿನಲ್ಲಿ ಮಣಿಪುರವು ಬಹುದೊಡ್ಡ ಮಾನವೀಯ ದುರಂತವನ್ನು ಎದುರಿಸುತ್ತಿದೆ. ಅದಕ್ಕೆ- ಸಂತ್ರಸ್ತರ ಜನಾಂಗ, ಭಾಷೆ, ಧರ್ಮಗಳನ್ನು ಮೀರಿ- ಸಮಾಧಾನ, ಆರೈಕೆ, ಕಾಳಜಿಯ ಆಗತ್ಯವಿದೆ. ಆದರೆ, ದೂರಗಾಮಿಯಾಗಿ, ಅದಕ್ಕೆ ಪೊಲೀಸ್ ಕಣ್ಗಾವಲು ಹೆಚ್ಚಿಸಬೇಕಾದ ಅಗತ್ಯವೇನೂ ಇಲ್ಲ. ಅದಕ್ಕೆ ಬೇಕಾಗಿರುವುದು ಯಾವುದೆಂದರೆ ಮತ್ತು ಅದು ಅರ್ಹವಾಗಿರುವುದು ಯಾವುದಕ್ಕೆಂದರೆ, ಸರಿಯಾದ ಸಾಮಾಜಿಕ ತಿಳಿವಳಿಕೆ ಮತ್ತು ಎಲ್ಲರ ಅಭಿವೃದ್ಧಿಯು ಪ್ರತಿಯೊಂದು ಸರಕಾರದ ಸಾಂವಿಧಾನಿಕ ಜವಾಬ್ದಾರಿ ಎಂಬುದನ್ನು ಅರ್ಥ ಮಾಡಿಕೊಂಡಿರುವಂಥ ಒಂದು ಸರಕಾರ. ವಿಭಜನಕಾರಿ ರಾಜಕೀಯವು ಈ ಸುಂದರ ರಾಜ್ಯವನ್ನು ಇನ್ನಷ್ಟು ಸಂಕಷ್ಟ, ನೋವು ಮತ್ತು ದುಃಖಕ್ಕೆ ತಳ್ಳಬಹುದು.

ಜಿ.ಎನ್.ದೇವಿ ಮತ್ತು ನಿಪುಣಿ ಕೆ. ಮಾಓ
(ಗಣೇಶ್ ಎನ್. ದೇವಿಯವರು ಭಾಷಾ ವಿದ್ವಾಂಸರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಹಾಗೂ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ- ಪಿಎಲ್‌ಎಸ್‌ಐದ ಸ್ಥಾಪಕರು. ನಿಪುಣಿ ಕೆ. ಮಾಓ ಅವರು ಮಣಿಪುರ ’ಪಿಎಲ್‌ಎಸ್‌ಐ’ಯ ಸಂಪಾದಕರು.)

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...